Sunday, November 25, 2012

೧೦೫. ಅವಿನಾಭಾವ ಭಾವನೆ

ಅವಿನಾಭಾವ ಭಾವನೆ

   ಸ್ವಯಂಸೇವಕರಲ್ಲಿ ವಿಚಾರದ ಬಗ್ಗೆ ರಾಜಿ ಇಲ್ಲ. ಸಂಘದ ಒಬ್ಬ ಸ್ವಯಂಸೇವಕ ಶಾಖೆಯಲ್ಲೋ, ವರ್ಗದಲ್ಲೋ ಆಟವಾಡುತ್ತಿರುವಾಗ ಬಿದ್ದು ಕಾಲು ಮುರಿಯಿತು. ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಅವನನ್ನು ನೋಡಲು ಅನೇಕರು ಬಂದಿದ್ದರು. ಅವನ ತಾಯಿ ಅವನ ಪಕ್ಕದಲ್ಲೇ ನಿಂತಿದ್ದರು. ಅವರು ಅಳುತ್ತಾ ’ಏನೋ, ನೀನು ಸಂಘಕ್ಕೆ ಹೋಗಿದ್ದರಿಂದ ಹೀಗಾಯಿತು’ ಎಂದು ಸಂಘದ ಬಗ್ಗೆ ಸ್ವಲ್ಪ ಹಗುರವಾಗಿ ಹೇಳಿದರು. ಅದೂ ಮಗನ ಮೇಲಿನ ಪ್ರೀತಿಯಿಂದಾಗಿ. ಆ ೮-೧೦ನೇ ತರಗತಿಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿ, ಆ ಸಂದರ್ಭದಲ್ಲೂ ’ನೋಡಮ್ಮ, ನೀನು ನನಗೆ ಬೇಕಾದರೆ ಬೈಯ್ಯಿ. ಆದರೆ ಸಂಘಕ್ಕೆ ಮಾತ್ರ ಬೈಯ್ಯಬೇಡ’ ಎಂದ.

    ಇದು ೮-೧೦ನೇ ತರಗತಿಯ ಒಬ್ಬ ಹುಡುಗನಿಗೆ ಸಂಘದ ಬಗ್ಗೆ ಇರುವಂತಹ ಅವಿನಾಭಾವವಾದ ಭಾವನೆ.

Labels: Injury, Inseparable, Sangha Story, Swayamsevak, ಅವಿನಾಭಾವ ಭಾವನೆ, ಗಾಯ, ಬಾಲಕ, ಸಂಘಕ್ಕೇನೂ ಅನ್ನದಿರು, ಸಂಘದ ಕಥೆ

೧೦೪. ಸಿದ್ಧಾಂತದಲ್ಲಿ ನಂಬಿಕೆ

ಸಿದ್ಧಾಂತದಲ್ಲಿ ನಂಬಿಕೆ

   ಸ್ವಯಂಸೇವಕರು ಜಾತಿ ಇತ್ಯಾದಿಗಳಿಂದ ಪ್ರಭಾವಿತರಾಗುವುದಿಲ್ಲ ಎನ್ನುವುದಕ್ಕೆ ದೀನದಯಾಳರ ಉದಾಹರಣೆ. ಎಲ್ಲರೂ ಬಹಳ ಆಗ್ರಹ ಪಡಿಸಿದ್ದರಿಂದ ದೀನದಯಾಳರು ಚುನಾವಣೆಗೆ ನಿಂತರು. ಚುನಾವಣೆಯಲ್ಲಿ ಬೇರೆ ಎಲ್ಲರೂ ಜಾತಿ ಹೆಸರಿನಲ್ಲಿ ಪ್ರಚಾರ ಮಾಡಿದರು. ಕೆಲವರು ಒಂದು ರಾತ್ರಿ ಬೈಠಕ್‍ನಲ್ಲಿ ಕುಳಿತಾಗ ದೀನದಯಾಳರಲ್ಲಿ ಹೇಳಿದರು ’ನಾವು ನಿಮ್ಮ ಜಾತಿಯ ವಿಷಯವಾಗಿ ಹೇಳಿದರೆ ನಮಗೆ ಚುನಾವಣೆಯಲ್ಲಿ ಅನುಕೂಲವಾಗಬಹುದು’ ಎಂದು. ಆಗ ದೀನದಯಾಳರು ಜಾತಿಯ ವಿಷಯವನ್ನು ತಂದರೆ ತಾವು ಚುನಾವಣೆಯಿಂದ ಹೊರಬರುವುದಾಗಿ ಹೇಳಿದರು. ’ನಾನು ಸಂಘದ ಸ್ವಯಂಸೇವಕ. ಜಾತಿಯ ಹೆಸರಿನಲ್ಲಿ ಪ್ರಚಾರ ಮಾಡುವುದಾದರೆ, ನನಗೆ ಈ ಚುನಾವಣೆ ಬೇಡ’ ಎಂದರು.

    ನಂತರ ಚುನಾವಣೆಯಲ್ಲಿ ಅವರು ಸೋತರು. ಅದರಿಂದ ದೀನದಯಾಳರಿಗಾಗಲೀ, ಬೇರೆಯವರಿಗಾಗಲೀ ಎನೂ ಪ್ರಭಾವವಾಗಲಿಲ್ಲ. ಏಕೆಂದರೆ ’ನಾವು ಸಿದ್ಧಾಂತಕ್ಕಾಗಿ ನಿಂತಿರುವಂತಹವರು. ಸಿದ್ಧಾಂತದಲ್ಲಿ ಒಪ್ಪಂದ ಮಾಡಿಕೊಂಡು ಗೆಲ್ಲುವುದನ್ನು ನಾವು ಬಯಸಬೇಕಿಲ್ಲ’ ಎಂದು ಎಲ್ಲರೂ ತಿಳಿದಿದ್ದರು.

Labels: Deendayal Upadhyaya, Election, Loss, Principles, Sangha Story, ಚುನಾವಣೆ, ದೀನದಯಾಳ ಉಪಾಧ್ಯಾಯ, ಸಂಘದ ಕಥೆ, ಸಿದ್ಧಾಂತ, ಸೋಲು

೧೦೩. ಬಂದೂಕಿನ ಗುಂಡಿಗೆ ಉತ್ತರ

ಬಂದೂಕಿನ ಗುಂಡಿಗೆ ಉತ್ತರ

   ಮೊಗ ಎನ್ನುವುದೊಂದು ಪಂಜಾಬಿನ ಜಿಲ್ಲಾ ಕೇಂದ್ರ. ಖಾಲಿಸ್ಥಾನದ ಬೇಡಿಕೆಯನ್ನಿಟ್ಟುಕೊಂಡು ಭಯೋತ್ಪಾದಕತೆ ಮುಗಿಲು ಮುಟ್ಟಿದಂತಹ ದಿನಗಳು. ಆಗ, ಮೋಗದ ಒಂದು ಶಾಖೆಯ ಮೇಲೆ ಖಾಲಿಸ್ಥಾನೀ ಭಯೋತ್ಪಾದಕರು ಬಂದೂಕಿನಿಂದ ದಾಳಿ ಮಾಡಿದರು. ಸುಮಾರು ೧೦-೧೨ ಸ್ವಯಂಸೇವಕರು ಸಂಘಸ್ಥಾನದಲ್ಲೇ ಉರುಳಿಬಿದ್ದರು. ಇನ್ನೊಂದಷ್ಟು ಜನ ಗಾಯಗೊಂಡರು. ಈ ರೀತಿ ಸಾವಿಗೀಡಾದವರನ್ನು ಮರಣೋತ್ತರ ಪರೀಕ್ಷೆಗೆ, ಗಾಯಗೊಂಡವರ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕೆಲಸವು ತಕ್ಷಣ ನಡೆಯಿತು. ಇಡೀ ನಗರದ ಸ್ವಯಂಸೇವಕರು, ಜನರೂ, ಪೊಲೀಸರು ಬಂದು ವ್ಯವಸ್ಥೆಗಳನ್ನು ಮಾಡಿದರು.

    ಮರುದಿನ ಅದೇ ಸಮಯಕ್ಕೆ ಅದೇ ಸಂಘಸ್ಥಾನದಲ್ಲಿ ಸುಮಾರು ೨೦೦ ಸ್ವಯಂಸೇವಕರು ಒಂದು ಗಂಟೆ ಶಾಖೆ ನಡೆಸಿದರು. ಅವರೇನು ಬಂದೂಕು ತರಲಿಲ್ಲ. ಪೊಲೀಸರ ಬಳಿ ತಮ್ಮ ರಕ್ಷಣೆಗಾಗಿ ಕೇಳಲಿಲ್ಲ. ಸ್ವಯಂಸೇವಕರು ಮೌನವಾಗಿ ಬಂದರು, ಧ್ವಜ ಹಾಕಿದರು, ಅಲ್ಲಿ ಶಾಖೆ ನಡೆಸಿದರು, ಪ್ರಾರ್ಥನೆ ಮಾಡಿ ’ಭಾರತಮಾತಾ ಕಿ ಜಯ್’ ಎಂದು ಮುಗಿಸಿ ಹೋದರು. ಸಮಾಜ ಇದನ್ನು ನೋಡಿತು. ಭಯೋತ್ಪಾದಕರೂ ಇದನ್ನು ಬಹುಶಃ ನೋಡಿರಬೇಕು. ಸಂಘದ ಸ್ವಯಂಸೇವಕರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಲಿಲ್ಲ. ಅವರು ಮೌನವಾಗಿ ಒಂದು ಉತ್ತರ ಕೊಟ್ಟರು ’ನಿಮ್ಮ ಬಂದೂಕಿನಿಂದ ನೀವು ನಮ್ಮ ಸಂಘದ ಶಾಖೆಯನ್ನು ಸಮಾಪ್ತ ಮಾಡಲಾರಿರಿ. ನಾವು ನಿಮ್ಮ ಭಯೋತ್ಪಾದಕತೆಗೆ ಹೆದರಿ ಬಾಲ ಮುದುರಿಕೊಂಡು ಹೋಗುವಂತಹ ಹಿಂದು ವೀರರಲ್ಲ. ನಾವು ನಿಮ್ಮ ಎದುರು ನಿಲ್ಲಬಲ್ಲೆವು. ನಿಮ್ಮ ಬಂದೂಕಿಗೆ ಉತ್ತರ ಕೊಡಬಲ್ಲೆವು’ ಎಂದು. ಅಲ್ಲಿ ಇನ್ನೊಮ್ಮೆ ದಾಳಿಯಾಗಲಿಲ್ಲ.

Labels: Moga, Punjab, Sacrifice, Shakha, Terrorist Attack, ಪಂಜಾಬ್, ಬಲಿ, ಭಯೋತ್ಪಾದಕರ ಗುಂಡು, ಮೊಗ, ಶಾಖೆ

೧೦೨. ಗುಣಗ್ರಾಹ್ಯತೆ

ಗುಣಗ್ರಾಹ್ಯತೆ

   ತಮಿಳುನಾಡಿನಲ್ಲಿ ಶಿವರಾಮ ಜೋಗಳೇಕರ್ ಎನ್ನುವ ಒಬ್ಬ ಪ್ರಚಾರಕರಿದ್ದರು. ಎಂ.ಎಸ್.ಸಿ.ಯಲ್ಲಿ ಚಿನ್ನದ ಪದಕ ತೆಗೆದುಕೊಂಡು ಪುಣೆಯಿಂದ ತಮಿಳುನಾಡಿಗೆ ಹೋದರು. ಮರಾಠಿಯವರಾದ ಅವರು ತಮಿಳುನಾಡಿಗೆ ಹೋಗಿ, ಜೀವನ ಪರ್ಯಂತ ಅಲ್ಲಿಯೇ ಪ್ರಚಾರಕರಾಗಿ ಇದ್ದು ಅಲ್ಲಿಯೇ ತೀರಿಕೊಂಡರು. ತಮಿಳು ಕಲಿತರು, ತಮಿಳರ ರೀತಿಯಲ್ಲಿ ವೇಷ ಧರಿಸಿದರು. ಅವರು ತಮಿಳರು ಅಲ್ಲ ಯಾರಿಗೂ ಅನ್ನಿಸಲೇ ಇಲ್ಲ. ಅಷ್ಟರ ಮಟ್ಟಿಗೆ ಅವರು ತಮಿಳರಾಗಿ ಹೋದರು. ಅವರು ಚೆನ್ನೈನಲ್ಲಿ ವಿಶೇಷವಾಗಿ ಎಷ್ಟು ಜನ ಸಜ್ಜನರಿದ್ದಾರೆ ಎಂದು ಹುಡುಕುತ್ತಾ ಹೋದರು. ಸಜ್ಜನರು ಬೇಕಾದಷ್ಟು ಜನ ಸಮಾಜದಲ್ಲಿದ್ದಾರೆ. ’ಕಚೇರಿಗಳಲ್ಲಿ ಲಂಚ ತೆಗೆದುಕೊಳ್ಳದೆ ಕೆಲಸ ಮಾಡುವವರು ಯಾರು? ಯಾರು ಬಂದಿರುವಂತಹವರಿಗೆ ಆತ್ಮೀಯತೆಯಿಂದ ಕರೆದು ಕೆಲಸ ಮಾಡಿಕೊಡುತ್ತಾರೆ? ಈ ರೀತಿಯಿರುವವರನ್ನು ಹುಡುಕಿದರು’

    ಪತ್ರಿಕೆಗಳಲ್ಲಿ ಸಂಪಾದಕರಿಗೆ ಪತ್ರ ಬರೆದು ಸಮಾಜದ ಬಗ್ಗೆ ಕಳಕಳಿಯನ್ನು ತೋರಿಸುವವರ ಮನೆಗೆ ಅವರನ್ನು ಹುಡುಕಿಕೊಂಡು ಹೋದರು. ಅವರ ಮನೆ ಬಾಗಿಲು ತಟ್ಟಿದರು. ’ನೀವು ಪತ್ರಿಕೆಯಲ್ಲಿ ಈ ಪತ್ರ ಬರೆದಿರುವಿರಲ್ಲಾ?’ ಎಂದು ಕೇಳಿದರು. ’ಹೌದು, ಬರೆದಿದ್ದೇನೆ’ ಎಂದು ಉತ್ತರ ಬರುತ್ತಿತ್ತು. ಶಿವರಾಮರು ಅವರಿಗೆ ಧನ್ಯವಾದವನ್ನು ಹೇಳುತ್ತಿದ್ದರು. ಪತ್ರ ಬರೆದವರು ಆಶ್ಚರ್ಯದಿಂದ ಏಕೆ ಧನ್ಯವಾದ ಹೇಳುತ್ತಿದ್ದೀರೆಂದು ಕೇಳುತ್ತಿದ್ದರು. ಇವರು ’ನಿಮಗೆ ಸಮಾಜದ ಬಗ್ಗೆ ಕಳಕಳಿ ಇದೆ. ಅದಕ್ಕಾಗಿ ಐದು ರೂಪಾಯಿ ಖರ್ಚು ಮಾಡಿ ಪತ್ರ ಬರೆದಿದ್ದೀರಲ್ಲ, ಅದಕ್ಕಾಗಿ ನಿಮಗೆ ಧನ್ಯವಾದಗಳನ್ನು ಹೇಳಲು ಬಂದೆ’ ಎಂದು ಉತ್ತರಿಸುತ್ತಿದ್ದರು. ಹೀಗೆ ಇನ್ನೊಬ್ಬರ ಗುಣವನ್ನು ಕಂಡುಹಿಡಿದು ಅವರನ್ನು ಜೋಡಿಸುವ ಕೆಲಸವನ್ನು ಶಿವರಾಮ ಜೋಗಳೇಕರ್ ಮಾಡಿದರು.

    ಒಬ್ಬ ಸ್ವಯಂಸೇವಕ ಮಾಡುವ ಕೆಲಸವೆಂದರೆ ಇದೇ. ಸಮಾಜದಲ್ಲಿ ಇರುವಂತಹವರ ಬಗ್ಗೆ ಹೊಟ್ಟೆಕಿಚ್ಚು ಪಡುವಂತಹುದಲ್ಲ - ’ಅಂತಹವರನ್ನು ಹೇಗಾದರೂ ಹಿಂದಕ್ಕೆ ತಳ್ಳಿ ನಾನು ಮುಂದಕ್ಕೆ ಹೋಗಬೇಕು’ ಎನ್ನುವುದಲ್ಲ. ಅಂತಹ ಸಜ್ಜನರನ್ನು ಶಾಖೆಗೆ ತರದೆಯೇ, ಶಿವರಾಮರು ಅಂತಹವರ ಒಂದು ವೇದಿಕೆ ಪ್ರಾರಂಭ ಮಾಡಿದರು. ನಂತರ ಎಲ್ಲರಿಗೂ ಗೊತ್ತಾಯಿತು, ಇದು ಸಂಘದ ಕೆಲಸ ಎಂದು. ಶಿವರಾಮರು ಮೊದಲನೇ ದಿನವೇ ತಾವು ಆರ್.ಎಸ್.ಎಸ್.ನವರು ಎಂದು ಹೇಳಲಿಲ್ಲ, ಅಥವಾ ಆರ್.ಎಸ್.ಎಸ್.ಗೆ ಬನ್ನಿ ಎಂದೂ ಹೇಳಲಿಲ್ಲ. ಹೀಗೆ ಗುಣಗ್ರಾಹ್ಯತೆ - ಇನ್ನೊಬ್ಬರಲ್ಲಿರುವಂತಹ ಸದ್ಗುಣವನ್ನು, ಒಳ್ಳೆಯ ನಡತೆಯನ್ನು ಗುರುತಿಸಿ ಅದನು ಮುಂದೆ ತರುವಂತಹುದು. ಸಮಾಜಕ್ಕೆ ಅಂತಹ ಗುಣವಿರುವವರು ಬೇಕು. ಸ್ವಯಂಸೇವಕ ಈ ರೀತಿ ಸಮಾಜದಲ್ಲಿರುವ ಸಜ್ಜನರನ್ನು ಗುರುತಿಸುವಂತಹವನು. 

Labels: Sangha Story, Shivaram Jogalekar, ಗುಣಗ್ರಾಹ್ಯತೆ, ಶಿವರಾಮ ಜೋಗಳೇಕರ್, ಸಂಘದ ಕಥೆ, ಸಜ್ಜನರ ಜೋಡಣೆ

೧೦೧. ಸ್ವಯಂಸೇವಕನ ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸ

ಸ್ವಯಂಸೇವಕನ ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸ

   ಒಮ್ಮೆ ಜವಹರಲಾಲ ನೆಹರುರವರು ಪ್ರಧಾನಮಂತ್ರಿಯಾಗಿದ್ದಾಗ,  ಒಬ್ಬ ಸ್ವಯಂಸೇವಕ ಐ.ಎ.ಎಸ್. ಅಧಿಕಾರಿಯಾಗಲು ಪರೀಕ್ಷೆ ಬರೆದ. ಅದರಲ್ಲಿ ಪಾಸಾದ. ಆ ಪರೀಕ್ಷೆಯ ಕೊನೆಯಲ್ಲಿ ಸಂದರ್ಶನವಿರುತ್ತದೆ. ಆ ಸಂದರ್ಶನದಲ್ಲಿ ಅವನು ಅರ್.ಎಸ್.ಎಸ್ ಸ್ವಯಂಸೇವಕ ಎನ್ನುವುದು ಎಲ್ಲರಿಗೂ ಗೊತ್ತಾಯಿತು. ಆ ಸಮಯದಲ್ಲಿ ಅರ್.ಎಸ್.ಎಸ್.ನವರು ಗಾಂಧಿ ಹತ್ಯೆ ಮಾಡಿದವರು ಎನ್ನುವ ಆರೋಪವಿತ್ತು. ಆ ಕಾರಣದಿಂದ ಅವನ್ನು ಐ.ಎ.ಎಸ್.ಗೆ ಆಯ್ಕೆ ಮಾಡಲಿಲ್ಲ. ಈ ಸ್ವಯಂಸೇವಕನ ದೂರದ ಸಂಬಂಧಿಯೊಬ್ಬರು ಕಾಂಗ್ರೆಸ್‍ನಲ್ಲಿದ್ದರು. ಅವರು ಲೋಕಸಭೆಯ ಉಪಾಧ್ಯಕ್ಷರಾಗಿದ್ದರು. ಅವರಿಗೆ ಈ ವಿಷಯ ಗೊತ್ತಾಯಿತು. ಅವರು ಈ ಸ್ವಯಂಸೇವಕನನ್ನು ಕರೆದು ವಿಚಾರಿಸಿದರು. ಹೀಗಾಗಿರುವುದು ಸರಿಯಲ್ಲ ಎಂದು ಭಾವಿಸಿ ಅವರು ಅವನಿಗೆ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಲು ಸಲಹೆಕೊಟ್ಟರು.

    ಆ ಕಾಲದಲ್ಲಿ ಈಗಿನ ರೀತಿ ಅಷ್ಟು ಸೆಕ್ಯೂರಿಟಿಯ ಕಷ್ಟವಿರಲಿಲ್ಲ. ಎಷ್ಟಾದರೂ ಲೋಕಸಭಾ ಉಪಾಧ್ಯಕ್ಷರು ಹೇಳಿಕಳಿಸಿದ್ದ ವ್ಯಕ್ತಿ ಎನ್ನುವ ಕಾರಣಕ್ಕಾಗಿ ನೆಹರುರವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಈ ಸ್ವಯಂಸೇವಕ ನೆಹರುರವರನ್ನು ಹೋಗಿ ಭೇಟಿ ಮಾಡಿದ. ಅವನ ಸಂಬಂಧಿಯಾದ ಲೋಕಸಭಾ ಉಪಾಧ್ಯಕ್ಷರೂ ನೆಹರುರವರ ಜೊತೆಯಲ್ಲಿ ಕುಳಿತಿದ್ದರು. ಆಗ ನೆಹರುರವರು ಕೇಳಿದರು ’ಈಗ ನಾನು ನಿನ್ನನ್ನು ಐ.ಎ.ಎಸ್.ಗೆ ಆಯ್ಕೆ ಮಾಡದೇ ಇದ್ದರೆ ಏನಾಗುತ್ತದೆ?’ ಎಂದು ಕೇಳಿದರು. ಆಗ ಈ ಸ್ವಯಂಸೇವಕ ಹೇಳಿದ 'The Government of India will lose an honest officer(ಸರ್ಕಾರವು ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಕಳೆದುಕೊಳ್ಳುತ್ತದೆ)'. ಒಬ್ಬ ೨೨ ವರ್ಷದ ಯುವಕ ದೇಶದ ಪ್ರಧಾನಮಂತ್ರಿಯ ಎದುರು ಎಷ್ಟು ಧೈರ್ಯದಿಂದ ಹೇಳಿದ! ಅವನಿಗೆ ಎಂಥ ನಂಬಿಕೆ! ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸ, ಎರಡೂ ಅವನಲ್ಲಿತ್ತು. ನೆಹರುರವರು ಅವನ ಮಾತನ್ನು ಕೇಳಿ ಅವನನ್ನು ಐ.ಎ.ಎಸ್. ಅಧಿಕಾರಿಯಾಗಿ ನೇಮಿಸಿದರು ಮತ್ತು ಐ. ಮಹಾದೇವನ್ ಎನ್ನುವ ಈ ಸ್ವಯಂಸೇವಕರು ಐ.ಎ.ಎಸ್. ಅಧಿಕಾರಿಯಾಗಿ ಕೆಲಸ ಮಾಡಿದರು.

Labels: Confidence, Honesty, I.A.S, Nehru, Sangha Story, ಆತ್ಮವಿಶ್ವಾಸ, ಐ.ಎ.ಎಸ್, ನೆಹರು, ಪ್ರಾಮಾಣಿಕತೆ, ಸಂಘದ ಕಥೆ

೧೦೦. ಚುನಾವಣೆಯಲ್ಲಿ ಜನಸಂಘಕ್ಕೆ ಸೋಲು

ಚುನಾವಣೆಯಲ್ಲಿ ಜನಸಂಘಕ್ಕೆ ಸೋಲು

   ’ಶಂಕ‌ರ್ಸ್ ವೀಕ್ಲಿ’ ಎನ್ನುವ ಒಂದು ಇಂಗ್ಲೀಷ್ ಪತ್ರಿಕೆ ದೆಹಲಿಯಿಂದ ಹಿಂದೆ ಬರುತ್ತಿತ್ತು. ಲೇಖನಕ್ಕಿಂತ ಹೆಚ್ಚಾಗಿ ಮುಖ್ಯವಾಗಿ ವ್ಯಂಗ್ಯಚಿತ್ರಗಳದ್ದೇ ಪತ್ರಿಕೆ ಅದು. ಅದನ್ನು ಶಂಕರನ್ ನಾಯರ್ ಎನ್ನುವವರು ನಡೆಸುತ್ತಿದ್ದರು. ಆ ಪತ್ರಿಕೆ ಈಗಿಲ್ಲ. ೧೯೭೨ರ ಚುನಾವಣೆಯ ಸಂದರ್ಭ. ಜನಸಂಘವೂ ಆ ಚುನವಾಣೆಯಲ್ಲಿ ಭಾಗವಿಹಿಸಿತ್ತು. ಜನಸಂಘದ ಜನ ಸಂಘದ ಸ್ವಯಂಸೇವಕರೂ ಎನ್ನುವ ನಂಬಿಕೆ ಜನರಿಗೆ. ಆ ಕಾಲದಲ್ಲಿ ಆ ರೀತಿ ಇದ್ದದ್ದೂ ಹೌದು. ಅನೇಕ ಪಕ್ಷಗಳೂ ಇದ್ದವು. ಕಾಂಗ್ರೆಸ್ ಆ ಚುನಾವಣೆಯಲ್ಲಿ ಜಯಭೇರಿ ಬಾರಿಸಿತು. ಉಳಿದ ಪಕ್ಷಗಳೆಲ್ಲಾ ತತ್ತರಿಸಿ ಹೋಗಿದ್ದವು. ಬಹುಶಃ ಮಹಾಮೈತ್ರಿಯ ೧೯೭೨ರ ಚುನಾವಣೆ ಅಂತ ಕಾಣಿಸುತ್ತೆ.

    ಮರುವಾರದ ಶಂಕ‌ರ್ಸ್ ವೀಕ್ಲಿ ಪತ್ರಿಕೆಯಲ್ಲಿ ಒಂದು ವ್ಯಂಗ್ಯ ಚಿತ್ರ ಬಂದಿತು. ಅದೇನೆಂದರೆ, ಬೇರೆ ಬೇರೆ ಪಕ್ಷಗಳವರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಜನಸಂಘದವರು ಮಾತ್ರ ಗಣವೇಶ ಹಾಕಿಕೊಂಡು ಸಂಚಲನಕ್ಕೆ ಹೊರಟಿದ್ದಾರೆ. ಅವರಿಗೆ ಈಡೀ ದೇಶದಲ್ಲಿ ಎಲ್ಲ ಕಡೆಯೂ ಠೇವಣಿಯೇ ಹೋಗಿದೆ. ಆದರೂ ಅವರು ಏನೂ ತಿಳಿದುಕೊಳ್ಳಲಿಲ್ಲ. ಇದು ಆ ವ್ಯಂಗ್ಯಚಿತ್ರದಲ್ಲಿದ್ದದ್ದು. ಈ ವ್ಯಂಗ್ಯಚಿತ್ರ ಏನನ್ನು ಹೇಳುತ್ತದೆ. ಸೋಲು, ಗೆಲವುಗಳಿಂದ ಒಬ್ಬ ಸ್ವಯಂಸೇವಕ ನೆಲಕಚ್ಚೋದಿಲ್ಲ ಅಥವಾ ಮುಗಿಲಿಗೆ ಹಾರೋದಿಲ್ಲ. ಇದನ್ನು ಆ ವ್ಯಂಗ್ಯಚಿತ್ರ ಮಾರ್ಮಿಕವಾಗಿ ತೋರಿಸಿತು. ಸೋತಿರುವುದು ನಿಜ, ಆದರೆ ಸ್ವಯಂಸೇವಕರಿಗೆ ಇದರಿಂದ ಏನೂ ಅನ್ನಿಸಿಲ್ಲ. ಹೀಗೆ ಸಂಘದ ಸ್ವಯಂಸೇವಕರು ಯಶಸ್ಸು ಅಪಯಶಸ್ಸಿಗಾಗಿ ತಮ್ಮ ಮನಸ್ಸನ್ನು ಮುದುಡಿಕೊಳ್ಳುವುದಿಲ್ಲ.

Labels: Election, Jana Sangha, Sangha Story, Shankar's Weekly, ಚುನಾವಣೆ, ಜನಸಂಘ, ಶಂಕ‌ರ್ಸ್ ವೀಕ್ಲಿ, ಸಂಘದ ಕಥೆ, ಸೋಲು

೯೯. ಪರಿಪೂರ್ಣ ಸ್ವಯಂಸೇವಕ

ಪರಿಪೂರ್ಣ ಸ್ವಯಂಸೇವಕ

   ಡಾಕ್ಟರ್‌ಜಿಯವರು ಗಾಂಧೀಜಿಯವರನ್ನು ಭೇಟಿ ಮಾಡಿದರು. ವರ್ಧಾ ಶಿಬಿರಕ್ಕೆ ಗಾಂಧೀಜಿಯವರು ಬಂದಿದ್ದರು. ಡಾಕ್ಟರ್‌ಜಿಯವರು ಶಿಬಿರಕ್ಕೆ ಬರುವ ಹಿಂದಿನ ದಿನವೇ ಗಾಂಧೀಜಿಯವರು ಶಿಬಿರವನ್ನು ನೋಡಿಕೊಂಡು ಬಂದಿದ್ದರು. ಸ್ಥಾಪಕ ಯಾರೆಂದು ಅವರಿಗೆ ಗೊತ್ತಾಯಿತು. ಡಾ|| ಹೆಡಗೆವಾರರ ಹೆಸರನ್ನು ಕೇಳಿದ್ದರು, ಮೊದಲೂ ಭೇಟಿ ಮಾಡಿದ್ದರು. ೧೯೨೦ರ ಕಾಂಗ್ರೆಸ್ ಅಧಿವೇಶನದಲ್ಲೇ ಡಾಕ್ಟರ್‌ಜಿಯವರನ್ನು ಗಾಂಧೀಜಿಯವರು ನೋಡಿದ್ದರು. ಡಾ|| ಹೆಡಗೆವಾರರೆನ್ನುವವರು ಸಂಘವನ್ನು ಸ್ಥಾಪನೆ ಮಾಡಿದ್ದಾರೆ, ಅವರನ್ನು ನಾನು ಭೇಟಿ ಮಾಡಬೇಕು ಎನ್ನುವ ಕಾರಣಕ್ಕಾಗಿ ಗಾಂಧೀಜಿಯವರು, ಡಾಕ್ಟರ್‌ಜಿಯವರು ಮರುದಿನ ಬಂದ ನಂತರ ಮತ್ತೆ ಶಿಬಿರಕ್ಕೆ ಹೋದರು. ಅವರ ಜೊತೆ ಇನ್ನೂ ಇಬ್ಬರಿದ್ದರು.

    ಮಾತುಕತೆಯಲ್ಲಿ ಗಾಂಧೀಜಿಯವರು ಡಾಕ್ಟರ್‌ಜಿಯವರನ್ನು ಕೇಳಿದರು ’ಈ ಸ್ವಯಂಸೇವಕ ಎನ್ನುವ ಕಲ್ಪನೆ ಏನು?’ ಎಂದು. ಆಗ ಡಾಕ್ಟರ್‌ಜಿಯವರು ಹೇಳಿದ ಒಂದು ವಾಕ್ಯ ಇದೆ. ’ದೇಶದ ಸರ್ವಾಂಗೀಣ ಉನ್ನತಿಗಾಗಿ ತನ್ನ ಸರ್ವಸ್ವವನ್ನೂ ಸಮರ್ಪಣೆಯನ್ನು ಮಾಡುವುದಕ್ಕೆ ಸಿದ್ಧನಾಗಿರುವಂತಹ ಕಾರ್ಯಕರ್ತನನ್ನು ನಾವು ಸ್ವಯಂಸೇವಕನೆಂದು ಕರೆಯುತ್ತೇವೆ’ ಎಂದು ಡಾಕ್ಟರ್‌ಜಿಯವರು ಹೇಳಿದರು.

Labels: Doctorji, Gandhiji, Perfect Swayamsevak, Sangha Story, ಗಾಂಧೀಜಿ, ಡಾಕ್ಟರ್‌ಜಿ, ಪರಿಪೂರ್ಣ ಸ್ವಯಂಸೇವಕ, ಸಂಘದ ಕಥೆ

೯೮. ಡಾಕ್ಟರ್‌ಜಿಯವರ ಚಾರಿತ್ರ್ಯ ಶುದ್ಧತೆ

ಡಾಕ್ಟರ್‌ಜಿಯವರ ಚಾರಿತ್ರ್ಯ ಶುದ್ಧತೆ

   ಡಾಕ್ಟರ್‌ಜಿಯವರು ನಾಗಪುರದಲ್ಲಿ ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯವಾಗಿದ್ದರು. ಆಗಿನ್ನೂ ಸಂಘ ಸ್ಥಾಪನೆಯಾಗಿರಲಿಲ್ಲ. ಸಂಘ ಸ್ಥಾಪನೆಯಾದ ನಂತರ ಡಾಕ್ಟರ್‌ಜಿಯವರು ರಾಜಕೀಯಕ್ಕೆ, ಚುನಾವಣೆ ಕ್ಷೇತ್ರಕ್ಕೆ ಹೋಗಲಿಲ್ಲ, ಸ್ವಾತಂತ್ರ್ಯ ಹೋರಾಟ ಬಿಟ್ಟು. ಡಾ|| ಮೂಂಜೆ ಎನ್ನುವವರು ಅವರ ಮಿತ್ರರು, ಆತ್ಮೀಯರು, ಹಿರಿಯರು. ಅವರು ಚುನಾವಣೆಗೆ ನಿಂತರು. ಡಾ|| ಮೂಂಜೆ ಅವರ ಪರವಾಗಿ ಪ್ರಚಾರ ಮಾಡಲು ಡಾಕ್ಟರ್‌ಜಿ ಹೋಗಿದ್ದರು. ಡಾ|| ಮೂಂಜೆಯವರ ವಿರುದ್ಧವಾಗಿ ಅಭ್ಯಂಕರ್ ಎನ್ನುವವರು ನಿಂತಿದ್ದರು. ಅಭ್ಯಂಕರರು ಒಬ್ಬ ವಕೀಲರು. ಅವರು ತಮ್ಮ ಭಾಷಣದಲ್ಲಿ ತಮ್ಮ ಎದುರಾಳಿಗಳ ಜನ್ಮ ಜಾಲಾಡುತ್ತಿದ್ದರು. ತಮ್ಮ ಎದುರಾಳಿಗಳ ಬಗ್ಗೆ ಹಾಗೆ, ಹೀಗೆ ಎಂದು ಹೀಗೆಳೆದು ಜನರನ್ನು ಮನರಂಜಿಸುತ್ತಾ ಭಾಷಣ ಮಾಡುವುದರಲ್ಲಿ ಅವರದು ಎತ್ತಿದ ಕೈ.

    ಅಂತಹ ಅಭ್ಯಂಕರರು ಡಾ|| ಮೂಂಜೆಯವರ ಬಗ್ಗೆ ಸಾಕಷ್ಟು ಹೇಳಿದರು. ಡಾ|| ಮೂಂಜೆಯವರ ಸಮರ್ಥನೆಗಾಗಿ ನಿಂತಿದ್ದ ಡಾಕ್ಟರ್‌ಜಿಯವರ ವಿಷಯ ಬಂದಿತು. ತಮ್ಮ ಭಾಷಣದ ವಾಗ್ದಾಳಿಯಲ್ಲಿ ಅವರು ’ಡಾ|| ಹೆಡಗೆವಾರ್..’ ಎಂದರು, ಅಷ್ಟೇ. ಅವರಿಗೆ ಮುಂದೆ ಮಾತು ಹೊರಡಲಿಲ್ಲ. ’ನಾನು ಅವರ ಬಗ್ಗೆ ಹೇಳೋದು ಏನಿದೆ? ಅವರ ಬಗ್ಗೆ ನಾನೇನೂ ಹೇಳಲಾರೆ’ ಎಂದು ಹೇಳಿ ಸುಮ್ಮನಾದರು. ಅಭ್ಯಂಕರರ ಮಾತಿನಲ್ಲಿ ಡಾಕ್ಟರ್‌ಜಿಯವರ ಬಗ್ಗೆ ಒಂದೇ ಒಂದು ನಕಾರಾತ್ಮ ಮಾತೂ ಹೊರಡಲಿಲ್ಲ. ಏಕೆಂದರೆ ಡಾಕ್ಟರ್‌ಜಿಯವರ ಚಾರಿತ್ರ್ಯ, ಅವರ ಸಾರ್ವಜನಿಕ ಜೀವನದ ಶುದ್ಧತೆ, ಅವರ ವ್ಯಕ್ತಿ ಜೀವನದ ಶುದ್ಧತೆ ಇವು ಕಣ್ಣಿಗೆ ಕಟ್ಟುವ ಹಾಗಿದ್ದವು.

Labels: Abhyankar, Doctorji, Dr. Munje, Election, Sangha Story, ಅಭ್ಯಂಕರ್, ಚಾರಿತ್ರ್ಯ, ಡಾ|| ಮೂಂಜೆ, ಡಾಕ್ಟರ್‌ಜಿ, ಸಂಘದ ಕಥೆ,

Saturday, November 24, 2012

೯೭. ತುರ್ತು ಪರಿಸ್ಥಿತಿಯಲ್ಲಿ ಸ್ವಯಂಸೇವಕರ ಕರ್ತವ್ಯ

ತುರ್ತು ಪರಿಸ್ಥಿತಿಯಲ್ಲಿ ಸ್ವಯಂಸೇವಕರ ಕರ್ತವ್ಯ

   ತುರ್ತು ಪರಿಸ್ಥಿತಿಯ ಸಮಯ. ಅನೇಕ ಪ್ರಚಾರಕರು, ಸ್ವಯಂಸೇವಕರು ಭೂಗತರಾಗಿದ್ದರು. ಒಬ್ಬ ಸ್ವಯಂಸೇವಕರು ಮಂಗಳೂರಿನವರು. ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿ. ಅವರು ಮೂರು ತಿಂಗಳಿನಿಂದ ಬ್ಯಾಂಕಿಗೆ ಹೋಗಿರಲಿಲ್ಲ. ಕಾರಣ? ಅವರನ್ನು ಹಿಡಿದು ಪ್ರಶ್ನೆಗಳನ್ನು ಕೇಳಬೇಕೆಂದು ಪೊಲೀಸರು ಹುಡುಕುತ್ತಿದ್ದರು. ಮೂರು ತಿಂಗಳ ನಂತರ ಬ್ಯಾಂಕಿನಿಂದ ನೋಟಿಸ್ ಬಂತು - ’ನೀವು ಇನ್ನೊಂದು ವಾರದಲ್ಲಿ ಕೆಲಸಕ್ಕೆ ಬರದಿದ್ದರೆ ನಿಮ್ಮನ್ನು ಕೆಲಸದಿಂದ ತೆಗೆದುಹಾಕುತ್ತೇವೆ’ ಎಂದು. ಆಗ ಅವರು ಪ್ರಚಾರಕರೊಡನೆ ಸಮಾಲೋಚಿಸಿದರು. ಪ್ರಚಾರಕರು ಸಲಹೆ ಕೊಟ್ಟರು - ಅವರು ಬ್ಯಾಂಕಿಗೆ ಹೋಗಬೇಕು, ಪೊಲೀಸರು ಅವರನ್ನು ಬಂಧಿಸುತ್ತಾರೆ, ಇವರು ಜೈಲಿಗೆ ಹೋಗುತ್ತಾರೆ, ಆದರೆ ಅವರ ಕೆಲಸವಾದರೂ ಉಳಿಯುತ್ತದೆ.

    ಸರಿ, ಅವರು ಕೆಲಸಕ್ಕೆ ಹೋದರು. ಮೊದಲನೇ ದಿನವೇ ಪೊಲೀಸರು ಬಂದು ಅವರನ್ನು ಬಂಧಿಸಿ ಕರೆದುಕೊಂಡು ಹೋದರು. ಬಂದರು ಪೊಲೀಸ್ ಸ್ಟೇಷನ್‍ಗೆ ಕರೆದುಕೊಂಡು ಹೋದರು. ಇನ್ನಿಲ್ಲದ ಚಿತ್ರ ಹಿಂಸೆ ಕೊಟ್ಟು ಅರ್ಧ ಜೀವ ಮಾಡಿದರು. ’ಲೋಕ ಸಂಘ ಸಮಿತಿಗೆ ಹಣ ಎಲ್ಲಿಂದ ಬರುತ್ತದೆ, ಆ ಪ್ರಚಾರಕರು ಎಲ್ಲಿ ಉಳಿದುಕೊಳ್ಳುತ್ತಾರೆ? ಈ ಪ್ರಚಾರಕರು ಎಲ್ಲಿರುತ್ತಾರೆ?’ ಈ ಪ್ರಶ್ನೆಗಳನ್ನು ಕೇಳಿದರು. ಈ ನಮ್ಮ ಸ್ವಯಂಸೇವಕರು ತಮಗೆ ಒಂದು ಲೋಟ ನೀರು ಕೊಟ್ಟರೆ ಎಲ್ಲವನ್ನೂ ಹೇಳುತ್ತೇನೆಂದರು. ಪೊಲೀಸರು ನೀರು ಕೊಟ್ಟರು. ಇವರು ಹತ್ತಿರದಲ್ಲಿದ್ದ ಕಿಟಕಿ ನೋಡಿದರು. ಇವರಿದ್ದುದು ಮೊದಲನೆ ಮಹಡಿಯ ಮೇಲೆ. ಪೊಲೀಸರು ನೋಡುತ್ತಿದ್ದಂತೆಯೇ ಕ್ಷಣಾರ್ಧದಲ್ಲೇ ಓಡಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಿಟಕಿ ಮೂಲಕ ಹಾರಿದರು. ಪುಣ್ಯಕ್ಕೆ ತಲೆಗೆ ಏಟು ಬೀಳದೆ ಕಾಲುಗಳ ಮೇಲಿ ಬಿದ್ದು ಪ್ರಾಣ ಉಳಿಯಿತು. ಆದರೆ ಕಾಲುಗಳೂ ಪುಡಿಪುಡಿಯಾದವು. ಇಂದಿಗೂ ಅವರಿಗೆ ಸರಿಯಾಗಿ ನಡೆಯಲಾಗುವುದಿಲ್ಲ.

    ಈ ರೀತಿ ಸಾವಿರಾರು ಜನರು ನಷ್ಟ ಕಷ್ಟ ಅನುಭವಿಸಿದರು. ಅನೇಕರ ತಂದೆ, ತಾಯಿಗಳು ತೀರಿಕೊಂಡರೂ ಅವರನ್ನು ಮನೆಗೆ ಬಿಡದೆ ಜೈಲಿನಲ್ಲೇ ಇಟ್ಟಿದ್ದರು. ಒಂದೂವರೆ ಲಕ್ಷ ಜನ ಸತ್ಯಾಗ್ರಹ ಮಾಡಿದರು. ತುರ್ತು ಪರಿಸ್ಥಿತಿ ಕಳೆಯಿತು. ಈವತ್ತಿನವರೆಗೆ ಯಾರೂ ತಾವು ಮಾಡಿದ ಈ ಹೋರಾಟಕ್ಕೆ ತಮಗೆ ಪರಿಹಾರ ಬೇಕೆಂದು ಕೇಳಲಿಲ್ಲ. ಹೊರಗಿನವರು ಅವರ ಕಾರ್ಯವನ್ನು ತ್ಯಾಗವೆಂದು ಭಾವಿಸುತ್ತಾರಾದರೂ ಸ್ವಯಂಸೇವಕರು ತಾವು ದೇಶಕ್ಕಾಗಿ ಹೋರಾಟ ಮಾಡಿದೆವು, ಅದು ತಮ್ಮ ಕರ್ತವ್ಯ, ತ್ಯಾಗವಲ್ಲ ಎಂದು ಭಾವಿಸಿದರು.

Labels: Duty, Emergency, Sacrifice, Sangha Story, ಕರ್ತವ್ಯ, ತುರ್ತು ಪರಿಸ್ಥಿತಿ, ತ್ಯಾಗ, ಸಂಘದ ಕಥೆ

೯೬. ದೇಶವೂ ನಮ್ಮದೇ, ಸರಕಾರವೂ ನಮ್ಮದೇ

ದೇಶವೂ ನಮ್ಮದೇ, ಸರಕಾರವೂ ನಮ್ಮದೇ

   ಗಾಂಧಿ ಹತ್ಯೆಯ ನಂತರ ಶ್ರೀ ಗುರೂಜಿಯವರನ್ನು ಜೈಲಿನಲ್ಲಿಟ್ಟರು. ಗಾಂಧೀ ಹತ್ಯೆಯ ಆರೋಪವನ್ನು ಅವರ ಮೇಲೆ ಮಾಡಲಾಯಿತು. ೫-೬ ತಿಂಗಳ ನಂತರ ಶ್ರೀ ಗುರೂಜಿಯವರು ಸರಕಾರಕ್ಕೆ ಒಂದು ಪತ್ರವನ್ನು ಬರೆದರು. ’ನಾನೇನಾದರು ಗಾಂಧಿ ಹತ್ಯೆಯಂತಹ ಗಂಭೀರ ತಪ್ಪು ಮಾಡಿದ್ದರೆ ನನ್ನ ಮೇಲೆ ಮೊಕದ್ದಮೆ ಹಾಕಿ. ಕೋರ್ಟಿನಲ್ಲಿ ವಿಚಾರಣೆ ಮಾಡಿ. ಆದರೆ ಕೋರ್ಟಿನಲ್ಲಿ ಮೊಕದ್ದಮೆ ಹೂಡದೆ, ವಿಚಾರಣೆ ಮಾಡದೆ ನನ್ನನ್ನು ಜೈಲಿನಲ್ಲಿಟ್ಟಿರುತ್ತೀರಿ. ಇದು ಸರಿಯಲ್ಲ’ ಎಂದರು.

    ಎಂಟು ತಿಂಗಳ ನಂತರವೂ ಯಾವುದೇ ಮೊಕದ್ದಮೆ ಹಾಕದಿದ್ದ ಮೇಲೆ, ಶ್ರೀ ಗುರೂಜಿಯವರು ಸತ್ಯಾಗ್ರಹದ ಕರೆ ಕೊಟ್ಟರು. ಆ ಸತ್ಯಾಗ್ರಹದಲ್ಲಿ ತೋರಿದ ಸಂಘದ ಶಕ್ತಿಯನ್ನು ನೋಡಿ ಸಂಘದ ಮೇಲಿದ್ದಂತಹ ನಿರ್ಬಂಧ ತೆಗೆದು ಹಾಕಲಾಯಿತು. ೯೦ ವರ್ಷಗಳ ಕಾಲ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯಿತು - ೧೮೫೭ ರಿಂದ ೧೯೪೭ ವರೆಗೆ. ಆ ತೊಂಭತ್ತು ವರ್ಷಗಳಲ್ಲಿ ಸುಮಾರು ೩೫ ಸಾವಿರ ಜನ ಜೈಲಿಗೆ ಹೋಗಿದ್ದರು. ಆದರೆ ಸಂಘದ ಮೇಲಿನ ನಿರ್ಬಂಧವನ್ನು ತೆಗೆದುಹಾಕಲು ನಡೆಸಿದ ಸತ್ಯಾಗ್ರಹದಲ್ಲಿ ೭೬ ಸಾವಿರ ಜನ ಜೈಲಿಗೆ ಹೋಗಿದ್ದರು. ಸ್ವಯಂಸೇವಕರು ಸಂಘಟನೆಯ ಶಕ್ತಿಯನ್ನು ತೋರಿಸಿದ್ದರು.

    ಶ್ರೀ ಗುರೂಜಿಯವರು ಜೈಲಿನಿಂದ ಬಿಡುಗಡೆಯಾದ ನಂತರ ಎಲ್ಲೆಲ್ಲೂ ಪೂರ್ವಪ್ರಕಟವಾದಂತಹ ಕಾರ್ಯಕ್ರಮಗಳು ನಡೆದವು. ಅಲ್ಲಿ ಮಾತನಾಡಿದ ಭಾಷಣದಲ್ಲಿ ಒಂದು ಶಬ್ದವೂ ಸರಕಾರದ ವಿರುದ್ಧ ಇರಲಿಲ್ಲ. ಆಗ ಸ್ವಯಂಸೇವಕರು ಶ್ರೀ ಗುರೂಜಿಯವರನ್ನು ಅದನ್ನು ಪ್ರಶ್ನಿಸುತ್ತಾರೆ. ಶ್ರೀ ಗುರೂಜಿಯವರು ’ಈ ಸರಕಾರವೂ ನಮ್ಮದು, ದೇಶವೂ ನಮ್ಮದು. ನಾವು ಹಿಂದು ಸಮಾಜದ ಒಳಗಡೆ ಸಂಘಟನೆ ಕಟ್ಟುತ್ತಿಲ್ಲ. ಹಿಂದು ಸಮಾಜದ ಸಂಘಟನೆ ಕಟ್ಟುತ್ತಿದ್ದೇವೆ. ಕೆಲವೊಮ್ಮೆ ಊಟ ಮಾಡುವಾಗ ನಾಲಗೆಯನ್ನು ಹಲ್ಲು ಕಚ್ಚುತ್ತದೆ. ಆಗ ಹಲ್ಲನ್ನು ಕಲ್ಲಿನಿಂದ ಜಜ್ಜಿ ಕಿತ್ತು ಹಾಕುವುದಿಲ್ಲ. ಹಲ್ಲೂ ನಮ್ಮದೆ, ನಾಲಗೆಯನ್ನು ಕಚ್ಚಿದೆ, ಇನ್ನು ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತೇವೆ ಅಷ್ಟೇ. ಈಗ ತಪ್ಪನ್ನು ಸರಿಪಡಿಸಿಕೊಂಡಿದ್ದೇವೆ. ದ್ವೇಷ ಬೇಡ’ ಎಂದರು.

Labels: Ban in 1948, Jail, Sri Guruji, Tongue and Teeth, ಜೈಲು, ನಾಲಗೆ, ಶ್ರೀ ಗುರೂಜಿ, ಸಂಘದ ಕಥೆ, ಹಲ್ಲು, ೧೯೪೮ರ ನಿರ್ಬಂಧ

೯೫. ಸಕಾರಾತ್ಮಕ ಚಿಂತನೆ

ಸಕಾರಾತ್ಮಕ ಚಿಂತನೆ

   ೨೦೧೨ರಲ್ಲಿ ಹುಬ್ಬಳ್ಳಿಯಲ್ಲಿ ಹಿಂದೂ ಶಕ್ತಿ ಸಂಗಮ ನಡೆಯಿತು. ಅದಾದ ೧೫ ದಿನಗಳ ನಂತರ ಹುಬ್ಬಳ್ಳಿಯಿಂದ ಆ ಕಾರ್ಯಕ್ರಮಕ್ಕೆ ಹೋದವರ ಒಂದು ಬೈಠಕ್ ನಡೆಯಿತು. ವಿಶ್ವ ಹಿಂದೂ ಪರಿಷತ್ತಿನ ಅಲ್ಲಿನ ಪ್ರಾಂತ ಕಾರ್ಯದರ್ಶಿಗಳು ಒಂದು ಅನುಭವವನ್ನು ಹೇಳಿದರು. ರಾಯಚೂರು ಜಿಲ್ಲೆಯಲ್ಲಿ ಕರಡಿಗುಡ್ಡ ಎನ್ನುವ ಒಂದು ಹಳ್ಳಿಯಿದೆ. ಅಲ್ಲಿಯ ೩೨ ಹರಿಜನ ಕುಟುಂಬದವರು ತಾವು ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗುತ್ತೇವೆ ಎಂದು ಹೇಳಿದ್ದರು. ಯಾವುದೋ ಒಂದು ನಿಶ್ಚಿತ ದಿನ ಮತಾಂತರದ ಕಾರ್ಯಕ್ರಮವಿತ್ತು. ಚರ್ಚಿನವರು ಬಹಳ ಉತ್ಸುಕತೆಯಿಂದ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದರು.

    ಸುದ್ದಿ ತಿಳಿದ ತಕ್ಷಣ ವಿಶ್ವ ಹಿಂದೂ ಪರಿಷತ್ತಿನವರು ಹೋಗಿ ಮಾತನಾಡಿದರು. ಆದರೆ ಹರಿಜನರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ’ಇಲ್ಲಿನ ದೇವಸ್ಥಾನದವರು ನಮ್ಮನ್ನು ಒಳಗೆ ಬಿಡುವುದಿಲ್ಲ. ಹಾಗಾಗಿ ನಾವೇಕೆ ನಿಮ್ಮ ಧರ್ಮದಲ್ಲಿರಬೇಕು?’ ಎಂದು ಪ್ರಶ್ನಿಸಿದರು. ಆಗ ಪರಿಷತ್ತಿನವರು ದೇವಸ್ಥಾನದ ಸಮಿತಿಯವರ ಬಳಿ ಮಾತನಾಡಿದರು. ಆದರೆ ಸಮಿತಿಯವರು ಹರಿಜನರನ್ನು ದೇವಸ್ಥಾನದಲ್ಲಿ ಬಿಡಲು ಒಪ್ಪಲಿಲ್ಲ. ೩-೪ ಬಾರಿ ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಅವರ ಮನಸನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ.

    ಆಷ್ಟರಲ್ಲಿ ಹುಬ್ಬಳ್ಳಿಯ ಶಕ್ತಿ ಸಂಘಮ ಕಾರ್ಯಕ್ರಮ ಪ್ರಾರಂಭವಾಗಿತ್ತು. ಆ ದೇವಸ್ಥಾನದ ಸಮಿತಿಯ ೩ ಮೂರು ಜನರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಶಿಬಿರದಲ್ಲಿ ಇತರ ೨೯,೭೩೯ ಜನರ ಜೊತೆ ೩ ದಿನವಿದ್ದರು. ಕಾರ್ಯಕ್ರಮದ ನಂತರ ಜನವರಿ ೨೯ರಂದು ರಾತ್ರಿ ಮೂರು ಗಂಟೆಗೆ ಊರು ತಲುಪಿದರು. ಮರುದಿನ ಬೆಳಿಗ್ಗೆ ೭ ಗಂಟೆಗೆ ಆ ಹರಿಜನ ಕೇರಿಗೆ ಹೋಗಿ ಅಲ್ಲಿನ ಜನರನ್ನು ಮಾತನಾಡಿಸಿ ಎಲ್ಲರನ್ನು ದೇವಸ್ಥಾನಕ್ಕೆ ಆಹ್ವಾನಿಸಿದರು. ಮತಾಂತರವಾಗದಂತೆ ಮನವೊಲಿಸಿದರು. ಮೊದಲು ಒಪ್ಪಿರದಿದ್ದ ಆ ದೇವಸ್ಥಾನದ ಸಮಿತಿಯವರು ಸಂಘದ ಶಿಬಿರಕ್ಕೆ ಬಂದ ನಂತರ ಬದಲಾಗಿದ್ದರು. ತಮ್ಮೂರಿನವರು ಮತಾಂತರವಾಗಬಾರದು. ದಲಿತರು ನಮ್ಮೊಡನೆಯೇ ಇರಬೇಕು ಎನ್ನುವ ಮನಸ್ಸು ಮಾಡಿದ್ದರು.

Labels: Conversion, Hubballi, Sangha Story, Transformation, ಚಿಂತನೆ, ಬದಲಾವಣೆ, ಮತಾಂತರ, ವಾತಾವರಣ, ಸಂಘದ ಕಥೆ, ಹುಬ್ಬಳ್ಳಿ

೯೪. ಜಾತಿ

ಜಾತಿ

    ವ್ಯಕ್ತಿಯನ್ನು ಜೋಡಿಸಬೇಕಾದರೆ ಏನೇನು ಕಷ್ಟಗಳನ್ನು ಅನುಭವಿಸಬೇಕಾಗುವುದು ಎನ್ನುವುದಕ್ಕೆ ಒಂದು ಉದಾಹರಣೆ. ಪ್ರಚಾರಕರಾಗಿದ್ದ ನ. ಕೃಷ್ಣಪ್ಪನವರು ಕಪ್ಪಗಿದ್ದರು. ಅವರ ಜೊತೆಯಲ್ಲಿ ರಮಾನಾಥ ರೈ ಎನ್ನುವ ಇನ್ನೊಬ್ಬ ಪ್ರಚಾರಕರು. ಅವರು ಬೆಳ್ಳಗಿದ್ದರು. ಎಲ್ಲರಿಗೂ ರಮಾನಾಥರು ಬ್ರಾಹ್ಮಣ ಎನ್ನುವ ಕಲ್ಪನೆ, ಕೃಷ್ಣಪ್ಪನವರು ಬ್ರಾಹ್ಮಣರಲ್ಲ ಎನ್ನುವ ಅನಿಸಿಕೆ. ಕೃಷ್ಣಪ್ಪನವರಿಗೆ ಯಾವಾಗಲೂ ಮನೆಯ ಹೊರಗಡೆ ಊಟ. ರಮಾನಾಥ ರೈ ಅವರಿಗೆ ಮನೆ ಒಳಗಡೆ ಊಟ. ಎಂದೂ ರಮಾನಾಥ ರೈಗಳು ತಾವು ಬ್ರಾಹ್ಮಣ ಅಲ್ಲ ಎಂದು ಹೇಳಿಕೊಳ್ಳಲಿಲ್ಲ ಅಥವಾ ಕೃಷ್ಣಪ್ಪನವರು ತಾವು ಬ್ರಾಹ್ಮಣ ಎಂದು ಹೇಳಿಕೊಳ್ಳಲಿಲ್ಲ.

Labels: Caste, Na. Krishnappa, Ramanatha Rai, Sangha Story, ಊಟ, ಜಾತಿ, ನ. ಕೃಷ್ಣಪ್ಪ, ರಮಾನಾಥ ರೈ, ಸಂಘದ ಕಥೆ

೯೩. ಖಾರದ ಊಟ

ಖಾರದ ಊಟ

   ಹಿಂದೆ ಸರಕಾರ್ಯವಾಹರಾಗಿದ್ದಂತಹ ಹೂ.ವೆ. ಶೇಷಾದ್ರಿಯವರು ತೀರಿಕೊಂಡ ನಂತರ ಅವರ ಬಗ್ಗೆ ಒಂದು ಸಣ್ಣ ಪುಸ್ತಕ ಬಿಡುಗಡೆಯಾಯಿತು. ಅದರಲ್ಲಿ ಅವರ ಬಗ್ಗೆ ನ. ಕೃಷ್ಣಪ್ಪನವರು ಬರೆದಿದ್ದಾರೆ.

    ಆಗ ೫೦ರ ದಶಕ. ಆಗ ಪ್ರಾಂತ ಪ್ರಚಾರಕರಾಗಿದ್ದ ಶೇಷಾದ್ರಿಯವರಿಗೆ ಅಲ್ಸರ್ ಖಾಯಿಲೆ ಇತ್ತು. ಆಗ ಮನೆಗಳಲ್ಲಿ ಉಳಿದುಕೊಳ್ಳುವ ಅವಕಾಶವು ಕಡಿಮೆ. ಒಂದು ಮನೆಯಲ್ಲಿ ಊಟದ ವ್ಯವಸ್ಥೆಯಾಗಿತ್ತು. ಊಟಕ್ಕೆ ವಿಪರೀತ ಖಾರ ಹಾಕಿದ್ದರು. ಆದರೂ ಶೇಷಾದ್ರಿಯವರು ಆ ಊಟವನ್ನೇ ತಿಂದರು.

    ನಂತರ ಅವರಿಗೆ ಭೇದಿ ಶುರುವಾಯಿತು. ಇವರಿಬ್ಬರೂ ಉಳಿದುಕೊಂಡಿದ್ದು ಮಹಡಿಯ ಮೇಲೆ. ಪ್ರತಿ ಇಪ್ಪತ್ತು ನಿಮಿಷಕ್ಕೊಮ್ಮೆ ಕೆಳಗಿಳಿದು ಬರಬೇಕು. ೨-೩ ಮೂರು ಬಾರಿ ಭೇದಿಯಾದ ಮೇಲೆ ಶೇಷಾದ್ರಿಯವರು ಕೃಷ್ಣಪ್ಪನವರ ಬಳಿ ’ಈ ಮನೆಯವರಿಗೆ ತೊಂದರೆ ಕೊಡುವುದು ಬೇಡ. ಊರ ಹೊರಗಿರುವ ಕೆರೆಯ ಪಕ್ಕದಲ್ಲೇ ಮಲಗೋಣ’ ಎಂದು ಹೇಳಿ, ಮನೆಯವರಿಗೆ ಗೊತ್ತಾಗದ ಹಾಗೆ ಹೊರಗೆ ಬಂದರು. ಬೆಳಿಗ್ಗೆ ಹೊತ್ತಿಗೆ ೧೫-೨೦ ಬಾರಿ ಭೇದಿಯಾಗಿದೆ. ಕೆರೆಯಲ್ಲೇ ಸ್ನಾನ ಮಾಡಿ ಮನೆಗೆ ಬಂದರು. ಮನೆಯವರಿಗೆ ಯಾವ ವಿಷಯವನ್ನೂ ಹೇಳಲಿಲ್ಲ. ಎಲ್ಲಾ ವ್ಯವಸ್ಥೆಗಳನ್ನೂ ಹೊಗಳಿ ಹೊರಟರು. ಅಂಥಾ ತೀವ್ರವಾದ ಅನಾರೋಗ್ಯವಿದ್ದಾಗಲೂ, ಖಾರದ ಊಟ ಮಾಡಿ ಆರೋಗ್ಯ ಹಾಳಾದರೂ ಯಾವುದೇ ಮಾತಾಡದೆ ಸಹಿಸಿಕೊಂಡರು.

Labels: H.S. Sheshadri, Loose Motion, Na. Krishnappa, Sangha Story, Ulcer, ಅಲ್ಸರ್, ನ. ಕೃಷ್ಣಪ್ಪ, ಭೇದಿ, ಸಂಘದ ಕಥೆ, ಹೂ.ವೆ. ಶೇಷಾದ್ರಿ

೯೨. ಸಂಘ ಮತ್ತು ಕಮ್ಯೂನಿಸಂ

ಸಂಘ ಮತ್ತು ಕಮ್ಯೂನಿಸಂ

   ಎಪ್ಪತ್ತರ ದಶಕದಲ್ಲಿ ಸಂಘದ ಮೂರನೆಯ ಸರಸಂಘಚಾಲರಾಗಿದ್ದ ಬಾಳಾಸಾಹೇಬ ದೇವರಸ್‍ರವರು ’ಆರ್.ಎಸ್.ಎಸ್ ಕೆಟ್ಟದ್ದು, ಅದು ಹೇಳುವ ಹಿಂದುತ್ವ ಕೆಟ್ಟದ್ದು ಎಂದು ತುಂಬಾ ಜನ ಹೇಳುತ್ತಾರೆ. ಆದರೆ ಆರ್.ಎಸ್.ಎಸ್. ಸ್ವಯಂಸೇವಕರು ತುಂಬಾ ಒಳ್ಳೆಯವರು ಎಂದು ಎಲ್ಲರೂ ಹೇಳುತ್ತಾರೆ. ಹಾಗೆಯೇ ಕಮ್ಯೂನಿಸಂ ಒಳ್ಳೆಯದು ಆದರೆ ಕಮ್ಯೂನಿಸ್ಟರು ಕೆಟ್ಟವರು ಎನ್ನುವ ಅಭಿಪ್ರಾಯವೂ ಅದೇ ರೀತಿ ಜನರಲ್ಲಿದೆ. ಕಮ್ಯೂನಿಸಂ ಎಂದರೆ ಇಡೀ ಜಗತ್ತನೇ ಒಂದು ಮಾಡಲು ಹೊರಟಿದೆ, ಆದರೆ ಈ ಹಿಂದುತ್ವವೆಂದರೆ ಸಂಕುಚಿತ ಎನ್ನುವ ಅಭಿಪ್ರಾಯವೂ ಇದೆ. ಯಾವಾಗ ಅದೇ ಜನ ನಮ್ಮ ಸ್ವಯಂಸೇವಕರನ್ನು ಒಪ್ಪಿಕೊಳ್ಳುತ್ತಾರೋ ಆಗ ನಮ್ಮ ಕಾರ್ಯಪದ್ಧತಿಯನ್ನೂ ಮತ್ತು ನಮ್ಮ ಕಾರ್ಯವು ಸರಿಯಿದೇ ಎನ್ನುವುದನ್ನೂ ಒಪ್ಪಿಕೊಳ್ಳಬೇಕು’.

    ’ಸ್ವಯಂಸೇವಕನು ಚೆನ್ನಾಗಿದ್ದಾನೆ ಎಂದರೆ ಅದನ್ನು ತಯಾರು ಮಾಡುವ ಶಾಖೆಯೂ ಚೆನ್ನಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಮತ್ತು ಶಾಖೆಯನ್ನು ಶುರು ಮಾಡಿದ ಸಂಘದ ವಿಚಾರವೂ ಸರಿಯಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಹಾಗೆಯೇ ಕಮ್ಯೂನಿಸ್ಟರು ಕೆಟ್ಟವರಾದ್ದರಿಂದ, ಕಮ್ಯೂನಿಸಂ ಕೂಡ ಕೆಟ್ಟದೆಂದು ಅವರು ತಿಳಿಯಬೇಕು. ಮತ್ತು ಕಮ್ಯೂನಿಸ್ಟ್ ಸಿದ್ಧಾಂತವೂ ಸರಿಯಿಲ್ಲವೆಂದು ಒಪ್ಪಿಕೊಳ್ಳಬೇಕು. ವಿಚಾರ ಮತ್ತು ಕಾರ್ಯಪದ್ಧತಿಗಳಿಂದ ತಯಾರಾಗುವವನೇ ಕಾರ್ಯಕರ್ತ. ಸಂಘದ ಕಾರ್ಯಕರ್ತನನ್ನು ಮೆಚ್ಚಿಕೊಂಡಿದ್ದರಿಂದ ಸಂಘದ ಕಾರ್ಯಪದ್ಧತಿಯೂ ಸರಿಯಿದೆ, ಸಂಘದ ವಿಚಾರವೂ ಸರಿಯಿದೆ ಎನ್ನುವುದು ಸಾಬೀತಾಗುತ್ತದೆ’ ಎಂದು ಹೇಳುತ್ತಿದ್ದರು.

Labels: Balasaheb Devaras, Communism, Sangha Story, ಕಮ್ಯೂನಿಸಂ, ಬಾಳಾಸಾಹೇಬ ದೇವರಸ್, ಸಂಘದ ಕಥೆ

೯೧. ಜಯಪ್ರಕಾಶ ನಾರಾಯಣರ ಕಣ್ಣಲ್ಲಿ ಸಂಘ

ಜಯಪ್ರಕಾಶ ನಾರಾಯಣರ ಕಣ್ಣಲ್ಲಿ ಸಂಘ

   ೧೯೭೫ನೇ ಇಸವಿಗೆ ಮುಂಚೆ ಜಯಪ್ರಕಾಶ್ ನಾರಾಯಣ ಹೇಗಿದ್ದರು? ೧೯೪೮ನೇ ಇಸವಿಯಲ್ಲಿ ಅವರು ಹೇಳಿದ್ದು ’ನನ್ನ ಜೀವನದ ಏಕಮಾತ್ರ ಧ್ಯೇಯವೆಂದರೆ ಆರ್.ಎಸ್.ಎಸ್.ನ ನಾಶ’ ಎಂದು. ಸುಮಾರು ೫ ಸಾವಿರ ಜನರನ್ನು ಕರೆದುಕೊಂಡು ದೆಹಲಿಯ ಆಗಿನ ಸಂಘಚಾಲಕಾರಿಗಿದ್ದ ಲಾಲಾ ಹಂಸರಾಜ ಗುಪ್ತರವರ ಮನೆಗೆ ಬೆಂಕಿ ಇಡಲು ಬಂದಿದ್ದರು. ಮುಂದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಡೆದ ಹೋರಾಟ ಅವರ ನೇತೃತ್ವದಲ್ಲೇ ಸಮಗ್ರ ಕ್ರಾಂತಿ ಅಥವಾ ಲೋಕಸಂಘ ಸಮಿತಿ ಹೆಸರಿನಲ್ಲಿ ನಡೆಯಿತು. ಅವರು ಜೈಲು ಸೇರಿದಾಗ ಅವರು ಹೇಳಿದ್ದು ’ಈಗ ಆರ್.ಎಸ್.ಎಸ್ ಬಿಟ್ಟರೆ ಇನ್ಯಾರೂ ಈ ದೇಶಕ್ಕೆ ಗತಿ ಇಲ್ಲ. ಈ ದೇಶವು ಈ ಸ್ಥಿತಿಯಿಂದ ಪಾರಾಗಬೇಕಾದರೆ ಅದು ಸಂಘದಿಂದ ಮಾತ್ರ ಸಾಧ್ಯ’ ಎಂದು! ತುರ್ತು ಪರಿಸ್ಥಿತಿಯ ನಂತರ ಅವರು ’ಆರ್.ಎಸ್.ಎಸ್ ಅನ್ನು ಯಾರಾದರೂ ಫ್ಯಾಸಿಸ್ಟ್ ಎಂದು ಕರೆದರೆ, ನನ್ನನ್ನೂ ಫ್ಯಾಸಿಸ್ಟ್ ಎಂದು ಕರೆಯಿರಿ’ ಎಂದರು.

    ಹಾಗೆಯೇ, ಆಚಾರ್ಯ ವಿನೋಬಾ ಭಾವೆಯವರು ’ನಾನೂ ಒಬ್ಬ ಸಂಘದ ಅನೌಪಚಾರಿಕ ಸ್ವಯಂಸೇವಕನೇ’ ಎಂದಿದ್ದರು. ಇನ್ನೊಬ್ಬ ಸರ್ವೋದಯದ ಕಾರ್ಯಕರ್ತರು ’ಆರ್.ಎಸ್.ಎಸ್ ಎಂದರೆ 'Ready for Selfless Service' ಎಂದು ಹೇಳಿದ್ದರು.

Labels: Emergency, Fascist, Jayaprakash Narayan, Sangha Story, ಜಯಪ್ರಕಾಶ ನಾರಾಯಣ, ತುರ್ತು ಪರಿಸ್ಥಿತಿ, ಫ್ಯಾಸಿಸ್ಟ್, ಸಂಘದ ಕಥೆ

೯೦. ಸಂಘಕ್ಕೆ ಹೆಸರು

ಸಂಘಕ್ಕೆ ಹೆಸರು

   ಪ್ರಾರಂಭವಾದಾಗ ಸಂಘಕ್ಕೆ ಹೆಸರೂ ಇರಲಿಲ್ಲ. ಆದರೆ ಸಂಘಕ್ಕೆ ಹೆಸರು ಇಡಬೇಕು ಎನ್ನುವುದು ಮತ್ತು ಯಾವ ಹೆಸರು ಇಡಬೇಕು ಎನ್ನುವ ಕಲ್ಪನೆ ಡಾಕ್ಟರ್‌ಜಿಯವರಿಗಿತ್ತು. ಸಂಘದ ಎಲ್ಲ ನಿರ್ಣಯಗಳ ಒಂದು ಪುಸ್ತಕವಿದೆ. ಅದರಲ್ಲಿ ೧೯೨೭ರಿಂದ ತೆಗೆದುಕೊಂಡ ಎಲ್ಲ ನಿರ್ಣಯಗಳ ವಿವರಗಳಿವೆ. ಮೊಟ್ಟಮೊದಲ ನಿರ್ಣಯವನ್ನು ಮರಾಠಿಯಲ್ಲಿ ಬರೆಯಲಾಗಿದೆ. ಪಾಂಡೆ ಎನ್ನುವ ಒಬ್ಬ ಕಾರ್ಯದರ್ಶಿಗಳು ಅದನ್ನು ಬರೆದಿದ್ದಾರೆ.

    ಸಂಘದ ಹೆಸರು ಏನಿರಬೇಕೆಂದು ಒಂದು ಬೈಠಕ್‍ನಲ್ಲಿ ಚರ್ಚೆಯಾಯಿತು. ಅದರಲ್ಲಿ ೨೭ ಜನ ಸ್ವಯಂಸೇವಕರು ಭಾಗವಹಿಸಿದ್ದರು. ಆ ಸಭೆಯಲ್ಲಿ ಮೂರು ಹೆಸರುಗಳನ್ನು ಸೂಚಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘ, ಚರೀ ಪಡಕಾ ಸಂಘ ಮತ್ತು ಇನ್ನೊಂದು ಹೆಸರು. ಮತದಾನ ಹಾಕಲಾಯಿತು. ಬಂದವರಲ್ಲಿ ಇಬ್ಬರು ಮತದಾನದಲ್ಲಿ ಭಾಗವಹಿಸದೆ ಹೊರಗುಳಿದರು. ಉಳಿದ ೨೫ ಜನ ಮೂರೂ ಹೆಸರುಗಳನ್ನು ಮುಂದಿಟ್ಟುಕೊಂಡು ಮತ ಹಾಕಿದರು.

    ಅದರಲ್ಲಿ ೧೮ ಮತಗಳು ರಾಷ್ಟ್ರೀಯ ಸ್ವಯಂಸೇವಕ ಸಂಘ ಹೆಸರಿನ ಪರವಾಗಿ ಬಂದದ್ದರಿಂದ ಸಂಘದ ಹೆಸರನ್ನು ಅದೇ ರೀತಿಯೇ ತೀರ್ಮಾನಿಸಿದರೆಂದು ಬರೆದು ಪಾಂಡೆಯವರು ಸಹಿ ಹಾಕಿದ್ದಾರೆ. ಡಾಕ್ಟರ್‌ಜಿಯವರು ಅದೇ ಹೆಸರಿಡಬೇಕೆಂದು ಅಂದುಕೊಂಡಿದ್ದರು. ಅದನ್ನು ಅವರೇ ಹೇಳಿದ್ದರೆ ಎಲ್ಲರೂ ಒಪ್ಪಿಕೊಳ್ಳುತ್ತಿದ್ದರು. ಆದರೆ ಡಾಕ್ಟರ್‌ಜಿಯವರಿಗೆ ಎನಿಸಿತು ’ಇಲ್ಲಿ ಯಾರಿಗೂ ಇದು ತನ್ನ ಅಭಿಪ್ರಾಯ ನಡೆಯುತ್ತದೆ ಎಂದು ಎನಿಸಬಾರದು. ನಾವು ಎನ್ನುವ ಭಾವ ಬೆಳೆಯಬೇಕು. ಎಲ್ಲರಿಗೂ ತಮ್ಮ ಆಭಿಪ್ರಾಯ ವ್ಯಕ್ತಪಡಿಸುವ ಅವಕಾಶ ಇರಬೇಕು. ಅದನ್ನು ಅವರು ಪ್ರತಿಪಾದನೆಯನ್ನೂ ಮಾಡಬೇಕು. ಆದರೆ ಕೊನೆಯಲ್ಲಿ ಏನು ನಿರ್ಣಯವಾಗುತ್ತದೆಯೋ ಅದನ್ನು ಎಲ್ಲರೂ ಪಾಲಿಸಬೇಕು. ಅನುಶಾಸನವೂ ಇರಬೇಕು, ಅಭಿಪ್ರಾಯ ಸ್ವಾತಂತ್ರ್ಯವೂ ಇರಬೇಕು’.

Labels: Doctorji, Freedom of Expression, Sangha Story, ಅಭಿಪ್ರಾಯ ಸ್ವಾತಂತ್ರ್ಯ, ಡಾಕ್ಟರ್‌ಜಿ, ಸಂಘಕ್ಕೆ ಹೆಸರು, ಸಂಘದ ಕಥೆ

Friday, November 23, 2012

೮೯. ರಾಷ್ಟ್ರಹಿತವೇ ಮಿಗಿಲು

ರಾಷ್ಟ್ರಹಿತವೇ ಮಿಗಿಲು

   ದೇವ ದಾನವರ ನಡುವೆ ಯಾವಾಗಲೂ ಯುದ್ಧವಾಗುತ್ತಲೇ ಇತ್ತು. ದೇವತೆಗಳಿಗೇ ಬಹುತೇಕ ಜಯವಾಗುತ್ತಿತ್ತು. ಆಗ ದಾನವಗುರು ಶುಕ್ರಾಚಾರ್ಯರು ತಪಸ್ಸು ಮಾಡು ಸಂಜೀವಿನಿ ವಿದ್ಯೆ ಸಂಪಾದಿಸಿದರು. ಇದರಿಂದ ಸತ್ತ ದಾನವರನ್ನು ಅವರು ಮತ್ತೆ ಬದುಕಿಸುತ್ತಿದ್ದರು.

    ಇದಕ್ಕೆ ಏನಾದರೂ ಪರಿಹಾರ ಹುಡುಕಿರೆಂದು ದೇವಗುರು ಬೃಹಸ್ಪತಿಯವರಲ್ಲಿ ದೇವತೆಗಳು ಬೇಡಿಕೊಂಡರು. ಸಂಜೀವಿನೀ ವಿದ್ಯೆ ಕಲಿತುಕೊಂಡು ಬರುವಂತೆ ದೇವಗುರುಗಳು ತೇಜಸ್ವೀ ಯುವಕ ಕಚನನ್ನು ಶುಕ್ರರ ಬಳಿ ಕಳುಹಿಸಿದರು.

    ಕಚ ಶುಕ್ರಾಚಾರ್ಯರ ಆಶ್ರಮ ತಲುಪಿದ. ಅವರ ಶಿಷ್ಯನಾದ. ವಿದ್ಯ ಕಲಿಯತೊಡಗಿದ. ಶುಕ್ರಾಚಾರ್ಯರ ಮಗಳು ದೇವಯಾನಿಯ ಮನಸ್ಸನ್ನೂ ಗೆದ್ದ.

    ಸಂಜೀವಿನೀ ವಿದ್ಯ ಸಂಪದಿಸಲೆಂದೇ ಕಚನು ಶುಕ್ರಾಚಾರ್ಯರ ಬಳಿ ಬಂದುದು ದಾನವರಿಗೆ ತಿಳಿಯಿತು. ಅವನನ್ನು ಮುಗಿಸಿಬಿಡಲು ಹಲವು ತಂತ್ರ ಹೆಣೆದರು. ಪ್ರತಿ ಬಾರಿ ಕಚನನ್ನು ದಾನವರು ಕೊಂದಾಗಲೂ ದೇವಯಾನಿ ಅವನ್ನು ಬದುಕಿಸಿಕೊಡಲು ತಂದೆಗೆ ದಂಬಾಲು ಬೀಳುತ್ತಿದ್ದಳು. ಶುಕ್ರಾಚಾರ್ಯರ ಸಂಜೀವಿನಿ ಮಂತ್ರದಿಂದ ಕಚ ಬದುಕಿ ಬರುತ್ತಿದ್ದ.

    ಈ ಬಾರಿ ದಾನವರು ಉಪಾಯದಿಂದ ಕಚನ್ನು ಕೊಂದು ಸುಟ್ಟುಬಿಟ್ಟರು. ಆ ಬೂದಿಯನ್ನು ಸೋಮರಸದಲ್ಲಿ ಸೇರಿಸಿ ಆಚಾರ್ಯ ಶುಕ್ರರಿಗೆ ಕುಡಿಸಿದರು. ಎಂದಿನಂತೆ ಕಚನ್ನು ಬದುಕಿಸಿಕೊಡಿರೆಂದು ದೇವಯಾನಿ ಬೇಡಿದಳು. ಕಚ ತನ್ನ ಹೊಟ್ಟೆಯಲ್ಲಿರುವುದನ್ನು ತಿಳಿದ ಆಚಾರ್ಯರು ಅವನಿಗೆ ಸಂಜೀವಿನಿಯನ್ನು ಉಪದೇಶಿಸಿ ಅದೇ ಮಂತ್ರದಿಂದ ಜೀವ ನೀಡಿದರು. ಕಚ ಶುಕ್ರಾಚಾರ್ಯರ ಹೊಟ್ಟೆ ಸೀಳಿ ಹೊರಬಂದ. ತಾನು ಪಡೆದಿದ್ದ ಸಂಜೀವಿನಿ ಮಂತ್ರಬಲದಿಂದ ಆಚಾರ್ಯರನ್ನೂ ಬದುಕಿಸಿದ.

    ಸಂಜೀವಿನಿ ವಿದ್ಯೆ ಕಲಿತು ತನ್ನ ಕರ್ತವ್ಯ ಪೂರೈಸಿದ್ದ ಕಚ ಗುರುವಿಗೆ ವಂದಿಸಿ ದೇವಲೋಕಕ್ಕೆ ಹೊರಟು ನಿಂತ. ಆಗ ತನ್ನನ್ನು ಮದುವೆ ಆಗೆಂದು ದೇವಯಾನಿ ಕಚನಲ್ಲಿ ಹಟ ಹಿಡಿದಳು. ’ಗುರುಪುತ್ರಿಯಾದ ನೀನು ನನಗೆ ಸೋದರಿ ಸಮಾನ. ಆದ್ದರಿಂದ ಈ ವಿವಾಹ ಸಾಧ್ಯವಿಲ್ಲ’ ಎಂದುಬಿಟ್ಟ ಕಚ. ಸಿಟ್ಟಾದ ದೇವಯಾನಿ ’ಶುಕ್ರಾಚಾರ್ಯರಿಂದ ನೀನು ಕಲಿತ ಯಾವ ವಿದ್ಯೆಯೂ ನಿನ್ನ ಉಪಯೋಗಕ್ಕೆ ಬಾರದಿರಲಿ’ ಎಂದು ಶಾಪ ಕೊಟ್ಟಳು. ಅವಳ ಶಾಪವನ್ನು ಸಂತೋಷದಿಂದ ಸ್ವೀಕರಿಸಿ ’ನನಗೆ ಉಪಯೋಗಕ್ಕೆ ಬಾರದಿದ್ದರೇನಂತೆ, ನಾನು ಈ ವಿದ್ಯೆಯನ್ನು ಬೇರೆಯವರಿಗೆ ಕಲಿಸುತ್ತೇನೆ’ ಎಂದು ನುಡಿದು ಆತ ದೇವಲೋಕಕ್ಕೆ ನಡೆದುಬಿಟ್ಟ.

    ಕಚನಿಗೆ ಸಂತ ಸುಖಕ್ಕಿಂತ ದೇವಲೋಕದ ಹಿತವೇ ಮಿಗಿಲೆನಿಸಿತ್ತು. ಸಂಜೀವಿನಿ ವಿದ್ಯೆಯನ್ನು ಆತ ಇತರ ದೇವತೆಗಳಿಗೆ ಕಲಿಸಿದ. ಸಂಜೀವಿನಿ ವಿದ್ಯೆಯ ಬಲದಿಂದ ದೇವತೆಗಳು ದಾನವರ ಭಯದಿಂದ ಪಾರಾದರು.

Labels: Boudhik Story, Devayani, Kacha, Nation first, Shukracharya, ಕಚ, ದೇವಯಾನಿ, ಬೋಧ ಕಥೆ, ರಾಷ್ಟ್ರಹಿತ, ಶುಕ್ರಾಚಾರ್ಯ, ಸಂಜೀವಿನಿ

೮೮. ಅವಮಾನವೂ ನೈವೇದ್ಯವೇ

ಅವಮಾನವೂ ನೈವೇದ್ಯವೇ

   ಹತ್ತಿರದ ಒಂದು ಊರಿನಲ್ಲಿ ಒಬ್ಬ ಪ್ರಸಿದ್ಧ ವಕೀಲರಿದ್ದರು. ಡಾ|| ಮೂಂಜೆಯವರಿಗೆ ಅವರ ಪರಿಚಯವಿತ್ತು. ’ನಾನು ಅವರಿಗೆ ಫೋನ್ ಮಾಡಿರುತ್ತೇನೆ. ನಿನ್ನ ಬಳಿಯಲ್ಲಿ ಒಂದು ಚೀಟಿಯನ್ನೂ ಕೊಡುತ್ತೇನೆ. ಅವರ ಮನೆಯಲ್ಲೇ ಉಳಿದುಕೋ. ಅಲ್ಲಿ ಒಂದು ಶಾಖೆ ಶುರು ಮಾಡಬಹುದು’ ಎಂದು ಹೇಳಿ ಡಾಕ್ಟರ್‌ಜಿಯವರನ್ನು ಕಳಿಸಿದರು. ಡಾಕ್ಟರ್‌ಜಿಯವರು ರೈಲಿನಲ್ಲಿ ಅಲ್ಲಿಗೆ ಹೋದರು. ತಾವು ಆ ರೈಲಿನಲ್ಲಿ ಬರುವುದಾಗಿ ಮೊದಲೇ ತಿಳಿಸಿದ್ದರು. ಆದರೆ ಅವರನ್ನು ಕರೆದುಕೊಂಡು ಬರಲು ಯಾರು ರೈಲು ನಿಲ್ದಾಣಕ್ಕೆ ಬಂದಿರಲಿಲ್ಲ. ಡಾಕ್ಟರ್‌ಜಿಯವರು ನಡೆದೇ ಆ ವಕೀಲರ ಮನೆಗೆ ಹೋದರು.

    ಆ ವಕೀಲರದು ತುಂಬಾ ದೊಡ್ಡ ಮನೆ. ೮-೧೦ ಮೆಟ್ಟಿಲು ಹತ್ತಿ ಮನೆಯ ಒಳಗೆ ಹೋಗಬೇಕು. ವಿಶಾಲವಾದ ಅರಮನೆಯಂತಹ ಮನೆ. ಹೊರಗೆ ವಿಶಾಲವಾದ ಹೂತೋಟ. ಹತ್ತಾರು ಜನ ಆ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊರ ಗೇಟು ಮುಚ್ಚಿದೆ. ಒಬ್ಬ ಕಾವಲು ಕಾಯುತ್ತಿದ್ದಾನೆ. ಡಾಕ್ಟರ್‌ಜಿಯವರು ಒಂದು ಚೀಟಿಯಲ್ಲಿ ತಮ್ಮ ಪರಿಚಯವನ್ನು ಬರೆದು ಒಳಗೆ ಕಳುಹಿಸಿಕೊಟ್ಟರು. ಒಳಗೆ ಬರಲು ಸೂಚನೆ ಬಂದಿತು.

    ಒಳಗೆ ಬಂದಾಗ ಅ ವಕೀಲರು ಕಾಲ ಮೇಲೆ ಕಾಲು ಹಾಕಿಕೊಂಡು ತನ್ನ ಶ್ರೀಮಂತಿಕೆಯ ಅಹಂಕಾರವನ್ನು ತೋರಿಸುತ್ತಾ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತಿದ್ದರು. ಡಾಕ್ಟರ್‌ಜಿಯವರನ್ನು ನೋಡಿ ಕುಳಿತುಕೊಳ್ಳಲೂ ಹೇಳದೆ ಒದುತ್ತಲೇ ಇದ್ದರು. ಡಾಕ್ಟರ್‌ಜಿಯವರು ವೈದ್ಯರಾಗಿದ್ದವರು. ಸ್ವಾಭಿಮಾನಿಗಳಾಗಿದ್ದವರು. ಕುಳಿತುಕೊಳ್ಳಲು ಹೇಳದಿದ್ದರಿಂದ ನಿಂತೇ ಇದ್ದರು. ಸುಮಾರು ೮-೧೦ ನಿಮಿಷ ಆ ವಕೀಲರು ಡಾಕ್ಟರ್‌ಜಿಯವರ ಕಡೆ ನೋಡಲಿಲ್ಲ, ಮಾತನಾಡಿಸಲೂ ಇಲ್ಲ. ಒಮ್ಮೆ ಕಿರುನೋಟದಲ್ಲಿ ಡಾಕ್ಟರ್‌ಜಿಯವರ ಕಡೆ ನೋಡುವುದು, ಮತ್ತೆ ಓದುವ ಹಾಗೆ ಮಾಡುವುದು. ಹೀಗೆಯೇ ನಡೆದಿತ್ತು.

    ಡಾಕ್ಟರ್‌ಜಿಯವರಿಗೆ ಗೊತ್ತಾಯಿತು. ತಾವು ಬಂದಿರುವುದೂ ಗೊತ್ತಿದ್ದೂ, ನಿಂತಿರುವುದು ಅರಿವಿದ್ದೂ, ತಾನು ತುಂಬಾ ವ್ಯವಧಾನವಿಲ್ಲದವನು ಎಂದು ತೋರಿಸಲು ವಕೀಲರು ನಾಟಕವಾಡುತ್ತಿದ್ದಾರೆ ಎಂದು. ಆದರೆ ಡಾಕ್ಟರ್‌ಜಿಯವರಿಗೆ ಆ ವ್ಯಕ್ತಿಯನ್ನು ಗೆಲ್ಲಬೇಕಾಗಿತ್ತು. ಎಷ್ಟೇ ಆಗಲಿ ಸಂಘಟನ ಕುಶಲರು. ವಕೀಲರು ಓದುತ್ತಿದ್ದ ಪುಸ್ತಕವನ್ನು ನೋಡಿದರು. ಅದು ಹೋಮಿಯೋಪತಿ ಬಗೆಗಿನ ಪುಸ್ತಕವಾಗಿತ್ತು. ಡಾಕ್ಟರ್‌ಜಿಯವರು ಅಲೋಪತಿ ವೈದ್ಯರಾದರೂ, ಹೋಮಿಯೋಪತಿಯ ಬಗ್ಗೆ ತಿಳಿದಿದ್ದರು. ನಿಂತಲ್ಲೇ ಡಾಕ್ಟರ್‌ಜಿಯವರು ಹೋಮಿಯೋಪತಿಯ ಬಗ್ಗೆ ಮಾತನಾಡಲು ಶುರು ಮಾಡಿದರು.

    ’ಎಂಥ ಅದ್ಭುತ ವೈದ್ಯ ಪದ್ಧತಿ ಅದು! ನೋಡುವುದಕ್ಕೆ ಒಂದು ಸಣ್ಣ ಸಕ್ಕರೆ ಗುಳಿಗೆ ರೀತಿಯಲ್ಲಿ ಇರುತ್ತದೆ. ಎಂಥೆಂತಹ ಖಾಯಿಲೆಗಳನ್ನು ವಾಸಿ ಮಾಡಬಲ್ಲದು ಅದು!’ ಎಂದು ಹೇಳಿದರು. ಅದನ್ನು ಕೇಳಿ ವಕೀಲರು ಓದುವುದನ್ನು ನಿಲ್ಲಿಸಿ ಪುಸ್ತಕವನ್ನು ಮುಚ್ಚಿಟ್ಟು ಡಾಕ್ಟರ್‌ಜಿಯವರು ಹೇಳುತ್ತಿದ್ದನ್ನು ಕೇಳಲು ಶುರು ಮಾಡಿದರು. ಒಂದಾದ ನಂತರ ಸಂಭಾಷಣೆ ಪ್ರಾರಂಭವಾಯಿತು. ವಕೀಲರು ಇದ್ದಕ್ಕಿದ್ದಂತೆ ಗಮನಿಸಿದಂತೆ ’ಅರೆ, ನಿಂತೇ ಇದ್ದೀರಲ್ಲಾ. ಕುಳಿತುಕೊಳ್ಳಿ’ ಎಂದರು. ಕೆಲಸದವನನ್ನು ಕರೆದು ’ಅವರು ಬಂದು ಇಷ್ಟು ಹೊತ್ತಾಗಿದೆ. ಚಹ ಕೊಡಲು ಗೊತ್ತಾಗುವುದಿಲ್ಲವೇ? ಹೋಗು, ಚಹ ತಾ’ ಎಂದು ಕಳಿಸಿದರು.

    ಕೆಲಸದವನು ಚಹ ತರಲು, ಡಾಕ್ಟರ್‌ಜಿಯವರು ಮನಸ್ಸಿನಲ್ಲೇ ನಿಶ್ಚಯ ಮಾಡಿದರು ’ಇವರಿಗೆ ಅಹಂಕಾರ ಇದೆ. ಆದರೆ ಅವರಿಗೆ ಪ್ರಭಾವವೂ ಇದೆ. ಅದನ್ನು ಉಪಯೋಗಿಸಿಕೊಳ್ಳಬೇಕು. ಇವರನ್ನು ಬಿಡಬಾರದು’ ಎಂದು. ಡಾಕ್ಟರ್‌ಜಿ ಆ ಮನೆಯಲ್ಲಿ ತಮ್ಮ ಸಾಮಾನನ್ನು ಇಟ್ಟು ಹೊರಗೆ ಸಂಪರ್ಕಕ್ಕೆ ಹೋಗುತ್ತಿದ್ದರು. ರಾತ್ರಿ ಬಂದು ಉಳಿದುಕೊಳ್ಳುತ್ತಿದ್ದರು. ಅಲ್ಲಿ ಒಮ್ಮೆಯೂ ಊಟ, ತಿಂಡಿ ಮಾಡುತ್ತಿರಲಿಲ್ಲ.

    ೭-೮ ದಿನಗಳ ನಂತರ ಆ ವಕೀಲರ ಹತ್ತಿರ ಬಂದು ’ಇಲ್ಲಿ ಸಂಘದ ಶಾಖೆ ಪ್ರಾರಂಭ ಮಾಡಬೇಕಾಗಿದೆ. ಅದಕ್ಕಾಗಿ ನಿಮ್ಮ ಮನೆಯಲ್ಲಿ ಒಂದು ಬೈಠಕ್ ಕರೆಯಲು ಯೋಚಿಸಿದ್ದೇನೆ’ ಎಂದರು. ಅದಕ್ಕೆ ವಕೀಲರು ’ಇದೊಂದು ಸುಡುಗಾಡು ಊರು. ಇಲ್ಲಿ ನಾಲ್ಕು ಜನ ಎಂದೂ ಸೇರುವುದಿಲ್ಲ. ಸಂಘಟನೆಯೆಂದರೆ ಯಾರು ಬರುವುದಿಲ್ಲ’ ಎಂದರು. ಆಗ ಡಾಕ್ಟರ್‌ಜಿ ’ಇಲ್ಲಿ ನಿಮಗೆ ಒಳ್ಳೆ ಹೆಸರಿದೆ. ನಿಮ್ಮ ಹೆಸರು ಹೇಳಿದರೆ ಸಾಕಷ್ಟು ಜನ ಬರುತ್ತಾರೆ’ ಎಂದು ಹೊಗಳಿ ಒಪ್ಪಿಸಿದರು.

    ಸುಮಾರು ಒಂದು ನೂರುಕ್ಕೂ ಹೆಚ್ಚು ಜನ ಆ ಬೈಠಕ್‍ಗೆ ಬಂದರು. ಡಾಕ್ಟರ್‌ಜಿ ಎಲ್ಲರಿಗೂ ಸಂಘದ ಬಗ್ಗೆ, ಶಾಖೆಯ ಬಗ್ಗೆ ಹೇಳಿ ಆ ವಕೀಲರನ್ನೇ ಸಂಘಚಾಲಕರೆಂದು ಘೋಷಣೆ ಮಾಡಿದರು. ಓಡಾಡಿದ್ದು, ನೂರಾರು ಜನರನ್ನು ಪರಿಶ್ರಮ ವಹಿಸಿ ಸೇರಿಸಿದ್ದು ಡಾಕ್ಟರ್‌ಜಿಯವರಾದರೂ ವಕೀಲರ ಮನೆಯಲ್ಲಿ ಒಮ್ಮೆ ಊಟವನ್ನು ಮಾಡದಿದ್ದರೂ ಅವರನ್ನೇ ಸಂಘಚಾಲಕರನ್ನಾಗಿ ಘೋಷಣೆ ಮಾಡಿದ್ದರು.

Labels: Doctorji, Insult, Lawyer, Sangha Story, Sanghachalak, ಅವಮಾನ, ಡಾಕ್ಟರ್‌ಜಿ, ವಕೀಲ, ಸಂಘಚಾಲಕ, ಸಂಘದ ಕಥೆ

೮೭. ಶ್ರದ್ಧೆ ಮತ್ತು ನಂಬಿಕೆ

ಶ್ರದ್ಧೆ ಮತ್ತು ನಂಬಿಕೆ

   ಭೀಕರ ಬರಗಾಲದಿಂದ ಆ ಹಳ್ಳಿ ತತ್ತರಿಸಿತ್ತು. ಕಂಗಾಲಾದ ಹಳ್ಳಿಗರು ದಾರಿಗಾಣದೇ ಋಷಿಯೊಬ್ಬರ ಮೊರೆ ಹೋದರು. ಶ್ರದ್ಧೆ, ನಂಬಿಕೆಗಳಿಂದ ಒಂದು ಯಜ್ಞ ಮಾಡಿದರೆ ಮಳೆ ಬಂದು ಇಳೆ ತಣಿಯುವುದೆಂದು ಋಷಿಗಳು ಸಲಹೆ ನೀಡಿದರು. ಹಳ್ಳಿಗರು ಅದರ ತಯಾರಿ ನಡೆಸಿದರು.

    ಯಜ್ಞದ ದಿನ ಪೂರ್ಣಾಹುತಿಯ ಸಮಯ ಸನ್ನಿಹಿತವಾಯಿತು. ಹಳ್ಳಿಗರೆಲ್ಲ ಪೂಜಾ ಸಾಮಗ್ರಿ ಸಹಿತ ಬಂದಿದ್ದರು. ಪುಟ್ಟ ಹುಡುಗಿಯೊಬ್ಬಳು ಮಾತ್ರ ಕೊಡೆಯನ್ನು ತಂದಿದ್ದಳು. ’ಬರಗಾಲ, ಬಿರುಬಿಸಿಲು. ಆದರೂ ಕೊಡೆಯನ್ನು ಏಕೆ ತಂದಿರುವೆ?’ ಎಂದು ಆಕೆಯನ್ನು ಎಲ್ಲರೂ ಕೇಳುವವರೇ!

    "ಋಷಿಗಳ ಮಾತು ಎಂದೂ ಸುಳ್ಳಾಗದು. ಶ್ರದ್ಧೆ, ನಂಬಿಕೆಗಳಿಂದ ಯಜ್ಞ ಮಾಡುತ್ತೀವಲ್ಲ, ಹಾಗಾಗಿ ಮಳೆ ಖಂಡಿತಾ ಬಂದೇ ಬರುತ್ತದೆ. ಆಗ ಮನೆಗೆ ಹೋಗಲು ಕೊಡೆ ಬೇಕಲ್ಲ!" ಹುಡುಗಿಯ ಈ ದಿಟ್ಟ ನಂಬಿಕೆಯ ಮಾತು ಕೇಳಿ ಹಲವರು ಮುಗುಳ್ನಕ್ಕರು.

    ಗ್ರಾಮವಾಸಿಗಳೆಲ್ಲ ಒಬ್ಬೊಬ್ಬರಾಗಿ ಪೂರ್ಣಹುತಿ ನೀಡಿದರು. ಆದರೆ ಆ ಹುಡುಗಿ ಭಕ್ತಿಯಿಂದ ಪ್ರಾರ್ಥಿಸಿ ಆಹುತಿ ಅರ್ಪಿಸುತ್ತಿದ್ದಂತೆಯೇ ಜೋರಾಗಿ ಮಳೆ ಸುರಿಯತೊಡಗಿತು. ಹುಡುಗಿ ನಗುತ್ತಲೇ ಕೊಡೆ ಬಿಡಿಸಿ ಮನೆಯ ಕಡೆ ಹೊರಟಳು.

    "ಈ ಹುಡುಗಿಯ ಕಾರಣದಿಂದಲೇ ಮಳೆ ಬಂತು. ನಿಮ್ಮೆಲ್ಲರ ಪೂಜೆ ವ್ಯರ್ಥ. ಏಕೆಂದರೆ ಅದರ ಹಿಂದೆ ಶ್ರದ್ಧೆ ಮತ್ತು ನಂಬಿಕೆ ಇರಲಿಲ್ಲ". ಯಜ್ಞ್ದ ನೇತೃತ್ವ ವಹಿಸಿದ್ದ ಋಷಿಗಳ ಈ ಮಾತು ಕೇಳಿ ಎಲ್ಲರೂ ತಲೆತಗ್ಗಿಸಿದರು.

Labels: Belief, Boudhik Story, Faith, Girl, Rain, Yajna, ಕೊಡೆ, ನಂಬಿಕೆ, ಬರಗಾಲ, ಬೋಧಕಥೆ, ಮಳೆ, ಯಜ್ಞ, ಶ್ರದ್ಧೆ, ಹುಡುಗಿ

೮೬. ಸ್ವದೇಶಾಭಿಮಾನ

ಸ್ವದೇಶಾಭಿಮಾನ

   ಪಂಡಿತ ವಿಷ್ಣುದಿಗಂಬರ ಪಲುಸ್ಕರ್ ಓರ್ವ ಸುಪ್ರಸಿದ್ಧ ಸಂಗೀತ ವಿದ್ವಾಂಸರು. ಗಂಧರ್ವ ಮಹಾವಿಶ್ವವಿದ್ಯಾಲಯದ ಸ್ಥಾಪಕರು. ೧೯೧೬ರಿಂದಲೇ ಪ್ರತಿವರ್ಷ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದರು. ಅಧಿವೇಶನದ ಆರಂಭದಲ್ಲಿ ಮೊದಲು ರಾಷ್ಟ್ರಗೀತೆ ಹಾಡುವುದನ್ನು ರೂಪಿಸಿದ್ದರು.

    ೧೯೨೩ರ ಕಾಕಿನಾಡಾ ಅಧಿವೇಶನದ ಅಧ್ಯಕ್ಷರು ಮೌಲಾನಾ ಮಹಮದ್ ಅಲಿ. ಪಲುಸ್ಕರ್ ಪದ್ಧತಿಯಂತೆ ವಂದೇ ಮಾತರಂ ಹಾಡಲು ತೊಡಗಿದಾಗ ಅಲಿ ಅದಕ್ಕೆ ಅಡ್ಡಿ ಪಡಿಸುತ್ತಾ ಹಾಡು, ವಾದ್ಯಗಳು ತಮ್ಮ ಸಂಪ್ರದಾಯಕ್ಕ ವಿರುದ್ಧವೆಂದರು. ಗಾಂಧೀಜಿ ಸಹಿತ ಅಲ್ಲಿದ್ದ ನಾಯಕರೆಲ್ಲಾ ಸ್ತಂಭಿತರಾದರು. ಪಲುಸ್ಕರರಿಗೆ ತಡೆಯಲಾಗಲಿಲ್ಲ. "ಸಂಗೀತ ಬೇಡವೆನ್ನಲು ಇದು ಮಸೀದಿಯಲ್ಲ. ರಾಷ್ಟ್ರೀಯ ವೇದಿಕೆ" ಎಂದು ಹೇಳುತ್ತಾ ಅಧ್ಯಕ್ಷರಿಗೆ ಮರುಮಾತಿಗೆ ಅವಕಾಶ ನೀಡದೆ ವಂದೇ ಮಾತರಂ ಹಾಡಲು ತೊಡಗಿದರು. ಮಹಮದ್ ಅಲಿ ತಮ್ಮ ಪೀಠ ಬಿಟ್ಟು ಹೊರನಡೆದರು. ಪಲುಸ್ಕರರು ವಂದೇ ಮಾತರಂ ಪೂರ್ತಿ ಹಾಡಿದರು.

    ಅವರ ದೇಶಾಭಿಮಾನ ಮತ್ತು ತಾಯಿನಾಡಿನ ಕುರಿತು ಭಕ್ತಿ ದೇಶವಾಸಿಗಳ ಆದರಕ್ಕೆ ಕಾರಣವಾದವು. ಜನರು ಅವರನ್ನು ಮುಕ್ತಕಂಠದಿಂದ ಹೊಗಳಿದರು.

Labels: Boudhik Story, Mohammed Ali, Paluskar, Vande Mataram, ಕಾಂಗ್ರೆಸ್ ಅಧಿವೇಶನ, ಪಲುಸ್ಕರ್, ಬೋಧಕಥೆ, ಮಹಮದ್ ಅಲಿ, ವಂದೇ ಮಾತರಂ

Thursday, November 22, 2012

೮೫. ಪಾಣಿನಿಯ ಪ್ರತಿಜ್ಞೆ

ಪಾಣಿನಿಯ ಪ್ರತಿಜ್ಞೆ

   ಇಂದಿನ ಪಾಠವನ್ನು ಮರುದಿನ ಪುನಃಸ್ಮರಣೆ ಮಾಡಲು ಗುರುಗಳು ಶಿಷ್ಯರಿಗೆ ಹೇಳಿದ್ದರು. ಮರುದಿನ ಕೆಲವರಿಂದ ಇದು ಸಾಧ್ಯವಾಗಲಿಲ್ಲ. ಗುರುಗಳು ಬೆತ್ತದಿಂದ ಏಟು ಕೊಡತೊಡಗಿದರು.

    ಒಬ್ಬ ಹುಡುಗ ಏಟಿಗಾಗಿ ಕೈ ಚಾಚಿದ. ಅವನ ಕೈಯನ್ನು ನೋಡಿ "ಏಯ್! ನಿನ್ನ ಕೈಯಲ್ಲಿ ವಿದ್ಯಾರೇಖೆಯೇ ಇಲ್ಲ. ನೀನು ಪಾಠ ಕಲಿತು ಹೇಳುವುದೆಂದರೇನು? ಕುಳಿತುಕೋ" ಎಂದ ಗುರುಗಳು ಅವನಿಗೆ ಹೊಡೆಯಲಿಲ್ಲ. ಆತ ಇದರಿಂದ ಅವಮಾನಿತನಾದ. ಒಂದು ಕ್ಷಣ ಏನು ಮಾಡುವುದೆಂದು ತಿಳಿಯದೆ ಚಡಪಡಿಸಿದ. "ನನ್ನ ಕೈಯಲ್ಲಿ ವಿದ್ಯಾರೇಖೆಯನ್ನು ಕೊರೆಯುತ್ತೇನೆ" ಎಂದು ಮನದಲ್ಲೇ ಪ್ರತಿಜ್ಞೆ ಮಾಡಿದ. ಕಠೋರ ಪರಿಶ್ರಮದಿಂದ ವಿದ್ಯಾಭ್ಯಾಸ ಆರಂಭಿಸಿದ.

    ಸತತ ಅಧ್ಯಯನದಿಂದ ಮುಂದೆ ಆತ ’ವ್ಯಾಕರಣಾಚಾರ್ಯ ಪಾಣಿನಿ’ ಎಂದು ಪ್ರಖ್ಯಾತನಾದ.

Labels: Boudhik Story, Grammer, Panini, ಪಾಣಿನಿ, ಬೋಧಕಥೆ, ವಿದ್ಯಾರೇಖೆ, ವ್ಯಾಕರಣಾಚಾರ್ಯ

೮೪. ಸ್ವಾವಲಂಬಿಯಾಗಿ

ಸ್ವಾವಲಂಬಿಯಾಗಿ

   ಬಂಗಾಲದ ಒಂದು ಪುಟ್ಟ ರೈಲು ನಿಲ್ದಾಣ. ಆಧುನಿಕ ಪಾಶ್ಚಾತ್ಯ ವೇಷ ಭೂಷಣಗಳನ್ನು ಧರಿಸಿದ್ದ ಯುವಕ ರೈಲಿನಿಂದಿಳಿದ. ’ಕೂಲಿ, ಕೂಲಿ’ ಎಂದು ಕೂಗಿದ. ಆ ಪುಟ್ಟ ನಿಲ್ದಾಣದಲ್ಲಿ ಕೂಲಿಯೆಲ್ಲಿಂದ ಬರಬೇಕು? ಸಾಧಾರಣ ಉಡುಪಿನ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ತಿರುಗಾಡುತ್ತಿದ್ದ. ಈ ಯುವಕ ಆತನನ್ನು ಕೂಲಿಯೆಂದು ಭಾವಿಸಿ ಸಾಮಾನು ಹೊತ್ತು ನಡೆಯಲು ಹೇಳಿದ.

    ಆ ವ್ಯಕ್ತಿ ಯುವಕನ ಹಿಂದೆ ಪೆಟ್ಟಿಗೆ ಹೊತ್ತು ನಡೆಯತೊಡಗಿದ. ಮನೆ ತಲುಪಿದ ಕೂಡಲೇ ಯುವಕ ಕೂಲಿ ಕೊಡಲು ಬಂದ. ಆತ ಅದನ್ನು ನಯವಾಗಿ ತಿರಸ್ಕರಿಸಿದ.

    ಅದೇ ವೇಳೆಗೆ ಯುವಕನ ಹಿರಿಯಣ್ಣ ಮನೆಯಿಂದ ಹೊರಬಂದವನೇ ಆ ಹಿರಿಯರ ಕಾಲಿಗೆ ಎರಗಿದ. ತನ್ನ ತಮ್ಮನನ್ನುದ್ದೇಶಿಸಿ "ಗೊತ್ತಾಗುತ್ತಿಲ್ಲವೇ? ಬಂಗಾಳದ ಹೆಮ್ಮೆಯ ಪುತ್ರ ಈಶ್ವರಚಂದ್ರ ವಿದ್ಯಾಸಾಗರ" ಎಂದ.

    ಯುವಕ ಲಜ್ಜಿತನಾಗಿ ಅವರ ಕಾಲಿಗೆರಗಿದ.

Labels: Coolie, Ishvarachandra Vidyasagar, Self-Reliant, ಈಶ್ವರಚಂದ್ರ ವಿದ್ಯಾಸಾಗರ, ಕೂಲಿ, ಸ್ವಾವಲಂಬಿ

೮೩. ಕಾಫೀ ಚೀಟಿ

ಕಾಫೀ ಚೀಟಿ

   ಅದೊಂದು ಸಂಘ ಶಿಕ್ಷಾವರ್ಗ. ಅನೇಕ ತರುಣರು, ಪ್ರೌಢರೂ ಶಿಕ್ಷಾರ್ಥಿಯಾಗಿ ಬಂದಿದ್ದರು. ಪ್ರತಿಯೊಬ್ಬ ಶಿಕ್ಷಾರ್ಥಿಗೂ ಬೆಳಿಗ್ಗೆ ಮತ್ತು ಸಂಜೆಯ ಪಾನೀಯ ಪಡೆಯಲು ಚೀಟಿ ಕೊಡಲಾಗಿತ್ತು.

    ಒಬ್ಬ ಹಿರಿಯ ಶಿಕ್ಷಾರ್ಥಿ ತಮ್ಮ ಕಾಫೀ ಚೀಟಿಯನ್ನು ಮರೆತು ಬಂದಿದ್ದರು. ಕಾಫೀ ಕೊಡುತ್ತಿದ್ದ ಹುಡುಗನ ಪರಿಚಯ ಅವರಿಗಿತ್ತು. ಅವರ ಮಗನ ಸಹಪಾಟಿಯಾದ್ದ. ಹಾಗಾಗಿ ಚೀಟಿಯಿಲ್ಲದೆಯೇ ಕಾಫೀ ಪಡೆಯಬಹುದು ಎಂದು ಸಾಲಿನಲ್ಲಿ ನಿಂತಿದ್ದರು.

    ಏಳೆಂಟು ಜನರ ಅವರ ಮುಂದೆ ಸಾಲಿನಲ್ಲಿ ನಿಂತಿದ್ದ ಇನ್ನೊಬ್ಬ ಹುಡುಗ ಚೀಟಿಯನ್ನು ಮರೆತು ಬಂದಿದ್ದ. ಆದರೂ ಅವನು ಕಾಫಿಯನ್ನು ಕೇಳಲು, ಕಾಫೀ ಕೊಡುತ್ತಿದ್ದ ಹುಡುಗ ನಿರಾಕರಿಸಿ ಕಳುಹಿಸಿದ. ಇದನ್ನು ಗಮನಿಸುತ್ತಿದ್ದ ಹಿರಿಯರಿಗೆ ನಾಚಿಕೆಯಾಯಿತು. ತಾವು ಅವನಲ್ಲಿ ಚೀಟಿ ಇಲ್ಲದೆಯೇ ಕಾಫೀ ಕೇಳಿದರೆ ಅವನಿಗೆ ಮುಜುಗರವಾಗಬಹುದು. ಸ್ನೇಹಿತನ ತಂದೆ ಎಂಬ ಪರಿಚಯದ ದಾಕ್ಷಿಣ್ಯ ಅವನ ಕರ್ತ್ಯವ್ಯ ನಿರ್ವಹಣೆಗೆ ಅಡ್ಡ ಬರಬಹುದು ಎಂದು ಅರಿತು ಮೆಲ್ಲಗೆ ಸಾಲಿನಿಂದ ಜಾಗ ಬಿಟ್ಟು ನಡೆದರು.

Labels: Coffee Coupon, Duty, Obligation, Sangha Shikshavarga, Sangha Story, ಕರ್ತವ್ಯ, ಕಾಫೀ ಚೀಟಿ, ಸಂಘ ಶಿಕ್ಷಾವರ್ಗ, ಸಂಘದ ಕಥೆ

೮೨. ದೇಶಭಕ್ತನ ಲೆಕ್ಕ

ದೇಶಭಕ್ತನ ಲೆಕ್ಕ

   ರಾತ್ರಿಯ ಹೊತ್ತು ಮನೆಯಲ್ಲಿ ದೀಪ ಉರಿಯುತ್ತಿದೆ. ಆ ನಸುಬೆಳಕಿನಲ್ಲಿ ಏಳೆಂಟು ವರ್ಷದ ಹುಡುಗನೊಬ್ಬ ಓದುತ್ತಾ ಕುಳಿತಿದ್ದಾನೆ. ಜೊತೆಯಲ್ಲಿ ಪಾಠ ಹೇಳಿಕೊಡುವ ಅವನ ತಾಯಿ.

    ’ಮಗೂ, ರೂಪಾಯಿಗೊಂದರಂತೆ ಹನ್ನೆರಡು ಔಷದಿ ಬಾಟಲಿಗಳನ್ನು ಒಬ್ಬ ವ್ಯಾಪಾರಿ ಕೊಳ್ಳುತ್ತಾನೆ. ಅವನ್ನು ತಲಾ ಮೂರು ರೂಪಾಯಿಗೆ ಮಾರಿದರೆ ಗಳಿಸಿದ ಲಾಭವೆಷ್ಟು?" ಮಗುವಿಗೆ ತಾಯಿಯ ಪ್ರಶ್ನೆ.

    "ಅಮ್ಮ ಅದ್ಯಾವ ಔಷಧಿ" ಒಂದು ಕ್ಷಣ ಯೋಚಿಸಿ ಮಗ ಕೇಳಿದ.

    "ಅದು ಕಟ್ಟಿಕೊಂಡು ನಿನಗೇನು? ಸುಮ್ಮನೆ ಉತ್ತರ ಹೇಳು" ತಾಯಿ ಗದರಿಸಿದಳು.

    "ಅಮ್ಮ ಅದೇನು ಔಷಧಿ ಎಂದು ಹೇಳಿದರೆ ಮಾತ್ರ ಉತ್ತರ ಕೊಡುತ್ತೇನೆ" ಎಂದ ಮಗ.

    "ಯಾವುದೋ ಜೀವ ಉಳಿಸುವ ಔಷದಿ ಎಂದೇ ಭಾವಿಸು" ತಾಯಿ ಎಂದಳು.

    "ಹಾಗಾದರೆ ೧೨ ಬೆತ್ತದೇಟು ಕೊಡಬೇಕು ಅವನಿಗೆ" ತಟ್ಟನೆ ಉತ್ತರಿಸಿದ ಮಗ. ತಾಯಿ ಒಮ್ಮೆಲೇ ಸ್ಥಬ್ಧಳಾದಳು.

    "ಇದೆಂಥ ಉತ್ತರ ಮಗು?" ಸಾವರಿಸಿಕೊಂಡು ಕೇಳಿದಳಾಕೆ.

    "ಅಮ್ಮ ಪ್ರಾಣ ಉಳಿಸುವ ಔಷಧಿಗಳನ್ನು ಇಷ್ಟು ಹೆಚ್ಚು ಬೆಲೆಗೆ ಮಾರಬಾರದು. ಬಡವರು ಅದನ್ನು ಕೊಳ್ಳುವುದೆಂತು? ಅವರು ಬದುಕುವುದು ಹೇಗಮ್ಮ?" ಆ ಹುಡುಗನ ಧ್ವನಿ ಸಂವೇದನೆಯಿಂದ ತುಂಬಿತ್ತು.

    ಆ ಹುಡುಗನನ್ನು ಎಲ್ಲರೂ ಪ್ರೀತಿಯಿಂದ ರಾಜು ಎಂದು ಕರೆಯುತ್ತಿದ್ದರು. ಆತನ ಪೂರ್ತಿ ಹೆಸರು ಸೀತಾರಾಮರಾಜು. ಆಂಧ್ರಪ್ರದೇಶದ ಪಂಡ್ರಂಗಿ ಎಂಬ ಹಳ್ಳಿಯಲ್ಲಿ ಅವನು ೧೮೯೭ರ ಜುಲೈ ೪ ರಂದು ಹುಟ್ಟಿದ. ಮುಂದೆ ಆತನೇ ಅಲ್ಲೂರಿ ಸೀತರಾಮರಾಜು ಎಂಬ ಹೆಸರಿನ ಪ್ರಸಿದ್ಧ ಸ್ವಾತಂತ್ರ್ಯ ಸೇನಾನಿಯಾದ.

Labels: Alluri Seetaramaraju, Calculation, Freedom Fighter, Medicine, ಅಲ್ಲೂರಿ ಸೀತರಾಮರಾಜು, ಔಷಧಿ, ಲೆಕ್ಕ, ಸ್ವಾತಂತ್ರ್ಯ ಸೇನಾನಿ

೮೧. ಅನುಶಾಸನದ ಪ್ರಭಾವ

ಅನುಶಾಸನದ ಪ್ರಭಾವ

   ಮಂಗಳೂರಿನಲ್ಲಿ ಒಂದು ಮಹಾಸಾಂಘಿಕ್ ಕಾರ್ಯಕ್ರಮ. ಸುಮಾರು ೪೦,೦೦೦ ಗಣವೇಷಧಾರಿ ಸ್ವಯಂಸೇವಕರು. ಸುಮಾರು ೪೦ ಸಾವಿರ ಇತರ ಜನರು. ಮತ್ತೂ ೨೦ ಸಾವಿರ ಮಾತೆಯರು.

    ಕಾರ್ಯಕ್ರಮದ ನಂತರ ’ಉತ್ಥಿಷ್ಠ’ ಆಜ್ಞೆ ಕೊಟ್ಟಾಗ ಎಲ್ಲರೂ ಎದ್ದು ನಿಂತರು. ’ವಿಕಿರ’ ಕೊಟ್ಟಾಗ ಎಲ್ಲರೂ ಬಲಕ್ಕೆ ತಿರುಗಿದರು. ನಂತರ ’ವಾಮವೃತ’ ಆಜ್ಞೆ ಬಂತು; ಎಲ್ಲರೂ ಎಡಕ್ಕೆ ತಿರುಗಿದರು.

    ಕಾರ್ಯಕ್ರಮ ನೋಡಲು ಬಂದ ಎಲ್ಲರಿಗೂ ಒಂದು ಪತ್ರಿಕೆಯನ್ನು ತರಲು ಹೇಳಲಾಗಿತ್ತು, ನೆಲದ ಮೇಲೆ ಹಾಸಿ ಕುಳಿತುಕೊಳ್ಳಲು. ನಂತರ ಸೂಚನೆ ಕೊಡಲಾಯಿತು. ತಮ್ಮ ತಮ್ಮ ಪತ್ರಿಕೆಯನ್ನು ತೆಗೆದುಕೊಂಡು ಹೋಗಲು.

    ಎಲ್ಲರೂ ಹೋದ ನಂತರ ಆ ಮೈದಾನದಲ್ಲಿ ಒಂದು ಪತ್ರಿಕೆಯೂ ಕಾಣಸಿಗಲಿಲ್ಲ. ಸ್ವಯಂಸೇವಕರನ್ನು ನೋಡಿದ ಇತರ ಜನರಿಗೂ ಅದೇ ಅನುಶಾಸನ ಪರಿಣಾಮ ಬೀರಿತ್ತು.
   
Labels: Discipline, Mangalore, Sangha Story, ಅನುಶಾಸನ, ಪತ್ರಿಕೆ, ಮಂಗಳೂರು, ಸಂಘದ ಕಥೆ

೮೦. ಭಗವೆಗೆ ಒಂದು ಇಂಚೂ ಕೊಡುವುದಿಲ್ಲ

ಭಗವೆಗೆ ಒಂದು ಇಂಚೂ ಕೊಡುವುದಿಲ್ಲ

   ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ ನೆಹರೂ ಒಮ್ಮೆ ವಿಶ್ರಾಂತಿಗೆಂದು ಕಾಶ್ಮೀರಕ್ಕೆ ಹೋಗಿದ್ದರು. ಡಿಸೆಂಬರ್ ತಿಂಗಳಿನ ಒಂದು ಬೆಳಿಗ್ಗೆ. ಹೊರಗೆ ಓಡಾಡುತ್ತಿದ್ದಾಗ ಒಂದು ಭಗವಾಧ್ವಜ ಕಾಣಿಸಿತು.

    ಅದನ್ನು ನೋಡಿ ಹತ್ತಿರ ಹೋಗಿ ವಿಚಾರಿಸಿದಾಗ ಅಲ್ಲಿ ಸಂಘದ ಶಾಖೆ ನಡೆಯುತ್ತಿದೆ ಎಂದು ತಿಳಿಯಿತು.

    ಆಗ ಕೆಂಡಮಂಡಲವಾದ ನೆಹರು ಕೋಪದಿಂದ "ಈ ಧ್ವಜಕ್ಕೆ ನಾನು ಒಂದು ಇಂಚೂ ಜಾಗ ಕೊಡುವುದಿಲ್ಲ. ಹಾಗೆ ಮಾಡಲು ನಾನು ಎಲ್ಲ ಶಕ್ತಿಯನ್ನೂ ಹಾಕುತ್ತೇನೆ. ಅದೂ ಸಾಲದಿದ್ದರೆ ಪ್ರಪಂಚದ ಶಕ್ತಿಯನ್ನು ತಂದು ಅದನ್ನು ನಾಶ ಮಾಡುತ್ತೇನೆ" ಎಂದು ಕೂಗಾಡಿದರು.

    ಆದೇ ನೆಹರು ಮುಂದೆ ೧೯೬೨ರ ಚೀನಾ ಯುದ್ಧದ ಸಮಯದಲ್ಲಿ ಸಂಘದ ನೆರವನ್ನು ಪಡೆಯಬೇಕಾದ ಪರಿಸ್ಥಿತಿ ಬಂದಿತು. ಸ್ವಯಂಸೇವಕರು ಆ ಯುದ್ಧದಲ್ಲಿ ಮಾಡಿದ ದೇಶಸೇವೆಯನ್ನು ಗುರುತಿಸಿ ನೆಹರೂ ೧೯೬೩ ಜನವರಿ ೨೩ರ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಸಂಘದ ಸ್ವಯಂಸೇವಕರನ್ನು ಆಹ್ವಾನಿಸಿದರು.

Labels: Kashmir, Nehru, No Place for Bhagva, Sangha Story, ಒಂದು ಇಂಚೂ ಕೊಡುವುದಿಲ್ಲ, ಕಾಶ್ಮೀರ, ನೆಹರು, ಭಗವಧ್ವಜ, ಸಂಘದ ಕಥೆ

೭೯. ತಲೆ ಬಾಗೀತು ಪೇಟವಲ್ಲ

ತಲೆ ಬಾಗೀತು ಪೇಟವಲ್ಲ

   "ದರ್ಬಾರಿನ ರೀತಿ ನೀತಿ ನಿನಗೆ ತಿಳಿಯದೇನು? ಅದೂ ನೀನು ರಜಪೂತ. ಮೇಲಾಗಿ ಚಾರಣ ವಂಶದವ. ಆ ವಂಶಜರೆಲ್ಲಾ ತುಂಬಾ ಬುದ್ಧಿವಂತರೆಂದು ಬಲ್ಲೆ. ಆದರೂ ದರ್ಬಾರಿಗೆ ಬಂದ ನೀನು ವಂದಿಸಲಿಲ್ಲ. ಶಿಷ್ಟಾಚಾರ ಪಾಲಿಸಲಿಲ್ಲ. ಹಾಗಾಗಿ ನೀನೆಲ್ಲೋ ಓದು ಬಾರದ ಮೂರ್ಖನಿರಬೇಕು". ಹೀಗೆಂದು ಮೂದಲಿಸಿದವನು ಅಕಬರ್ ಬಾದಷಹ.

    "ನನ್ನನ್ನು ಮನ್ನಿಸಿ. ನಾನು ರಜಪೂಜ ಚಾರಣ ವಂಶಜ, ನಿಜ. ನಿಮಗೆ ವಂದಿಸಬಾರದು ಎಂದಲ್ಲ. ನನ್ನ ತಲೆಯ ಮೇಲೆ ಇರುವ ಪೇಟವು ಮಹಾರಾಜ ಪ್ರತಾಪಸಿಂಹನ ಉಡುಗೊರೆ. ಆತನೆಂದೂ ಶತ್ರುವಿನೆದುರು ತಲೆತಗ್ಗಿಸಿದವನಲ್ಲ. ಹಾಗಿರುವಾಗ ಆತ ನೀಡಿದ ಪೇಟವನ್ನು ತಮ್ಮೆದುರು ಬಾಗಿಸುವ ಅಧಿಕಾರ ನನಗೆಲ್ಲಿದೆ. ನೀವೇ ಹೇಳಿ" ದಿಟ್ಟತನದಿಂದ ಉತ್ತರಿಸಿದ ಮಹಾರಾಣಾ ಪ್ರತಾಪನ ಆಪ್ತ ಶೀತಲ್ ಎಂಬ ಯುವಕ.

    "ಹಾಗೆಂದೇ ನಾನು ನಿಮ್ಮೆದುರು ತಲೆಬಾಗಲಿಲ್ಲ" ಎಂದವನೇ ಆತ ಪೇಟವನ್ನು ಕೈಯಲ್ಲಿ ಹಿಡಿದುಕೊಂಡು ವಂದಿಸಿದ. ಆದರೆ ’ರಾಜಸ್ಥಾನದ ರಜಪೂತ ಪೇಟ ಎಂದೂ ಬಾಗದು’ ಎಂಬ ಸಂದೇಶವನ್ನೂ ನೀಡಿದ.

    ಆತನೆ ತಲೆ ಬಾಗಿದ್ದರೂ ಮನಸ್ಸು ಬಾಗಿರಲಿಲ್ಲ! ಶತ್ರುವಿನ ಗುಹೆಗೇ ಹೋಗಿ ಆತನನ್ನು ತಿವಿದು ಹೂಂಕರಿಸುವುದು ಅಷ್ಟು ಸುಲಭವಲ್ಲ. ಓರ್ವ ದೇಶಭಕ್ತ ಮಾಡಬೇಕಾದುದನ್ನೇ ಶೀತಲ್ ಮಾಡಿದ್ದ.

Labels: Akbar, Boudhik Story, Rajput, Rana Pratap, Sheetal, Turban Never Bows, ಅಕಬರ್, ಪೇಟ ಬಾಗದು, ಬೋಧಕಥೆ, ರಜಪೂತ, ರಾಣಾ ಪ್ರತಾಪ, ಶೀತಲ್

೭೮. ಏಕಾಗ್ರತೆಯ ಅಭ್ಯಾಸ

ಏಕಾಗ್ರತೆಯ ಅಭ್ಯಾಸ

   ಅಮೇರಿಕಾದ ಕೀಲ್‍ನಗರ. ಸ್ವಾಮಿ ವಿವೇಕಾನಂದರು ಅಲ್ಲಿನ ಪ್ರಾಧ್ಯಾಪಕ ಡೈಸನ್ ಜತೆ ಮಾತನಾಡುತ್ತಿದ್ದ ಸಂದರ್ಭ. ಸ್ವಾಮೀಜಿ ಕಾವ್ಯವನ್ನು ಓದುತ್ತಿದ್ದರು. ಆಗ ನಡುವೆ ಡೈಸನ್ ಕೇಳಿದ ಪ್ರಶ್ನೆಯೊಂದಕ್ಕೆ ಸ್ವಾಮೀಜಿ ಉತ್ತರಿಸಲಿಲ್ಲ. ಆದ್ದರಿಂದ ಆ ಪ್ರಾಧ್ಯಾಪಕ ಸಿಟ್ಟಾದ. ಅದನ್ನರಿತ ಸ್ವಾಮೀಜಿ, ’ಕ್ಷಮಿಸಿ, ಕಾವ್ಯ ಓದುವುದರಲ್ಲಿ ಮಗ್ನನಾಗಿದ್ದೆ. ನಿಮ್ಮ ಪ್ರಶ್ನೆಯನ್ನು ಗ್ರಹಿಸಲಾಗಲಿಲ್ಲ’ ಎಂದರು.

    ಡೈಸನ್‍ಗೆ ಉತ್ತರದಿಂದ ತೃಪ್ತಿಯಾಗಲಿಲ್ಲ. ಅದನ್ನು ಗಮನಿಸಿದ ಸ್ವಾಮೀಜಿ ತಾವು ಓದಿದ ಕಾವ್ಯಭಾಗವನ್ನು ಹಾಗೆಯೇ ಹೇಳಿದರು. ಆ ಕಾವ್ಯಭಾಗ ಅವರಿಗೆ ಕಂಠಪಾಠವಾಗಿದ್ದನ್ನು ಡೈಸನ್ ಗಮನಿಸಿದ. "ಪರಕೀಯ ಭಾಷೆಯ ಕಾವ್ಯವು ಒಂದೇ ಓದಿನಲ್ಲಿ ಕಂಠಪಾಠವಾಗುವುದು ಹೇಗೆ ಸಾಧ್ಯ?" ಎಂಬುದು ಆ ಪ್ರಾಧ್ಯಾಪಕನ ಪ್ರಶ್ನೆ. ಅತನಿಗಿದು ಅಚ್ಚರಿ!

    "ಇದರಲ್ಲಿ ಅಚ್ಚರಿಯೇನು ಬಂತು? ಏಕಾಗ್ರತೆಯಿಂದ ಓದಿದ್ದನ್ನು ನೆನಪಿಟ್ಟುಕೊಳ್ಳುವುದು ಸುಲಭ. ಯೋಗಸಾಧನೆ ಏಕಾಗ್ರತೆಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆಮೇಲೆ ಒಂದೇ ಕ್ಷಣದಲ್ಲಿ ಒಂದು ಶಬ್ದವನ್ನು ಓದತೊಡಗುತ್ತದೆ. ನೀವು ಒಂದು ಕ್ಷಣದಲ್ಲಿ ಒಂದು ಸಾಲನ್ನೇ ಓದಬಲ್ಲಿರಿ. ಏಕಾಗ್ರತೆಯ ಅಭ್ಯಾಸದಿಂದ ನಾನು ಒಂದೇ ನೋಟದಲ್ಲಿ ಇಡೀ ಒಂದು ಪುಟವನ್ನೇ ಓದಬಲ್ಲೆ. ಅಧ್ಯಯನದ ವೇಳೆ ನಾನು ಮೈಮರೆಯುತ್ತೇನೆ. ಮೈಮೇಲೆ ಬೆಂಕಿಕಿಡಿಯಿಟ್ಟರೂ ಆಗ ನನಗೆ ತಿಳಿಯುವುದಿಲ್ಲ". ಸ್ವಾಮೀಜಿಯವರ ಮಾತು ಮಾರ್ಮಿಕವಾಗಿತ್ತು.

Labels: Concentration, Dyson, Swami Vivekananda, ಏಕಾಗ್ರತೆ, ಡೈಸನ್, ಬೋಧ ಕಥೆ, ಸ್ವಾಮಿ ವಿವೇಕಾನಂದ

೭೭. ಪರಿಸರ ಮದುವೆ

ಪರಿಸರ ಮದುವೆ

   ಸಂರಕ್ಷಣೆಯ ಜಾಗೃತಿ ಮೂಡಿಸಲೆಂದೇ ತಮಿಳುನಾಡಿನಲ್ಲಿ ಒಂದು ವಿಶಿಷ್ಟ ಮದುವೆ ನಡೆಯಿತು. ಈ ಮದುವೆಯನ್ನು ಏರ್ಪಡಿಸಿದವರು ಕೊಯಮತ್ತೂರು ಜಿಲ್ಲೆಯ ಶೇಷಮಲೈ ಹಳ್ಳಿಗರು. ವಧುವರರು ಯಾರೆಂದು ಬಲ್ಲಿರೇನು? ಅಶ್ವತ್ಥವೃಕ್ಷ ವರವಾದರೆ, ವಧು ಬೇವಿನಗಿಡ! ಮುನಿಯಪ್ಪ ದೇವಾಲಯದಲ್ಲಿ ನಡೆದ ಈ ಮದುವೆ ವಿಧ್ಯುಕ್ತವಾಗಿತ್ತು.

    ವಧೂವರರನ್ನು ಸೀರೆ, ರವಿಕೆ, ಪಂಚೆ, ಉತ್ತರೀಯ ಉಡಿಸಿ ವಿಶೇಷವಾಗಿ ಸಿಂಗರಿಸಲಾಗಿತ್ತು. ಪುರೋಹಿತ ಕೃಷ್ಣಸ್ವಾಮಿಯವರ ನೇತೃತ್ವದಲ್ಲಿ ನಡೆದ ಈ ಮದುವೆಯಲ್ಲಿ ಸುತ್ತಲಿನ ೧೪ ಗ್ರಾಮಗಳ ಜನರು ಸಂಭ್ರಮದಿಂದ ಭಾಗವಹಿಸಿದ್ದರು. ಮದುವೆಯ ಖರ್ಚೆಲ್ಲ ಅವರದ್ದೇ. ಎಲ್ಲರಿಗೂ ಸುಗ್ರಾಸ ಭೋಜನವೂ ಇತ್ತು.

    ಸಾಮಾನ್ಯವಾಗಿ ಮದುವೆಮನೆಗೆ ಬಂದ ಹಿರಿಯರ ಆಶೀರ್ವಾದವನ್ನು ಮದುಮಕ್ಕಳು ಪಡೆದರೆ, ಇಲ್ಲಿ ಬಂದವರೆಲ್ಲರೂ ಮಧುಮಕ್ಕಳಿಗೆರೆಗಿ ಆಶೀರ್ವಾದ ಪಡೆದುದು ವಿಶೇಷ (ಅಶ್ವತ್ಥ ಮರ ’ನಾರಾಯಣ’ನಾದರೆ ಬೇವಿನಗಿಡ ’ಲಕ್ಷ್ಮಿ’ ಸ್ವರೂಪ ಎಂಬ ನಂಬಿಕೆ ನಮ್ಮಲ್ಲಿದೆ.)

    ಈ ಮದುವೆಯಿಂದ ಗ್ರಾಮದೇವತೆ ಮುನಿಯಪ್ಪ ಸಂತುಷ್ಟನಾಗಿ ಮಳೆಬೆಳೆ ಸಮೃದ್ಧವಾಗುವುದು ಎಂಬುದು ಹಳ್ಳಿಗರ ನಂಬಿಕೆ. ಮರಗಳೆಂದರೆ ’ದೇವರು’ ಎಂಬ ಭಾವ ಮಾತ್ರವಲ್ಲ. ನಾವು ಇವುಗಳನ್ನು ರಕ್ಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ ಎಂಬ ಸಂದೇಶವೂ ಇಲ್ಲಿದೆ.

Labels: Bodhi Tree, Boudhik Story, Environment, Marriage of Trees, Neem Tree, ಅಶ್ವತ್ಥ ಬೇವಿನಗಿಡ, ಪರಿಸರ, ಬೋಧಕಥೆ, ಮದುವೆ,

೭೬. ಗುರೂಜಿ ಹೇಗೆ ಊಟ ಮಾಡುತ್ತಾರೆ?

ಗುರೂಜಿ ಹೇಗೆ ಊಟ ಮಾಡುತ್ತಾರೆ?

    ಶ್ರೀ ಗುರೂಜಿ ಒಮ್ಮೆ ಕೇರಳದ ಪ್ರವಾಸದಲ್ಲಿದ್ದರು. ಒಂದು ಊರಿನಿಂದ ಇನ್ನೊಂದು ಊರಿಗೆ ರೈಲಿನಲ್ಲಿ ಹೊರಟಿದ್ದರು. ಮಧ್ಯ ಮಾರ್ಗದಲ್ಲಿ ಒಂದು ಊರಿನಲ್ಲಿ ಅವರಿಗೆ ಭೋಜನವನ್ನು ತಲುಪಿಸುವ ಏರ್ಪಾಡಾಗಿತ್ತು.

    ಅವರಿಗೆ ಭೋಜನವನ್ನು ತಲುಪಿಸಲು ಅಲ್ಲಿನ ಒಬ್ಬ ಸ್ವಯಂಸೇವಕರನ್ನು ನೇಮಿಸಲಾಗಿತ್ತು. ಅವರು ತಮ್ಮ ಮಗಳ ಸಮೇತ ರೈಲು ನಿಲ್ದಾಣಕ್ಕೆ ಬಂದಿದ್ದರು. ರೈಲು ಬಂತು. ಊಟದ ಡಬ್ಬವನ್ನು ಕೊಟ್ಟು ಆ ಸ್ವಯಂಸೇವಕರು ಶ್ರೀ ಗುರೂಜಿಯವರೊಡನೆ ಮಾತನಾಡುತ್ತಿದ್ದರು. ಜೊತೆಯಲ್ಲಿ ಬಂದಿದ್ದ ಅವರ ಮಗಳು ತಂದೆಯ ಬಟ್ಟೆಯನ್ನು ಜಗ್ಗುತ್ತಾ ಏನೋ ಕೇಳುತ್ತಿದ್ದಳು. ಆ ಸ್ವಯಂಸೇವಕರು ಅವಳನ್ನು ಸಮಾಧನಪಡಿಸುತ್ತಲೇ ಮಾತು ಮುಂದುವರೆಸಿದ್ದರು.

    ಹುಡುಗಿಯು ಏನೋ ಕೇಳುತ್ತಿದ್ದುದನ್ನು ಗಮನಿಸಿದ ಶ್ರೀ ಗುರೂಜಿಯವರು ಆ ಸ್ವಯಂಸೇವಕರನ್ನು ವಿಚಾರಿಸಿದರು. ಮುಜುಗರಪಡುತ್ತಲೇ ಅವರು ಹೇಳಿದರು "ಹುಡುಗಿ ಕೇಳುತ್ತಿದ್ದಾಳೆ, ’ಗುರೂಜಿಯವರ ಮುಖದ ತುಂಬಾ ಕೂದಲೇ ಇದೆಯಲ್ಲಾ, ಅವರು ಊಟ ಹೇಗೆ ತಿನ್ನುತ್ತಾರೆ?’".

    ಆ ಮಾತನ್ನು ಕೇಳುತ್ತಲೇ ಶ್ರೀ ಗುರೂಜಿಯವರು ಹೊಟ್ಟೆ ತುಂಬಾ ನಕ್ಕು ಆನಂದಪಟ್ಟರು.

    ಅನೇಕ ವರ್ಷಗಳು ಕಳೆದವು. ಶ್ರೀ ಗುರೂಜಿಯವರು ಕೇರಳದ ಸಂಘಚಾಲಕರ ಮಗಳ ಮದುವೆ ಕಾರ್ಯಕ್ರಮಕ್ಕಾಗಿ ಬಂದಿದ್ದರು. ಮದುವೆ ಕಾರ್ಯಕ್ರಮದ ನಂತರ ಎಲ್ಲರೂ ಊಟಕ್ಕೆ ಕುಳಿತರು. ತಮ್ಮ ಎಲೆಯ ಬಳಿ ಬಡಿಸಲು ಬಂದ ಸಂಘಚಾಲಕರ ಸೊಸೆಯನ್ನು ನೋಡಿ ಶ್ರೀ ಗುರೂಜಿ ನಗುತ್ತಾ ಕೇಳಿದರು "ಈಗ ಗೊತ್ತಾಯಿತೇ ನಾನು ಹೇಗೆ ಊಟ ಮಾಡುತ್ತೇನೆ ಎಂದು?"

    ಶ್ರೀ ಗುರೂಜಿ ಏಕೆ ಆ ರೀತಿ ಹೇಳಿದರೆಂದು ಜೊತೆಯಲ್ಲಿ ಊಟಕ್ಕೆ ಕುಳಿತಿದ್ದ ಎಲ್ಲರಿಗೂ ಆಶ್ಚರ್ಯವಾಯಿತು.

    ಆಗ ಶ್ರೀ ಗುರೂಜಿ ಎಲ್ಲರಿಗೂ ಹಿಂದೆ ನಡೆದ ರೈಲಿನ ಘಟನೆ ಹೇಳಿ, ತಮಗೆ ಅಡಿಗೆ ಬಡಿಸುತ್ತಿದ್ದ ಸಂಘಚಾಲಕರ ಸೊಸೆಯೇ ಆ ಹುಡುಗಿ ಎಂದು ಹೇಳಿದರು. ಆಷ್ಟು ವರ್ಷ ನಂತರವೂ ಆ ಹುಡುಗಿಯನ್ನು ಗುರುತಿಸಬಲ್ಲರಾದ ಶ್ರೀ ಗುರೂಜಿಯವರ ನೆನಪಿನ ಶಕ್ತಿಯು ಎಲ್ಲರನ್ನು ವಿಸ್ಮಯಗೊಳಿಸಿತ್ತು.

Labels: Sangha Story, Sri Guruji, Sri Guruji's Memory, ಊಟ ಹೇಗೆ ಮಾಡುತ್ತಾರೆ, ಕೇರಳ, ನೆನಪಿನ ಶಕ್ತಿ, ಶ್ರೀ ಗುರೂಜಿ, ಸಂಘದ ಕಥೆ,

೭೫. ಕೊನೆಯ ಹಿಂದುವನ್ನೂ ರಕ್ಷಿಸಿ

ಕೊನೆಯ ಹಿಂದುವನ್ನೂ ರಕ್ಷಿಸಿ

   ೧೯೪೭ರ ದೇಶ ವಿಭಜನೆ ಸಂಘದ ಸ್ವಯಂಸೇವಕರಿಗೆ ಮತ್ತು ಇತರ ದೇಶ ಪ್ರೇಮಿಗಳಿಗೆ ಅತ್ಯಂತ ದುಃಖದ ವಿಷಯ.

    ವಿಭಜನೆಯ ಸ್ವಲ್ಪ ಸಮಯದ ಮುಂಚೆ ಒಂದು ಸಂಘ ಶಿಕ್ಷಾ ವರ್ಗ ಈಗಿನ ಪಾಕಿಸ್ಥಾನದ ಭಾಗದಲ್ಲಿ ನಡೆಯುತ್ತಿತ್ತು. ಸುಮಾರು ೨೦೦ ಸ್ವಯಂಸೇವಕರು ಭಾಗವಹಿಸಿದ್ದರು. ಮುಂದಿನ ಸಂಘರ್ಷದ ಸಮಯದಲ್ಲಿ ನಡೆಯಬಹುದಾದ ಘಟನೆಗಳ ಬಗ್ಗೆ ಮೊದಲೇ ಕಲ್ಪನೆಯಿದ್ದ ಶ್ರೀ ಗುರೂಜಿ ಎಲ್ಲ ಶಿಕ್ಷಾರ್ಥಿಗಳನ್ನು ಕುರಿತು "ಈ ಕಡೆಯಿಂದ ಲಕ್ಷಾಂತರ ಜನ ವಲಸೆ ಹೋಗಲಿದ್ದಾರೆ. ಅವರ ಮೇಲೆ ನಾನಾ ರೀತಿಯ ಅತ್ಯಾಚಾರಗಳು ನಡೆಯುವ ಸಂಭವವಿದೆ. ಪ್ರತಿಯೊಬ್ಬ ಹಿಂದುವನ್ನು ರಕ್ಷಿಸುವುದು ನಿಮ್ಮ ಜವಾಬ್ದಾರಿ. ಕಟ್ಟಕಡೆಯ ಹಿಂದು ಸುರಕ್ಷಿತವಾಗಿ ಭಾರತವನ್ನು ತಲುಪದ ತನಕ ನೀವು ಇಲ್ಲಿಂದ ಹೊರಡಬಾರದು" ಎಂದು ನುಡಿದರು.

    ಮುಂದಿನ ದಿನಗಳಲ್ಲಿ ಶ್ರೀ ಗುರೂಜಿಯವರು ನುಡಿದಿದ್ದ ರೀತಿಯಲ್ಲೇ, ವಲಸೆ ಹೊರಟಿದ್ದ ಲಕ್ಷಾಂತರ ಹಿಂದುಗಳನ್ನು ಕೊಲ್ಲಲಾಯಿತು. ಹಿಂದು ಮಹಿಳೆಯರನ್ನು, ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚಾರಗೊಳಿಸಿ ಮತಾಂತರಗೊಳಿಸಲಾಯಿತು. ಆದರೆ ಆ ಶಿಕ್ಷಾವರ್ಗದಲ್ಲಿದ್ದ ಎಲ್ಲ ೨೦೦ ಸ್ವಯಂಸೇವಸೇವಕರೂ ಅಂತಹ ಹಿಂದುಗಳ ರಕ್ಷಣೆಗೆ ನಿಂತರು. ಸಾವಿರಾರು ಹಿಂದುಗಳನ್ನು ಕಾಪಾಡಿ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿದರು.

    ಆದರೆ ಆ ೨೦೦ ಸ್ವಯಂಸೇವಕರ ಬಲಿಯಾಯಿತು.

Labels: Partition, Sacrifice, Sangha Story, Sri Guruji, ದೇಶ ವಿಭಜನೆ, ಪ್ರಾಣಾರ್ಪಣೆ, ಶ್ರೀ ಗುರೂಜಿ, ಸಂಘದ ಕಥೆ, ಸ್ವಾತಂತ್ರ್ಯ

೭೪. ನಿಮಗೆ ಧರ್ಮ ಬೇಡ

ನಿಮಗೆ ಧರ್ಮ ಬೇಡ

   ಒಮ್ಮೆ ಲಯನ್ಸ್ ಕ್ಲಬ್‍ನ ಒಂದು ಕಾರ್ಯಕ್ರಮಕ್ಕೆ ಶ್ರೀ ಗುರೂಜಿಯವರನ್ನು ಆಹ್ವಾನಿಸಲಾಗಿತ್ತು. ಅಲ್ಲಿ ಅವರು ಒಂದು ಭಾಷಣ ಮಾಡುವ ಯೋಜನೆ ಇತ್ತು.

    ಶ್ರೀ ಗುರೂಜಿಯವರ ಬಗ್ಗೆ ಮತ್ತು ಸಂಘದ ಬಗ್ಗೆ ಗೊತ್ತಿದ್ದ ಕ್ಲಬ್‍ನ ಗವರ್ನರ್ ಶ್ರೀ ಗುರೂಜಿಯವರ ಬಳಿ ಬಂದು "ಈ ಸಮಾರಂಭಕ್ಕೆ ಎಲ್ಲ ರೀತಿಯ ಜನರು ಬಂದಿರುತ್ತಾರೆ. ಆದ್ದರಿಂದ ನೀವು ಧರ್ಮದ ಬಗ್ಗೆ ಮಾತನಾಡದಿರುವುದು ಒಳ್ಳೆಯದು" ಎಂದು ಕೇಳಿಕೊಳ್ಳುತ್ತಾರೆ.

    ಆಗ ಶ್ರೀ ಗುರೂಜಿಯವರು "ಧರ್ಮೇಭಿ ಹೀನಃ ಪಶುಭಿಃ ಸಮಾನಃ" ಎಂಬ ಸಂಸ್ಕೃತದ ಒಂದು ಶ್ಲೋಕವನ್ನು ಹೇಳುತ್ತಾ "ನೀವು ಲಯನ್ಸ್ ಕ್ಲಬ್‍ನವರು. ನಿಮಗೆ ಧರ್ಮ ಬೇಡ ಎಂದು ಅನಿಸುತ್ತೆ" ಎಂದರು.

Labels: Dharma, Lion's Club, Sangha Story, Sri Guruji, ಧರ್ಮ, ಲಯನ್ಸ್ ಕ್ಲಬ್, ಶ್ರೀ ಗುರೂಜಿ, ಸಂಘದ ಕಥೆ

೭೩. ನಿಜವಾದ ಸಂತೋಷ

ನಿಜವಾದ ಸಂತೋಷ

   ದಿಲ್ಲಿಯ ರಣರಣ ಬಿಸಿಲು. ಆ ದಿನ ದಿಲ್ಲಿ ಬಂದ್ ಬೇರೆ. ತಾಯಿಯೊಬ್ಬಳು ಮನೆಗೆ ಹೋಗಲು ರಿಕ್ಷಾ ಹಿಡಿಯುವುದು ಅನಿವಾರ್ಯವಾಗಿತ್ತು. ಐದೇ ರೂಪಾಯಿ ಕೈಯಲ್ಲಿದ್ದದ್ದು. ಒಂದು ಸೈಕಲ್ ರಿಕ್ಷಾವನ್ನು ಬಾಡಿಗೆಗೆ ಗೊತ್ತು ಮಾಡಿದರು. ಬಡಪಾಯಿ ಸೈಕಲ್ ರಿಕ್ಷಾವಾಲ ಕಷ್ಟಪಟ್ಟು ತುಳಿಯುತ್ತಿದ್ದ. ಒಮ್ಮೆಲೇ ರಿಕ್ಷಾ ನಿಲ್ಲಿಸಿ "ಅಮ್ಮಾ ನಾನೀಗಲೇ ಬಂದೆ" ಎಂದು ಇಳಿದು ಹೋದ.

    ಸ್ವಲ್ಪ ಹೊತ್ತಾಯಿತು. ಆತ ಬರಲಿಲ್ಲ. "ಎಲ್ಲಿ ಹೋದನೋ ಗೊತ್ತಿಲ್ಲ. ಬರುವಾಗ ಗೂಂಡಾಗಳನ್ನು ಕರೆದುಕೊಂಡು ಬಂದರೆ...? ಈ ರಿಕ್ಷಾವಾಲಾಗಳನ್ನು ನಂಬುವುದು ಹೇಗೆ..?" ಹೀಗೆ ಆ ತಾಯಿ ಗಾಬರಿಗೊಂಡು ಯೋಚಿಸತ್ತಿರುವಾಗಲೇ ಆತ ಬಂದ. ಆತನ ಮುಖದಲ್ಲಿ ತೃಪ್ತಿಯ ಮಂದಹಾಸವಿತ್ತು.  ಬಂದವನೇ "ಅಮ್ಮ ಧನ್ಯವಾದ" ಎಂದ. "ನನಗೇಕೆ ಧನ್ಯವಾದ?" ಎಂದು ಆಕೆ ಆಶ್ಚರ್ಯದಿಂದ ಕೇಳಿದಳು.

    "ಅಮ್ಮಾ ನೀವು ನನಗೆ ಐದು ರೂಪಾಯಿ ಕೊಟ್ಟಿರಿ. ಪಕ್ಕದ ಗುಡಿಗೆ ಹೋಗಿ ಎರಡು ರೂಪಾಯಿ ಹುಂಡಿಗೆ ಹಾಕಿ ನನ್ನ ಕುಟುಂಬಕ್ಕೆ ಒಳಿತಾಗಲೆಂದು, ಇನ್ನೊಂದು ರೂಪಾಯಿ ಹುಂಡಿ ಹಾಕಿ ನಿಮಗೆ ಒಳಿತಾಗಲೆಂದು ಪ್ರಾರ್ಥಿಸಿದೆ. ಏಕೆ ಗೊತ್ತೆ? ಬೆಳಗ್ಗಿನಿಂದ ಏನೂ ತಿಂದಿರಲಿಲ್ಲ. ಕೈಯಲ್ಲಿ ಕಾಸಿರಲಿಲ್ಲ. ನೀವು ನನ್ನ ಪಾಲಿನ ದೇವರಂತೆ ಬಂದು ಐದು ರೂಪಾಯಿ ಕೊಟ್ಟಿರಿ. ಈಗ ಉಳಿದ ಹಣದಲ್ಲಿ ಚಹ ಬಿಸ್ಕತ್ತಿನಿಂದ ನನ್ನ ಹಸಿವು ಹಿಂಗಿಸಿಕೊಳ್ಳುವೆ. ನಿಮ್ಮಂತಹವರನ್ನು ದೇವರು ಬದುಕಿನುದ್ದಕ್ಕೂ ಚೆನ್ನಾಗಿಟ್ಟರೆ ನಮ್ಮಂತಹವರ ಮುಖದಲ್ಲಿ ಮಂದಹಾಸ ಮಿನುಗುವಂತೆ ಮಾಡಬಲ್ಲಿರಿ".

    ಆತನ ಮಾತು ಕೇಳಿ ಆ ತಾಯಿಗೆ ಹೃದಯ ತುಂಬಿಬಂತು.

Labels: Boudhik Story, Gratitude, Rikshawala, ಕೃತಜ್ಞತೆ, ದಿಲ್ಲಿ, ದೇವರಿಗೆ ಕಾಣಿಕೆ, ಬೋಧಕಥೆ, ರಿಕ್ಷಾವಾಲ

೭೨. ಇದ್ದಲಿನ ಅಂಗಡಿ ತೆರೆಯೋಣ

ಇದ್ದಲಿನ ಅಂಗಡಿ ತೆರೆಯೋಣ

   ೧೯೪೮ರ ಗಾಂಧೀಜಿ ಹತ್ಯೆಯ ನಂತರ ಸಂಘದ ಮೇಲೆ ನಿರ್ಬಂಧ ಹಾಕಲಾಯಿತು. ದೇಶಾದಾದ್ಯಂತ ಸ್ವಯಂಸೇವಕರ ಮೇಲೆ ಹಲ್ಲೆ ನಡೆಯಿತು. ಸ್ವಯಂಸೇವಕರ ಆಸ್ತಿಪಾಸ್ತಿಯನ್ನು ನಷ್ಟಗೊಳಿಸಲಾಯಿತು. ಅನೇಕರು ವಿಧವಿಧವಾದ ಕಷ್ಟಕ್ಕೊಳಪಟ್ಟರು.

    ಆ ಸಮಯದಲ್ಲಿ ಕೊಲ್ಹಾಪುರದ ಸಂಘಚಾಲಕರಾಗಿದ್ದವರು ಮಾ. ಪೆಂಡಾರ್ಕರ್‌ಜಿ. ಒಂದು ಸಿನಿಮಾ ಸ್ಟುಡಿಯೋದ ಮಾಲಿಕರು. ಡಾಕ್ಟರ್‌ಜಿಯವರ ಏಕೈಕ ಚಲನಚಿತ್ರವನ್ನು ಚಿತ್ರೀಕರಿಸಿದವರು ಅವರೇ.

    ಗಾಂಧೀಜಿ ಹತ್ಯೆಯ ಕೋಪಕ್ಕೆ ಪೆಂಡಾರ್ಕರ್‌ರವರ ಸ್ಟುಡಿಯೋ ಬಲಿಯಾಯಿತು. ಸುದ್ದಿ ತಿಳಿದು ಪೆಂಡಾರ್ಕರ್ ಮತ್ತು ಅವರ ಹೆಂಡತಿ ಸ್ಟುಡಿಯೋಗೆ ಬಂದು ನೋಡಿದರೆ ದುರುಳರು ಅದಕ್ಕೆ ಬೆಂಕಿ ಹಚ್ಚಿ ಬೂದಿಗೊಳಿಸಿದ್ದರು. ಆ ದೃಶ್ಯವನ್ನು ನೋಡಿದ ಪೆಂಡಾರ್ಕರ್‌ರವರ ಹೆಂಡತಿ ಅಳತೊಡಗಿದರು. ಆದರೆ ಪೆಂಡಾರ್ಕರ್‌ರವರು ಮಾತ್ರ ಸುಮ್ಮನೆ ಉರಿಯುತ್ತಿದ್ದ ಸ್ಟುಡಿಯೋ ಕಡೆ ನೋಡುತ್ತಾ ನಿಂತಿದ್ದರು.

    ಅವರ ಹೆಂಡತಿಯು "ನಿಮಗೇನೂ ಅನ್ನಿಸುತ್ತಲೇ ಇಲ್ಲವೇನು? ನಮ್ಮ ಸ್ಟುಡಿಯೋವನ್ನು ಸುಟ್ಟು ಹಾಕಿದ್ದರೂ ನಿಮಗೆ ದುಃಖ, ಕೋಪ ಬರುತ್ತಿಲ್ಲವೇ?" ಎಂದು ಕೇಳಿದರು.

    ಪೆಂಡಾರ್ಕರ್‌ರವರು ಶಾಂತವಾಗಿ "ಹೋಗಲಿ ಬಿಡು, ಸ್ಟುಡಿಯೋ ಸುಟ್ಟು ಆರಿದ ನಂತರ ಇದ್ದಲಿನ ಅಂಗಡಿಯನ್ನು ತೆರೆದರಾಯಿತು" ಎಂದರು.

Labels: Gandhiji, Pendarkar, Sacrifice, Sangha Story, Studio burns, ಗಾಂಧೀಜಿ ಹತ್ಯೆ, ಪೆಂಡಾರ್ಕರ್, ಸಮರ್ಪಣೆ, ಸ್ಟುಡಿಯೋಗೆ ಬೆಂಕಿ

೭೧. ಸಾಮೂಹಿಕ ನಿರ್ಣಯ

ಸಾಮೂಹಿಕ ನಿರ್ಣಯ

   ಒಮ್ಮೆ ಯಾವುದೋ ವಿಚಾರದ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಸಲುವಾಗಿ ಸಂಘದ ಹಿರಿಯ ಅಧಿಕಾರಿಗಳ ಒಂದು ಬೈಠಕ್ ನಡೆದಿತ್ತು. ಶ್ರೀ ಗುರೂಜಿಯವರು ತಮ್ಮ ನಿಲುವನ್ನು ಮಂಡನೆ ಮಾಡಿದರು. ಆದರೆ ಅಪ್ಪಾಜಿ ಜೋಷಿಯವರು ಗುರೂಜಿಯವರ ವಿಚಾರಕ್ಕೆ ವಿರುದ್ಧವಾಗಿ ತಮ್ಮ ಅನಿಸಿಕೆಯನ್ನು ಮಂಡಿಸಿದರು. ಎರಡೂ ವಿಚಾರಗಳನ್ನು ಚರ್ಚಿಸಲಾಯಿತು.

    ಕೊನೆಗೆ ಅಪ್ಪಾಜಿ ಜೋಷಿಯವರು ಹೇಳಿದ ರೀತಿಯೇ ಸರಿಯೆಂದು ಎಲ್ಲರೂ ಅಭಿಪ್ರಾಯಪಟ್ಟರು. ಆಗ ಶ್ರೀ ಗುರೂಜಿಯವರು ಅಪ್ಪಾಜಿ ಜೋಷಿಯವರ ನಿಲುವನ್ನು ಒಪ್ಪಿದರು. ಮಾತ್ರವಲ್ಲ, ಆ ನಿರ್ಣಯವನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ತೆಗೆದುಕೊಂಡರು. ತಮ್ಮ ನಿಲುವಿಗೆ ವಿರುದ್ಧವಾದ ನಿರ್ಣಯವನ್ನು ಒಪ್ಪಿಕೊಳ್ಳುವುದಕ್ಕಾಗಲೀ ಅಥವಾ ಅದನ್ನು ಜಾರಿಗೊಳಿಸುವುದಕ್ಕಾಗಲೀ ಶ್ರೀ ಗುರೂಜಿಯವರಿಗೆ ಎಂದೂ ಸ್ವಾಭಿಮಾನ ಅಡ್ಡ ಬರಲಿಲ್ಲ.

Labels: Appaji Joshi, Consensus, Sangha Story, Sri Guruji, ಅಪ್ಪಾಜಿ ಜೋಷಿ, ಶ್ರೀ ಗುರೂಜಿ, ಸಂಘದ ಕಥೆ, ಸಾಮೂಹಿಕ ನಿರ್ಣಯ

Wednesday, November 21, 2012

೭೦. ಡಾಕ್ಟರ್‌ಜಿಯವರ ಸಮಾಧಾನ

ಡಾಕ್ಟರ್‌ಜಿಯವರ ಸಮಾಧಾನ

   ಜನಸಂಘದ ಸಂಸ್ಥಾಪಕರೂ ಹಾಗೂ ಅದರ ಮೊದಲ ಅಧ್ಯಕ್ಷರೂ ಆಗಿದ್ದ ಶ್ಯಾಮಪ್ರಸಾದ ಮುಖರ್ಜಿಯವರಿಗೆ ಒಮ್ಮೆ ಯಾವುದೋ ಒಂದು ವಿಷಯದ ಬಗ್ಗೆ ಗೊಂದಲವಾಯಿತು. ಸಮಸ್ಯೆಯ ಪರಿಹಾರ ಕಂಡುಕೊಳ್ಳಲು ಡಾಕ್ಟರ್‌ಜಿಯವರ ಬಳಿ ಹೋಗಿ ಮಾತನಾಡಲು ನಿಶ್ಚಿಯಿಸಿದರು. ಆ ಸಮಯದಲ್ಲಿ ಡಾಕ್ಟರ್‌ಜಿಯವರ ಆರೋಗ್ಯ ಅಷ್ಟೇನೂ ಚೆನ್ನಾಗಿರಲಿಲ್ಲ.

    ಆ ಸಮಯದಲ್ಲಿ ಶ್ರೀ ಗುರೂಜಿಯವರು ಡಾಕ್ಟರ್‌ಜಿಯವರ ಶುಶ್ರೂಷೆಗೆ ಸ್ವತಃ ತಾವೇ ನಿಂತಿದ್ದರು. ಮುಖರ್ಜಿಯವರು ಡಾಕ್ಟರ್‌ಜಿಯವರನ್ನು ಭೇಟಿ ಮಾಡುವ ಸಲುವಾಗಿ ಬಂದಾಗ ಶ್ರೀ ಗುರೂಜಿಯವರಿಗೆ ಕೊಂಚ ಕಸಿವಿಸಿಯಾಯಿತು. ಮೊದಲೇ ಡಾಕ್ಟರ್‌ಜಿಯವರ ಆರೋಗ್ಯ ಸರಿಯಾಗಿಲ್ಲ, ಇನ್ನು ಸಮಾಲೋಚನೆಗೆ ಹೇಗೆ ಅವಕಾಶ ಕೊಡುವುದು? ಇದು ಗುರೂಜಿಯವರಿಗಿದ್ದ ಸಮಸ್ಯೆ.

    ಡಾಕ್ಟರ್‌ಜಿಯವರ ಜೊತೆ ಚರ್ಚಿಸಬೇಕಾದ ವಿಷಯವನ್ನು ಮುಖರ್ಜಿಯವರಲ್ಲಿ ಕೇಳಿದರು. ಆ ಸಮಸ್ಯೆಯನ್ನು ಕೇಳಿ ಶ್ರೀ ಗುರೂಜಿಯವರಿಗೆ ತಾನೇ ಅದಕ್ಕೆ ಉತ್ತರ ಕೊಡಬಲ್ಲೆನೆಂಬ ಅಭಿಪ್ರಾಯ ಉಂಟಾಯಿತು. ಕೆಲವು ಗಂಟೆಗಳ ಮಾತುಕತೆ ನಡೆಯಿತು. ಆದರೂ ಗುರೂಜಿಯವರು ಹೇಳಿದ ಯಾವ ಪರಿಹಾರವೂ ಮುಖರ್ಜಿಯವರಿಗೆ ಸಮಾಧಾನಕರವಾಗಿ ತೋರಲಿಲ್ಲ. ಕೊನೆಗೆ ವಿಧಿ ಇಲ್ಲದೆ ಮುಖರ್ಜಿಯವರಿಗೆ ಡಾಕ್ಟರ್‌ಜಿಯವರನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟರು.

    ವಿಷಯವನ್ನು ಕೇಳಿದ ಡಾಕ್ಟರ್‌ಜಿ, ಕೆಲವೇ ನಿಮಿಷಗಳಲ್ಲಿ ಮುಖರ್ಜಿಯವರಿಗೆ ಸಮಾಧಾನ ಹೇಳಿ ಒಪ್ಪಿಸಿ ಕಳಿಸಿದರು. ಗುರೂಜಿಯವರಿಗೆ ಆಶ್ಚರ್ಯವಾಯಿತು. ತಾವು ಹೇಳಿದ ಪರಿಹಾಕ್ಕೂ ಡಾಕ್ಟರ್‌ಜಿ ತಿಳಿಸಿದ ಸಮಾಧಾನಕ್ಕೂ ಯಾವುದೇ ವ್ಯತ್ಯಾಸವಿರಲಿಲ್ಲ. ಆದರೆ ಮುಖರ್ಜಿಯವರು ಡಾಕ್ಟರ್‌ಜಿಯವರು ಹೇಳಿದ ಮಾತ್ರಕ್ಕೆ ಒಪ್ಪಿಕೊಂಡಿದ್ದರು. ಡಾಕ್ಟರ್‌ಜಿಯವರಿಗೆ ಇನ್ನೊಬ್ಬರನ್ನು ಒಪ್ಪಿಸುವ ಸಾಮರ್ಥ್ಯವು ಹಾಗಿತ್ತು. ನಂತರದ ದಿನಗಳಲ್ಲಿ ಶ್ರೀ ಗುರೂಜಿಯವರು ಈ ಸಂದರ್ಭವನ್ನು ನೆನೆಸಿಕೊಂಡು, ಆ ಘಟನೆ ತಮಗಿದ್ದ ಅಹಂಕಾರವನ್ನು ಸುಟ್ಟುಹಾಕಿತು ಎನ್ನುತ್ತಾರೆ.

Labels: Convincing, Doctorji, Mookerjee, Sangha Story, Sri Guruji, ಡಾಕ್ಟರ್‌ಜಿ ಸಾಮರ್ಥ್ಯ, ಮುಖರ್ಜಿ, ಶ್ರೀ ಗುರೂಜಿ, ಸಂಘದ ಕಥೆ

೬೯. ಸಂಘ ಕಲಿಸಿದ ತ್ಯಾಗ

ಸಂಘ ಕಲಿಸಿದ ತ್ಯಾಗ

   ಹರಿಯಾಣದ ಒಂದು ಚಿಕ್ಕ ಊರು. ಅಲ್ಲಿನ ನಗರ ಕಾರ್ಯವಾಹ ಒಂದು ದಿನ ತನ್ನ ಸೈಕಲ್ಲಿನಲ್ಲಿ ಹೋಗುತ್ತಿದ್ದ. ಸ್ವಲ್ಪ ದೂರದ ನಂತರ ಆಕಾಶಕ್ಕೆ ಚಿಮ್ಮುತ್ತಿದ್ದ ಬೆಂಕಿ ಹೊಗೆಯನ್ನು ಕಂಡ. ವ್ಯಾಕುಲಗೊಂಡು ಸೈಕಲ್ಲನ್ನು ಜೋರಾಗಿ ತುಳಿದುಕೊಂಡು ಹತ್ತಿರ ಹೋಗಿ ನೋಡುತ್ತಾನೆ.

    ಅದು ಒಂದು ಶಾಲೆ. ಅಂದು ಆ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ. ಹಾಕಿದ್ದ ಪೆಂಡಾಲಿಗೆ ಅಕಸ್ಮಾತ್ ಬೆಂಕಿ ಬಿದ್ದು ಉರಿಯತೊಡಗಿತ್ತು.

    ನೋಡ ನೋಡುತ್ತಿದ್ದಂತೇ ಬೆಂಕಿ ಇಡೀ ಸಭಾಂಗಣವನ್ನೇ ಮುತ್ತಿತು. ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲರೂ ಹೊರಗೆ ಓಡತೊಡಗಿದರು. ಕೆಲವು ಮಕ್ಕಳು ಇತರರ ಕಾಲ್ತುಳಿತಕ್ಕೆ ಸಿಲುಕಿ ಬಿದ್ದರು. ಬೆಂಕಿ ಇನ್ನೂ ಹೆಚ್ಚಾಗತೊಡಗಿತ್ತು. ಹೊರಗೆ ಓಡಿದ್ದ ಎಲ್ಲರೂ ಒಳಗೆ ಸಿಕ್ಕಿ ಹಾಕಿಕೊಂಡಿದ್ದ ಮಕ್ಕಳ ಬಗ್ಗೆ ಕೂಗಿಕೊಳ್ಳತೊಡಗಿದರು.

    ಆ ದೃಶ್ಯ ನೋಡಿದ ಆ ಕಾರ್ಯವಾಹ ತನ್ನ ಸೈಕಲ್ಲನ್ನು ಅಲ್ಲಿಯೇ ಎಸೆದು ಎಲ್ಲರೂ ನೋಡುತ್ತಿದ್ದಂತೆಯೇ ಆ ಪೆಂಡಾಲಿನ ಒಳಗೆ ನುಗ್ಗಿದ. ಒಳಗೆ ಬೆಂಕಿಯ ಮಧ್ಯದಲ್ಲಿ ಸಿಕ್ಕಿಕೊಂಡಿದ್ದ ಮಕ್ಕಳನ್ನು ಎತ್ತಿಕೊಂಡು ಹೊರಗೆ ತಂದು ಬಿಡತೊಡಗಿದ. ಬೆಂಕಿ ಇನ್ನೂ ಜೋರಾಗತೊಡಗಿತು.

    ಒಳಗಿದ್ದ ೧೩ ಮಕ್ಕಳನ್ನು ಉಳಿಸಿ ಮತ್ತೆ ಒಳಗೆ ಹೋದವನು ಮತ್ತೆ ಹೊರ ಬರಲಾಗದೆ ಒಳಗೆ ಬೆಂಕಿಯಲ್ಲಿ ಸಿಕ್ಕಿ ಸಾವಿಗೀಡಾಗುತ್ತಾನೆ.

    ಆ ಸಮಯದಲ್ಲಿ ಅವನ ಹೆಂಡತಿ ತುಂಬು ಗರ್ಭಿಣಿ. ಯಾರೋ ಹೇಳಿದ ವಾರ್ತೆ ಕೇಳಿ ಗಂಡನನ್ನು ಹುಡುಕಿಕೊಂಡು ಬರುತ್ತಾಳೆ. ಪೂರ್ತಿ ಬೆಂದು ಹೋದ ಅವನ ದೇಹವನ್ನು ಗುರುತಿಸಲು ಅವಳಿಗೆ ಸಾಧ್ಯವಾಗಿದ್ದು ಅವನು ಹಾಕಿಕೊಂಡಿದ್ದ ಉಂಗುರದ ಸಹಾಯದಿಂದ.

Labels: Haryana, Karyavaha, Sacrifice, Sangha Story, School Fire, ಉಂಗುರ, ಕಾರ್ಯವಾಹ, ಪ್ರಾಣಾರ್ಪಣೆ, ಶಾಲೆಗೆ ಬೆಂಕಿ, ಹರಿಯಾಣ

೬೮. ಧರ್ಮವು ಪ್ರಾಣಕ್ಕಿಂತ ಮಿಗಿಲು

ಧರ್ಮವು ಪ್ರಾಣಕ್ಕಿಂತ ಮಿಗಿಲು

   ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ರಾಜರು, ಸಾಮಂತರು, ಸಂಸ್ಥಾನಗಳು ಪಾಲ್ಗೊಂಡಿದ್ದವು. ವೀರ ಸೈನಿಕರು, ಸೇನಾಪತಿಗಳು, ರಾಜ ಮಹಾರಾಜರು ಬ್ರಿಟಿಷರ ವಿರುದ್ಧ ಹೋರಾಡಿದರು. ದುರದೃಷ್ಟವಶಾತ್ ಕೆಲವೇ ಕೆಲವರ ಮೋಸದಿಂದಾಗಿ, ಭಾರತದಿಂದ ಸೈನ್ಯ ಸೋತು ಬ್ರಿಟಿಷರನ್ನು ಓಡಸಬಹುದಾಗಿದ್ದ ಅವಕಾಶ ತಪ್ಪಿಹೋಯಿತು.

    ಯುದ್ಧ ಮುಗಿದ ನಂತರ ಬ್ರಿಟಿಷರು ತಮ್ಮ ಸೈನ್ಯದ ವಿರುದ್ಧ ಯುದ್ಧದಲ್ಲಿ ಭಾಗವಹಿಸಿದ ಎಲ್ಲರನ್ನೂ ಹಿಡಿದು ಸೆರೆಮನೆಯಲ್ಲಿ ಹಾಕಿಯೋ ಅಥವಾ ಮರಣದಂಡನೆ ನೀಡಿಯೋ ತಮ್ಮ ಸೇಡನ್ನು ತೀರಿಸಿಕೊಳ್ಳತೊಡಗಿದರು. ಮುಂದೆಂದೂ ಬ್ರಿಟಿಷರ ವಿರುದ್ಧ ಆ ರೀತಿಯ ಸಂಗ್ರಾಮ ನಡೆಯಬಾರದೆಂಬ ಉದ್ದೇಶದಿಂದ ತಮ್ಮ ವಿರೋಧಿಗಳೆಲ್ಲರನ್ನೂ ಸದೆ ಬಡಿಯಲು ಆರಂಭಿಸಿದರು.

    ಹಾಗೆ ಸೆರೆಸಿಕ್ಕವರಲ್ಲಿ ಒಂದು ಚಿಕ್ಕ ಸಂಸ್ಥಾನದ ಒಬ್ಬ ಸೈನಿಕ. ಇನ್ನೂ ೧೭-೧೮ರ ವಯಸ್ಸು. ಸೆರೆಯಾದರೂ ಯಾವುದೇ ಭಯವಿಲ್ಲದೇ ಧೈರ್ಯದಿಂದಲೇ ಇದ್ದ. ಬ್ರಿಟಿಷ ಅಧಿಕಾರಿಯೊಬ್ಬ ಸೋಗಿನ ವಿಚಾರಣೆ ನಡೆಸಿ ಅವನಿಗೆ ಮರಣದಂಡನೆ ಶಿಕ್ಷೆ ವಿಧಿಸಿದ. ಮರಣ ದಂಡನೆಯ ದಿನ ಅವನನ್ನು ಒಂದು ಮೈದಾನಕ್ಕೆ ಕರೆದುಕೊಂಡು ಬರಲಾಯಿತು.

    ಬೇಡಿಯ ಸಹಿತ ಬಂದ ಅವನನ್ನು ಕುರಿತು ಬ್ರಿಟಿಷ್ ಅಧಿಕಾರಿಯು ಹೇಳಿದ "ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಡಿದ ನಿನಗೆ ಮರಣ ದಂಡನೆ ವಿಧಿಸಲಾಗಿದೆ. ನಿನಗೋ ಇನ್ನೂ ಎಳೆ ವಯಸ್ಸು. ಆದ್ದರಿಂದ ನಿನಗೆ ಬದುಕಲು ಒಂದು ಅವಕಾಶ ಕೊಡುತ್ತೇನೆ. ನೀನು ನಿನ್ನ ಹಿಂದು ಧರ್ಮವನ್ನು ಬಿಟ್ಟು ಕ್ರಿಶ್ಚಿಯನ್ ಆಗಿ ಮತಾಂತರಗೊಂಡರೆ, ನಿನಗೆ ಪ್ರಾಣ ಭಿಕ್ಷೆ ಕೊಟ್ಟು ನಿನ್ನನ್ನು ಬ್ರಿಟಿಷ್ ಸೈನ್ಯದಲ್ಲೂ ಸೇರಿಸಿಕೊಳ್ಳುತ್ತೇವೆ. ಇಲ್ಲವಾದರೆ ನಿನಗೆ ಇಂದೇ ತೋಪಿಗೆ ಕಟ್ಟಿ ಉಡಾಯಿಸಲಾಗುವುದು".

    ಅವನ ಮಾತನ್ನು ಕೇಳಿ ಆ ಹುಡುಗ ನಕ್ಕು "ನನಗೆ ನನ್ನ ಜೀವಕ್ಕಿಂತ ನನ್ನ ರಾಷ್ಟ್ರ ಮತ್ತು ನನ್ನ ಹಿಂದು ಧರ್ಮವೇ ಮೇಲು. ನಿಮ್ಮ ಪಾಡಿಗೆ ನಿಮ್ಮ ತೋಪಿಗೆ ಕೆಲಸ ಕೊಡಿ" ಎಂದ.

    ಅವನ ಮಾತಿನ್ನು ಕೇಳಿ ಆ ಬ್ರಿಟಿಷ್ ಅಧಿಕಾರಿಯು ತನ್ನ ಆಮಿಷವು ಕೆಲಸ ಮಾಡದೆಂದು ತಿಳಿದು ಅವನನ್ನು ತೋಪಿಗೆ ಕಟ್ಟಲು ಹೇಳಿದ. ಆ ಹುಡುಗನು ನಗುನಗುತ್ತಲೇ ತನ್ನ ಪ್ರಾಣವನ್ನು ಅರ್ಪಿಸಿದ.

Labels: 1857 1st War of Independence, Boudhik Story, Conversion, Sacrifice, ಪ್ರಾಣಾರ್ಪಣೆ, ಮತಾಂತರ, ಯೋಧ, ಹಿಂದು ಧರ್ಮ, ೧೮೫೭ರ ಸಂಗ್ರಾಮ

೬೭. ವಾತ್ಸಲ್ಯಮಯಿ ನೀಡಿದ ಶಿಕ್ಷಣ

ವಾತ್ಸಲ್ಯಮಯಿ ನೀಡಿದ ಶಿಕ್ಷಣ

   ಆಚಾರ್ಯ ವಿನೋಬಾ ಭಾವೆಯವರ ತಾಯಿ ಸಹೃದಯಿ ಮತ್ರವಲ್ಲ ದಯಾಳುವೂ ಹೌದು. ಒಮ್ಮೆ ಅವರ ಪಕ್ಕದ ಮನೆಯಾಕೆ ಬೇರಾವುದೋ ಊರಿಗೆ ಹೋಗಬೇಕಾಗಿತ್ತು. ಆಕೆಗೊಬ್ಬ ಮಗನಿದ್ದ. ಆತ ವಿನೋಬಾ ಓರಗೆಯವನೇ. ಆದರೆ ಆತನನ್ನು ತನ್ನೊಡನೆ ಕರೆದೊಯ್ಯುವುದು ಆಕೆ ಕಷ್ಟವಾಗಿತ್ತು. ಎಲ್ಲಿ ಬಿಟ್ಟುಹೋಗುವುದೆಂಬ ಚಿಂತೆ ಕಾಡತೊಡಗಿತು. ಇದನ್ನು ತಿಳಿದ ವಿನೋಬಾನ ತಾಯಿ, ತಮ್ಮಲ್ಲೇ ಬಿಟ್ಟುಹೋಗಲು ಹೇಳಿದರು. ನೆರೆಮನೆಯಾಕೆ ಅವರ ಬಳಿ ಮಗುವನ್ನು ಬಿಟ್ಟು ನಿಶ್ಚಿಂತೆಯಿಂದೆ ಊರಿಗೆ ಹೋದಳು.

    ಮಕ್ಕಳಿಬ್ಬರೂ ಆನಂದದಿಂದ ಆಡತೊಡಗಿದರು. ತಾಯಿಯ ವಾತ್ಸಲ್ಯದಲ್ಲಿ ಮಿಂದೆದ್ದ ಮಕ್ಕಳು ತಣಿದರು.

    ಊಟದ ಸಮಯವಾದಾಗ ತಾಯಿ ಪ್ರೀತಿಯಿಂದ ಮಕ್ಕಳಿಬ್ಬರನ್ನೂ ಊಟಕ್ಕೆ ಕರೆದರು. ಊಟ ಬಡಿಸುವಾಗ ತನ್ನ ತಾಯಿ ತಾರತಮ್ಯ ಮಾಡುತ್ತಿರುವುದನ್ನು ಬಾಲಕ ವಿನೋಬಾ ಗಮನಿಸಿದ. ತನಗೆ ಒಣರೊಟ್ಟಿ ಮಾತ್ರ. ಆ ಮಗುವಿಗಾದರೋ ತುಪ್ಪ ಹಾಕಿದ ರೊಟ್ಟಿ! ಮಾತ್ರವಲ್ಲ ತನ್ನಮ್ಮನೇ ಆತನಿಗೆ ಕೈಯಾರೆ ತಿನ್ನಿಸುತ್ತಿರುವುದನ್ನು ಕಂಡು "ಹೀಗೇಕೆ ಮಾಡುತ್ತಿರುವೆಯಮ್ಮ?" ಎಂದು ಅಮ್ಮನನ್ನು ಕೇಳಿಯೇ ಬಿಟ್ಟ.

    ಅಮ್ಮನಿಗೆ ಮಗನ ಮನಸ್ಸು ಅರ್ಥವಾಯಿತು. "ನೋಡು ಮಗೂ, ನಿಮ್ಮಿಬ್ಬರಿಗೂ ಆಗುವಷ್ಟು ತುಪ್ಪ ಮನೆಯಲ್ಲಿಲ್ಲ. ನೀನಂತು ನನ್ನ ಮಗ ತಾನೇ? ಆದರೆ ಇವನು ನೆರೆಮನೆಯವನು. ಅತಿಥಿಯೆಂದರೆ ದೇವರಿಗೆ ಸಮಾನ. ನಾವು ಕಷ್ಟಪಟ್ಟಾದರೂ ಅತಿಥಿಗಳಿಗೆ ಆನಂದ ನೀಡಬೇಕು" ಎಂದರು ಆ ತಾಯಿ.

    ಹೀಗೆ ವಿನೋಬಾ ಬಾಲ್ಯದಿಂದಲೇ ತಾಯಿಯಿಂದ ಸತ್ಸಂಸ್ಕಾರ ಪಡೆದರು. ಆದ್ದರಿಂದಲೇ ಅವರು ಶ್ರೇಷ್ಠರೆನಿಸಿದರು.

Labels: Boudhik Story, Guest, Mother, Vinoba Bhave, ಅತಿಥಿ ಸತ್ಕಾರ, ತಾಯಿ, ಬೋಧಕಥೆ, ವಿನೋಬಾ ಭಾವೆ

Tuesday, November 20, 2012

೬೬. ಪರಿವರ್ತನೆ

ಪರಿವರ್ತನೆ

   ನಾಲ್ವಡಿ ಕೃಷ್ಣರಾಜ ಓಡೆಯರ್ ಒಮ್ಮೆ ಪ್ರವಾಸದಿಂದ ಹಿಂದಿರುಗುತ್ತಿರುವಾಗ ಒಂದು ವನವಾಸಿಗಳ ಗ್ರಾಮಕ್ಕೆ ಹೋದರು. ಅಲ್ಲಿನ ಜನರ ಹೀನ ಪರಿಸ್ಥಿತಿಯನ್ನು ನೋಡಿ ಅಲ್ಲಿ ಒಂದು ವಸತಿಗೃಹ ಹಾಗೂ ಶಾಲೆ ತೆರೆಯಲು ನಿರ್ಧಾರ ಮಾಡಿದರು. ಮೈಸೂರಿಗೆ ಮರಳಿದ ನಂತರ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಅವಶ್ಯಕವಾದ ವ್ಯವಸ್ಥೆಗೆ ಆದೇಶ ಮಾಡಿದರು. ಅಲ್ಲಿನ ಶಾಲೆಗೆ ಒಬ್ಬ ಪಂಡಿತರನ್ನೂ ಕಳಿಸಿದರು. ಆ ಪಂಡಿತರ ಹೆಸರು ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಎಂದು.

    ಕೆಲವು ವರ್ಷಗಳ ನಂತರ ಮಹಾರಾಜರು ಅದೇ ದಾರಿಯಲ್ಲಿ ಬರುವ ಅವಕಾಶವಾಯಿತು. ಹಿಂದಿನ ಸಂಗತಿಗಳನ್ನು ನೆನಪಿಸಿಕೊಂಡು ಮತ್ತೆ ಅದೇ ಗ್ರಾಮಕ್ಕೆ ಹೋದರು. ಆದರೆ ಅವರ ಆಶ್ಚರ್ಯಕ್ಕೆ ಅಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಜನರ ಮತ್ತು ಗ್ರಾಮದ ಪರಿಸ್ಥಿತಿ ಹಿಂದಿನಂತೆಯೇ ಇತ್ತು.

    ಮಹಾರಾಜರನ್ನು ನೋಡಲು ಹಳ್ಳಿಯ ಒಂದು ದೊಡ್ಡ ಗುಂಪೇ ಸೇರಿತು. ತಾವು ಕಳಿಸಿದ್ದ ಶಾಸ್ತ್ರಿಗಳ ನೆನಪಾಗಿ ಆ ಗುಂಪಿನಲ್ಲಿ ಶಾಸ್ತ್ರಿಗಳನ್ನು ಹುಡುಕಲು ಪ್ರಯತ್ನಿಸಿದರು. ಶಾಸ್ತ್ರಿಗಳು ಕಾಣದಿದ್ದಾಗ ಅವರನ್ನು ಕರೆತರಲು ಮಹರಾಜರು ಹೇಳಿದರು. ತಕ್ಷಣವೇ ಆ ಗುಂಪಿನಿಂದ ಒಂದು ಧ್ವನಿ ಬಂದಿತು "ನಾನೇ ಚಾಮಿ ಕುಕ್ಕೆ ಚುಬ್ಬ".

    ಬದಲಾವಣೆಯನ್ನು ತರಬೇಕಾಗಿದ್ದ ಶಾಸ್ತ್ರಿಗಳೇ ವನವಾಸಿಗಳ ರೀತಿ, ಭಾಷೆಗಳಿಗೆ ಬದಲಾಗಿ ಬಿಟ್ಟಿದ್ದರು.

Labels: Boudhik Story, Odeyar, Transformation, ಕುಕ್ಕೆ ಸುಬ್ಬ, ನಾಲ್ವಡಿ ಕೃಷ್ಣರಾಜ ಓಡೆಯರ್, ಪರಿವರ್ತನೆ, ಬೋಧ ಕಥೆ

೬೫. ಶ್ರದ್ಧೆ

ಶ್ರದ್ಧೆ

   ಸಮರ್ಥ ರಾಮದಾಸರ ಅನೇಕ ಶಿಷ್ಯರಲ್ಲಿ ಕಲ್ಯಾಣ ಎನ್ನುವವನೂ ಒಬ್ಬ. ಅವನೊಬ್ಬ ಶತ ಮೂರ್ಖ ಎಂಬ ಪ್ರತೀತಿಯಿತ್ತು. ಅವನ ಮೂರ್ಖತನ ಉಳಿದ ಎಲ್ಲಾ ಶಿಷ್ಯರಿಗೂ ತಮಾಷೆಯ ವಿಷಯವಾಗಿತ್ತು. ಯಾವುದೇ ಸಂದರ್ಭ ಸಿಕ್ಕರೂ ಕಲ್ಯಾಣನ ಮೂರ್ಖತನವನ್ನು ಎತ್ತಿ ಹಾಸ್ಯ ಮಾಡುವುದು ಆ ಶಿಷ್ಯರ ಸ್ವಭಾವವಾಗಿತ್ತು. ಆದರೆ ಕಲ್ಯಾಣನಿಗೆ ಸಮರ್ಥ ರಾಮದಾಸರ ಬಗ್ಗೆ ಅಪಾರವಾದ ಶ್ರದ್ಧೆ ಇತ್ತು.

    ಒಮ್ಮೆ ಬಾವಿಯ ಮೇಲೆ ಬೆಳೆದಿದ್ದ ಮರದ ಟೊಂಗೆಯನ್ನು ಕಡಿಯಲು ಇತರ ಶಿಷ್ಯರು ಕಲ್ಯಾಣನನ್ನು ಕಳಿಸುತ್ತಾರೆ. ಕಲ್ಯಾಣ ಮರದ ಟೊಂಗೆಯ ತುದಿಯ ಭಾಗದ ಕಡೆ ಕುಳಿತು ಟೊಂಗೆಯನ್ನು ಕಡಿಯಲು ತೊಡಗುತ್ತಾನೆ. ಕೊನೆಗೆ ಟೊಂಗೆಯ ತುಂಡು ಕಡಿದು, ಕಲ್ಯಾಣ ಬಾವಿಯಲ್ಲಿ ಬೀಳುತ್ತಾನೆ. ಉಳಿದ ಶಿಷ್ಯರು ಅವನ ಪಾಡನ್ನು ನೋಡಿ ಹೊಟ್ಟೆ ತುಂಬಾ ನಗುತ್ತಾರೆ. ರಾಮದಾಸರಿಗೆ ಈ ವಿಷಯ ತಿಳಿಯುತ್ತದೆ.

    ಒಮ್ಮೆ ಸಮರ್ಥ ರಾಮದಾಸರಿಗೆ ಗುಣವಾಗದ ಒಂದು ರೋಗ ತಗಲುತ್ತದೆ. ಅವರ ಕಾಲು ಬಾತುಕೊಂಡು ಕೀವು ಬರಲು ಪ್ರಾರಂಭವಾಗುತ್ತದೆ. ಅವರು ತಮ್ಮ ಶಿಷ್ಯರನ್ನು ಕರೆದು "ನನಗೆ ಒಂದು ಮೂಲಿಕೆ ದೊರೆತಿದೆ. ಅದನ್ನು ಗಾಯಕ್ಕೆ ಹಾಕಿದರೆ ಸಂಪೂರ್ಣ ಗುಣವಾಗುತ್ತದೆ. ಆದರೆ ಅದಕ್ಕೆ ಮುಂಚೆ ಗಾಯದಿಂದ ಕೀವನ್ನು ಸಂಪೂರ್ಣ ತೆರೆಯಬೇಕು. ಸ್ವಲ್ಪ ಕೀವು ಇದ್ದರೂ ಗುಣವಾಗದು. ನಿಮ್ಮಲ್ಲಿ ಯಾರಾದರೂ ನಿಮ್ಮ ಬಾಯಿಯಿಂದ ಕೀವು ತೆಗೆದರೆ ನಾನು ಮೂಲಿಕ ಹಚ್ಚಬಹುದು" ಎನ್ನುತ್ತಾರೆ.

    ಎಲ್ಲ ಶಿಷ್ಯರು ಕಾಲಿನ ಗಾಯದ ಕೀವು ತೆಗೆಯುವುದನ್ನು ನೆನೆಸಿಕೊಂಡು ಅಸಹ್ಯ ಪಟ್ಟುಕೊಂಡು ಮುಂದೆ ಬರದೆ ಹಿಂಜರಿಯುತ್ತಾರೆ. ಆದರೆ ರಾಮದಾಸರ ಮೂರ್ಖ ಶಿಷ್ಯನಾದ ಕಲ್ಯಾಣ ಒಂದಿನಿತೂ ಯೋಚಿಸದೆ ರಾಮದಾಸರ ಕಾಲನ್ನು ಬಾಯಿಯಿಂದ ಹೀರಲು ಪ್ರಾರಂಭಿಸುತ್ತಾನೆ. ಆಶ್ಚರ್ಯಕರವಾಗಿ ಆ ಕೀವು ಮಾವಿನ ಹಣ್ಣಿನ ರೂಪವಾಗಿ ಪರಿವರ್ತಿತವಾಗುತ್ತದೆ. ಸಮರ್ಥ ರಾಮದಾಸರು ಶಿಷ್ಯನ ಗುಣಗಾನ ಮಾಡುತ್ತಾರೆ.

    ಮುಂದೆ ರಾಮದಾಸರ ಅದೇ ಮೂರ್ಖ ಶಿಷ್ಯ ಬೆಳೆದು ದೊಡ್ಡ ತತ್ವಜ್ಞಾನಿಯಾಗುತ್ತಾನೆ. ಇಂದಿಗೂ ಸಜ್ಜನಗಡದಲ್ಲಿ ಸಮರ್ಥ ರಾಮದಾಸರ ಸಮಾಧಿಯ ಪಕ್ಕದಲ್ಲೇ ಕಲ್ಯಾಣನ ಸಮಾಧಿಯೂ ಕಾಣಸಿಗುತ್ತದೆ.

Labels: Boudhik Story, Faith, Kalyana, Samartha Ramadasa, ಕಲ್ಯಾಣ, ಕೀವು, ಬೋಧಕಥೆ, ಶ್ರದ್ಧೆ, ಸಮರ್ಥ ರಾಮದಾಸ

೬೪. ನಂಬಿಕೆ

ನಂಬಿಕೆ

   ಒಮ್ಮೆ ರಜ್ಜೂ ಭೈಯ್ಯಾಜಿ ಗುರೂಜಿಯವರ ಒಂದು ಕಾರ್ಯಕ್ರಮಕ್ಕೆ ಲಾಲ ಬಹದ್ದೂರ್ ಶಾಸ್ತ್ರಿಯವರನ್ನು ಕರೆಯಲು ಅವರ ಬಳಿ ಹೋದರು. ವಿಚಾರ ವಿನಿಮಯ ಆದ ನಂತರ, ರಜ್ಜೂ ಭೈಯ್ಯಾಜಿ ಬಂದ ಕಾರಣ ತಿಳಿಸಿದರು. ಒಮ್ಮೆ ಯೋಚನೆ ಮಾಡಿದ ಶಾಸ್ತ್ರಿಯವರು ಕಾರ್ಯಕ್ರಮಕ್ಕೆ ಬರಲು ನಿರಾಕರಿಸಿದರು. ರಜ್ಜೂ ಭೈಯ್ಯಾಜಿ ಕಾರಣ ಕೇಳಿದರು.

    "ನಾನು ನಿಮ್ಮ ಕಾರ್ಯಕ್ರಮಕ್ಕೆ ಬಂದರೆ ಕಾಂಗ್ರಸ್‍ನವರಿಗೆ ನಾನು ಆರ್.ಎಸ್.ಎಸ್. ಸೇರುತ್ತಿದ್ದೇನೆ ಎನ್ನುವ ಸಂದೇಹ ಬರುತ್ತದೆ. ಆದರೆ ನೀವು ಬಂದದ್ದನ್ನು ನೋಡಿದರೆ, ನೀವು ಕಾಂಗ್ರೆಸ್ ಸೇರಲು ಬಂದಿದ್ದೀರ ಎಂದು ಯಾರೂ ತಿಳಿಯುವುದಿಲ್ಲ" ಎಂದು ಶಾಸ್ತ್ರಿಯವರು ಉತ್ತರಿಸಿದರು.

Labels: Belief, Lal Bahaddur Shastry, Rajju Bhaiiya, Sangha Story, ನಂಬಿಕೆ, ರಜ್ಜೂ ಭೈಯ್ಯಾ, ಲಾಲ್ ಬಹದ್ದೂರ್ ಶಾಸ್ತ್ರಿ, ಸಂಘದ ಕಥೆ

೬೩. ಸಂಘಕ್ಕೇಕೆ ತರುಣರು ಬರುತ್ತಾರೆ

ಸಂಘಕ್ಕೇಕೆ ತರುಣರು ಬರುತ್ತಾರೆ

   ಒಮ್ಮೆ ಗದಗದ ತೋಂಟಾರಾಧ್ಯರನ್ನು ನೋಡಲು ಅವರ ಮಠಕ್ಕೆ ಮಂಗೇಶ ಭೇಂಡೆಜಿ ಹೋಗಿದ್ದರು. ಅದೇ ಸಮಯದಲ್ಲಿ ಸ್ವಾಮೀಜಿಯವರನ್ನು ನೋಡಲು ಇನ್ನಿತರ ಇಬ್ಬರು ಬಂದಿದ್ದರು. ಎಲ್ಲರ ಪರಿಚಯದ ಆಯಿತು. ಅವರಲ್ಲಿ ಒಬ್ಬರು ಮಠದ ಶಾಲೆಯಲ್ಲಿ ನಡೆಸುವ ಸ್ಕೌಟ್ಸ್ ತಂಡಕ್ಕೆ ತರುಣರು ಏಕ ಬರುತ್ತಿಲ್ಲ ಎಂದು ಸಂಶೋಧನೆ ಮಾಡಲು ಬಂದಿದ್ದರು. ಇನ್ನೊಬ್ಬರು ಕೂಡ ಅವರದೇ ಶಾಲೆಯ ಮೇಲ್ವಿಚಾರಕರು.

    ಸ್ವಾಮೀಜಿ ಕೇಳಿದರು "ತರುಣರು ಸ್ಕೌಟ್ಸ್‍ಗೆ ಬರುತ್ತಿಲ್ಲ ಎಂದು ಹೇಳುತ್ತಿರುವಿರಿ. ಅವರಿಗೆ ಇಂಥ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲ ಎಂದು ಬೇರೆ ಹೇಳುತ್ತಿದ್ದೀರಿ. ಆದರೆ ಅದೇ ತರುಣರು ಆರ್.ಎಸ್.ಎಸ್. ನಡೆಸುವ ಶಾಖೆಗಳಿಗೆ ಹೋಗುತ್ತಿರುವವರಲ್ಲ?"

    "ಅವರ ಶಾಖೆಗೆ ಕೇವಲ ಉಚ್ಛ ಜಾತಿಯವರು ಮಾತ್ರ ಹೋಗುತ್ತಾರೆ" ಎಂದು ಶಾಲಾ ಮೇಲ್ವಿಚಾರಕರು ಹೇಳಿದರು.

    ತಟ್ಟನೆ ಸ್ವಾಮೀಜಿಯವರು "ಹಾಗಿಲ್ರಿ, ಅವರ ರಾಜ್ಯಾಧ್ಯಕ್ಷ ಬೇರೆ ಜಾತಿಯವರಿದ್ದಾರಲ್ಲ?"

    ಆಗ ಬಂದಿದ್ದ ಅವರಿಬ್ಬರೂ ಏನೂ ಹೇಳಲಾಗದೆ ಹೋದರು.

Labels: Sangha Story, Scouts, Shakha, Youth, ತರುಣರು, ಶಾಖೆ, ಸಂಘದ ಕಥೆ, ಸ್ಕೌಟ್ಸ್

೬೨. ಎಮೆರ್ಜೆನ್ಸಿಯಲ್ಲಿ ಜೈಲ್ ಭರೋ

ಎಮೆರ್ಜೆನ್ಸಿಯಲ್ಲಿ ಜೈಲ್ ಭರೋ

   ದೇಶದಲ್ಲಿ ಎಮೆರ್ಜೆನ್ಸಿ ಹಾಕಲಾಗಿದ್ದ ಸಮಯ. ದೇಶದಾದ್ಯಂತ ಸರಕಾರದ ಎಲ್ಲಾ ವಿರೋಧಿಗಳನ್ನು ಜೈಲಿಗೆ ಅಟ್ಟುಲಾಗುತ್ತಿತ್ತು. ಸರಕಾರದ ವಿರುದ್ಧ ಯಾರೇ ಏನು ಮಾತನಾಡಿದರೂ, ಕೆಲಸ ಮಾಡಿದರೂ, ಅಂಥಹವರಿಗೆ ಜೈಲುವಾಸ ನಿಶ್ಚಿತ ಎನ್ನುವ ಪರಿಸ್ಥಿತಿ ಇತ್ತು.

    ಆ ಸಂದರ್ಭದಲ್ಲಿ ಸರಕಾರದ ವಿರುದ್ಧ ಕೆಲಸ ಮಾಡುತ್ತಿದ್ದ ಎಲ್ಲ ಸಂಘಟನೆಗಳು ಸೇರಿ ಒಂದು ಸಭೆ ನಡೆಸಿದವು. ಅದರಲ್ಲಿ ಸಂಘದ ಸದಸ್ಯರು, ಕಮ್ಯೂನಿಸ್ಟ್ ಪಕ್ಷದ ಸದಸ್ಯರು ಹಾಗೂ ಇನ್ನಿತರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಬಹಳಷ್ಟು ವಿಚಾರಗಳನ್ನು ಚರ್ಚಿಸಿದ ನಂತರ ಯಾವುದೋ ಒಂದು ನಿರ್ಧಾರಿತ ದಿನ ಆಖಿಲ ಭಾರತ ಸ್ತರದಲ್ಲಿ ಎಲ್ಲ ಸಂಘಟನೆಯ ಸದಸ್ಯರು ’ಜೈಲ್ ಭರೋ’ ಆಂದೋಲನವನ್ನು ಹಮ್ಮಿಕೊಳ್ಳಬೇಕೆಂದು ನಿರ್ಧರಿಸಲಾಯಿತು.

    ಎಲ್ಲರೂ ತಮ್ಮ ತಮ್ಮ ಸಂಘಟನೆಯ ಎಷ್ಟು ಸಂಖ್ಯೆಯ ಸದಸ್ಯರು ಇದರಲ್ಲಿ ಭಾಗವಹಿಸಬಹುದು ಎಂದು ಕೇಳಲಾಯಿತು. ಕಮ್ಯೂನಿಸ್ಟ್ ಪಕ್ಷದ ಪ್ರತಿನಿಧಿಯಾಗಿ ಬಂದಿದ್ದ ಎ.ಕೆ. ಗೋಪಾಲನ್‍ರವರು ತಮ್ಮ ಪಕ್ಷದ ೨೦ ಸಾವಿರ ಸದಸ್ಯರು ಅಂದು ಜೈಲ್ ಭರೋ ಅಭಿಯಾನದಲ್ಲಿ ಭಾಗವಹಿಸುವರು ಎಂದು ಹೇಳಿದರು.

    ಸಂಘದ ಪ್ರತಿನಿಧಿಯಾಗಿದ್ದ ಮಾಧವರಾವ್ ಮೂಳೆಯವರ ಸರದಿ ಬಂದಾಗ ಅವರು ಸಂಘದ ೧ ಲಕ್ಷ ಸ್ವಯಂಸೇವಕರು ಬಂಧನಕ್ಕೊಳಗಾಗುವರು ಎಂದು ಹೇಳಿದರು.

    ಆಗ ಕಮ್ಯೂನಿಸ್ಟ್ ಸಹಿತ ಅನೇಕ ಇತರ ಪ್ರತಿನಿಧಿಗಳ ಮುಖದಲ್ಲಿ ಹಾಸ್ಯ ಭಾವನೆ ತೇಲಾಡಿತು. ಸಂಘವು ಆ ಸಮಯದಲ್ಲಿ ನಿರ್ಬಂಧನಕ್ಕೊಳಪಟ್ಟಿತ್ತು. ಸಂಘದ ಯಾವುದೇ ಕಾರ್ಯ ನಡೆಸುವಹಾಗಿರಲಿಲ್ಲ. ಅಷ್ಟೇ ಏಕೆ, ತಾವು ಸಂಘದ ಸ್ವಯಂಸೇವಕರು ಎಂದು ಹೇಳಿಕೊಂಡವರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಲಾಗುತ್ತಿತ್ತು. ಸಂಘದ ಸ್ವಯಂಸೇವಕರು ಒಬ್ಬರೊನ್ನೊಬ್ಬರು ಭೇಟಿ ಮಾಡಲೂ ಸಾಧ್ಯವಿರಲಿಲ್ಲ. ಇಂಥ ಸಂದರ್ಭದಲ್ಲಿ ಒಂದು ಲಕ್ಷ ಸ್ವಯಂಸೇವಕರು ಬಂಧನಕ್ಕೊಳಗಾಗುವ ಯೋಚನೆಯೇ ಅನೇಕರಿಗೆ ಹಾಸ್ಯಾಸ್ಪದವೆನಿಸಿತ್ತು.

    ನಂತರದ ದಿನಗಳಲ್ಲಿ ಅಂದುಕೊಂಡ ಹಾಗೆಯೇ ಜೈಲ್ ಭರೋ ಚಳುವಳಿ ನಡೆಯಿತು. ಲೆಕ್ಕ ತೆಗೆದುಕೊಂಡಾಗ, ಸಂಘದ ೧.೨೫ ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ಜೈಲಿಗೆ ಹೋಗಿದ್ದರು. ಆದರೆ ಕಮ್ಯೂನಿಸ್ಟರ ೨೦೦೦ ದಷ್ಟು ಮಂದಿ ಮಾತ್ರ ಜೈಲು ಪಾಡಾಗಿದ್ದರು. ಎ.ಕೆ. ಗೋಪಾಲನ್‍ರವರು "ನಾನು ನನ್ನ ಪಡೆಗೆ ಕೇವಲ ಸ್ವಾರ್ಥ ಹೇಳಿಕೊಟ್ಟಿದ್ದೆ. ತ್ಯಾಗ ಹೇಳಿಕೊಡಲಿಲ್ಲ" ಉದ್ಗರಿಸಿದರು !

Labels: Communist, Emergency, Jail Bharo, Sangha Story, ಎ.ಕೆ.ಗೋಪಾಲನ್, ಎಮೆರ್ಜೆನ್ಸಿ, ಕಮ್ಯೂನಿಸ್ಟ್, ಜೈಲ್ ಭರೋ, ಸಂಘದ ಕಥೆ

೬೧. ಡಾಕ್ಟರ್‌ಜಿಯವರ ಪ್ರಭಾವ

ಡಾಕ್ಟರ್‌ಜಿಯವರ ಪ್ರಭಾವ

   ೧೯೬೬-೬೭ರ ಘಟನೆ. ದತ್ತೋಪಂತ ಠೇಂಗಡಿ ರಾಜ್ಯಸಭಾ ಸದಸ್ಯರಾಗಿದ್ದರು. ಪಾರ್ಲಿಮೆಂಟ್‍ನ ಸೆಂಟ್ರಲ್ ಹಾಲ್‍ನಲ್ಲಿ ಒಬ್ಬ ಕಮ್ಯೂನಿಸ್ಟ್ ಅವರೊಡನೆ ಮಾತನಾಡಲು ಕುಳಿತಿದ್ದರು. ಇನ್ನೊಬ್ಬ ಕಮ್ಯೂನಿಸ್ಟ್ ಬಾಲಚಂದ್ರ ಮೆನನ್‍ರವರು ಕೂಡ ಇದ್ದರು. ಆ ಮೊದಲ ಕಮ್ಯೂನಿಸ್ಟರು ಠೇಂಗಡಿಯರನ್ನು ಕುಚೇಷ್ಟೆ ಮಾಡುತ್ತಾ ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದರು. ಠೇಂಗಡಿಯವರು ಅವರ ಕುತಂತ್ರ ಅರ್ಥವಾದರೂ, ಶಾಂತವಾಗಿ ಉತ್ತರಿಸುತ್ತಿದ್ದರು.

    ಹೀಗೆ ಸ್ವಲ್ಪ ಹೊತ್ತು ನಡೆಯಿತು. ಇವರಿಬ್ಬರ ಮಾತುಕತೆಯನ್ನು ಕೇಳುತ್ತಿದ್ದ ಮೆನನ್‍ರಿಗೆ ಸಹಿಸಲಸಾಧ್ಯವಾಯಿತು. ಅವರು ಆ ಕಮ್ಯೂನಿಸ್ಟ್ ಸ್ನೇಹಿತರಿಗೆ "ದೊಡ್ಡವರ ಬಗ್ಗೆ ಕುಚೇಷ್ಟೆ ಮಾಡಬಾರದು" ಎಂದು ಕಿವಿಮಾತು ಹೇಳಿದರು.

    ಆದರೂ ಆ ಮನುಷ್ಯ ಬಿಡದೆ ಮತ್ತೆ ಮತ್ತೆ ಅಂತಹುದೇ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಡಾಕ್ಟರ್‌ಜಿಯವರನ್ನು ನೆಹರುರವರ ಜೊತೆ ತಾಳೆ ಮಾಡುತ್ತ ಕೆಲವೊಮ್ಮೊ ಕಟುವಾಗಿ, ಕೆಲವೊಮ್ಮೆ ಕುಹಕವಾಗಿ ಮಾತನಾಡುತ್ತಿದ್ದರು. ಆಗ ಮೆನನ್ ಅವರನ್ನು ಕೇಳಿದರು "ನೆಹರೂ ಕಾಲವಾಗಿ ಎಷ್ಟು ವರ್ಷವಾಯಿತು?".

    "ಎರಡೂ ಎರಡೂವರೆ ವರ್ಷವಾಗಿದೆ" ಆ ಕಮ್ಯೂನಿಸ್ಟರ ಉತ್ತರ.

    "ನೆಹರೂ ತೀರಿಹೋದಾಗ ಅವರ ಬಗ್ಗೆ ಎಷ್ಟು ಜನಕ್ಕೆ ಗೊತ್ತಿತ್ತು?" ಮತ್ತೊಂದು ಪ್ರಶ್ನೆ ಮೆನನ್‍ರಿಂದ.

    "ಇಡೀ ಭಾರತಕ್ಕೇ ತಿಳಿದಿತ್ತು. ಅಷ್ಟೇ ಅಲ್ಲ, ಪ್ರಪಂಚದ ಅನೇಕ ದೇಶಗಳ ಜನರಿಗೂ ಅವರ ಬಗ್ಗೆ ಗೊತ್ತಿತ್ತು".

    ಆಗ ಮೆನನ್ ಠೇಂಗಡಿಯವರ ಕಡೆ ತಿರುಗಿ "ಡಾಕ್ಟರ್‌ಜಿ ಸತ್ತು ಎಷ್ಟು ವರ್ಷವಾಯಿತು?"

    "ಸುಮಾರು ೨೬-೨೭ ವರ್ಷವಾಯಿತು" ಠೇಂಗಡಿಯವರು ಉತ್ತರಿಸಿದರು.

    "ಡಾಕ್ಟರ್‌ಜಿ ಸತ್ತಾಗ ಅವರ ಬಗ್ಗೆ ಎಷ್ಟು ಜನಕ್ಕೆ ತಿಳಿದಿತ್ತು?" ಮತ್ತೆ ಮೆನನ್ ಪ್ರಶ್ನೆ ಮಾಡಿದರು.

    "ಭಾರತದ ಮಧ್ಯಭಾಗದ ಕೆಲವು ಸಾವಿರ ಜನಕ್ಕೆ ತಿಳಿದಿತ್ತು" ಠೇಂಗಡಿ ಹೇಳಿದರು.

    ಆಗ ಮೆನನ್‍ರವರು ಆ ಕಮ್ಯೂನಿಸ್ಟರನ್ನು ಕುರಿತು "ಹಾಗಾದರೆ ನೆಹರೂ ವಿಚಾರಕ್ಕೆ ಪ್ರಾಣ ಕೊಡುವ ಎಷ್ಟು ಜನ ಇದ್ದಾರೆ? ಮತ್ತು ಡಾಕ್ಟರ್‌ಜಿಯವರ ವಿಚಾರಧಾರೆಯ ಅನುಷ್ಟಾನಕ್ಕಾಗಿ ಪ್ರಾಣವನ್ನೇ ಪಣವನ್ನಾಗಿಟ್ಟು ಕೆಲಸ ಮಾಡುವ ಎಷ್ಟು ಜನ ಇದ್ದಾರೆ?"

    ಮೆನನ್‍ರವರ ತೀಕ್ಷ್ಣವಾದ ಆ ಪ್ರಶ್ನೆಗೆ ಉತ್ತರಿಸಲಾಗದೆ ಆ ಕಮ್ಯೂನಿಸ್ಟ್ ಸ್ನೇಹಿತರು ಸುಮ್ಮನಾದರು.

    ಮಾತನ್ನು ಮುಂದುವರೆಸುತ್ತಾ ಮೆನನ್‍ರವರು "ಒಬ್ಬ ವ್ಯಕ್ತಿ ಸತ್ತಾಗ ಅವನು ಎಷ್ಟು ಉದ್ದದ ನೆರಳನ್ನು ಬಿಡುತ್ತಾನೆ ಎಂಬುದರ ಮೇಲೆ ಅವನು ಎಷ್ಟು ಪ್ರಭಾವಿ ಎಂದು ನಿರ್ಧಾರವಾಗುತ್ತದೆ" ಎಂದರು.

Labels: Communist, Doctorji, Sangha Story, Thengadi, ಕಮ್ಯೂನಿಸ್ಟ್, ಠೇಂಗಡಿ, ಡಾಕ್ಟರ್‌ಜಿ, ಬಾಲಚಂದ್ರ ಮೆನನ್, ಸಂಘದ ಕಥೆ

   

Monday, November 19, 2012

೬೦. ಉಪಯೋಗಕ್ಕೆ ಬಾರದ್ದು ಯಾವುದೂ ಇಲ್ಲ

ಉಪಯೋಗಕ್ಕೆ ಬಾರದ್ದು ಯಾವುದೂ ಇಲ್ಲ

    ಒಮ್ಮೆ ಈಶ್ವರಚಂದ್ರ ವಿದ್ಯಾಸಾಗರರನ್ನು ಕಾಣಲು ಅವರ ಗೆಳೆಯರೊಬ್ಬರು ಬಂದರು. ಕ್ಷೇಮ ಸಮಾಚಾರಗಳನ್ನು ಕೇಳಿದ ಬಳಿಕ ಈಶ್ವರಚಂದ್ರರು ಕಿತ್ತಳೆ ಹಣ್ಣನ್ನು ತಿನ್ನಲು ನೀಡಿದರು. ಇಬ್ಬರೂ ಕಿತ್ತಳೆ ಹಣ್ನನ್ನು ತಿನ್ನತೊಡಗಿದರು. ಈಶ್ವರಚಂದ್ರರು ಚರಟವನ್ನೆಲ್ಲ ಒಂದು ತಟ್ಟೆಯಲ್ಲಿಡುತ್ತಿದ್ದರು. ಆದರೆ ಅವರ ಗೆಳೆಯರು ಮಾತ್ರ ಅವನ್ನೆಲ್ಲ ದೂರ ಎಸೆಯುತ್ತಿದ್ದರು. ಅದನ್ನು ಕಂಡ ವಿದ್ಯಾಸಾಗರರು ’ಹಾಗೇಕೆ ಅವನ್ನು ಕಸ ಎಸೆದಂತೆ ಎಸೆಯುವಿರಿ? ಹಾಗೆಯೇ ಇಟ್ಟರೆ ಯಾರಿಗಾದರೂ ಉಪಯೋಗಕ್ಕೆ ಬಂದೀತು’ ಎಂದರು.

    ’ರಸವೆಲ್ಲ ಹೀರಿದ ಕಿತ್ತಳೆ ತೊಳೆಗಳಲ್ಲವೇ ಇವು? ಇದ್ಯಾರ ಉಪಯೋಗಕ್ಕೆ ಬಂದೀತು?’ ಎಂದು ಪ್ರಶ್ನಿಸಿದರು ಗೆಳೆಯರು.

    ’ಹೊರಗಿರುವ ಕಟ್ಟೆಯ ಮೇಲಿಟ್ಟು ನೋಡಿ, ಆಗ ತಿಳಿಯುತ್ತೆ’ ಎಂದು ನಗುತ್ತಲೇ ಉತ್ತರಿಸಿದರು ಈಶ್ವರಚಂದ್ರರು.

    ಕಟ್ಟೆಯ ಮೇಲೆ ಜಗಿದ ಕಿತ್ತಳೆ ತೊಳೆಗಳ ಚರಟ ಇಟ್ಟ ಕೂಡಲೇ ಕಾಗೆಗಳ ಹಿಂಡು ಹಾರಿಬಂತು. ನೋಡ ನೋಡುತ್ತಿದ್ದಂತೆಯೇ ಅಲ್ಲಿದ್ದ ಕಿತ್ತಳೆ ಚರಟವನ್ನೆಲ್ಲ ಕಚ್ಚಿಕೊಂಡು ಕಾಗೆಗಳು ಹಾರಿಹೋದವು.

    ’ನೋದಿದಿರಾ, ಈ ಕೆಲಸಕ್ಕೆ ಬಾರದ ಕಿತ್ತಳೆ ಚರಟಗಳು ಆ ಕಾಗೆಗಳ ಉಪಯೋಗಕ್ಕೆ ಬಂದ ಪರಿ? ಯಾವ ವಸ್ತುವೂ ಅನುಪಯೋಗಿ ಅಲ್ಲ. ನಾವು ಅನುಪಯೋಗಿ ಎಂದು ಎಸೆದದ್ದು ಬೇರಾರೊ ವ್ಯಕ್ತಿ, ಪ್ರಾಣಿ, ಪಕ್ಷಿಗಳ ಉಪಯೋಗಕ್ಕೆ ಬಂದೇ ಬರುತ್ತದೆ’ ಎಂದು ಗಂಭೀರವಾಗಿ ನುಡಿದರು ಈಶ್ವರಚಂದ್ರ ವಿದ್ಯಾಸಾಗರರು.

Labels: Boudhik Story, Crow, Ishvarachandra Vidyasagar, Orange, ಈಶ್ವರಚಂದ್ರ ವಿದ್ಯಾಸಾಗರರು, ಕಾಗೆ, ಕಿತ್ತಳೆ ಹಣ್ಣು, ಬೋಧ ಕಥೆ

೫೯. ತಂದೆಯ ಸ್ಥಾನದಲ್ಲಿ ನಿಂತ ಮಿತ್ರ

ಹಗಲಿರುಳು ಒಂದೇ ಜಪ

    ಆಗ ಸ್ವಾತಂತ್ರ್ಯ ಹೋರಾಟದ ಕಾಲ ಕಾಕೋರಿ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಕ್ರಾಂತಿಕಾರಿ ರೋಶನ್ ಸಿಂಹನಿಗೆ ಮರಣದಂಡನೆ ವಿಧಿಸಲಾಗಿತ್ತು. ಆತನ ಬಲಿದಾನವಾಯಿತು. ಆ ಕುಟುಂಬದ ಮೇಲೆ ಸಂಕಟಗಳ ಸರಮಾಲೆಗಳೇ ಬಂದೆರಗಿದವು.

    ತುಂಬಾ ಕಷ್ಟಗಳ ಮಧ್ಯೆಯೂ ಆತನ ಮಗಳ ಮದುವೆ ನಿಶ್ಚಯವಾಯಿತು. ಆದರೆ ಅವರಿಗಾಗದ ಪೊಲೀಸ್ ಇನ್ಸ್‍ಪೆಕ್ಟರನೊಬ್ಬ ’ಕ್ರಾಂತಿಕಾರಿಗಳ ಮನೆಯ ಹುಡುಗಿಯನ್ನು ಮದುವೆ ಆಗುವುದೆಂದರೆ ಅಪರಾಧ, ರಾಜದ್ರೋಹ. ಅದಕ್ಕೆ ಶಿಕ್ಷೆಯೂ ಆಗಬಹುದು’ ಎಂದು ವರನ ಮನೆಯವರನ್ನು ಬೆದರಿಸಿದ.

    ಇದನ್ನೆಲ್ಲ ಲೆಕ್ಕಿಸದ ವರನ ಮನೆಯವರು ’ಭಾರತಮಾತೆಯ ಬಿಡುಗಡೆಗಾಗಿ ಬಲಿದನಗೈದವರ ಮನೆಯ ಮಗಳು ನಮ್ಮ ಮನೆಯ ಸೊಸೆಯಾಗಿ ಬರುವುದೇ ದೊಡ್ಡ ಸೌಭಾಗ್ಯ. ನಿಮ್ಮ ಬೆದರಿಕೆಗೆಲ್ಲಾ ನಾವು ಜಗ್ಗುವರಲ್ಲ’ ಎಂದರು. ಆ ಇನ್ಸ್‍ಪೆಕ್ಟರ್ ತೆಪ್ಪಗಾದ. ಆದರೂ ಆ ಮದುವೆಯನ್ನು ಮುರಿಯುವ ಹುನ್ನಾರವನ್ನೇ ಮುಂದುವರೆಸಿದ.

    ಈ ಸಂಗತಿ ಪತ್ರಿಕಾ ಸಂಪಾದಕರೊಬ್ಬರಿಗೆ ತಿಳಿಯಿತು. ಅವರ ರಕ್ತ ಕುದಿಯಿತು. ತಕ್ಷಣ ಆ ಇನ್ಸ್‍ಪೆಕ್ಟರನನ್ನು ಕಂಡರು. ’ಏಯ್! ಎಂಥಾ ಮನುಷ್ಯನಯ್ಯ ನೀನು! ಸ್ವಲ್ಪವಾದರೂ ಮಾನವೀಯತೆ ಬೇಡವೇನು? ಕೆಟ್ಟದ್ದನ್ನೇ ಮಾಡುವುದರಲ್ಲಿ ಧನ್ಯತೆ ಕಾಣುವ ನೀಚತನ ನಿನ್ನದಾಯಿತಲ್ಲ? ವಿಷಬೀಜ ಬಿತ್ತಿದರೆ ಅದನ್ನೇ ಉಣ್ಣಬೇಕಾಗುತ್ತದೆ. ನಿನ್ನ ಭವಿಷ್ಯದ ಮೇಲೆ ನೀನೇ ಕಲ್ಲು ಹಾಕಿಕೊಂಡಂತಾಗುತ್ತದೆ’ ಎಂದು ಕಟುವಾಗಿ ನುಡಿದರು.

    ಸಂಪಾದಕರ ಈ ಮಾತು ಕೇಳಿ ಇನ್ಸ್‍ಪೆಕ್ಟರನ ಕಣ್ಣು ತೆರೆಯಿತು. ತನ್ನ ತಪ್ಪಿನ ಅರಿವಾಗಿ ರೋಶನ್ ಸಿಂಹರ ಹೆಂಡತಿಯ ಕ್ಷಮೆ ಕೇಳಿದ. ಮಾತ್ರವಲ್ಲ, ಮದುವೆಯ ಖರ್ಚೆಲ್ಲವನ್ನು ತಾನೇ ಕೊಡುವನೆಂದ.

Labels: Boudhik Story, Independence Movement, Roshan Singh, ಬೌದ್ಧಿಕ ಕಥೆಗಳು, ಮಗಳ ಮದುವೆ, ರೋಶನ್‌ಸಿಂಹ

೫೮. ದೇವರಿಗಿಂತ ದೇಶ ಮೊದಲು

ದೇವರಿಗಿಂತ ದೇಶ ಮೊದಲು

    ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಶ್ವಕವಿ ರವೀಂದ್ರನಾಥ ಠಾಕೂರರು ಜಪಾನ್ ಪ್ರವಾಸದಲ್ಲಿದ್ದರು. ಒಮ್ಮೆ ಅಲ್ಲಿನ ಶಾಲೆಯೊಂದರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆಗ ಗುರುದೇವ ರವೀಂದ್ರರು "ನೀವು ಯಾವ ಮತವನ್ನು ಆಚರಿಸುತ್ತೀರಿ?" ಎಂದು ಕೇಳಿದರು.

    "ಬೌದ್ಧ ಮತ" ವಿದ್ಯಾರ್ಥಿಗಳ ಉತ್ತರ.

    "ಬೌದ್ಧ ಮತ ಸ್ಥಾಪಿಸಿದ ಭಗವಾನ್ ಬುದ್ಧ ಭಾರತದಲ್ಲಿ ಹುಟ್ಟಿದವರೆಂದು ನಿಮಗೆ ಗೊತ್ತಿರಬೇಕಲ್ಲವೇ?" ಗುರುದೇವರ ಪ್ರಶ್ನೆ.

    "ಹೌದು ನಮಗದು ಚೆನ್ನಾಗಿ ಗೊತ್ತು" ಬಾಲಕರೆಂದರು.

    "ಭಗವಾನ್ ಬುದ್ಧನ ನಾಯಕತ್ವದಲ್ಲಿ ಸೈನ್ಯವೊಂದು ನಿಮ್ಮ ದೇಶದ ಮೇಲೆ ಆಕ್ರಮಣಕ್ಕಾಗಿ ಬಂದಿದೆ ಎಂದು ಕಲ್ಪಿಸಿಕೊಳ್ಳಿ. ಆಗ ನೀವೇನು ಮಾಡುವಿರಿ?" ಗುರುದೇವರ ಪ್ರಶ್ನೆ ಸ್ವಲ್ಪ ಜಟಿಲವಾಗಿತ್ತು.

    "ನಾವು ಬುದ್ಧನನ್ನು ಎದುರಿಸುತ್ತೇವೆ. ನಮ್ಮ ದೇಶದಲ್ಲಿರುವ ಭಗವಾನ್ ಬುದ್ಧನ ಮೂರ್ತಿಗಳನ್ನೆಲ್ಲಾ ಕರಗಿಸಿ ಮದ್ದು ಗುಂಡುಗಳನ್ನು ತಯಾರಿಸುತ್ತೇವೆ. ಬುದ್ಧನನ್ನು ಮಾತ್ರವಲ್ಲ, ಆತನೊಡನೆ ಬಂದ ಸೈನವನ್ನೆಲ್ಲಾ ಸುಟ್ಟು ಬೂದಿ ಮಾಡುತ್ತೇವೆ" ಬಾಲ ವಿದ್ಯಾರ್ಥಿಯೊಬ್ಬ ರೋಷದಿಂದ ಗುಡುಗಿದ.

    ಬಾಲಕನ ಆ ಉತ್ತರದಲ್ಲಿ ಗುರುದೇವರು ಜಪಾನಿನ ಉಜ್ವಲ ಭವಿಷ್ಯವನ್ನು ಕಾಣುತ್ತಾ ಅವರ ದೇಶಭಕ್ತಿಯೆದುರು ನತಮಸ್ತಕರಾದರು.

Labels: Boudhik Story, Buddha, Gurudev, Japan, Nation first, Ravindranatha Tagore, ಗುರುದೇವ್, ಜಪಾನ್, ದೇಶಪ್ರೇಮ, ಬುದ್ಧ, ರವೀಂದ್ರನಾಥ ಠಾಕೂರ್

೫೭. ಮೂರ್ತಿ ಪೂಜೆ

ಮೂರ್ತಿ ಪೂಜೆ

    ರಾಜಸ್ಥಾನದ ರಾಜ ಜಯಸಿಂಹ ದೇವರನ್ನು ನಂಬದ ಒಬ್ಬ ನಾಸ್ತಿಕ. ಭೋಗ ವಿಲಾಸದ ಜೀವನದಲ್ಲೇ ನಂಬಿಕೆಯಿಟ್ಟಿದವನು. ಒಮ್ಮೆ ಸ್ವಾಮಿ ವಿವೇಕಾನಂದರು ಅವನ ಅರಮನೆಗೆ ಅತಿಥಿಯಾಗಿ ಹೋಗುತ್ತಾರೆ. ಮಾತು ಚರ್ಚೆಗೆ ತಿರುಗಿ, ಮೂರ್ತಿ ಪೂಜೆಯ ವಿಷಯಕ್ಕೆ ಬರುತ್ತದೆ. ಇಬ್ಬರೂ ತಮ್ಮ ತಮ್ಮ ವಿಚಾರವನ್ನು ಹೇಳುತ್ತಾ ಸಾಗುತ್ತಾರೆ.

    ಕೊನೆಗೆ ಸ್ವಾಮಿ ವಿವೇಕಾನಂದರು ರಾಜನ ತಂದೆಯ ಭಾವಚಿತ್ರವನ್ನು ತೋರಿಸಿ ಅದಕ್ಕೆ ಉಗುಳಲು ಹೇಳುತ್ತಾರೆ. ಸ್ವಾಮಿ ವಿವೇಕಾನಂದರಿಂದ ಈ ರೀತಿಯಾದ ಮಾತು ಕೇಳಿ ರಾಜ ಆಶ್ಚರ್ಯ ಪಡುತ್ತಾನೆ. ಆಗ ಸ್ವಾಮಿ ವಿವೇಕನಂದರೇ ವಿವರಿಸುತ್ತಾ "ಈ ಭಾವಚಿತ್ರವು ಕಾಗದದ ಮೇಲೆ ಬಿಡಿಸಿರುವಂತಹುದು. ಅದು ನಿಮ್ಮ ತಂದೆಯ ಭಾವಚಿತ್ರ. ನಿಮ್ಮ ತಂದೆ ಸ್ವರ್ಗಸ್ಥರಾದ ನಂತರವೂ ನೀವು ಅವರ ಭಾವಚಿತ್ರವಕ್ಕೆ ಅವರ ಜೀವಿತ ಅವಧಿಯಲ್ಲಿ ಅವರಿಗೆ ಕೊಟ್ಟಷ್ಟೇ ಗೌರವವನ್ನು ಕೊಡುತ್ತಿದ್ದೀರಿ. ಅದನ್ನು ಕಾಗದ ಎಂದು ಭಾವಿಸದೆ ಅದರಲ್ಲಿ ನಿಮ್ಮ ತಂದೆಯವರನ್ನೇ ಕಾಣುತ್ತಿದ್ದೀರಿ. ಅದೇ ರೀತಿ ನಾವು ಕಲ್ಲನ್ನು ಪೂಜಿಸುವುದಿಲ್ಲ; ಬದಲಾಗಿ ಕಲ್ಲಲ್ಲಿರುವ ದೇವರನ್ನು ಪೂಜಿಸುತ್ತೇವೆ" ಎಂದರು. ತನ್ನ ತಪ್ಪಿನ ಅರಿವಾಗಿ ರಾಜ ಬದಲಾಗಿ ತನ್ನ ನಾಸ್ತಿಕತೆಯನ್ನು ಬಿಡುತ್ತಾನೆ.

Labels: Athiest Raja Jayasimha, Boudhik Story, Swami Vivekananda, ನಾಸ್ತಿಕತೆ, ಬೌದ್ಧಿಕ ಕಥೆ, ರಾಜ ಜಯಸಿಂಹ, ಸ್ವಾಮಿ ವಿವೇಕಾನಂದ

೫೬. ತಲೆಯ ಮೇಲೆ ಸದಾ ಭಾರತ

ತಲೆಯ ಮೇಲೆ ಸದಾ ಭಾರತ

    ಸ್ವಾಮಿ ರಾಮತೀರ್ಥರು ಎರಡೂವರೆ ವರ್ಷ ಅಮೇರಿಕಾ ಪ್ರವಾಸದಲ್ಲಿದ್ದರು. ಅಪಾರ ಸಂಪತ್ತು, ಅಮೂಲ್ಯ ವಸ್ತುಗಳು ಅವರಿಗೆ ಉಡುಗೊರೆಯಾಗಿ ದೊರೆತಿತ್ತು. ಅವೆಲ್ಲವನ್ನು ಬಡವರಿಗಾಗಿ ಕೊಟ್ಟು ಬಿಟ್ಟರು. ಅಮೆರಿಕನ್ನರು ಕೊಟ್ಟಿದ್ದ ಉಡುಗೆ ಮಾತ್ರ ಅವರ ಬಳಿ ಉಳಿದಿತ್ತು.

    ಭಾರತದಲ್ಲಿ ಒಮ್ಮೆ ಅವರು ಅದೇ ಉಡುಗೆಯನ್ನು ತೊಡುತ್ತಿದ್ದರು. ಕೋಟು ಪ್ಯಾಂಟನ್ನು ಹೆಗಲ ಮೇಲೆ ಹಾಕಿಕೊಂಡು ಮೊದಲು ಅಮೇರಿಕದ ಚಪ್ಪಲಿಯನ್ನು ಕಾಲಿಗೆ ಹಾಕಿಕೊಂಡರು. ತಮ್ಮ ಬೋಳು ತಲೆಯ ಮೇಲೆ ಅಮೆರಿಕದ ಬೆಲೆಬಾಳುವ ಹ್ಯಾಟಿನ ಬದಲು ಇಲ್ಲಿಯ ಸರಳ ಪೇಟವನ್ನು  ಸುತ್ತಿಕೊಂಡರು.

    ’ತುಂಬಾ ಬೆಲೆಬಾಳುವ ಈ ಸುಂದರ ಹ್ಯಾಟನ್ನೇ ಹಾಕಿಕೊಳ್ಳಬಹುದಾಗಿತ್ತಲ್ಲಾ?’ ಎಂದು ಯಾರೋ ಕೇಳಿದರು.

    ’ಈ ರಾಮನ ತಲೆಯ ಮೇಲೆ ಯಾವಾಗಲೂ ಭಾರತವೇ ಇರುತ್ತದೆ. ಅಮೇರಿಕಾ ಕಾಲಲ್ಲಿರಬಹುದು’. ಎಂದುತ್ತರಿಸಿದ ಸ್ವಾಮಿ ರಾಮತೀರ್ಥರು ನೆಲಕ್ಕೆ ಬಾಗಿ ಹಿಡಿ ಮಣ್ಣನ್ನು ತೆಗೆದು ಹಣೆಗೆ ಹಚ್ಚಿಕೊಂಡರು.

Labels: Bharath on Head, Boudhik Story, Swami Ramatirtha, ತಲೆಯ ಮೇಲೆ ಭಾರತ, ದೇಶಪ್ರೇಮ, ಬೌದ್ಧಿಕ ಕಥೆ, ಸ್ವಾಮಿ ರಾಮತೀರ್ಥರು

೫೫. ವಿದೇಶಗಳಲ್ಲಿ ಸಂಘ

ವಿದೇಶಗಳಲ್ಲಿ ಸಂಘ

    ೧೯೪೭ರಲ್ಲಿ ಪಂಜಾಬಿನ ಜಗದೀಶಚಂದ್ರ ಎನ್ನುವ ಸ್ವಯಂಸೇವಕ ಹಡಗಿನಲ್ಲಿ ಕೆನ್ಯಾಗೆ ಹೊರಟಿದ್ದರು. ಸಂಜೆ ಆಗುತ್ತಾ ಶಾಖೆಯ ನೆನಪಾಯಿತು. ಅಗ ಅವರು ಹಡಗಿನ ಮೇಲೆ ಬಂದು ಪ್ರಾರ್ಥನೆ ಪ್ರಾರಂಬಿಸಿದರು. ಅದು ಮುಗಿಯುವ ಹೊತ್ತಿಗೆ ಮಾಣಿಕಚಂದ್ ಎನ್ನುವ ಇನ್ನೊಬ್ಬ ಸ್ವಯಂಸೇವಕ ಅವರ ಜೊತೆ ಸೇರಿದ್ದರು.

    ನಂತರ ಕೆನ್ಯಾದ ಇತರ ಸ್ವಯಂಸೇವಕರನ್ನು ಮತ್ತು ಹಿಂದುಗಳನ್ನು ಸೇರಿಸಿ ೧೯೪೭ರ ಸಂಕ್ರಾಂತಿಯಂದು ಶಾಖೆ ಪ್ರಾರಂಭಿಸಿದರು. ೧೯೬೭ರಲ್ಲಿ ಇಂಗ್ಲೆಂಡಿನಲ್ಲಿ ಭಾರತೀಯ ಕಾಫೀ ಬೋರ್ಡಿನಿಂದ ಅಲ್ಲಿಗೆ ಹೋದ ಸತ್ಯನಾರಾಯಣ ರಾವ್ ಅಲ್ಲಿ ಶಾಖೆ ಪ್ರಾರಂಭಿಸಿದರು.

    ಹೀಗೆ ವಿದೇಶದಲ್ಲಿ ಅನೇಕ ಹೆಸರಿನಲ್ಲಿ ಸಂಘ ಕಾರ್ಯವು ಪ್ರಾರಂಭವಾಯಿತು. ಮಾರಿಷಸ್ ಸ್ವಯಂಸೇವಕ ಸಂಘ, ಭಾರತೀಯ ಸ್ವಯಂಸೇವಕ ಸಂಘ, ಹಿಂದು ಸ್ವಯಂಸೇವಕ ಸಂಘ ಮುಂತಾದ ಹೆಸರುಗಳಿಂದ ಸಂಘಟನೆಯ ಕೆಲಸ ಪ್ರಾರಂಭವಾಯಿತು. ಸುಮಾರು ೩೨ ದೇಶಗಳಲ್ಲಿ ೫೨೮ಕ್ಕೂ ಹೆಚ್ಚು ಶಾಖೆಗಳು ನಡೆಯುತ್ತಿವೆ.

    ಅಮೆರಿಕಾದ ಬುಶ್ ಸರಕಾರ ಪಾಕಿಸ್ಥಾನಕ್ಕೆ F16 ಯುದ್ಧ ವಿಮಾನವನ್ನು ಮಾರುವ ನಿರ್ಧಾರ ತೆಗೆದುಕೊಂಡಾಗ, ಅಲ್ಲಿಯ ಹಿಂದೂ ಸ್ವಯಂಸೇವಕ ಸಂಘದ ಸ್ವಯಂಸೇವಕರು ಆ ನಿರ್ಧಾರವನ್ನು ವಿರೋಧಿಸಿ ಅಲ್ಲಿನ ಸರಕಾರಕ್ಕೆ ಪತ್ರ, ಫಾಕ್ಸ್ ಮುಖೇನ ಒತ್ತಡ ಹಾಕಿದರು. ಆ ಕಾರಣ ಅಮೇರಿಕಾ ಸರಕಾರವು ಆ ನಿರ್ಧಾರವನ್ನು ತಡೆಹಿಡಿದು, ಯುದ್ಧ ವಿಮಾನವನ್ನು ಮಾರವುದನ್ನು ಮುಂದೂಡಿತು.

Labels: Sangha in Overseas, Sangha Story, ವಿದೇಶಗಳಲ್ಲಿ ಸಂಘ, ಸಂಘದ ಕಥೆ

೫೪. ಸಿನಿಮಾ

ಸಿನಿಮಾ

    ನಾಗಪುರದ ಒಂದು ಶಾಖೆಯ ಕೆಲವು ಮಕ್ಕಳು ನಿತ್ಯವೂ ಶಾಖೆಗೆ ಬರುತ್ತಿದ್ದವರು, ಇದ್ದಕ್ಕಿದ್ದಂತೆಯೇ ಬರುವುದನ್ನು ನಿಲ್ಲಿಸಿದ್ದರು. ಡಾಕ್ಟರ್‌ಜಿ ವಿಚಾರಿಸಲು ನಿಜವಾದ ಕಾರಣ ತಿಳಿಯಿತು. ಆ ಮಕ್ಕಳೆಲ್ಲರೂ ಶಾಖೆ ತಪ್ಪಿಸಿ ನಿತ್ಯವೂ ಊರಿಗೆ ಬಂದಿದ್ದ ಹೊಸ ಸಿನಿಮಾ ನೋಡುಲು ಹೋಗುತ್ತಿದ್ದರು. ಡಾಕ್ಟರ್‌ಜಿಯವರು ಆ ಮಕ್ಕಳನ್ನು ಸೇರಿಸಿ, ಅವರ ಜೊತೆ ತಾವೂ ಸಿನಿಮಾ ನೋಡಲು ಬರುವುದಾಗಿ ತಿಳಿಸಿದರು. ಮಕ್ಕಳಿಗೆ ಆನಂದವೋ ಆನಂದ. ಡಾಕ್ಟರ್‌ಜಿ ತಮ್ಮ ಜೊತೆ ಸಿನಿಮಾ ನೋಡಲು ಬರುವುದೆಂದರೇನು ಸುಮ್ಮನೆಯೇ?

    ಡಾಕ್ಟರ್‌ಜಿ ಎಲ್ಲರಿಗೂ ಕೂಡಿ ತಮ್ಮ ಮನೆಗೆ ಬರಲು ತಿಳಿಸಿದರು. ಆ ಸಂಜೆ ಮಕ್ಕಳೆಲ್ಲರೂ ಒಟ್ಟಿಗೆ ಡಾಕ್ಟರ್‌ಜಿ ಮನೆಗೆ ಬಂದರು. ಆ ಸಮಯದಲ್ಲಿ ಡಾಕ್ಟರ್‌ಜಿ ಯಾರೊಡನೆಯೋ ಮಾತನಾಡುತ್ತಾ ಊಟ ಮಾಡುತ್ತಿದ್ದರು. ಅವರ ಊಟ ಮುಗಿದು ಎಲ್ಲರೂ ಸಿನಿಮಾ ಮಂದಿರಕ್ಕೆ ಬರುವ ಹೊತ್ತಿಗೆ, ಸಿನಿಮಾ ಪ್ರಾರಂಭವಾಗಿ ಚಿತ್ರಮಂದಿರ ಭರ್ತಿಯಾಗಿತ್ತು.

    ನಿರಾಸೆಗೊಂಡ ಹುಡುಗರನ್ನು ಕರೆದುಕೊಂಡು ಡಾಕ್ಟರ್‌ಜಿ ಪಕ್ಕದ ಒಂದು ಉದ್ಯಾನವನಕ್ಕೆ ಬಂದರು. ಸಿನಿಮಾಗೆಂದು ತಂದಿದ್ದ ಹಣವನ್ನು ತೆಗೆದುಕೊಂಡು ಪುರಿಕಡಲೆ ಇತ್ಯಾದಿ ಕೊಂಡು ಹುಡುಗರನ್ನೆಲ್ಲಾ ಸುತ್ತ ಕೂರಿಸಿಕೊಂಡು ಹರಟೆ ಹೊಡೆಯಲು ಪ್ರಾರಂಭಿಸಿದರು. ಮಕ್ಕಳೂಂದಿಗೆ ಮಕ್ಕಳಾಗಿ ಡಾಕ್ಟರ್‌ಜಿ ಆ ಸಂಜೆ ಪೂರ್ತಿ ಅವರೊಡನೆ ನಕ್ಕು ನಲಿದರು.

    ಆ ಆತ್ಮೀಯತೆಯೇ ಆ ಮಕ್ಕಳನ್ನು ಮತ್ತೆ ಶಾಖೆಗೆ ಕರೆತಂದಿತು. ಡಾಕ್ಟರ್‌ಜಿ ಮಕ್ಕಳ ಜೊತೆ ಈ ರೀತಿ ಬಾಂಧವ್ಯವನ್ನು ಬೆಳೆಸಿ ಅವರಿಗೆ ಸಂಘ ಕಾರ್ಯದಲ್ಲಿ ರುಚಿ ಹಚ್ಚಿಸುತ್ತಿದ್ದರು.

Labels: Doctorji, RSS Story, Sangha Story, To Cinema with Kids, ಡಾಕ್ಟರ್‌ಜಿ, ಮಕ್ಕಳ ಜೊತೆ ಸಿನಿಮಾ, ಸಂಘದ ಕಥೆ

೫೩. ಪ್ರತಿಭಟನೆಯಲ್ಲೂ ವಿನೂತನ ಶೈಲಿ

ಪ್ರತಿಭಟನೆಯಲ್ಲೂ ವಿನೂತನ ಶೈಲಿ

    ಡಾಕ್ಟರ್‌ಜಿ ತಮ್ಮ ವೈದ್ಯಕೀಯ ವಿದ್ಯಾಭ್ಯಾಸ ಪೂರೈಸಿದ ನಂತರೂ, ಅವರ ಪದವಿಗೆ ಅಂದಿನ ಬ್ರಿಟಿಷ್ ಸರಕಾರದಿಂದ ಮಾನ್ಯತ ಸಿಕ್ಕಿರಲಿಲ್ಲ. ವಿದ್ಯಾರ್ಥಿಗಳೆಲ್ಲರೂ ಸೇರಿ ಸರಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರೂ ಏನೂ ಪ್ರಯೋಜನವಾಗಲ್ಲಿಲ್ಲ. ಎಲ್ಲ ವಿದ್ಯಾರ್ಥಿಗಳೂ ಹತಾಶರಾಗಿ ಪದವಿ ಪಡೆಯುವ ಆಸೆಯನ್ನೇ ಬಿಟ್ಟಿದ್ದರು.

    ಆದರೆ ಡಾಕ್ಟರ್‌ಜಿ ಸುಮ್ಮನೆ ಕುಳಿತುಕೊಳ್ಳುವವರಲ್ಲ. ಅವರು ಪ್ರತಿದಿನ ಪತ್ರಿಕೆಗಳಿಗೆ ಪತ್ರವನ್ನು ಬರೆದು, ಸರಕಾರದ ಈ ನೀತಿಯ ವಿರುದ್ಧವಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು ಎಂದು ತಿಳಿಸುತ್ತಿದ್ದರು. ಹೀಗೆ ವರದಿಗಳು ಪ್ರತಿದಿನ ಪತ್ರಿಕೆಗಳಲ್ಲಿ ಪ್ರಕಟವಾಗುವುದನ್ನು ನೋಡಿದ ಸರಕಾರವು, ಈ ಪ್ರತಿಭಟನೆಗಳನ್ನು ಯಾರು ನಡೆಸುತ್ತಿರುವವರು, ಅದು ಎಲ್ಲಿ ನಡೆಯುತ್ತಿದೆ ಎಂದು ವಿಚಾರಿಸಲು ಕೇವಲ ಗೊಂದಲ ಉತ್ತರಗಳೇ ಸಿಗುತ್ತಿದ್ದವು.

    ನಿಜವಾಗಿ ಅಂತಹ ಯಾವುದೇ ಪ್ರತಿಭಟನೆಗಳು ನಡೆದಿರಲಿಲ್ಲ. ಡಾಕ್ಟರ್‌ಜಿ ಸರಕಾರದ ಮೇಲೆ ಒತ್ತಡ ತರಲು ಈ ಯೋಜನೆಯನ್ನು ಹಾಕಿ ಕಾರ್ಯಗತಗೊಳಿಸಿದ್ದರು. ಕೊನೆಗೆ ಸರಕಾರವು ಜನರಿಂದ ಬಂದ ಒತ್ತಡದ ಕಾರಣದಿಂದ ವಿದ್ಯಾರ್ಥಿಗಳ ವೈದ್ಯಕೀಯ ಪದವಿಗೆ ಮಾನ್ಯತೆ ನೀಡಿತು.

Labels: Doctor Degree, Doctorji, New Style of Protest, Sangha Story, ಡಾಕ್ಟರ್‌ಜೀ, ಪದವಿಗಾಗಿ ಪ್ರತಿಭಟನೆ, ಸಂಘದ ಕಥೆ

೫೨. ಅಮರ ಡಾಕ್ಟರ್ ಹೆಡಗೆವಾರ್

ಅಮರ ಡಾಕ್ಟರ್ ಹೆಡಗೆವಾರ್

    ಡಾಕ್ಟರ್‌ಜಿಯವರ ಜೀವನವೇ ಕಷ್ಟ ಮತ್ತು ತ್ಯಾಗಗಳಿಗೆ ಇನ್ನೊಂದು ಹೆಸರು. ಬಾಲ್ಯದಿಂದಲೇ ದೇಶಭಕ್ತಿಯ ವ್ರತ ಸ್ವೀಕರಿಸಿದ್ದವರು ಅವರು. ಅತ್ಯಂತ ಶ್ರದ್ಧೆಯಿಂದ ಜೀವನವಿಡೀ ಅದನ್ನು ನಡೆಸಿಯೂ ನಡೆಸಿದರು. ಸ್ಫಟಿಕದಂತಹ ಶುದ್ಧ ಚಾರಿತ್ರ್ಯ ಅವರದು.

    ಆಕಾರದಲ್ಲಿ ಭವ್ಯ, ಆಜಾನುಬಾಹು. ಮುಖದಲ್ಲಿ ಸಿಡುಬಿನ ಕಲೆ. ಶ್ಯಾಮ ವರ್ಣ. ಕಣ್ಣುಗಳಲ್ಲಿ ತುಳುಕಿ ಚಿಮ್ಮುತ್ತಿದ್ದ ಅಲೌಕಿಕ ತೇಜಸ್ಸು, ದೊಡ್ಡದಾದ ಮೀಸೆ, ಆದರೂ ತುಂಬ ಶಾಂತ ಸ್ವಭಾವ, ಸೌಮ್ಯ ನಡವಳಿಕೆ, ಮಾತುಗಳೆಂದರೆ ಪ್ರೇಮದ ಹೊಳೆ.

    ಸದಾ ಪ್ರಸನ್ನಚಿತ್ತರು ಅವರು. ಹಗಲು ರಾತ್ರಿ ಬಿಡುವಿಲ್ಲದೆ ಕ್ರಿಯಾಶಾಲಿ. ಸಂಘಕಾರ್ಯದ ಕುರಿತಾಗಿಯೇ ಸದಾ ಆಲೋಚನೆ. ಕೈಯಲ್ಲಿ ಕಾಸಿಲ್ಲ. ಸಾಧನಗಳೂ ಇಲ್ಲ. ನಿತ್ಯ ನೂರಾರು ವಿಧ ಸಂಕಟ, ತೊಂದರೆಗಳು. ಇಷ್ಟಾದರೂ ಅವರ ಪ್ರಸನ್ನತೆಗೆ ಎಂದು ಭಂಗವಿರಲಿಲ್ಲ. ತಮ್ಮ ಸುತ್ತ ಇಂತಹ ಪ್ರಸನ್ನತೆಯ ಕಂಪು ಹರಡುತ್ತಿದ್ದರು. ಭಾಷಣ, ಮಾತುಕತೆಯ ಅವರ ಶೈಲಿ ಸಹ ತೀರ ಸರಳ, ಅಹಂಕಾರದ ಲವಲೇಶವೂ ಅದರಲ್ಲಿ ಇರುತ್ತಿರಲಿಲ್ಲ. ಕೋಪವನ್ನು ನಿಯಂತ್ರಿಸಿದ್ದರು. ಲೋಭ, ಮೋಹಗಳನ್ನು ಬಾಲ್ಯದಲ್ಲಿಯೇ ದೂರಗೊಳಿಸಿದ್ದರು. ಅವರ ಉಡುಪು ಸರಳ, ಜೀವನವೂ ಸರಳ.

    ಡಾಕ್ಟರ್ ಹೆಡಗೆವಾರ್ ಅವರು ನಿಧನರಾದರೆನ್ನುವುದೇನೋ ನಿಜ. ಆದರೆ ಒಮ್ಮೊಮ್ಮೆ ಯೋಚಿಸಿದಾಗ ಅದೂ ಅಸತ್ಯವೇನೋ ಎನ್ನಿಸುತ್ತದೆ. ಅವರು ಇನ್ನೂ ಜೀವಂತ ಇದ್ದಾರೆ ಎನ್ನುವುದೇ ಹೆಚ್ಚು ಸರಿ. ಕಾರಣ ಡಾಕ್ಟರ್‌ಜಿ ಹಾಗೂ ಸಂಘ ಇವೆರಡೂ ಅಭಿನ್ನ. ಸಂಘ ಇರುವಾಗ ಡಾಕ್ಟರ್‌ಜಿ ಇಲ್ಲವಾಗುವುದು ಹೇಗೆ ಸಾಧ್ಯ? ಪ್ರತಿಯೊಂದು ಸಂಘಸ್ಥಾನದಲ್ಲಿ ಪ್ರತಿಯೊಬ್ಬ ಸ್ವಯಂಸೇವಕನ ಹೃದಯಮಂದಿರದಲ್ಲಿ ಅವರು ವಿರಾಜಿತರು.

    ನಿತ್ಯ ಶಾಖೆಗೆ ಹೋಗಬೇಕು. ಅಲ್ಲಿನ ಕಾರ್ಯಕ್ರಮಗಳಲ್ಲಿ ಒಂದಾಗಿ ಪಾಲ್ಗೊಳ್ಳಬೇಕು. ಸಂಘ ಕಾರ್ಯವನ್ನು ತನುಮನಧನಗಳಿಂದ ಅತ್ಯಂತ ಶ್ರದ್ಧೆ ವಹಿಸಿ ಮಾಡಬೇಕು. ಹಾಗಾದಾಗ ನಮ್ಮ ಹೃದಯದೊಳಗೂ ಡಾಕ್ಟರ್‌ಜಿಯವರ ಶಾಶ್ವತ ಆವಾಸ ಆಗಿಯೇ ಆಗುವುದು.

Labels: Doctorji, Doctorji Immortalised, Sangha Story, ಅಮರ ಡಾಕ್ಟರ್‌ಜಿ, ಡಾಕ್ಟರ್‌ಜಿ, ಸಂಘದ ಕಥೆ

೫೧. ಮಹಾಪ್ರಯಾಣ

ಮಹಾಪ್ರಯಾಣ

    ಡಾಕ್ಟರ್‌ಜಿಯವರ ಮಹಾನಿರ್ವಾಣದ ಸುದ್ದಿ ಎಲ್ಲೆಡೆ ಹರಡಿತು. ತಂತಿ, ದೂರವಾಣಿ ಮೂಲಕ ದೂರದೂರದವರೆಗೆ ಸುದ್ದಿ ಹೋಯಿತು. ತಂಡ ತಂಡವಾಗಿ ಜನ ಬರತೊಡಗಿದರು. ಸೈಕಲ್ಲು, ಕಾರು, ಬಸ್ಸುಗಳಲ್ಲಿ, ಸಿಕ್ಕಿದ ಯಾವುದೇ ವಾಹನದಲ್ಲಿ ಸ್ವಯಂಸೇವಕರ, ಅಭಿಮಾನಿಗಳ ಮಹಾಪೂರವೇ ನಾಗಪುರದತ್ತ ಹರಿಯತೊಡಗಿತು. ನಾಗಪುರ ನಗರ ಸಂಘಚಾಲಕ ಘಟಾಟೆಯವರ ಮನೆಯಲ್ಲಿ ಸ್ವಯಂಸೇವಕರಲ್ಲದೆ ಸಹಸ್ರಾರು ಮಂದಿ ಬಂದು ಕೂಡಿದ್ದರು. ತಮ್ಮ ಪ್ರಾಣ ಪ್ರಿಯ ನಾಯಕನ ಅಂತ್ಯದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದ ಅನೇಕರಿಗೆ ತಡೆದಷ್ಟೂ ಉಮ್ಮಳಿಸಿ ಬರುತ್ತಿದ್ದ ದುಃಖ, ಕಣ್ಣುಗಳಲ್ಲಿ ಧಾರಾಕಾರ ನೀರು. ಇನ್ನೂ ಕೆಲವರದು ಮೂಕರೋದನ ಮಾತ್ರ.

    ೧೯೪೦ ಜೂನ್ ೨೧ರ ಸಂಜೆ ೫ ಗಂಟೆಗೆ ನಾಗಪುರದಲ್ಲಿ ಡಾಕ್ಟರ್‌ಜಿಯವರ ವಿರಾಟ್ ಶವಯಾತ್ರೆ. ಸಹಸ್ರಾವಧಿ ಸ್ವಯಂಸೇವಕರು ಹಾಗೂ ನಾಗರಿಕರು ಪಾಲ್ಗೊಂಡಿದ್ದರು. ಹಿಂದೆಂದೂ ಕಂಡಿರದಷ್ಟು ಉದ್ದದ ಸಾಲು. ಎಲ್ಲವೂ ಶಾಂತ ಸಹಜ ಅನುಶಾಸನ ಬದ್ಧ.

    ಮಾರ್ಗದುದ್ದಕ್ಕೂ ಎಲ್ಲಿ ನೋಡಿದರಲ್ಲಿ ಜನಸಂದಣಿ. ಜಾತಿ, ಪಕ್ಷ, ಪಂಥಗಳ ಭೇದ ಮರೆತು ಎಲ್ಲರಿಂದ ಡಾಕ್ಟರ್‌ಜಿಯವರ ಕಳೇಬರಕ್ಕೆ ಹಾರ, ಪುಷ್ಪಗುಚ್ಛ ಸಮರ್ಪಣೆ, ಹೂವಿನ ಮಳೆ. ’ರೇಶಿಂಬಾಗ್’ ಮೈದಾನಕ್ಕೆ ೯ ಗಂಟೆಗೆ ಶವಯಾತ್ರೆ ತಲುಪಿತು.

    ರೇಶಿಂಬಾಗ್ ಅವರ ಕರ್ಮಭೂಮಿ. ಆ ಮೈದಾನವನ್ನು ತಾವೇ ಹಣ ಕೂಡಿಸಿ ಸಂಘಕ್ಕಾಗಿ ಕೊಂಡಿದ್ದರು. ಅದೆಷ್ಟು ಸಂಘ ಶಿಕ್ಷಾ ವರ್ಗಗಳು, ಉತ್ಸವಗಳು ಅಲ್ಲಿ ನಡೆದಿದ್ದವೋ? ಆ ನೆಲದ ಕಣ ಕಣವೂ ಡಾಕ್ಟರ್‌ಜಿಯವರ ನಡೆದಾಟ, ಬೆವರಿನಿಂದ ಪವಿತ್ರ. ಡಾಕ್ಟರ್‌ಜಿಯವರ ಧ್ವನಿಯಿಂದ ಅಲ್ಲಿನ ವಾತಾವರಣವೆಲ್ಲ ಅನುರಣಿತ, ಅದೇ ಪವಿತ್ರ ಸ್ಥಾನದಲ್ಲಿ ಈಗ ಡಾಕ್ಟರ್‌ಜಿಯವರ ಪಾರ್ಥಿವ ದೇಹವೂ ಅಗ್ನಿಗರ್ಪಿತವಾಯಿತು. ಧ್ಯೇಯಾಗ್ನಿಯಿಂದ ಪ್ರಜ್ವಲಿಸುತ್ತಿದ್ದ ಆ ದೇಹ ಧಗಧಗಿಸುವ ಅಗ್ನಿ ನಾರಾಯಣನಲ್ಲಿ ಒಂದಾಯಿತು. ಎಲ್ಲೆಲ್ಲೂ ದುಃಖದ ಛಾಯೆ ಆವರಿಸಿತು.

Labels: Doctorji, Last Journey, Sangha Story, ಡಾಕ್ಟರ್‌ಜಿ, ಮಹಾಪ್ರಾಯಾಣ, ಸಂಘದ ಕಥೆ

೫೦. ಉತ್ತರಾಧಿಕಾರಿ

ಉತ್ತರಾಧಿಕಾರಿ

     ಡಾಕ್ಟರ್‌ಜಿಯವರ ಕಾಯಿಲೆ ಮತ್ತಷ್ಟು ಉಲ್ಬಣಿಸಿತು. ಲಂಬರ್ ಪಂಕ್ಚರ್ ಚಿಕಿತ್ಸೆ ಮಾಡುವ ನಿರ್ಧಾರ ಕೈಗೊಂಡರು ವೈದ್ಯರು. ಇದು ಡಾಕ್ಟರ್‌ಜಿಯವರಿಗೆ ತಿಳಿಯಿತು. ಅವರು ಶ್ರೀ ಗುರೂಜಿ, ಮಾ|| ಬಾಬಾಜಿ ಪಾಧ್ಯೆ, ಬಾಳಾಸಾಹೆಬ ದೇವರಸ್, ಕೃಷ್ಣರಾವ್ ಮೊಹರೀಲ್ ಮೊದಲಾದ ಪ್ರಮುಖ ಕಾರ್ಯಕರ್ತರನ್ನು ಬಳಿ ಕರೆದರು.

    ಚಿಂತೆ ತುಂಬಿ ಮೌನ ಕವಿದ ವಾತಾವರಣ. ಎಲ್ಲರ ಕಣ್ಣುಗಳು ಡಾಕ್ಟರ್‌ಜಿಯವರ ಮೇಲೆ. ನಡು ನಡುವೆ ತಮ್ಮ ಮನದಲ್ಲಿ ಏಳುತ್ತಿದ್ದ ಭಾವನೆಗಳ ಆವೇಗವನ್ನು ಹತ್ತಿಕ್ಕುವ ವಿಫಲ ಪ್ರಯತ್ನ ಅವರೆಲ್ಲ ನಡೆಸಿದರು. ಡಾಕ್ಟರ್‌ಜಿಯವರೆ ಕೊನೆಯಲ್ಲಿ ಮೌನ ಮುರಿದರು. "ಈಗ ಲಂಬರ್ ಪಂಕ್ಚರ್ ಮಾಡುವರು. ಪ್ರಾಯಶಃ ಇದೇ ಕೊನೆಯ ಉಪಾಯ ಉಳಿದಿರಬಹುದು. ಯಶಸ್ವಿಯಾದಲ್ಲಿ ಸಂತೋಷ. ಆದರೆ ಆಗದೆ ಹೋದಲ್ಲಿ ಸಂಘ ಕಾರ್ಯದ ಪೂರ್ತಿ ಹೊಣೆ ನಿಮ್ಮ ಮೇಲೆಯೇ ಎಂದು ನೀವು ತಿಳಿಯಿರಿ" ಗುರೂಜಿಯವರಿಗೆ ಅವರು ತಿಳಿಸಿದರು.

    "ಡಾಕ್ಟರ್‌ಜಿ ಹಾಗೇಕೆ ಮಾತನಾಡುವಿರಿ? ಎಲ್ಲವೂ ಸರಿಯಾಗುವುದು" ಎಂದರು ಶ್ರೀ ಗುರೂಜಿ.

    ಡಾಕ್ಟರ್‌ಜಿ ಮುಗುಳ್ನಗುತ್ತಾ "ಮನುಷ್ಯನಾದವನು ಯಾವಾಗಲೂ ಒಳ್ಳೆಯ ಭರವಸೆ ಇಟ್ಟುಕೊಳ್ಳಬೇಕೆಂಬುದನ್ನು ನಾನೂ ಒಪ್ಪುವೆ. ಜೊತೆಗೆ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಿದ್ಧನಾಗಿಯೂ ಇರುವುದು ಅಗತ್ಯ. ಸದ್ಯ ನಾನು ಹೇಳಿದಷ್ಟು ಮಾಡಿ" ಎಂದರು.

    ಈಗ ಡಾಕ್ಟರ್‌ಜಿ ನಿಶ್ಚಿಂತರು. "ಇನ್ನು ಬೇಕಾದಲ್ಲಿ ಲಂಬರ್ ಪಂಕ್ಚರ್ ಮಾಡಿರಿ" ವೈದ್ಯರಿಗೆ ಅವರು ತಮ್ಮ ಅನುಮತಿ ತಿಳಿಸಿದರು.

    ವೈದ್ಯರು ತಮ್ಮ ತಮ್ಮಲ್ಲೇ ಮಾತನಾಡಿಕೊಂಡು, ಸಂಜೆ ಚಿಕಿತ್ಸೆ ಮಾಡಲು ನಿರ್ಧರಿಸಿದರು. ಆ ದಿನ ಡಾಕ್ಟರ್‌ಜಿಯವರಿಗೆ ಅಸಹನೀಯ ವೇದನೆ. ಮಾನಸಿಕವಾಗಿಯೂ ಅಪಾರ ನೋವಿನ ಅನುಭವ. ತಮ್ಮ ಜೀವಿತ ಕಾಲದಲ್ಲಿಯೇ ಸುಸಂಘಟಿತ ಸಮೃದ್ಧ ಹಿಂದು ರಾಷ್ಟ್ರವನ್ನು ಅವರು ಕಾಣಬಯಸಿದ್ದರು. ಆದರೆ ಆರೋಗ್ಯ ಕೆಟ್ಟು ಶರೀರವೇ ಕುಸಿಯುತ್ತಿದೆ. "ನನ್ನ ಪ್ರಿಯ ಸ್ವಯಂಸೇವಕ ಬಂಧುಗಳೇ, ನನ್ನ ಆರಾಧ್ಯ ದೇವತೆಗಳೇ, ಸಂಘ ಕಾರ್ಯ ಬೆಳೆಸಲು ಮುಂದೆ ನೀವೆಷ್ಟು ಕಷ್ಟಗಳನ್ನು ಅನುಭವಿಸಬೇಕಾಗುವುದೋ..." ಎಂಬೆಲ್ಲ ಯೋಚನೆ. ಆ ಚಿಂತೆಯೇ ಅವರ ಮನಸ್ಸನ್ನು ಕಾಡುತ್ತಿತ್ತು. ನೀರಿನಿಂದ ಹೊರತೆಗೆದ ಮೀನಿನಂತೆ ವಿಲವಿಲನೆ ಚಡಪಡಿಸುತ್ತಿದ್ದರು. ಅವರಿಗೆ ನಿದ್ರೆ ಬರುತ್ತಿರಲಿಲ್ಲ. ಆಗಾಗ್ಗೆ ಮಗ್ಗಲು ಬದಲಿಸುತ್ತಿದ್ದರು. ಒಮ್ಮೊಮ್ಮೆ ಏಳುವರು. ಪುನಃ ಕುಳಿತುಕೊಳ್ಳುವರು; ವಿಚಾರಮಗ್ಯರಾಗಿ ಅತ್ತಿಂದಿತ್ತ ಓಡಾಡುವರು. ಶ್ರೀ ಗುರೂಜಿಯವರಿಗೆ ಸಂಘ ಕಾರ್ಯದ ಹೊಣೆ ಒಪ್ಪಿಸಿದ ಮೇಲಷ್ಟೇ ಮನಸ್ಸು ತುಸು ಶಾಂತವಾಯಿತು.

    ಸಾಯಂಕಾಲ ಚಿಕಿತ್ಸೆ ನಡೆಯಿತು. ಬೆನ್ನು ಹುರಿಯಿಂದ ನೀರು ಧಾರಾಕಾರವಾಗಿ ಹರಿಯಿತು. ಅಷ್ಟಾದರು ನೋವು ಮಾತ್ರ ಕಡಿಮೆಯಾಗಲೇ ಇಲ್ಲ.

    ಮಧ್ಯರಾತ್ರಿಯ ನಂತರ ಅವರು ಪ್ರಜ್ಞಾಶೂನ್ಯರಾದರು. ಬೆಳಗಾಗುತ್ತಿದ್ದಂತೆಯೇ ಅವರ ಜ್ವರ ೧೦೬ ಡಿಗ್ರಿಗೆ ಏರಿತು. ನಾಗಪುರದ ಗಣ್ಯ ವೈದ್ಯರೆಲ್ಲಾ ಸೇರಿದರು. ಸಾಕಷ್ಟು ವಿಚಾರ ವಿನಿಮಯ ನಡೆಯಿತು. ತರ ತರದ ಚಿಕಿತ್ಸೆಗಳಾದವು. ಆದರೂ ಯಾರಿಗೂ ಏನೂ ಹೊಳೆಯದು.

    ಡಾಕ್ಟರ್‌ಜಿಯವರ ಆರೋಕ್ಯ ಹದಗೆಟ್ಟ ಸುದ್ದಿ ನಾಗಪುರದಲ್ಲೆಲ್ಲಾ ಹರಡಿತು. ಸಹಸ್ರಾರು ಸ್ವಯಂಸೇವಕರು ಸೇರಿದರು. ಎಲ್ಲರಿಗೂ ಆತಂಕ, ಉದ್ವೇಗ. ಮನದಲ್ಲಿ ಭಗವಂತನಿಗೆ ಮೊರೆ. ಆದರೆ ಕಲನೆದುರಲ್ಲಿ ಯಾರ ಇಚ್ಛೆಯೂ ನಡೆಯದು.

    ೧೯೪೦ ಜೂನ್ ೨೧ ಶುಕ್ರವಾರ ಬೆಳಿಗ್ಗೆ ೯.೨೭ಕ್ಕೆ ಡಾಕ್ಟರ್‌ಜಿ ಇಹ ಲೋಕದ ಯಾತ್ರೆ ಮುಗಿಸಿದರು. ಸಹಸ್ರಾರು ಸ್ವಯಂಸೇವಕರ ಜೀವನದ ಆದರ್ಶ ಚೇತನ ಕಣ್ಮರೆಯಾಯಿತು. ಸಹಸ್ರಾವಧಿ ಕಾರ್ಯಕರ್ತರ ಪ್ರೇರಣಾ ಸ್ಥಾನ ಇಲ್ಲವಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಲ್ಪಿ, ಆದ್ಯ ಸರಸಂಘಚಾಲಕ ಪರಮ ಪೂಜನೀಯ ಡಾಕ್ಟರ್ ಹೆಡಗೆವಾರ್‌ಜಿ ಕಾಲದೊಂದಿಗೆ ಲೀನವಾದರು.

Labels: Doctorji, Next Sarasanghachalak, Sangha Story, Sri Guruji, ಉತ್ತರಾಧಿಕಾರಿ, ಡಾಕ್ಟರ್‌ಜಿ, ಸಂಘದ ಕಥೆ

೪೯. ನಾನು ಬಂಗಾಲಕ್ಕೆ ಬರಬೇಕೆಂದಿರುವೆ

ನಾನು ಬಂಗಾಲಕ್ಕೆ ಬರಬೇಕೆಂದಿರುವೆ

    ೧೯೪೦ ಜೂನ್ ೧೯ರ ಸಾಯಂಕಾಲ. ಬಂಗಾಲದ ಓರ್ವ ವ್ಯಕ್ತಿ ಡಾಕ್ಟರ್‌ಜಿಯವರನ್ನು ಕಾಣಲು ಬಂದರು. ಮೊದಲು ಕ್ರಾಂತಿಕಾರಿಗಳಾಗಿದ್ದವರು ಅವರು. ಡಾಕ್ಟರ್‌ಜಿಯವರ ಆಪ್ತ ಮಿತ್ರ ಹಾಗೂ ಸಹಕಾರಿ. ಪರಸ್ಪರ ಕಾಣುತ್ತಲೇ ಅವರೀರ್ವರ ಕಣ್ಣುಗಳಲ್ಲಿ ಸಂತೋಷ ಮಿಂಚಿತು. ಪ್ರೀತಿಯಿಂದ ಆಲಂಗಿಸಿಕೊಂಡರು. ಡಾಕ್ಟರ್‌ಜಿ ಜೊತೆ ಅವರ ಮಾತುಕತೆ ಆರಂಭವಾಯಿತು. ಹಳೆಯ ನೆನಪುಗಳೆಲ್ಲ ಮತ್ತೆ ಹಸಿರಾದವು. "ನಾನು ವಾಸಿಯಾದ ಕೂಡಲೇ ಬಂಗಾಲಕ್ಕೆ ಬರುವೆ. ಹಳೆಯ ಗೆಳೆಯರನ್ನೆಲ್ಲ ಇನ್ನೊಮ್ಮೆ ಭೇಟಿ ಮಾಡುವೆ" ಡಾಕ್ಟರ್‌ಜಿಯವರೆಂದರು. ಮಾತು ಮುಂದುವರೆಸುತ್ತಾ "ನಮ್ಮ ದೇಶದ ಈಗಿನ ಸ್ಥಿತಿಯಲ್ಲಿ ಸಂಘ ಕಾರ್ಯ ಎಷ್ಟು ಮಹತ್ವದ್ದೆಂದು ಅವರಿಗೆ ತಿಳಿಸುವೆ. ಅವರೆಲ್ಲ ಕಾರ್ಯಕ್ಕಿಳಿದಲ್ಲಿ ನಮ್ಮ ದೇಶದ ಪರಿಸ್ಥಿತಿ ಶೀಘ್ರವೇ ಸುಧಾರಿಸಬಹುದು. ಚಿತ್ರವೇ ಬದಲಾಗಬಹುದು" ಎಂದರು.

    "ನಾಳೆ ನಾಗಪುರಕ್ಕೆ ಶ್ರೀ ಸುಭಾಷಚಂದ್ರ ಬೋಸರು ಬರುವವರಿದ್ದಾರೆ. ನಿಮ್ಮನ್ನು ಭೇಟಿ ಮಾಡುವ ಇಚ್ಛೆ ಅವರಿಗಿದೆ. ಅದನ್ನು ತಿಳಿಸಲೆಂದೇ ನಾನು ಬಂದಿರುವೆ. ಅವರು ತುಂಬ ಅಪೇಕ್ಷೆಪಟ್ಟಿದ್ದಾರೆ". ಬಂಗಾಲದಿಂದ ಬಂದ ವ್ಯಕ್ತಿ ನುಡಿದರು.

    ಅದರಂತೆ ಮರುದಿನ ಶ್ರೀ ಬೋಸರು ಶ್ರೀ ಘಟಾಟೆಯವರ ಮನೆಗೆ ಬಂದರು. ಆಗ ಡಾಕ್ಟರ್‌ಜಿ ಜ್ವರದಿಂದ ತೀರ ನಿತ್ರಾಣರಾಗಿದ್ದರು. ಕಣ್ಣುಗಳೂ ಮುಚ್ಚಿದ್ದವು. ಅರೆ ಎಚ್ಚರ ಅವರಿಗೆ. ಹಾಗಾಗಿ ಸುಭಾಷ್ ಚಂದ್ರರಿಗೆ ಅವರನ್ನು ಭೇಟಿ ಮಾಡಲು ಆಗಲಿಲ್ಲ. ಅವರಿಗೂ ಡಾಕ್ಟರ್‌ಜಿಯವರ ಸ್ಥಿತಿ ಅರ್ಥವಾಯಿತು. ಸ್ವಯಂಸೇವಕರು ಅವರನ್ನು ಎಬ್ಬಿಸಲು ಯೋಚಿಸಿದರು. ಆದರೆ ಸುಭಾಷ್‍ಚಂದ್ರರೇ ಅವರನ್ನು ತಡೆದರು. "ಬೇಡ ಈಗ ಎಬ್ಬಿಸಬೇಡಿ. ಸರಿಯಲ್ಲ ಅದು. ನಾನು ಪುನಃ ಬರುವೆ" ಎಂದರು. ಕೆಲವು ಕ್ಷಣ ಅಲ್ಲಿಯೇ ನಿಂತು, ಡಾಕ್ಟರ್‌ಜಿಯವರನ್ನು ಎವೆಯಿಕ್ಕದೇ ನೋಡಿದರು. ಕೊನೆಯಲ್ಲಿ ಮೌನವಾಗಿ ಪ್ರಣಾಮ ಸಲ್ಲಿಸಿ ಹೊರಬಂದರು.

Labels: Doctorji, Sangha Story, ಅಂತಿಮ ದಿನಗಳು, ಡಾಕ್ಟರ್‌ಜಿ, ಬಂಗಾಲದ ನಂಟು, ಸಂಘದ ಕಥೆ

೪೮. ಜೀವನ ಮರಣಗಳ ತೂಗುಯ್ಯಾಲೆ

ಜೀವನ ಮರಣಗಳ ತೂಗುಯ್ಯಾಲೆ

    ಸಂಘ ಶಿಕ್ಷಾ ವರ್ಗ ಮುಗಿಯಿತು. ಈಗ ಡಾಕ್ಟರ್‌ಜಿಯವರ ಸೇವೆಯಲ್ಲಿ ಹೆಚ್ಚಿನ ಕಾರ್ಯಕರ್ತರೆಲ್ಲ ತೊಡಗಿದರು. ವೈದ್ಯರ ಸಲಹೆಯಂತೆ ಉಪಚಾರ ಸಾಗಿತ್ತು. ಅನ್ಯ ಊರುಗಳಿಂದಲೂ ಸ್ವಯಂಸೇವಕರು ಡಾಕ್ಟರ್‌ಜಿಯವರನ್ನು ನೋಡಲು ಬರುತ್ತಿದ್ದರು. "ನಮ್ಮೂರಿಗೆ ಬನ್ನಿ, ಅಲ್ಲಿನ ವಾತಾವರಣ, ನೀರು ಚೆನ್ನಾಗಿವೆ. ಉತ್ತಮ ವೈದ್ಯರೂ ಇದ್ದಾರೆ. ಚೆನ್ನಾದ ವ್ಯವಸ್ಥೆ ಕೂಡಾ ಮಾಡುತ್ತೇವೆ. ನಿಮ್ಮ ಆರೋಗ್ಯ ನಿಶ್ಚಯವಾಗಿ ಸುಧಾರಿಸುತ್ತದೆ" ಎನ್ನುತ್ತಿದ್ದವರು ಅನೇಕ. ಆದರೆ ಡಾಕ್ಟರ್‌ಜಿ ಎಲ್ಲೂ ಹೋಗುವಂತಿರಲಿಲ್ಲ. ವಿಧಿಯ ಯೋಜನೆ ಇದ್ದುದ್ದೇ ಬೇರೆ.

