Monday, March 26, 2012

೧೨. ವೈದ್ಯನಾಗುವ ನಿಶ್ಚಯ

ವೈದ್ಯನಾಗುವ ನಿಶ್ಚಯ

    ಪರೀಕ್ಷೆಯ ನಂತರ ಕೇಶವ ನಾಗಪುರಕ್ಕೆ ಬಂದ. ಈಗ ಆತ ಎಲ್ಲರಿಗೂ ಆಕರ್ಷಣೆಯ ಕೇಂದ್ರ. ಅವನ ದೃಡ ಶರೀರ, ತೇಜಃಪುಂಜವಾದ ಮುಖಮುದ್ರೆ, ದೇಶಭಕ್ತಿಭರಿತ ವಿಚಾರಗಳು ಸಹಜವಾಗಿ ಜನರನ್ನು ಅವನತ್ತ ಸೆಳೆಯುತ್ತಿದ್ದವು. ಹೋದ ಹೋದಲೆಲ್ಲಾ ದೊಡ್ಡವರೂ ಅವನನ್ನು ಗೌರವಿಸತೊಡಗಿದರು. ಅವನೀಗ ಎಲ್ಲರ ನೆಚ್ಚಿನ ಕೇಶವರಾವ್ ಆಗಿದ್ದ.

    ಕೇಶವರಾಯರದು ಕಡು ಬಡ ಮನೆತನ. ಅವರಿಗೆ ಮುಂದೆ ಓದುವ ಇಚ್ಛೆ ಬಹಳವಿತ್ತು. ಆದರೆ ಹಣದ ಅಭಾವದಿಂದ ಅದು ಈಡೇರುವ ಸಂಭವ ಇರಲಿಲ್ಲ. ನಿತ್ಯ ಊಟಕ್ಕಾಗಿಯೇ ತಹತಹಿಸುವ ಮನೆಯಲ್ಲಿ ಓದಿಗೆಲ್ಲಿ ಹಣ ಬಂದೀತು?

    ಆದರೆ ಇಚ್ಛೆ ತೀವ್ರವಾಗಿದ್ದಲ್ಲಿ ದಾರಿ ತನ್ನಿಂತಾನೇ ದೊರೆಯುತ್ತದೆ. ಮಹಾಪುರುಷರು ಮನದಿಂದಲೇ ಎಲ್ಲವನ್ನೂ ಗೆಲ್ಲುತ್ತಾರೆ. ಧ್ಯೇಯ ಹಾಗೂ ದೃಢತೆ ಇರುವ ವ್ಯಕ್ತಿ ಸಿಕ್ಕಿರುವುದನ್ನಷ್ಟೇ ತಿಂದು ತೃಪ್ತನಾಗಿ ಆನಂದದಿಂದ ತನ್ನ ಮಾರ್ಗದಲ್ಲಿ ಮುನ್ನಡೆಯಬಲ್ಲ. ಒಂದು ಮುಷ್ಟಿ ಕಡಲೆ, ಒಂದು ಲೋಟ ನೀರು ಅಷ್ಟೇ ಅವನಿಗೆ ಸಾಕು. ಆ ದಿನಗಳಲ್ಲಿ ಕೇಶವರಾಯರ ಸ್ಥಿತಿಯಂತೂ ಹೀಗೆಯೇ ಇತ್ತು.

    ನಾಗಪುರದ ಶಾಲೆಯೊಂದರಲ್ಲಿ ಅವರು ಅಧ್ಯಾಪಕರಾಗಿ ಸೇರಿದರು. ಬೇರೆ ಸಮಯದಲ್ಲಿ ಅವರು ಪಾಠ ಹೇಳುತ್ತಿದ್ದರು. ಇವರೆಡರಿಂದ ಬರುವ ಹಣ ಅವರ ಕುಟುಂಬಕ್ಕೆ ತುಸು ಆಧಾರವಾಯಿತು. ಅದರಲ್ಲೂ ಸ್ವಲ್ಪ ಭಾಗ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಉಳಿಸತೊಡಗಿದರು.

    ಹೊಟ್ಟೆಪಾಡಿಗಾಗಿ ದುಡಿಯುವುದಷ್ಟೇ ಆಗ ಅವರ ಧ್ಯೇಯವಾಗಿರಲಿಲ್ಲ. ಅವರ ಮನಸ್ಸಿನಲ್ಲಿ ತಮ್ಮ ಜೀವನಧ್ಯೇಯ ಆಕಾರ ತಳೆಯತೊಡಗಿತ್ತು. ಅವರು ದೇಶದ ಪರಿಸ್ಥಿತಿ ಕುರಿತು ಚಿಂತಿಸುತ್ತಿದ್ದರು.

    ಅವರು ವಾಸವಾಗಿದ್ದುದು ನಾಗಪುರದ ಚಿಕ್ಕ ಮನೆಯೊಂದರಲ್ಲಿ. ಅವರ ಓಡಾಟವಿದ್ದುದು ನಾಗಪುರದ ಹಳೆಯ ಇಕ್ಕಟ್ಟಾದ ಬೀದಿಗಳಲ್ಲಿ. ಆದರೂ ಅವರ ಮನಸ್ಸು ಅವನ್ನೆಲ್ಲಾ ದಾಟಿ ಮೇಲೇರತೊಡಗಿತ್ತು. ಅವರನ್ನು ಕಾಡುತ್ತಿದ್ದ ದುಃಖ ತಮ್ಮ ಮನೆಯ ಬಡತನದ್ದಲ್ಲ. ಬದಲಾಗಿ ದೇಶದ ದಾರಿದ್ರ್ಯದ್ದು. ನವತರುಣ ಕೇಶವರಾವ್ ಸ್ವತಂತ್ರ ಭಾರತದ ಕನಸುಕಾಣುತ್ತಿದ್ದರು. ಭಾರತದ ಬಿಡುಗಡೆಗೆ ಹೇಗೆ ಮಾಡುವುದೆನ್ನುವುದೇ ಸದಾ ಅವರಿಗಿದ್ದ ಚಿಂತೆ. ನಾಲ್ಕು ಗೋಡೆಗಳ ನಡುವೆ ಇದ್ದು ಕಲಿಸುವುದಲ್ಲ. ಬದಲಾಗಿ ಇಡೀ ದೇಶಕ್ಕೆ ಅವರು ಕಲಿಸಬೇಕಿತ್ತು.

    ಲೋಕಮಾನ್ಯ ತಿಲಕರ ಅನುಯಾಯಿ ಡಾ|| ಬಾಲಕೃಷ್ಣ ಶಿವರಾಮ ಮೂಂಜೆ ಅವರು ಕೇಶವರಾಯರಿಗೆ ನಾನಾ ವಿಧದ ಸಹಾಯ ನೀಡಿದರು. ಅವರಿಂದ ಮಾರ್ಗದರ್ಶನ ಸಹ ದೊರೆಯಿತು. ಆಂಗ್ಲ ವೈದ್ಯಕೀಯ ಶಿಕ್ಷಣ ಪಡೆಯಲು ನಿರ್ಧರಿಸಿದ ಕೇಶವರಾಯರು ಡಾ|| ಮೂಂಜೆ ಅವರಿಂದ ಪರಿಚಯ ಪತ್ರ ಪಡೆದು ಕೆಲವೇ ದಿನಗಳಲ್ಲಿ ಕಲ್ಕತ್ತೆಗೆ ಹೋದರು.

Sunday, March 25, 2012

೧೧. ಯವತಮಾಳದ ಶಾಲೆಯಲ್ಲಿ

ಯವತಮಾಳದ ಶಾಲೆಯಲ್ಲಿ

    ವಿದರ್ಭ ಪ್ರಾಂತದ ಯವತಮಾಳ ಆ ದಿನಗಳಲ್ಲಿ ಕ್ರಾಂತಿಕಾರಿಗಳ ಕೇಂದ್ರ. ಲೋಕನಾಯಕ ಆಣೆ (ಬಾಪೂಜಿ ಆಣೆ) ಅಲ್ಲಿಯೇ ಇದ್ದರು. ಕೇಶವ ನೇರ ಅವರ ಬಳಿ ಬಂದ. ಅವರ ಮನೆಯಲ್ಲಿಯೇ ವಾಸ. ಅಲ್ಲಿನ ರಾಷ್ಟ್ರೀಯ ವಿದ್ಯಾಲಯದಲ್ಲಿ ಶಿಕ್ಷಣ ಆರಂಭವಾಯಿತು.

    ಬಾಬಾಸಾಹೇಬ ಪರಾಂಜಪೆ ಯವತಮಾಳ ರಾಷ್ಟ್ರೀಯ ವಿದ್ಯಾಲಯದ ಸಂಚಾಲಕರು. ಅವರ ತ್ಯಾಗಮಯ ಜೀವನ ಕಂಡ ಜನರು ಅವರನ್ನು ತಪಸ್ವಿಗಳೆನ್ನುತ್ತಿದ್ದರು. ಅವರು ಹಳ್ಳಿ ಹಳ್ಳಿ, ಮನೆ ಮನೆ ತಿರುಗಿ ಚಂದಾ ಕೂಡಿಸಿ ಕಟ್ಟಿಸಿದ ಶಾಲೆ ಅದು. ಅನೇಕ ರೈತರು ಸುಗ್ಗಿಯಲ್ಲಿ ಧಾನ್ಯ ಕೊಡುತ್ತಿದ್ದರು. ರಾಷ್ಟ್ರಸೇವೆಯ ಹಂಬಲ ಹೊತ್ತ ಕೆಲ ಯುವಕರು-ವಿದ್ಯಾವಂತರು - ಅವರೊಡನೆ ಸೇರಿದರು. ಉಚಿತ ಪಾಠ ಪ್ರವಚನ ಆರಂಭಿಸಿದರು. ವಿದ್ಯಾರ್ಥಿಗಳಿಗೆ ಮಾನವತೆಯ ಪಾಠ ಸಿಗತೊಡಗಿತು. ಶೀಲ ತುಂಬಿ ಮಾನವ ಜೀವನವನ್ನು ಸಾರ್ಥಕಗೊಳಿಸುವ ಧರ್ಮವನ್ನು ಅಲ್ಲಿ ಕಲಿಸತೊಡಗಿದರು. ’ವಿದ್ಯಾಗೃಹ’ ಅದರ ಹೆಸರಾಯಿತು. ಕೇಶವ ಅಲ್ಲಿ ಸೇರಿದ.

    ಹನ್ನೊಂದರಿಂದ ಐದರವರೆಗೆ ಶಾಲೆ. ಬಾಪೂಜಿ ಆಣೆಯವರ ಮನೆಯ ಮಧ್ಯಾಹ್ನದ ಊಟ ತಡವಾಗುತ್ತಿತ್ತು. ಹೀಗಾಗಿ ಎಷ್ಟೋ ದಿನ ಕೇಶವ ಮಧ್ಯಾಹ್ನದ ಊಟವಿಲ್ಲದೇ ಶಾಲೆಗೆ ಹೋಗಬೇಕಾಗುತ್ತಿತ್ತು. ಆದರೆ ಆತ ಸದಾ ಹಸನ್ಮುಖಿ. ಅಧ್ಯಯನಕ್ಕೆ ಹಸಿವು ಎಂದೂ ಅಡ್ಡಿ ಬರಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಅಭ್ಯಾಸ ತಪ್ಪಿತ್ತು. ಅದಕ್ಕಾಗಿ ಹೆಚ್ಚು ಓದಬೇಕಿತ್ತು. ರಾತ್ರಿ ಬಹು ಹೊತ್ತು ಓದುತ್ತಿದ್ದ. ಆದರೂ ಬೆಳಿಗ್ಗೆ ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದ. ರಾಷ್ಟ್ರೀಯ ವಿಚಾರವುಳ್ಳ ಪತ್ರಿಕೆಗಳನ್ನು ತಪ್ಪದೆ ನಿತ್ಯ ಓದುತ್ತಿದ್ದ.

    ಬಾಬಾಸಾಹೇಬ ಪರಾಂಜಪೆ ಅವರ ವ್ಯಕ್ತಿತ್ವ ತುಂಬ ಉನ್ನತ. ಅವರ ಸಹವಾಸದಿಂದ ಕೇಶವನ ಹೃದಯದಲ್ಲಿ ಸದ್ಗುಣಗಳ ಸುಂದರ ಹೂವುಗಳು ಅರಳಿ ಘಮಘಮಿಸತೊಡಗಿದವು. ಅಧ್ಯಾಪಕರು ಮನಸ್ಸಿಟ್ಟು ಕಲಿಸುತ್ತಿದ್ದರು. ವಿದ್ಯಾರ್ಥಿಗಳೂ ಗಮನವಿಟ್ಟು ಕಲಿಯುತ್ತಿದ್ದರು. ಆ ವಿದ್ಯಾಲಯದ ಕೀರ್ತಿ ಎಲ್ಲೆಡೆ ಹರಡಿತು. ಹಳ್ಳಿ ಹಳ್ಳಿಗಳಿಂದ ಜನ ಅದಕ್ಕೆ ಸಹಾಯ ನೀಡಲು ಮುಂದಾದರು. ಧನ, ಧಾನ್ಯ ಇತ್ಯಾದಿ ಎಲ್ಲ ರೀತಿಯ ನೆರವು ಹರಿದುಬರತೊಡಗಿತು. ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಲಾರಂಭಿಸಿತು. ಆ ಶಾಲೆ ರಾಷ್ಟ್ರೀಯ ಜಾಗರಣದ ಕೇಂದ್ರವಾಯಿತು. ಅನೇಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಂದ ಬಿಡಿಸಿ ರಾಷ್ಟ್ರೀಯ ವಿದ್ಯಾಲಯಕ್ಕೆ ಸೇರಿಸತೊಡಗಿದರು.

    ಈ ವಿದ್ಯಾಲಯದ ಪ್ರಗತಿ ಆಂಗ್ಲ ಅಧಿಕಾರಿಗಳ ಕಣ್ಣು ಕುಕ್ಕಿತು. ಅವರ ದಮನಚಕ್ರ ಅದರತ್ತ ತಿರುಗಿತು. ಆ ಶಾಲೆಯ ಮಕ್ಕಳ ತಂದೆ ತಾಯಿಗಳನ್ನು ವಿನಾಕಾರಣ ಸತಾಯಿಸತೊಡಗಿದರು. ಬಾಬಾಸಾಹೇಬ ಪರಾಂಜಪೆಯವರಿಗೆ ಎಲ್ಲ ರೀತಿಯ ದಿಗ್ಬಂಧನ ಹಾಕಲಾಯಿತು. ಅವರು ಭಾಷಣ ಮಾಡುವುದು ಅಪರಾಧವೆನಿಸಿತು. ಬೇರೆ ಅಧ್ಯಾಪಕರನ್ನೂ ಹೆದರಿಸತೊಡಗಿದರು. ತಪಸ್ವಿ ಪರಾಂಜಪೆ ಮತ್ತು ಅವರ ಸಹಕಾರಿಗಳು ಅನೇಕ ದಿನಗಳವರೆಗೆ ಈ ರೀತಿಯ ಕಷ್ಟ ಪರಂಪರೆಗಳನ್ನು ಸಹಿಸಿದರು. ಕೊನೆಗೆ ೧೯೦೯ರಲ್ಲಿ ಆ ಶಾಲೆಯೇ ಮುಚ್ಚಲ್ಪಟ್ಟಿತು. ಆಗ ಕೇಶವ ಅನಿವಾರ್ಯವಾಗಿ ಯವತಮಾಳ ಬಿಡಬೇಕಾಯಿತು. ಆದರೆ ಆತ ಧೈರ್ಯಗೆಡಲಿಲ್ಲ. ನೇರವಾಗಿ ಪುಣೆ ತಲುಪಿದ. ಅಲ್ಲಿ ತನ್ನ ಶಿಕ್ಷಣ ಪೂರೈಸುವ ನಿಶ್ಚಯ ಮಾಡಿದ. ಎರಡು ತಿಂಗಳು ಶಂಕರಮಠ ಅವನ ತಾಣವಾಯಿತು. ಹಗಲುರಾತ್ರಿ ಎಡಬಿಡದೆ ಓದಿದ. ಪರೀಕ್ಷೆಗಾಗಿ ಅಮರಾವತಿಗೆ ಹೋದ. ಆ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಆತ ಪಾಸಾದ.

೧೦. ದಿಗಿಲೋ ದಿಗಿಲು

ದಿಗಿಲೋ ದಿಗಿಲು

    ಅಂದು ರಾಮಪಾಯಲಿಯಲ್ಲಿ ಭಾರೀ ದೊಡ್ಡ ಗಲಾಟೆ. ರಾತ್ರಿ ಒಂಭತ್ತು ಹೊಡೆದಿರಬಹುದು. ಸ್ಟೇಷನ್‍ನಲ್ಲಿ ಪೊಲೀಸರು ಯಾವುದೋ ಹರಟೆ ಕೊಚ್ಚುತ್ತಿದ್ದರು. ಇದ್ದಕ್ಕಿದ್ದಂತೆ ದೊಡ್ಡದೊಂದು ಶಬ್ದ. ಎಲ್ಲ ಬೆಚ್ಚಿದರು.

    ಪೊಲೀಸರಿಗೆ ದಿಗಿಲು. ಏನು, ಏಕೆ, ಹೇಗೆ, ಯಾವುದೂ ತಿಳಿಯದು. ಠಾಣೆಯ ಹೊರಬಾಗಿಲಿನಲ್ಲಿ ಒಂದು ರಂಧ್ರ ಬಿದ್ದಿತ್ತು. ಹತ್ತಿರದಲ್ಲೇ ಕೆಳಗೆ ಕರಟ. ತಾಮ್ರ, ಉಕ್ಕಿನ ಚೂರುಗಳು, ಸುಟ್ಟ ವಾಸನೆ ಬಡಿಯುತ್ತಿತ್ತು. ಅಕ್ಕಪಕ್ಕದ ಮನೆಮಂದಿಯೆಲ್ಲ ಭಯಭೀತರಾಗಿ ಹಣಕತೊಡಗಿದರು. ಪೊಲೀಸು ಅಧಿಕಾರಿಗಳು ಬಂದರು. ಬಿರುಸಿನ ಓಡಾಟ ಆರಂಭವಾಯಿತು.

    ಈ ಸುದ್ದಿ ಬಹು ಬೇಗನೆ ಹರಡಿತು. ಎಲ್ಲೆಡೆ ಬಹಿರಂಗ ಚರ್ಚೆ. ಗುಸುಗುಸು.

    "ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಏನು ಶಬ್ದ? ಯಾರಾದರೂ ಶಿಕಾರಿಗೆ ಬಂದಿದ್ದರೇನೆ?" ಒಬ್ಬನ ಪ್ರಶ್ನೆ.

    ನಿಂಗೊತ್ತಿಲ್ವಾ? ನಿನ್ನೆ ರಾತ್ರಿ ಯಾರೋ ಠಾಣೆಯ ಮೇಲೆ ಬಾಂಬೆಸೆದರು. ಎಷ್ಟು ಹುಡುಕಿದರೂ ಯಾರೆಂದು ತಿಳಿದಿಲ್ಲ" ಇನ್ನೊಬ್ಬನ ಉತ್ತರ.

    ’ರಾಮಪಾಯಲಿಗೆ ಯಾರಾದರೂ ಕ್ರಾಂತಿಕಾರಿ ಬಂದಿರಬಹುದೇ?’

    ’ನಿಧಾನ ಮಾತನಾಡಪ್ಪಾ, ಯಾರಾದರೂ ಕೇಳಿದರೆ ಸುಮ್ಮನೇ ಕಷ್ಟಕ್ಕೆ ಸಿಲುಕುವೆ.’

    ಎಲ್ಲರಿಗೂ ಭಯ. ಜನರಲ್ಲಿ ಪರಸ್ಪರ ಭೇಟಿ, ಮಾತುಕತೆ ಎಲ್ಲ ನಿಂತು ಹೋಯಿತು. ಕೆಲವರನ್ನು ಪೊಲೀಸರು ಹಿಡಿದರು, ಹೊಡೆದರು, ಬಡಿದರು. ಆದರೆ ಗುಟ್ಟು ಮಾತ್ರ ಬಯಲಾಗಲಿಲ್ಲ.

    ಯಾರೂ ಹೇಳದೇ ಇದ್ದರೂ ಆಬಾಜಿ ಹೆಡಗೆವಾರರಿಗೆ ಇದು ಕೇಶವನದೇ ಕೆಲಸ ಎಂದು ಖಾತ್ರಿಯಾಯಿತು. ಪೊಲೀಸರಿಗೆ ಅನುಮಾನ ಮೂಡುವುದರೊಳಗೇ ಅವನನ್ನು ನಾಗಪುರಕ್ಕೆ ವಾಪಸ್ ಕಳಿಸಿದರು. ಕೇಶವ ಸ್ವಲ್ಪ ದಿನಗಳಲ್ಲಿಯೇ ನಾಗಪುರವನ್ನೂ ಬಿಟ್ಟ. ಡಾ|| ಮೂಂಜೆಯವರ ಪರಿಚಯಪತ್ರದೊಡನೆ ಯವತಮಾಳ ಸೇರಿದ.

೯. ಅಂಧ ಕಾನೂನನ್ನು ಕಿತ್ತೆಸೆಯಿರಿ

ಅಂಧ ಕಾನೂನನ್ನು ಕಿತ್ತೆಸೆಯಿರಿ

    ಈ ಘಟನೆಯ ನಂತರ ಕೇಶವ ಕೆಲವು ದಿನ ನಾಗಪುರದಲ್ಲಿಯೇ ಇದ್ದ. ಅಕ್ಕಪಕ್ಕದವರು, ನೆಂಟರಿಷ್ಟರು ಪುನಃ ಶಾಲೆಗೆ ಹೋಗುವಂತೆ ಉಪದೇಶಿಸ ತೊಡಗಿದರು. "ಅದರಲ್ಲೇನು ಮಹಾ. ಕ್ಷಮೆ ಕೇಳು, ಶಾಲೆಗೆ ಹೋಗು" ಓರ್ವನೆಂದ.

    "ಏಕೆ? ನಾನೇನು ತಪ್ಪು ಮಾಡಿದೆನೆಂದು ಕ್ಷಮೆ ಕೇಳಲಿ?" ಕೇಶವನೆಂದ.

    "ವಂದೇ ಮಾತರಂ ಹೇಳಲಿಲ್ಲವೇ? ಬೇರೆಯವರಿಗೆ ಹೇಳಲು ಕಲಿಸಲಿಲ್ಲವೇ? ಅದು ಅಪರಾಧವಲ್ಲವೇ?"

    "ನಮ್ಮ ತಾಯಿಗೆ ವಂದಿಸುವುದೂ ಅಪರಾಧವೇ?" ಕೇಶವನ ಪ್ರಶ್ನೆ ಈಗ ಒಂದು ಕೆಂಡಮಂಡಲದಂತೆ.

    "ಹೌದು, ಕಾನೂನಿನಂತೆ ಅದು ಅಪರಾಧ’. ಕೇಶವ ಧೃಡಸ್ವರದಲ್ಲಿ ಮಾರುತ್ತರ ಕೊಟ್ಟಾ "ನಾನು ಅಂಥ ಕಾನೂನನ್ನು ಒಪ್ಪುವುದಿಲ್ಲ. ಅಂಥ ಅನ್ಯಾಯದ ಕಾನೂನುಗಳನು ಕಿತ್ತೆಸೆಯಬೇಕು ನಾವು."

    ಕೇಶವನ ತೇಜಸ್ವಿ ಶಬ್ದಗಳನ್ನು ಕೇಳಿದ ಅವರೆಲ್ಲರಿಗೆ ದಂಗುಬಡಿದಂತಾಯಿತು.

    "ಅಯ್ಯಾ, ಇಂಥ ಹುಡುಗರೊಡನೆ ಮಾತನಾಡದಿರುವುದೇ ವಾಸಿ. ನಿಮಗೂ ಬಾಯಿಗೆ ಬಂದಂತೆ ಮಾತನಾಡುವವರು ಇವರು’ ಅವರಲ್ಲಿ ಒಬ್ಬನೆಂದ.

    "ಅಯ್ಯೋ, ಈಗಿ ಹುಡುಗರು ಎಲ್ಲಿಂದಲೋ ಏನೋ ಕಲಿತು ಬಾಯಿಗೆ ಬಂದಂತೆ ಮಾತನಾಡುವರು" ಮತ್ತೊಬ್ಬ ತನ್ನ ನಿರ್ಣಯವಿತ್ತ.

    ಕೇಶವನಿಗೆ ಎಲ್ಲರಿಂದಲೂ ಇದೇ ಉಪದೇಶ. ಅವನ ಉತ್ತರ ಅಷ್ಟೇ ಸ್ಪಷ್ಟ.

    ಕೇಶವನನ್ನು ಕೆಲದಿನಗಳಿಗೆ ರಾಮಪಾಯಲಿಗೆ ಕಳಿಸಿದರು. ಅಲ್ಲಿ ಅವನ ಚಿಕ್ಕಪ್ಪನ ಸ್ನೇಹಿತರು "ಕೇಶವ, ನೀನಿನ್ನೂ ಚಿಕ್ಕವ. ಈ ವಯಸ್ಸಿನಲ್ಲಿ ಕಲಿಯುವ ಕಡೆ ಗಮನ ಕೊಡಬೇಕು. ಅದನ್ನು ಬಿಟ್ಟು ದೇಶಭಕ್ತಿಯ ಉದ್ಯೋಗವನ್ನೇಕೆ ಕೈಗೊಂಡಿರುವೆ" ಎನ್ನತೊಡಗಿದರು.

    ಕೇಶವ ಚುರುಕಾಗಿಯೇ ಉತ್ತರಿಸಿದ - "ನಿಮ್ಮಂಥವರು ಅದನ್ನು ನನಗೆ ಕಲಿಸಲಿಲ್ಲ. ನಾನೇ ಮಾಡಬೇಕಾಯಿತು. ವಿದ್ಯೆ ಕಲಿತ ಮೇಲೆ ಎಷ್ಟು ಜನ ದೇಶಹಿತ ಗಮನಿಸುವರು? ನಿಮಗೀಗ ವಯಸ್ಸಾಗಿದೆಯಲ್ಲಾ. ನೀವೇಕೆ ದೇಶಸೇವೆಯ ವ್ರತ ಕೈಗೊಂಡಿಲ್ಲ? ನೀವೇ ಈ ಕೆಲಸ ಮಾಡಿ. ಆಗ ನಾನು ಶಾಲೆಗೆ ಹೋಗಿ ಕಲಿಯುತ್ತೇನೆ."

    ಈಗ ಅವರೆಲ್ಲ ನಿರುತ್ತರ. ಈ ಹುಡುಗ ಅಸಾಮಾನ್ಯ ಎಂದು ಅವರಿಗೆ ತಿಳಿಯಿತು. ಎಷ್ಟು ಹೇಳಿದರೂ ಅವನ ಕೇಳನೆಂಬುದು ಖಾತ್ರಿಯಾಯಿತು.

Saturday, March 24, 2012

೮. ವಂದೇ ಮಾತರಂ

ವಂದೇ ಮಾತರಂ

    ದೇಶದ ತುಂಬ ತರತರದ ಅನ್ಯಾಯದ ಕಾನೂನುಗಳು. ಆಗ ಶಾಲೆಗಳಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳೂ ಸಹ ಇಂತಹ ಕಾನೂನುಗಳಿಂದ ಹೊರತುಪಟ್ಟವರಾಗಿರಲಿಲ್ಲ. ಲೋಕಮಾನ್ಯ ತಿಲಕರಂಥ ಮಹಾಪುರುಷರ ಭಾಷಣ ಕೇಳಲೂ ಸಹ ಅವರಿಗೆ ಅವಕಾಶವಿರಲಿಲ್ಲ. ದೇಶಭಕ್ತಿ ಪ್ರಸಾರ ಮಾಡುವ ಪತ್ರಿಕೆಗಳನ್ನೂ ಓದುವಂತಿರಲಿಲ್ಲ. ಇನ್ನು ಪೂರ್ತಿ ರಾಷ್ಟ್ರಗೀತೆ ಹಾಡುವುದಂತೂ ದೂರದ ಮಾತು. ’ವಂದೇ ಮಾತರಂ’ ಉಚ್ಛಾರ ಕೂಡ ಭಾರಿ ಅಪರಾಧವೆನಿಸಿತ್ತು. ಇದನ್ನೆಲ್ಲ ಮುರಿಯಹೊರಟರೆ ಬೆತ್ತದೇಟು ಅಲ್ಲದೇ ಇನ್ನೂ ಬೇರೆ ರೀತಿಯ ಶಿಕ್ಷೆಗಳೂ ಆಗುತ್ತಿದ್ದವು.

