Wednesday, November 21, 2012

೬೮. ಧರ್ಮವು ಪ್ರಾಣಕ್ಕಿಂತ ಮಿಗಿಲು

ಧರ್ಮವು ಪ್ರಾಣಕ್ಕಿಂತ ಮಿಗಿಲು

   ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ರಾಜರು, ಸಾಮಂತರು, ಸಂಸ್ಥಾನಗಳು ಪಾಲ್ಗೊಂಡಿದ್ದವು. ವೀರ ಸೈನಿಕರು, ಸೇನಾಪತಿಗಳು, ರಾಜ ಮಹಾರಾಜರು ಬ್ರಿಟಿಷರ ವಿರುದ್ಧ ಹೋರಾಡಿದರು. ದುರದೃಷ್ಟವಶಾತ್ ಕೆಲವೇ ಕೆಲವರ ಮೋಸದಿಂದಾಗಿ, ಭಾರತದಿಂದ ಸೈನ್ಯ ಸೋತು ಬ್ರಿಟಿಷರನ್ನು ಓಡಸಬಹುದಾಗಿದ್ದ ಅವಕಾಶ ತಪ್ಪಿಹೋಯಿತು.

    ಯುದ್ಧ ಮುಗಿದ ನಂತರ ಬ್ರಿಟಿಷರು ತಮ್ಮ ಸೈನ್ಯದ ವಿರುದ್ಧ ಯುದ್ಧದಲ್ಲಿ ಭಾಗವಹಿಸಿದ ಎಲ್ಲರನ್ನೂ ಹಿಡಿದು ಸೆರೆಮನೆಯಲ್ಲಿ ಹಾಕಿಯೋ ಅಥವಾ ಮರಣದಂಡನೆ ನೀಡಿಯೋ ತಮ್ಮ ಸೇಡನ್ನು ತೀರಿಸಿಕೊಳ್ಳತೊಡಗಿದರು. ಮುಂದೆಂದೂ ಬ್ರಿಟಿಷರ ವಿರುದ್ಧ ಆ ರೀತಿಯ ಸಂಗ್ರಾಮ ನಡೆಯಬಾರದೆಂಬ ಉದ್ದೇಶದಿಂದ ತಮ್ಮ ವಿರೋಧಿಗಳೆಲ್ಲರನ್ನೂ ಸದೆ ಬಡಿಯಲು ಆರಂಭಿಸಿದರು.

    ಹಾಗೆ ಸೆರೆಸಿಕ್ಕವರಲ್ಲಿ ಒಂದು ಚಿಕ್ಕ ಸಂಸ್ಥಾನದ ಒಬ್ಬ ಸೈನಿಕ. ಇನ್ನೂ ೧೭-೧೮ರ ವಯಸ್ಸು. ಸೆರೆಯಾದರೂ ಯಾವುದೇ ಭಯವಿಲ್ಲದೇ ಧೈರ್ಯದಿಂದಲೇ ಇದ್ದ. ಬ್ರಿಟಿಷ ಅಧಿಕಾರಿಯೊಬ್ಬ ಸೋಗಿನ ವಿಚಾರಣೆ ನಡೆಸಿ ಅವನಿಗೆ ಮರಣದಂಡನೆ ಶಿಕ್ಷೆ ವಿಧಿಸಿದ. ಮರಣ ದಂಡನೆಯ ದಿನ ಅವನನ್ನು ಒಂದು ಮೈದಾನಕ್ಕೆ ಕರೆದುಕೊಂಡು ಬರಲಾಯಿತು.

    ಬೇಡಿಯ ಸಹಿತ ಬಂದ ಅವನನ್ನು ಕುರಿತು ಬ್ರಿಟಿಷ್ ಅಧಿಕಾರಿಯು ಹೇಳಿದ "ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಡಿದ ನಿನಗೆ ಮರಣ ದಂಡನೆ ವಿಧಿಸಲಾಗಿದೆ. ನಿನಗೋ ಇನ್ನೂ ಎಳೆ ವಯಸ್ಸು. ಆದ್ದರಿಂದ ನಿನಗೆ ಬದುಕಲು ಒಂದು ಅವಕಾಶ ಕೊಡುತ್ತೇನೆ. ನೀನು ನಿನ್ನ ಹಿಂದು ಧರ್ಮವನ್ನು ಬಿಟ್ಟು ಕ್ರಿಶ್ಚಿಯನ್ ಆಗಿ ಮತಾಂತರಗೊಂಡರೆ, ನಿನಗೆ ಪ್ರಾಣ ಭಿಕ್ಷೆ ಕೊಟ್ಟು ನಿನ್ನನ್ನು ಬ್ರಿಟಿಷ್ ಸೈನ್ಯದಲ್ಲೂ ಸೇರಿಸಿಕೊಳ್ಳುತ್ತೇವೆ. ಇಲ್ಲವಾದರೆ ನಿನಗೆ ಇಂದೇ ತೋಪಿಗೆ ಕಟ್ಟಿ ಉಡಾಯಿಸಲಾಗುವುದು".

    ಅವನ ಮಾತನ್ನು ಕೇಳಿ ಆ ಹುಡುಗ ನಕ್ಕು "ನನಗೆ ನನ್ನ ಜೀವಕ್ಕಿಂತ ನನ್ನ ರಾಷ್ಟ್ರ ಮತ್ತು ನನ್ನ ಹಿಂದು ಧರ್ಮವೇ ಮೇಲು. ನಿಮ್ಮ ಪಾಡಿಗೆ ನಿಮ್ಮ ತೋಪಿಗೆ ಕೆಲಸ ಕೊಡಿ" ಎಂದ.

    ಅವನ ಮಾತಿನ್ನು ಕೇಳಿ ಆ ಬ್ರಿಟಿಷ್ ಅಧಿಕಾರಿಯು ತನ್ನ ಆಮಿಷವು ಕೆಲಸ ಮಾಡದೆಂದು ತಿಳಿದು ಅವನನ್ನು ತೋಪಿಗೆ ಕಟ್ಟಲು ಹೇಳಿದ. ಆ ಹುಡುಗನು ನಗುನಗುತ್ತಲೇ ತನ್ನ ಪ್ರಾಣವನ್ನು ಅರ್ಪಿಸಿದ.

Labels: 1857 1st War of Independence, Boudhik Story, Conversion, Sacrifice, ಪ್ರಾಣಾರ್ಪಣೆ, ಮತಾಂತರ, ಯೋಧ, ಹಿಂದು ಧರ್ಮ, ೧೮೫೭ರ ಸಂಗ್ರಾಮ

2 comments: