Thursday, November 22, 2012

೮೨. ದೇಶಭಕ್ತನ ಲೆಕ್ಕ

ದೇಶಭಕ್ತನ ಲೆಕ್ಕ

   ರಾತ್ರಿಯ ಹೊತ್ತು ಮನೆಯಲ್ಲಿ ದೀಪ ಉರಿಯುತ್ತಿದೆ. ಆ ನಸುಬೆಳಕಿನಲ್ಲಿ ಏಳೆಂಟು ವರ್ಷದ ಹುಡುಗನೊಬ್ಬ ಓದುತ್ತಾ ಕುಳಿತಿದ್ದಾನೆ. ಜೊತೆಯಲ್ಲಿ ಪಾಠ ಹೇಳಿಕೊಡುವ ಅವನ ತಾಯಿ.

    ’ಮಗೂ, ರೂಪಾಯಿಗೊಂದರಂತೆ ಹನ್ನೆರಡು ಔಷದಿ ಬಾಟಲಿಗಳನ್ನು ಒಬ್ಬ ವ್ಯಾಪಾರಿ ಕೊಳ್ಳುತ್ತಾನೆ. ಅವನ್ನು ತಲಾ ಮೂರು ರೂಪಾಯಿಗೆ ಮಾರಿದರೆ ಗಳಿಸಿದ ಲಾಭವೆಷ್ಟು?" ಮಗುವಿಗೆ ತಾಯಿಯ ಪ್ರಶ್ನೆ.

    "ಅಮ್ಮ ಅದ್ಯಾವ ಔಷಧಿ" ಒಂದು ಕ್ಷಣ ಯೋಚಿಸಿ ಮಗ ಕೇಳಿದ.

    "ಅದು ಕಟ್ಟಿಕೊಂಡು ನಿನಗೇನು? ಸುಮ್ಮನೆ ಉತ್ತರ ಹೇಳು" ತಾಯಿ ಗದರಿಸಿದಳು.

    "ಅಮ್ಮ ಅದೇನು ಔಷಧಿ ಎಂದು ಹೇಳಿದರೆ ಮಾತ್ರ ಉತ್ತರ ಕೊಡುತ್ತೇನೆ" ಎಂದ ಮಗ.

    "ಯಾವುದೋ ಜೀವ ಉಳಿಸುವ ಔಷದಿ ಎಂದೇ ಭಾವಿಸು" ತಾಯಿ ಎಂದಳು.

    "ಹಾಗಾದರೆ ೧೨ ಬೆತ್ತದೇಟು ಕೊಡಬೇಕು ಅವನಿಗೆ" ತಟ್ಟನೆ ಉತ್ತರಿಸಿದ ಮಗ. ತಾಯಿ ಒಮ್ಮೆಲೇ ಸ್ಥಬ್ಧಳಾದಳು.

    "ಇದೆಂಥ ಉತ್ತರ ಮಗು?" ಸಾವರಿಸಿಕೊಂಡು ಕೇಳಿದಳಾಕೆ.

    "ಅಮ್ಮ ಪ್ರಾಣ ಉಳಿಸುವ ಔಷಧಿಗಳನ್ನು ಇಷ್ಟು ಹೆಚ್ಚು ಬೆಲೆಗೆ ಮಾರಬಾರದು. ಬಡವರು ಅದನ್ನು ಕೊಳ್ಳುವುದೆಂತು? ಅವರು ಬದುಕುವುದು ಹೇಗಮ್ಮ?" ಆ ಹುಡುಗನ ಧ್ವನಿ ಸಂವೇದನೆಯಿಂದ ತುಂಬಿತ್ತು.

    ಆ ಹುಡುಗನನ್ನು ಎಲ್ಲರೂ ಪ್ರೀತಿಯಿಂದ ರಾಜು ಎಂದು ಕರೆಯುತ್ತಿದ್ದರು. ಆತನ ಪೂರ್ತಿ ಹೆಸರು ಸೀತಾರಾಮರಾಜು. ಆಂಧ್ರಪ್ರದೇಶದ ಪಂಡ್ರಂಗಿ ಎಂಬ ಹಳ್ಳಿಯಲ್ಲಿ ಅವನು ೧೮೯೭ರ ಜುಲೈ ೪ ರಂದು ಹುಟ್ಟಿದ. ಮುಂದೆ ಆತನೇ ಅಲ್ಲೂರಿ ಸೀತರಾಮರಾಜು ಎಂಬ ಹೆಸರಿನ ಪ್ರಸಿದ್ಧ ಸ್ವಾತಂತ್ರ್ಯ ಸೇನಾನಿಯಾದ.

Labels: Alluri Seetaramaraju, Calculation, Freedom Fighter, Medicine, ಅಲ್ಲೂರಿ ಸೀತರಾಮರಾಜು, ಔಷಧಿ, ಲೆಕ್ಕ, ಸ್ವಾತಂತ್ರ್ಯ ಸೇನಾನಿ

No comments:

Post a Comment