    ಆಗ ಕೇಶವನ ವಯಸ್ಸು ಕೇವಲ ೧೮ ವರ್ಷ. ಆತ ನಾಗಪುರದ ನೀಲ ಸಿಟಿ ಹೈಸ್ಕೂಲು ವಿದ್ಯಾರ್ಥಿ. ಆಂಗ್ಲ ಅಧಿಕಾರಿಗಳ ದಬ್ಬಾಳಿಕೆಯನ್ನು ಪ್ರತಿದಿನ ಕಾಣುತ್ತಿದ್ದ. ಅವನ ಹೃದಯದಲ್ಲಿ ಬಂಡಾಯದ ಬಿರುಗಾಳಿ ಏಳುತ್ತಿತ್ತು. ತನ್ನ ಗೆಳಯರೊಡನೆ ಕೂಡಿ ಯೋಜನೆಯೊಂದನ್ನು ತಯಾರಿಸಿದ. ಸದ್ದಿಲ್ಲದೇ ಎಲ್ಲ ತರಗತಿಗಳಿಗೂ ಈ ಸುದ್ದಿ ತಲುಪಿತು. "ಹೌದು, ಹಾಗೆಯೇ ಮಾಡಬೇಕು" ಎಂದು ಎಲ್ಲ ವಿದ್ಯಾರ್ಥಿಗಳೂ ನಿಶ್ಚಯಿಸಿದರು.

    ವಿದ್ಯಾಧಿಕಾರಿಗಳು ಶಾಲೆಯ ತಪಾಸಣೆಗೆ ಬರುವವರಿದ್ದರು. ಮೊದಲಿಗೇ ಕೇಶವನ ಕೊಠಡಿಗೆ ಬಂದರು. ಅವರು ಬಾಗಿಲಿನಲ್ಲಿ ಹೆಜ್ಜೆ ಇಡುತ್ತಿದ್ದಂತೆಯೆ ಎಲ್ಲ ವಿದ್ಯಾರ್ಥಿಗಳು ಎದ್ದು ನಿಂತು ಒಂದೇ ಸ್ವರದಲ್ಲಿ ಕೂಗಿದರು, "ವಂದೇ ಮಾತರಂ". ಅದನ್ನು ಅನುಸರಿಸಿ ಮತ್ತೊಂದು ಕೋಣೆಯಿಂದಲೂ ಪ್ರತಿಧ್ವನಿ ಬಂತು. "ವಂದೇ ಮಾತರಂ". ಹೀಗೆ ಎಲ್ಲ ಕೋಣೆಗಳೂ "ವಂದೇ ಮಾತರಂ" ರಣಗರ್ಜನೆಯಿಂದ ತುಂಬಿ ಹೋದವು.

    ಸ್ಕೂಲ್ ಇನ್ಸ್‍ಪೆಕ್ಟರ್ ಕ್ರೋಧದಿಂದ ಕಿಡಿಕಿಡಿಯಾದ. ’ಈ ಕಾರಸ್ಥಾನದ ಮೂಲ ಯಾರು? ಹುಡುಕಿ’ ಎಂದು ಅಬ್ಬರಿಸಿದ. ಶಾಲೆಯ ಸಂಚಾಲಕರು ಗರಬಡಿದವರಂತೆ ನಿಂತುಬಿಟ್ಟರು. ಏನು ಮಾಡಬೇಕೆಂದು ಯಾರಿಗೂ ತಿಳಿಯದು. ಬಂದ ಅಧಿಕಾರಿ ಮುಖ್ಯೋಪಾಧ್ಯಾಯರಿಗೆ ’ಈ ಕಾರಸ್ಥಾನ ಮೂಲ ಯಾರು? ಹುಡುಕಿ. ಇದನ್ನೆಂದೂ ಸಹಿಸುವುದು ಸಾಧ್ಯವಿಲ್ಲ. ಅಪರಾಧಿಗೆ ಕಠಿಣ ಶಿಕ್ಷೆ ಕೊಡಬೇಕು’ ಇನ್ನೊಮ್ಮೆ ಆಜ್ಞಾಪಿಸಿದರು. ಅವರು ಸಹ‍ಅಧ್ಯಾಪಕರಿಗೆ ಅದೇ ಆಜ್ಞೆ ಮಾಡಿದರು.

    ಕಣ್ಣುಗಳಲ್ಲಿ ಕೆಂಡ ಕಾರುತ್ತಾ ಇನ್ಸ್‍ಪೆಕ್ಟರ್ ಹಿಂದಿರುಗಿದ. ಹೆಡ್ಮಾಸ್ಟರ್ ಬೆತ್ತ ತಿರುಗಿಸುತ್ತಾ ಕೋಣೆ ಕೋಣೆ ತಿರುಗಿದರು. ಎಲ್ಲ ಉಪಾಧ್ಯಾಯರೂ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಕೇಳತೊಡಗಿದರು. "ಸತ್ಯ ಹೇಳಿ, ಈ ಘಟನೆಯ ಹಿಂದೆ ಯಾರ ಕೈವಾಡವಿದೆ?"