    ಅವರ ಆರೋಗ್ಯ ದಿನದಿನಕ್ಕೂ ಕುಸಿಯತೊಡಗಿತು. ನಾಗಪುರದ ತಜ್ಞ ವೈದ್ಯರಿಂದ ಚಿಕಿತ್ಸೆ ಆರಂಭಗೊಂಡಿತು. ಆದರೆ ಆರೋಗ್ಯ ಒಂದಿನಿತೂ ಸುಧಾರಿಸಲಿಲ್ಲ. ೧೯೪೦ ಜೂನ್ ೧೫ ರಂದು ಅವರನ್ನು ಮೇಯೋ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಸಮಗ್ರ ತಪಾಸಣೆ ನಡೆಯಿತು. ಆದರೂ ವ್ಯಾಧಿ ಏನೆಂದು ತಿಳಿಯದು. ಬೆನ್ನು ನೋವು ಅಸಹನೀಯವಾಗಿತ್ತು, ಅವರಿಗೆ. ನಿತ್ಯ ಏರುತ್ತಿದ್ದ ಜ್ವರ, ತೀರಾ ನಿಶ್ಶಕ್ತಿ. ಮನದ ತುಂಬ ನೂರೆಂಟು ವಿಧ ಯೋಚನೆಗಳು. ಆಸ್ಪತ್ರೆಯ ವಾತಾವರಣ ಅವರಿಗೆ ಹಿತಕರ ಎನಿಸಲಿಲ್ಲ. ನಾಗಪುರ ನಗರ ಸಂಘಚಾಲಕ ಶ್ರೀ ಬಾಬಾಸಾಹೇಬ ಘಾಟಾಟೆಯವರ ಮನೆಗೆ ಅವರನ್ನು ಕರೆದೊಯ್ಯಲಾಯಿತು.

    ತಜ್ಞ ವೈದ್ಯರ ಔಷಧೋಪಚಾರ ನಡೆಯುತ್ತಿತ್ತು. ತಮ್ಮ ಸರ್ವ ಪ್ರಯತ್ನ ಸುರಿದು ಅವರು ಚಿಕಿತ್ಸೆಗೆ ತೊಡಗಿದ್ದರು. ಕಾರ್ಯಕರ್ತರೂ ತತ್ಪರತೆಯಿಂದ ಸೇವೆ ಮಾಡುತ್ತಿದ್ದರು. "ಹೇ ಭಗವಂತ, ನಮ್ಮ ಪ್ರಿಯ ನಾಯಕನನ್ನು ಬದುಕಿಸು" ಎಂದು ಅವರು ಸದಾ ಭಗವಂತನಲ್ಲಿ ಮೊರೆಯಿಡುತ್ತಿದ್ದರು. ಸಹಸ್ರಾರು ಸ್ವಯಂಸೇವಕರ ಪ್ರಾರ್ಥನೆ ಅಂತೂ ನಿತ್ಯ ನಡೆದೇ ಇತ್ತು. ಆದರೂ ಡಾಕ್ಟರ್‌ಜಿಯವರ ಆರೋಗ್ಯ ದಿನ ಕಳೆದಂತೆ ಹೆಚ್ಚೆಚ್ಚು ಆತಂಕಕಾರಿಗೊಳ್ಳುತ್ತಲೇ ಕುಸಿಯುತ್ತಿತ್ತು.

    ತಾನು ಇನ್ನು ಹೆಚ್ಚು ದಿನ ಬದುಕಲಾರೆನೆಂದು ಡಾಕ್ಟರ್‌ಜಿಯವರಿಗೂ ಅನಿಸಿತ್ತು. ಆ ದಿನಗಳಲ್ಲಿ ಸದಾ ಅವರ ಹತ್ತಿರ ಇರುತ್ತಿದ್ದವರು ಯಾದವರಾವ್ ಜೋಶಿ. ಅವರು ಭಾವನಾಶೀಲ ಯುವಕರು. ಡಾಕ್ಟರ್‌ಜಿಯವರ ಕುರಿತು ಅಪಾರ ಶ್ರದ್ಧೆ. ಒಂದು ದಿನ "ಯಾದವ, ಸಂಘದ ಹಿರಿಯ ಅಧಿಕಾರಿ ಮೃತನಾದಲ್ಲಿ ಅಂತ್ಯಯಾತ್ರೆ ಹೇಗೆ ನಡೆಸುವೆ?" ಎಂದು ಪ್ರಶ್ನಿಸಿದರು ಡಾಕ್ಟರ್‌ಜಿ.

    ಪ್ರಶ್ನೆ ಕೇಳಿ ಒಂದು ಕ್ಷಣ ತಬ್ಬಿಬ್ಬಾದರು ಯಾದವರಾವ್‍ಜಿ. ಒತ್ತಿ ಬರುತ್ತಿದ್ದ ಕಣ್ಣೀರನ್ನು ತಡೆದುಕೊಂಡು, ಆ ಪ್ರಶ್ನೆಯನ್ನೇ ಮರೆಸಲು ವಿಷಯಾಂತರ ಮಾಡುತ್ತಾ "ಈಗ ಔಷಧಿ ಕೊಡುವ ಸಮಯ ಆಗಿದೆ. ನನಗೆ ನೆನಪೇ ಇಲ್ಲ" ಎನ್ನುತ್ತಾ ಮೇಲೆದ್ದರು. ಔಷದಿ ಕುಡಿಸಿದರು. ಡಾಕ್ಟರ್‌ಜಿ ಸಹ ಮರುಮಾತಾಡದೇ ಔಷಧಿ ಕುಡಿದರು. ಡಾಕ್ಟರ್‌ಜಿ ಆ ಕಟು ವಿಷಯ ಮರೆತರೆಂದೇ ಯಾದವರಾವ್‍ಜಿ ಭಾವಿಸಿದರು.

    ಆದರೆ ಸ್ವಲ್ಪ ಸಮಯ ಮಾತ್ರ. ಪುನಃ ಡಾಕ್ಟರ್‌ಜಿ ಶಾಂತ, ಗಂಭೀರ ಸ್ವರದಲ್ಲಿ ಮಾತನಾಡತೊಡಗಿದರು. "ನಮ್ಮ ಸಂಘ ಒಂದು ಕುಟುಂಬದಂತೆ. ಇಲ್ಲಿ ಆಡಂಬರ, ಪ್ರದರ್ಶನಗಳಿಗೆ ಅವಕಾಶವಿಲ್ಲ. ಸಂಘದ ಯಾವುದೇ ಅಧಿಕಾರಿ ತೀರಿಕೊಂಡಲ್ಲಿ ಅವರ ಅಂತ್ಯಕ್ರಿಯೆ ಸರಳವಾಗಿರಬೇಕು. ಯಾವುದೇ ಆಡಂಬರವಾಗಲೀ, ಸೈನಿಕ ಪದ್ಧತಿಯಾಗಲೀ ಇರಬಾರದು."

    ಇನ್ನೊಂದು ದಿನ ಮಧ್ಯಾಹ್ನ ಯಾದವರಾವ್‍ಜಿ, ಡಾಕ್ಟರ್‌ಜಿ ಅವರಿಗಾಗಿ ಚಹ ತಂದರು. "ಎಲ್ಲರನ್ನೂ ಕರೆಯಿರಿ. ಎಲ್ಲರೊಂದಿಗೆ ನಾನು ಚಹ ಕುಡಿಯುವೆ" ಡಾಕ್ಟರ್‌ಜಿ ಎಂದರು.

    ಆದರೆ ಅನಗತ್ಯವಾಗಿ ತಡವಾಗುವುದೆಂದು ಯಾದವರಾವ್‍ಜಿ ವಿಧವಿಧವಾಗಿ ಅವರಿಗೆ ಅವಸರಪಡಿಸಿದರು. ಡಾಕ್ಟರ್‌ಜಿಯವರದು ಚಿಕ್ಕ ಮಕ್ಕಳಂತೆ ಒಂದೇ ಹಠ. ಅವರು ಚಹ ಕುಡಿಯಲು ನಿರಾಕರಿಸಿದರು. ಯಾದವರಾವ್‍ಜಿ ಏನು ಮಾಡಬೇಕೆಂಬುದೇ ತಿಳಿಯದಾಯಿತು.

    ಅದೇ ಹೊತ್ತಿಗೆ ಶ್ರೀ ಗುರೂಜಿ ಅಲ್ಲಿಗೆ ತಲುಪಿದರು. ಅವರಿಗೆ ವಿಷಯವೆಲ್ಲ ತಿಳಿಯಿತು. ಅವರು ಸ್ವಯಂಸೇವಕರನ್ನು ಕಳಿಸಿ ಪ್ರಮುಖ ಕಾರ್ಯಕರ್ತರನ್ನೆಲ್ಲ ಸೇರಿಸಿದರು. ಇನ್ನು ಹದಿನೈದಿಪ್ಪತ್ತು ಲೋಟ ಚಹವೂ ಬಂತು. ಡಾಕ್ಟರ್‌ಜಿಯವರನ್ನು ಗಾದಿಗೆ ಒರಗಿಸಿ ಕುಳ್ಳಿರಿಸಿದರು. ತುಂಬ ಪ್ರೀತಿಯಿಂದ ಡಾಕ್ಟರ್‌ಜಿ ಎಲ್ಲರೊಡನೆ ಚಹ ಕುಡಿದರು.

    ಯೇಸುಕ್ರಿಸ್ತ ತನ್ನ ಮಹಾಪ್ರಸ್ಥಾನಕ್ಕೆ ಮೊದಲು ತನ್ನೆಲ್ಲ ಶಿಷ್ಯರಿಗೆ ಪ್ರೀತಿಯಿಂದ ಊಟ ಮಾಡಿಸಿದ್ದ. ಸ್ವಾಮಿ ವಿವೇಕಾನಂದರು ಸಹ ತಮ್ಮ ಗುರು ಬಂಧುಗಳು ಹಾಗೂ ಶಿಷ್ಯರೊಡನೆ ಕೂಡಿ ಇದೇರೀತಿ ಊಟ ಮಾಡಿದ್ದರು.

Labels: Doctorji, Last Days, Sangha Story, ಅಂತಿಮ ದಿನಗಳು, ಜೀವನ ಮರಣಗಳ ತೂಗುಯ್ಯಾಲೆ, ಡಾಕ್ಟರ್‌ಜಿ, ಸಂಘದ ಕಥೆ,

೪೭. ಅಂತಿಮ ಭಾಷಣ

ಅಂತಿಮ ಭಾಷಣ

    ಹಿಂದಿನ ಎಲ್ಲ ವರ್ಷಗಳಿಗಿಂತಲೂ ಆ ವರ್ಷ ವರ್ಗದಲ್ಲಿ ಶಿಕ್ಷಾರ್ಥಿಗಳ ಸಂಖ್ಯೆ ಹೆಚ್ಚು. ಎಲ್ಲಾ ಪ್ರಾಂತಗಳೂ ಆ ವರ್ಷ ಪ್ರತಿನಿಧಿಸಲ್ಪಟ್ಟದ್ದು ಮತ್ತೊಂದು ವಿಶೇಷ. ಬೇರೆ ಬೇರೆ ಜಾತಿ, ಉದ್ಯೋಗಗಳ ವಿವಿಧ ವಯೋಮಾನಗಳ ಸ್ವಯಂಸೇವಕರು ಅಲ್ಲಿದ್ದರು. ಒಂದು ರೀತಿ ಸಮಗ್ರ ಭಾರತವೇ ಅಲ್ಲಿ ಸಂಕ್ಷಿಪ್ತ ರೂಪ ತಳೆದು ಬಂದಂತೆ ಭಾಸವಾಗುತ್ತಿತ್ತು.

    ಅಂದು ೧೯೪೦ ಜೂನ್ ೯, ವರ್ಗದ ಖಾಸಗಿ ಸಮಾರೋಪ. ಡಾಕ್ಟರ್‌ಜಿಯವರ ಇಚ್ಛೆಯನ್ನು ಗೌರವಿಸಿ ತುಂಬ ಕಾಳಜಿಯಿಂದ ಅವರನ್ನು ಸಂಘ ಶಿಕ್ಷಾ ವರ್ಗಕ್ಕೆ ಕರೆದೊಯ್ಯಲಾಯಿತು. ಸರ್ವಾಧಿಕಾರಿಗಳೊಡನೆ ಡಾಕ್ಟರ್‌ಜಿ ಬೌದ್ಧಿಕ ಮಂಟಪ ಪ್ರವೇಶಿಸಿದರು. ವೇದಿಕೆಯ ಮೇಲೆ ದಿಂಬು ಹಾಸಿದ ಖುರ್ಚಿಯಲ್ಲಿ ಡಾಕ್ಟರ್‌ಜಿ ಕುಳಿತರು. ಅವರ ಅನುಕೂಲತೆಗಾಗಿ ಅಂದು ವಿಶೇಷವಾಗಿ ಧ್ವನಿವರ್ಧಕದ ವ್ಯವಸ್ಥೆ ಮಾಡಲಾಗಿತ್ತು. ವೈಯಕ್ತಿಕ ಗೀತೆ ಹಾಡಲಾಯಿತು. ಅಮೃತವಚನ ಓದಿದರು. ನಂತರ ಡಾಕ್ಟರ್‌ಜಿ ತಮ್ಮ ಶಾಂತ ಗಂಭೀರ ಧ್ವನಿಯಲ್ಲಿ ಮಾತು ಆರಂಭಿಸಿದರು.

    "ಮಾನನೀಯ ಸರ್ವಾಧಿಕಾರಿಜೀ, ಪ್ರಾಂತಸಂಘಚಾಲಕಜೀ, ಅನ್ಯ ಅಧಿಕಾರಿ ವರ್ಗ ಹಾಗೂ ನನ್ನ ಪ್ರಿಯ ಸ್ವಯಂಸೇವಕ ಬಂಧುಗಳೇ -

    ನಾನಿಂದು ನನ್ನ ಅನಾರೋಗ್ಯದ ಕಾರಣ ನಿಮ್ಮ ಮುಂದೆ ನಾಲ್ಕಾರು ಶಬ್ದಗಳನ್ನಾದರೂ ಸರಿಯಾಗಿ ಆಡಬಲ್ಲೆನೆಂದು ನನಗನಿಸುವುದಿಲ್ಲ. ಕಳೆದ ಇಪ್ಪತ್ನಾಲ್ಕು ದಿನಗಳಿಂದಲೂ ಹಾಸಿಗೆ ಹಿಡಿದು ನಾನು ಮಲಗಿರುವುದು ನಿಮಗೆಲ್ಲ ತಿಳಿದೇ ಇದೆ. ಸಂಘದ ದೃಷ್ಟಿಯಿಂದ ಈ ವರ್ಷ ಅತ್ಯಂತ ಸೌಭಾಗ್ಯಪೂರ್ಣವಾದುದು. ಕಾರಣ, ನಾನಿಂದು ನನ್ನೆದುರಲ್ಲಿ ಹಿಂದು ರಾಷ್ಟ್ರದ ಚಿಕ್ಕ ಪ್ರತಿಮೆಯೊಂದನ್ನು ಕಾಣುತ್ತಿದ್ದೇನೆ. ನೀವೆಲ್ಲರೂ ತುಂಬ ದೂರ ದೂರದ ಸ್ಥಳಗಳಿಂದ ಇಲ್ಲಿಗೆ ಬಂದಿದ್ದೀರಿ. ಆದರೆ ನನ್ನ ಅನಾರೋಗ್ಯದ ಕಾರಣದಿಂದಾಗಿ ಇಷ್ಟು ದಿನಗಳು ನಾಗಪುರದಲ್ಲಿ ಇದ್ದರೂ ನಿಮ್ಮೆಲ್ಲರನ್ನು ಕಂಡು ಪರಿಚಯ ಮಾಡಿಕೊಳ್ಳುವ ಇಚ್ಛೆ ನನಗೆ ಪೂರೈಸಲಾಗಲಿಲ್ಲ. ಪುಣೆಯ ಅಧಿಕಾರಿ ಶಿಕ್ಷಣ ಶಿಬಿರದಲ್ಲಿ ಹದಿನೈದು ದಿನಗಳ ಕಾಲ ಇದ್ದೆ. ಅಲ್ಲಿ ಪ್ರತಿಯೊಬ್ಬ ಸ್ವಯಂಸೇವಕನ ಪರಿಚಯ ಮಾಡಿಕೊಂಡೆ. ಅದೇ ರೀತಿ ನಾಗಪುರದಲ್ಲೂ ಮಾಡಬಲ್ಲೆನೆಂದು ಆಶಿಸಿದ್ದೆ. ಆದರೆ ನಾನು ತಮ್ಮ ಸೇವೆಯನ್ನು ಕಿಂಚಿತ್ತೂ ಮಾಡಲಾರೆನಾದೆ. ನಾನಿಂದು ನಿಮ್ಮೆಲ್ಲರ ದರ್ಶನ ಮಾಡಲು ಬಂದಿರುವೆ. ಸಾಧ್ಯವೆನಿಸಿದಲ್ಲಿ ನಾಲ್ಕಾರು ಮಾತುಗಳನ್ನು ಆಡಬೇಕೆನ್ನುವುದಷ್ಟೇ ನನ್ನ ಇಚ್ಛೆ.

    ನನ್ನ ಮತ್ತು ನಿಮ್ಮೆಲರ ನಡುವೆ ಈ ಹಿಂದಿನ ಪರಿಚಯ ಸ್ವಲ್ಪವೂ ಇಲ್ಲ. ಆದರೂ ನನ್ನ ಅಂತಃಕರಣವನ್ನು ನಿಮ್ಮೆಡೆಗೂ ನಿಮ್ಮೆಲ್ಲರ ಅಂತಃಕರಣಗಳನ್ನು ನನ್ನೆಡೆಗೂ ಸೆಳೆಯುವಂತಹ ಸಂಗತಿ ಯಾವುದು? ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರಧಾರೆಯ ಪುಣ್ಯ ಪ್ರಭಾವವೇ ಅದು. ಸ್ವಯಂಸೇವಕರಲ್ಲಿ ಎಳ್ಳಷ್ಟೂ ಪರಸ್ಪರ ಪರಿಚಯ ಇರದಿದ್ದರೂ ಪ್ರಥಮ ಭೇಟಿಗೆ ಅವರಲ್ಲಿ ಪರಸ್ಪರ ಪ್ರೇಮ ನೆಲೆಸುತ್ತದೆ. ಮಾತುಕತೆ ಆಗಿರಲಿ, ಆಗದಿರಲಿ ಅವರ ಪರಸ್ಪರ ಮಿತ್ರರಾಗುತ್ತಾರೆ. ಮುಖದಲ್ಲಿನ ಮುಗುಳು ನಗೆಯಿಂದಲೇ ಒಬ್ಬರು ಇನ್ನೊಬ್ಬರನ್ನು ಗುರುತಿಸುತ್ತಾರೆ. ಕೆಲವು ದಿನಗಳ ಹಿಂದೆ ಪುಣೆಯಲ್ಲಿದ್ದಾಗ ಒಮ್ಮೆ ನಾನು ಮತ್ತು ಸಾಂಗಲಿಯ ಶ್ರೀ ಕಾಶಿನಾಥ ಪಂತ ಲಿಮಯೆ ಲಕಡೀಪುಲ್ ಮೇಲೆ ಹೋಗುತ್ತಿದ್ದೆವು. ಅದೇ ಸಮಯದಲ್ಲಿ ನಮಗೆದುರಾಗಿ ಸುಮಾರು ಎಂಟು ಹತ್ತು ವರ್ಷದ ಬಾಲಕರಿಬ್ಬರು ಬರುತ್ತಿದ್ದರು. ನಮ್ಮ ಬಳಿ ಬಂದಾಗ ಸ್ವಲ್ಪ ಮುಗುಳ್ನಕ್ಕು ಅವರು ಮುಂದೆ ಹೋದರು. ಆಗ ನಾನು ಕಾಶಿನಾಥರಾಯರಿಗೆ "ಈ ಹುಡುಗರು ಸಂಘದ ಸ್ವಯಂಸೇವಕರು" ಎಂದೆ. ಇದನ್ನು ಕೇಳಿ ಅವರು ಆಶ್ಚರ್ಯಚಕಿತರಾದರು. ಮುಂಚಿತವಾಗಿ ಯಾವ ಗುರುತು ಪರಿಚಯ ಇಲ್ಲದೆಯೇ ನಾನು ನಿಸ್ಸಂದಿಗ್ಧವಾಗಿ ಅವರಿಬ್ಬರೂ ಸ್ವಯಂಸೇವಕರೆಂದು ಹೇಗೆ ಹೇಳಿದೆ ಎಂಬುದು ಅವರಿಗೊಂದು ಒಗಟೇ ಆಯಿತು. "ಇವರು ನಮ್ಮ ಸ್ವಯಂಸೇವಕರೆಂದು ಹೇಗೆ ಹೇಳುವಿರಿ?" ಎಂದು ಅವರು ನನ್ನನ್ನು ಪ್ರಶ್ನಿಸಿದರು. ಏಕೆಂದರೆ ಅವರಿಬ್ಬರ ವೇಷಭೂಷಣಗಳಲ್ಲಿ ಸ್ವಯಂಸೇವಕತ್ವದ ಯಾವ ಬಾಹ್ಯ ಚಿಹ್ನೆಯೂ ಇರಲಿಲ್ಲ. "ನಾನು ಹೇಳುತ್ತಿರುವುದೇ ಅದಕ್ಕೆ ಸಾಕ್ಷಿ. ನೀವು ಈ ಮಾತಿನ ಸತ್ಯತೆಯನ್ನು ಬೇಕಾದರೆ ಪರೀಕ್ಷಿಸಿ" ಎಂದು ಹೇಳಿ, ಸ್ವಲ್ಪ ಮುಂದೆ ಹೋಗಿದ್ದ ಆ ಬಾಲಕರನ್ನು ಕರೆದೆ "ಹೌದು, ಎರಡು ವರ್ಷಗಳ ಹಿಂದು ತಾವು ನಮ್ಮ ಬಾಲಶಾಖೆಗೆ ಬಂದಿದ್ದಿರಿ. ನೀವು ನಮ್ಮ ಸರಸಂಘಚಾಲಕ ಡಾಕ್ಟರ್‌ ಹೆಡಗೆವಾರ್‌ಜಿ ಮತ್ತು ನಿಮ್ಮೊಡನೆ ಇರುವವರು ಸಾಂಗಲಿಯ ಶ್ರೀ ಕಾಶಿನಾಥ ಲಿಮಯೇ ಅವರು" ಎಂದರು. ಇದು ಸಂಘದ ತಪಶ್ಚರ್ಯದ ಫಲ. ಇಲ್ಲೇ ಕೆಲದಿನಗಳ ಹಿಂದೆ ಭಾಷಣ ಮಾಡಿದ ಮದ್ರಾಸಿನ ಶ್ರೀ ಸಂಜೀವ ಕಾಮತರು ಇಲ್ಲಿ ಓರ್ವ ಅಪರಿಚಿತ ವ್ಯಕ್ತಿಯಂತೆ ಬಂದರು. ನಾಲ್ಕು ದಿನಗಳ ಕಾಲ ನಮ್ಮೊಂದಿಗೆ ಇದ್ದು ಈಗ ನಮ್ಮ ಸೋದರರಾಗಿ ವಾಪಸಾಗುತ್ತಿದ್ದಾರೆ. ಇದರ ಶ್ರೇಯಸ್ಸು ಯಾವೊಬ್ಬ ವ್ಯಕ್ತಿಯದೂ ಅಲ್ಲ. ಸಂಘದ್ದೇ ಆಗಿದೆ. ನಡೆನುಡಿಗಳಲ್ಲಿ ಭಿನ್ನತೆ ಇದ್ದರೂ ಪಂಜಾಬ್, ಬಂಗಾಲ, ಮದರಾಸ್, ಮುಂಬಯಿ, ಸಿಂಧ್ ಇತ್ಯಾದಿ ಪ್ರಾಂತಗಳ ಸ್ವಯಂಸೇವಕರು ಇಷ್ಟೊಂದು ಪ್ರೀತಿಸುವಂತೆ ಹೇಗಾದರು? ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಘಟಕರಾಗಿದ್ದಾರೆಂಬುದೇ ಕಾರಣ. ನಮ್ಮ ಸಂಘದ ಪ್ರತಿಯೊಬ್ಬ ಸ್ವಯಂಸೇವಕನೂ ಇನ್ನೊಬ್ಬ ಸ್ವಯಂಸೇವಕನನ್ನು ಸೋದರಿನಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾನೆ. ಒಡಹುಟ್ಟಿದ ಸೋದರರಾದರೂ ಒಮ್ಮೊಮ್ಮೆ ಮನೆ ಮಾರುಗಳಿಗಾಗಿ ತಮ್ಮ ತಮ್ಮೊಳಗೆ ಜಗಳ ಕಾಯುವುದುಂಟು. ಆದರೆ ಸ್ವಯಂಸೇವಕರಲ್ಲಿ ಎಂದಿಗೂ ಆಗದು. ನಾನು ಇಪ್ಪತ್ತನಾಲ್ಕು ದಿನಗಳಿಂದಲೂ ಮನೆಯಲ್ಲೇ ಮಲಗಿದ್ದೆ. ಆದರೆ ನನ್ನ ಹೃದಯ ಮಾತ್ರ ಇಲ್ಲೇ ತಮ್ಮೆಲ್ಲರ ನಡುವೆಯೇ ಇತ್ತು. ನನ್ನ ದೇಹವೇನೋ ಮನೆಯಲ್ಲಿತ್ತು. ಆದರೆ ಮನಸ್ಸೆಲ್ಲಾ ತಮ್ಮೆಲ್ಲರ ಜೊತೆಯಲ್ಲೇ ಸುಳಿದಾಡುತ್ತಿತ್ತು. ನಿನ್ನೆ ಸಂಜೆಯ ಕಾರ್ಯಕ್ರಮದಲ್ಲಿ ಕಡೆಯ ಪಕ್ಷ ಐದು ನಿಮಿಷಗಳ ಮಟ್ಟಿಗಾದರೂ, ಕೇವಲ ಪ್ರಾರ್ಥನೆಗಾದರೂ, ಬರಲು ನನ್ನ ಜೀವ ಒಂದೇ ಸಮನೆ ತಳಮಳಿಸಿತು. ಆದರೆ ವೈದ್ಯರ ಕಟ್ಟಪ್ಪಣೆಯಿಂದಾಗಿ ನಾನು ಸುಮ್ಮನಿರಬೇಕಾಯಿತು.

    ಇಂದು ನೀವೆಲ್ಲರೂ ನಿಮ್ಮ ನಿಮ್ಮ ಸ್ಥಾನಗಳಿಗೆ ತೆರಳುವವರಿದ್ದೀರಿ. ನಾನು ಪ್ರೇಮಪೂರ್ವಕವಾಗಿ ನಿಮ್ಮನ್ನು ಬೀಳ್ಕೊಡುತ್ತೇನೆ. ಇದು ವಿರಹದ ಸಂದರ್ಭವಾದರೂ ದುಃಖದ್ದೇನೂ ಅಲ್ಲ. ಯಾವ ಕಾರ್ಯವನ್ನು ಬೆಳೆಸುವ ನಿಶ್ಚಯದಿಂದ ನೀವಿಲ್ಲಿಗೆ ಬಂದಿರೋ ಅದರ ಪೂರ್ತಿಗಾಗಿಯೇ ನೀವು ಈಗ ನಿಮ್ಮ ನಿಮ್ಮ ಸ್ಥಾನಗಳಿಗೆ ವಾಪಸಾಗುತ್ತಿದ್ದೀರಿ. ದೇಹದಲ್ಲಿ ಪ್ರಾಣ ಇರುವವರೆಗೂ ಸಂಘವನ್ನು ಮರೆಯೆನೆಂಬ ಪ್ರತಿಜ್ಞೆ ಮಾಡಿ. ಯಾವುದೇ ಮೋಹದಿಂದಲೂ ವಿಚಲಿತರಾಗದಿರಿ. "ಐದು ವರ್ಷಗಳ ಹಿಂದೆ ನಾನು ಸಂಘದ ಸ್ವಯಂಸೇವಕನಾಗಿದ್ದೆ" ಎಂದು ಹೇಳಿಕೊಳ್ಳುವ ಕೆಟ್ಟ ಗಳಿಗೆ ನಿಮ್ಮ ಜೀವನದಲ್ಲಿ ಎಂದೂ ಬರಗೊಡದಿರಿ. ಜೀವವಿರುವವರೆಗೂ ನಾವು ಸ್ವಯಂಸೇವಕರಾಗಿಯೇ ಇರೋಣ. ತನು, ಮನ, ಧನಗಳಿಂದ ಸಂಘ ಕಾರ್ಯ ಮಾಡುವ ನಮ್ಮ ದೃಢನಿಶ್ಚಯವನ್ನು ಅವಿರತವಾಗಿ ಜಾಗೃತವಾಗಿಡೋಣ. ನಿತ್ಯವೂ ಮಲಗುವ ಮುನ್ನ, "ಇಂದು ನಾನೆಷ್ಟು ಸಂಘ ಕಾರ್ಯ ಮಾಡಿದೆ" ಎಂದು ಚಿಂತಿಸಿರಿ. ಕೇವಲ ಸಂಘದ ಕಾರ್ಯಕ್ರಮಗಳನ್ನು ಸರಿಯಾಗಿ ನಡೆಸಿದ ಮಾತ್ರಕ್ಕೆ ಅಥವಾ ನಿತ್ಯವೂ ನಿಯಮಿತವಾಗಿ ಸಂಘಸ್ಥಾನದಲ್ಲಿ ಉಪಸ್ಥಿತರಾದ ಮಾತ್ರಕ್ಕೆ ಸಂಘಕಾರ್ಯ ಪೂರ್ಣವಾಗದು. ಅಸೇತು ಹಿಮಾಚಲ  ಹಬ್ಬಿರುವ ಈ ವಿರಾಟ ಹಿಂದು ಸಮಾಜವನ್ನು ನಾವು ಸಂಘಟಿಸಬೇಕಾಗಿದೆ. ನಿಜಕ್ಕೂ ನಮ್ಮ ಮಹತ್ವಪೂರ್ಣವಾದ ಕಾರ್ಯಕ್ಷೇತ್ರವೆಂದರೆ ಸಂಘ ಹೊರಗಿನ ಹಿಂದು ಜಗತ್ತೇ ಆಗಿದೆ.

    ಸಂಘವು ಕೇವಲ ಸ್ವಯಂಸೇವಕರಿಗಷ್ಟೇ ಅಲ್ಲ. ಅದು ಸಂಘದ ಹೊರಗಡೆ ಇರುವ ಹಿಂದು ಜನರಿಗಾಗಿಯೇ ಇದೆ. ಆ ಜನರಿಗೆ ನಾವು ರಾಷ್ಟ್ರೋದ್ಧಾರದ ಸತ್ಯಮಾರ್ಗವನ್ನು ಮನಗಾಣಿಸುವುದೇ ನಮ್ಮ ಮುಖ್ಯ ಕರ್ತವ್ಯ. ಸಂಘಟನೆಯೇ ಆ ಸತ್ಯವಾದ ಮಾರ್ಗ. ಹಿಂದು ಜನಾಂಗದ ಅಂತಿಮ ಕಲ್ಯಾಣವು ಈ ಸಂಘಟನೆಯಿಂದಾಗಿಯೇ ಸಾಧ್ಯ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಇನ್ನಾವುದೇ ಕಾರ್ಯವನ್ನು ಮಾಡಲು ಇಚ್ಛಿಸದು. ಸಂಘವು ಮುಂದೆ ಏನು ಮಾಡಲಿದೆ ಎಂಬ ಪ್ರಶ್ನೆ ಅರ್ಥವಿಲ್ಲದ್ದು. ಸಂಘ ಇದೇ ಸಂಘಟನೆಯ ಕಾರ್ಯವನ್ನು ಇನ್ನೂ ಅನೇಕ ಪಟ್ಟು ವೇಗದಿಂದ ಬೆಳೆಸುತ್ತದೆ. ಹಾಗೆಯೇ ಬೆಳೆಯುತ್ತಾ ಹೋದಾಗ ಒಂದು ದಿನ ಇಡೀ ಭಾರತವರ್ಷವು ಒಂದಾಗಿ ಎದ್ದು ನಿಂತಿರುವ ದೃಶ್ಯ ಕಾಣುವ ಸ್ವರ್ಣ ದಿನ ಅಗತ್ಯವಾಗಿ ಬಂದೀತು. ಅಂದಿಗೆ ಹಿಂದು ಜನಾಂಗದತ್ತ ವಕ್ರದೃಷ್ಟಿಯಿಂದ ನೋಡುವ ಸಾಹಸ ವಿಶ್ವದ ಯಾವ ಶಕ್ತಿಗೂ ಆಗಲಾರದು. ನಾವು ಯಾರ ಮೇಲೂ ಆಕ್ರಮಣ ನಡೆಸಲು ಹೊರಟಿಲ್ಲ. ಆದರೆ ನಮ್ಮ ಮೇಲೂ ಇನ್ನಾರ ಆಕ್ರಮಣವು ನಡೆಯಲಾಗದಂತೆ ನಾವು ಸದಾ ಸಚೇತರಾಗಬೇಕು. ನಾನು ನಿಮಗೆ ಇಂದು ಒಂದು ಹೊಸ ವಿಚಾರವನ್ನೇನೂ ಹೇಳುತ್ತಿಲ್ಲ. ನಮ್ಮ ಪ್ರತಿಯೊಬ್ಬ ಸ್ವಯಂಸೇವಕನೂ ಸಂಘ ಕಾರ್ಯವನ್ನೇ ತನ್ನ ಜೀವನದ ಪ್ರಧಾನ ಕಾರ್ಯವಾಗಿ ಭಾವಿಸಬೇಕಾಗಿದೆ. ಸಂಘ ಕಾರ್ಯವೊಂದೇ ನನ್ನ ಜೀವನದ ಕಾರ್ಯ ಎಂಬ ಮಂತ್ರವನ್ನು ನೀವು ನಿಮ್ಮ ಹೃದಯದಲ್ಲಿ ಆಳವಾಗಿ ಅಂಕಿತಗೊಳಿಸಿಕೊಂಡು ಇಲ್ಲಿಂದ ತೆರಳುವಿರೆಂಬ ದೃಢ ವಿಶ್ವಾಸದೊಂದಿಗೆ ನಾನಿಂದು ನಿಮ್ಮನ್ನು ಬೀಳ್ಕೊಡುತ್ತಿದ್ದೇನೆ".

    ಡಾಕ್ಟರ್‌ಜಿಯವರ ಆ ಚಿಕ್ಕ ಭಾಷಣ ತುಂಬ ಪ್ರಭಾವಶಾಲಿಯಾಗಿತ್ತು. ಸ್ವಯಂಸೇವಕರು ಮೈಯೆಲ್ಲಾ ಕಿವಿಯಾಗಿ ಆ ಭಾಷಣ ಕೇಳುತ್ತಿದ್ದರು. ಮಾತಿನ ಮಧ್ಯೆ ಒಂದೆರಡು ನಿಮಿಷಗಳ ಕಾಲ ಮೌನ. ಡಾಕ್ಟರ್‌ಜಿ ಬಳಲಿದ್ದರು. ಭಾವಗದ್ಗದಿತರಾಗಿದ್ದರು. ಭವಿಷ್ಯದ ಸುಂದರ ಚಿತ್ರ ಅವರ ಕಣ್ಮುಂದೆ ತೇಲಿಬರುತ್ತಿತ್ತು.

    ಡಾಕ್ಟರ್‌ಜಿ ಎರಡು ನಿಮಿಷ ಕಣ್ಮುಚ್ಚಿ ಕುಳಿತರು. ಮುಂದೆ ಕುಳಿತಿದ್ದ ಸ್ವಯಂಸೇವಕರೂ ಅದೇ ರೀತಿ ಶಾಂತ ಮೌನ. ಎಲ್ಲರೂ ಎವೆಯಿಕ್ಕದೇ ಡಾಕ್ಟರ್‌ಜಿಯವರನ್ನು ನೋಡುತ್ತಿದ್ದರು. ಉಸಿರಾಟವೂ ನಿಂತಿತೋ ಎನಿಸುವಂತಹ ಗಂಭೀರ ನೀರವತೆ, ಕೆಲವರು ರೋಮಾಂಚಿತರಾದರು. ಕೆಲವರ ಕಣ್ಣುಗಳು ತುಂಬಿ ಬಂದಿದ್ದವು. ಹೃದಯದಲ್ಲಿ ಹೊಸ ಶಕ್ತಿಯೊಂದು ಸಂಚಾರವಾದಂತೆ ಅನಿಸುತ್ತಿತ್ತು. ಕೆಲವರಿಗೆ ಆ ಎರಡು ನಿಮಿಷಗಳ ದಿವ್ಯ ಮೌನ ಮಾತಿಗೆ ನಿಲುಕದ ಒಂದು ಅಲೌಕಿಕ ಸಂದೇಶವೇ ಆಗಿತ್ತು.

    ಭಾಷಣ ಮುಗಿಯಿತು. ತಮ್ಮ ದಿವ್ಯವಾಣಿಯ ಮೂಲಕ ತಮ್ಮೊಳಗಿನ ಎಲ್ಲ ಶಕ್ತಿಯನ್ನೂ ಅವರು ಸ್ವಯಂಸೇವಕರಿಗೆ ಬಸಿದು ಹಂಚಿದಂತೆ ಅನಿಸುತ್ತಿತ್ತು. ಡಾಕ್ಟರ್‌ಜಿ ಇನ್ನಷ್ಟು ಬಳಲಿದ್ದರು. ಕಾರ್ಯಾಲಯದಲ್ಲಿ ತುಸು ಹೊತ್ತು ಮಲಗಿದ್ದು ಸುಧಾರಿಸಿದ ನಂತರ ಅವರನ್ನು ಮನೆಗೆ ಕರೆತಂದರು.

    ವರ್ಗ ಮುಗಿಯಿತು. ಸ್ವಯಂಸೇವಕರು ಡಾಕ್ಟರ್‌ಜಿಯವರ ಸಂದರ್ಶನಕ್ಕಾಗಿ ಬರತೊಡಗಿದರು. ಆದರೂ ಅದೆಂತಹ ಭೇಟಿ? ಕೇವಲ ಮುಖದರ್ಶನ ಮಾತ್ರ. ಡಾಕ್ಟರ್‌ಜಿ ಅವರಿಗೆ ತೀರ ಪ್ರಯಾಸವೆನಿಸುತ್ತಿತ್ತು. ಆದರೂ ಕೆಲವೊಮ್ಮೆ ಅವರು ಒಂದೆರಡು ಮಾತನಾಡುತ್ತಿದ್ದರು. "ಮುಂದೇನು ಮಾಡುವಿ? ಮತ್ತೆಂದು ಭೇಟಿ?" ಎಂದು ಪ್ರಶ್ನಿಸುತ್ತಿದ್ದರು. ಅಲ್ಲಲ್ಲಿನ ಪರಿಚಿತ ಕಾರ್ಯಕರ್ತರಿಗೆ ನಮಸ್ಕಾರ ತಿಳಿಸಲು ಕೆಲವರಿಗೆ ಹೇಳಿದರೆ, ಮತ್ತೆ ಕೆಲವರಿಗೆ ಕಾರ್ಯಕ್ಕಾಗಿ ಸಮರ್ಪಿಸಿಕೊಳ್ಳಲು ಚತುರತೆಯಿಂದ ಹೇಳುತ್ತಿದ್ದರು.

    ಡಾಕ್ಟರ್‌ಜಿ ಎಲ್ಲರನ್ನೂ ಅತ್ಯಂತ ಪ್ರೀತಿಯಿಂದಲೇ ಬೀಳ್ಕೊಂಡರು.

Labels: Doctorji, Last Speech, Sangha Story, ಅಂತಿಮ ಭಾಷಣ, ಡಾಕ್ಟರ್‌ಜಿ, ಸಂಘದ ಕಥೆ