Saturday, November 24, 2012

೯೬. ದೇಶವೂ ನಮ್ಮದೇ, ಸರಕಾರವೂ ನಮ್ಮದೇ

ದೇಶವೂ ನಮ್ಮದೇ, ಸರಕಾರವೂ ನಮ್ಮದೇ

   ಗಾಂಧಿ ಹತ್ಯೆಯ ನಂತರ ಶ್ರೀ ಗುರೂಜಿಯವರನ್ನು ಜೈಲಿನಲ್ಲಿಟ್ಟರು. ಗಾಂಧೀ ಹತ್ಯೆಯ ಆರೋಪವನ್ನು ಅವರ ಮೇಲೆ ಮಾಡಲಾಯಿತು. ೫-೬ ತಿಂಗಳ ನಂತರ ಶ್ರೀ ಗುರೂಜಿಯವರು ಸರಕಾರಕ್ಕೆ ಒಂದು ಪತ್ರವನ್ನು ಬರೆದರು. ’ನಾನೇನಾದರು ಗಾಂಧಿ ಹತ್ಯೆಯಂತಹ ಗಂಭೀರ ತಪ್ಪು ಮಾಡಿದ್ದರೆ ನನ್ನ ಮೇಲೆ ಮೊಕದ್ದಮೆ ಹಾಕಿ. ಕೋರ್ಟಿನಲ್ಲಿ ವಿಚಾರಣೆ ಮಾಡಿ. ಆದರೆ ಕೋರ್ಟಿನಲ್ಲಿ ಮೊಕದ್ದಮೆ ಹೂಡದೆ, ವಿಚಾರಣೆ ಮಾಡದೆ ನನ್ನನ್ನು ಜೈಲಿನಲ್ಲಿಟ್ಟಿರುತ್ತೀರಿ. ಇದು ಸರಿಯಲ್ಲ’ ಎಂದರು.

    ಎಂಟು ತಿಂಗಳ ನಂತರವೂ ಯಾವುದೇ ಮೊಕದ್ದಮೆ ಹಾಕದಿದ್ದ ಮೇಲೆ, ಶ್ರೀ ಗುರೂಜಿಯವರು ಸತ್ಯಾಗ್ರಹದ ಕರೆ ಕೊಟ್ಟರು. ಆ ಸತ್ಯಾಗ್ರಹದಲ್ಲಿ ತೋರಿದ ಸಂಘದ ಶಕ್ತಿಯನ್ನು ನೋಡಿ ಸಂಘದ ಮೇಲಿದ್ದಂತಹ ನಿರ್ಬಂಧ ತೆಗೆದು ಹಾಕಲಾಯಿತು. ೯೦ ವರ್ಷಗಳ ಕಾಲ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯಿತು - ೧೮೫೭ ರಿಂದ ೧೯೪೭ ವರೆಗೆ. ಆ ತೊಂಭತ್ತು ವರ್ಷಗಳಲ್ಲಿ ಸುಮಾರು ೩೫ ಸಾವಿರ ಜನ ಜೈಲಿಗೆ ಹೋಗಿದ್ದರು. ಆದರೆ ಸಂಘದ ಮೇಲಿನ ನಿರ್ಬಂಧವನ್ನು ತೆಗೆದುಹಾಕಲು ನಡೆಸಿದ ಸತ್ಯಾಗ್ರಹದಲ್ಲಿ ೭೬ ಸಾವಿರ ಜನ ಜೈಲಿಗೆ ಹೋಗಿದ್ದರು. ಸ್ವಯಂಸೇವಕರು ಸಂಘಟನೆಯ ಶಕ್ತಿಯನ್ನು ತೋರಿಸಿದ್ದರು.

    ಶ್ರೀ ಗುರೂಜಿಯವರು ಜೈಲಿನಿಂದ ಬಿಡುಗಡೆಯಾದ ನಂತರ ಎಲ್ಲೆಲ್ಲೂ ಪೂರ್ವಪ್ರಕಟವಾದಂತಹ ಕಾರ್ಯಕ್ರಮಗಳು ನಡೆದವು. ಅಲ್ಲಿ ಮಾತನಾಡಿದ ಭಾಷಣದಲ್ಲಿ ಒಂದು ಶಬ್ದವೂ ಸರಕಾರದ ವಿರುದ್ಧ ಇರಲಿಲ್ಲ. ಆಗ ಸ್ವಯಂಸೇವಕರು ಶ್ರೀ ಗುರೂಜಿಯವರನ್ನು ಅದನ್ನು ಪ್ರಶ್ನಿಸುತ್ತಾರೆ. ಶ್ರೀ ಗುರೂಜಿಯವರು ’ಈ ಸರಕಾರವೂ ನಮ್ಮದು, ದೇಶವೂ ನಮ್ಮದು. ನಾವು ಹಿಂದು ಸಮಾಜದ ಒಳಗಡೆ ಸಂಘಟನೆ ಕಟ್ಟುತ್ತಿಲ್ಲ. ಹಿಂದು ಸಮಾಜದ ಸಂಘಟನೆ ಕಟ್ಟುತ್ತಿದ್ದೇವೆ. ಕೆಲವೊಮ್ಮೆ ಊಟ ಮಾಡುವಾಗ ನಾಲಗೆಯನ್ನು ಹಲ್ಲು ಕಚ್ಚುತ್ತದೆ. ಆಗ ಹಲ್ಲನ್ನು ಕಲ್ಲಿನಿಂದ ಜಜ್ಜಿ ಕಿತ್ತು ಹಾಕುವುದಿಲ್ಲ. ಹಲ್ಲೂ ನಮ್ಮದೆ, ನಾಲಗೆಯನ್ನು ಕಚ್ಚಿದೆ, ಇನ್ನು ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತೇವೆ ಅಷ್ಟೇ. ಈಗ ತಪ್ಪನ್ನು ಸರಿಪಡಿಸಿಕೊಂಡಿದ್ದೇವೆ. ದ್ವೇಷ ಬೇಡ’ ಎಂದರು.

Labels: Ban in 1948, Jail, Sri Guruji, Tongue and Teeth, ಜೈಲು, ನಾಲಗೆ, ಶ್ರೀ ಗುರೂಜಿ, ಸಂಘದ ಕಥೆ, ಹಲ್ಲು, ೧೯೪೮ರ ನಿರ್ಬಂಧ

No comments:

Post a Comment