    ಎಲ್ಲ ರೀತಿಯ ಪ್ರಯತ್ನವಾಯಿತು. ಹೆದರಿಸಿದರು, ಪುಸಲಾಯಿಸಿದರು, ಕೂಗಾಡಿದರು, ಹೊಡೆದರು, ಬಡಿದರು, ಯಾವ ಪ್ರಯತ್ನವೂ ಫಲ ಕೊಡಲಿಲ್ಲ. ಯಾರೂ ತಮ್ಮ ನಾಯಕನಾರೆಂದು ಬಾಯಿ ಬಿಡಲಿಲ್ಲ. ಅಧ್ಯಾಪಕರೆಲ್ಲ ಹತಾಶರಾದರು. ಮುಖ್ಯೋಪಾಧ್ಯಾಯರೂ ಗುಡುಕಿದರು. ’ಎಲ್ಲ ವಿದ್ಯಾರ್ಥಿಗಳನ್ನೂ ಶಾಲೆಯಿಂದ ಹೊರಹಾಕುತ್ತೇನೆ.’ ವಿದ್ಯಾರ್ಥಿಗಳೆಲ್ಲ "ವಂದೇ ಮಾತರಂ" ಎನ್ನುತ್ತಾ ಹೊರನಡೆದರು. ಹಲವು ದಿನಗಳವರೆಗೆ ವಿದ್ಯಾರ್ಥಿಗಳು ಶಾಲೆಗೆ ಬರಲೇ ಇಲ್ಲ.

    ಆದರೆ ವಿದ್ಯಾರ್ಥಿಗಳ ಆ ನಿರ್ಧಾರ ಬಹುಕಾಲ ಉಳಿಯಲಿಲ್ಲ. ದೇಶದ ಅಂದಿನ ಪರಿಸ್ಥಿತಿಯೇ ಹಾಗಿತ್ತು. ಮಕ್ಕಳ ತಂದೆ, ತಾಯಿ, ಪೋಷಕರ ಮೇಲೆ ಒತ್ತಡ ಬರತೊಡಗಿತು. ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮಾಡಲು ಅಧಿಕಾರಿಗಳು ತಮ್ಮೆಲ್ಲ ನಿಪುಣತೆ ಪ್ರಯೋಗಿಸಿದರು. ಸುಮಾರು ಒಂದೂವರೆ ತಿಂಗಳ ನಂತರ ವಿದ್ಯಾರ್ಥಿಗಳು ಪುನಃ ಶಾಲೆಗೆ ಬರತೊಡಗಿದರು. ಆದರೆ ಕೇಶವ ಮಾತ್ರ ಮತ್ತೆ ಆ ಶಾಲೆಗೆ ಹೆಜ್ಜೆಯಿಡಲಿಲ್ಲ.

೭. ಸೀಮೋಲ್ಲಂಘನ

ಸೀಮೋಲ್ಲಂಘನ

    ಅಕ್ಟೋಬರ್ ೧೯೦೭ರ ಒಂದು ಪ್ರಸಂಗ. ಲೋಕಮಾನ್ಯ ತಿಲಕರ ಸಿಂಹವಾಣಿ ಆಗ ಎಲ್ಲೆಡೆ ಮೊಳಗುತ್ತಿತ್ತು. ಸ್ವದೇಶ ಭಕ್ತಿಯದೇ ಗಾಳಿ ಬೀಸುತ್ತಿತ್ತು. ವಿಜಯದಶಮಿ ಹಬ್ಬಕ್ಕಾಗಿ ಕೇಶವ ರ್ವಿಜಯದಶಮಿ ಹಬ್ಬಕ್ಕಾಗಿ ಕೇಶವ ರಾಮಪಾಯಲಿಗೆ ಹೋಗಿದ್ದ. ಅವನ ಚಿಕ್ಕಪ್ಪ ಶ್ರೀ ಆಬಾಜಿ ಹೆಡಗೆವಾರ ವಾಸಿಸುತ್ತಿದ್ದ ಊರು ಅದು.

    ಹೋದಲ್ಲೆಲ್ಲ ತನ್ನ ಸಮವಯಸ್ಕರ ಮೇಲೆ ಪ್ರಭಾವ ಬೀರುವುದು ಕೇಶವನ ವಿಶೇಷತೆ. ಸ್ವಲ್ಪ ಸಮಯದಲ್ಲೇ ಅವರೆಲ್ಲ ಅವನ ಗೆಳೆಯರು ಅನುಯಾಯಿಗಳಾಗಿ ಬಿಡುತ್ತಿದ್ದರು. ರಾಮಪಾಯಲಿಯಲ್ಲಿಯೂ ಹೀಗೇ ಆಯಿತು. ಅಲ್ಲಿ ಅನೇಕ ಮಿತ್ರರು ಜೊತೆಗೂಡಿದರು. ಅವರೆಲ್ಲರೊಡನೆ ಮಾತುಕತೆ ನಡೆಸಿ ದಸರಾ ಉತ್ಸವದ ಯೋಜನೆ ತಯಾರಿಸಿದ.

    ಮಹಾರಾಷ್ಟ್ರದಲ್ಲಿ ದಸರಾ ಉತ್ಸವ ವಿಶೇಷ ಉತ್ಸಾಹದಿಂದ ಆಚರಿಸುತ್ತಾರೆ. ಅಂದು ಜನರೆಲ್ಲ ಹೊಸಬಟ್ಟೆ ತೊಟ್ಟು ಗ್ರಾಮದ ಗಡಿ ದಾಟಿ ಹೋಗಿ "ಸೀಮೋಲ್ಲಂಘನ" ಮಾಡುವರು. ಅಲ್ಲಿ ಶಮೀಪೂಜೆ ಆಗುತ್ತದೆ. ರಾವಣನ ವಿಗ್ರಹದ ದಹನ ನಡೆಯುತ್ತದೆ. ಶಮೀ ಮತ್ತು ವೃಕ್ಷರಾಜದ ಎಲೆಗಳನ್ನು ಅಂದು ’ಸೋನಾ’ (ಬಂಗಾರ) ಎನ್ನುವರು. ರಾವಣನನ್ನು ಕೊಂದು ಲಂಕೆಯಿಂದ ಬಂಗಾರವನ್ನು ಲೂಟಿ ಮಾಡಿ ತಂದಿರುವರೋ ಎಂಬಷ್ಟು ಉತ್ಸಾಹದಿಂದ ಜನರೆಲ್ಲ ಊರಿನಲ್ಲಿಲ ಮನೆಮನೆಗಳಿಗೆ ಹೋಗುವರು, ಹಿರಿಯರಿಗೆ ನಮಸ್ಕರಿಸಿ, ಆ ’ಬಂಗಾರ’ ನೀದಿ, ಮಿಠಾಯಿ ತಿಂದು ಹಬ್ಬ ಆಚರಿಸುವರು.

    ರಾಮಪಾಯಲಿಯಲ್ಲೂ ಸೀಮೋಲ್ಲಂಘನಕ್ಕಾಗಿ ಜನರೆಲ್ಲ ದಸರೆಯ ದಿನ ಹೊರಟರು. ಕೇಶವ ಹಾಗೂ ಅವನ ಮಿತ್ರರೂ ಮೆರವಣಿಗೆಯಲ್ಲಿದ್ದರು. ಪದ್ದತಿಯಂತೆ ಶಮೀ ಪೂಜೆಯಾಯಿತು. ಜನರೆಲ್ಲ ರಾವಣನ ಪ್ರತಿಮೆಯತ್ತ ಹೊರಟರು. ಕೇಶವನ ಕಂಚಿನ ಕಂಠದಿಂದ "ವಂದೇ ಮಾತರಂ" ಮೊಳಗಿತು. ತಕ್ಷಣವೇ ಅವನ ಮಿತ್ರರ ನೂರಾರು ಕಂಠಗಳೂ "ವಂದೇ ಮಾತರಂ"ಗೆ ದನಿಗೂಡಿಸಿದವು. ಒಮ್ಮಿಂದೊಮ್ಮೆಗೆ ಅಲ್ಲಿನ ವಾತಾವರಣವೇ ಬದಲಾಯಿತು. ಎಲ್ಲರೂ ತಮ್ಮ ಅಂತಃಕರಣದಲ್ಲಿ ಒಂದು ಹೊಸ ಹುಮ್ಮಸ್ಸಿನ ಅನುಭವ ಪಡೆದರು. ಮುಂದೆ ಇದ್ದ ಚಿಕ್ಕ ದಿನ್ನೆಯ ಮೇಲೆ ಏರಿ ನಿಂತ ಕೇಶವ ಆವೇಶದಿಂದ ಮಾತನಾಡತೊಡಗಿದ.

    ’ನಾವಿಂದು ಅನೇಕ ರೀತಿಯ ಗಡಿಗಳೊಳಗೆ ಬಂಧಿಸಲ್ಪಟ್ಟಿದ್ದೇವೆ. ಅವನ್ನೆಲ್ಲ ದಾಟಿ ಹೋಗುವುದು ನಮ್ಮ ಕರ್ತವ್ಯವಾಗಿದೆ. ಪಾರತಂತ್ರ್ಯ, ಹೇಡಿತನ, ಅಜ್ಞಾನ ಹಾಗೂ ಸ್ವಾರ್ಥ ಇತ್ಯಾದಿ ನಮ್ಮನ್ನು ಮುತ್ತಿವೆ. ನಾವದನ್ನು ತೊಡೆಯಬೇಕಾಗಿದೆ. ರಾವಣ ಅನ್ಯಾಯ, ದಬ್ಬಾಳಿಕೆ, ಕ್ರೂರ ಸಾಮ್ರಾಜ್ಯವಾದ ಹಾಗೂ ಕುಟಿಲ ರಾಜಕಾರಣಿಗಳ ಪ್ರತಿನಿಧಿ. ಅವನನ್ನು ನಾವಿಂದು ಸುಡಬೇಕಾಗಿದೆ. ಇದು ಪವಿತ್ರವಾದ ದೇಶಕಾರ್ಯ, ದೇವ ಕಾರ್ಯ. ಎಲ್ಲರು ಒಂದಾಗಿ ಹೇಳಿ "ವಂದೇ ಮಾತರಂ" "ಭಾರತ ಮಾತಾಕೀ ಜಯ್."
    ಜನರೆಲ್ಲ ಆವೇಶಭರಿತರಾದರು. ಕೇಶವ ಮತ್ತು ಅವನ ಅನುಯಾಯಿಗಳು ರಾವಣನನ್ನು ತುಂಡರಿಸಿ ಬೆಂಕಿ ಹಚ್ಚಿದರು. ಬೆಂಕಿ ಧಗಧಗಿಸಿತು.

    ಪ್ರಭು ಶ್ರೀರಾಮಚಂದ್ರ ಹಾಗೂ ಭಾರತಮಾತೆಯ ಜಯ ಜಯಕಾರ ಮಾಡುತ್ತ ಜನರೆಲ್ಲ ಮನೆಗೆ ತೆರಳಿದರು.

    ಆ ವರ್ಷ ರಾಮಪಾಲಿಯ ಜನರಿಗೆ ಸಿಕ್ಕಿದ್ದು ಕೇವಲ ಮರೆದೆಲೆಗಳ ಬಂಗಾರವಲ್ಲ. ಬದಲಾಗಿ ಹೊಸ ವಿಚಾರಗಳ ಬಂಗಾರ. ಅಲ್ಲಿಯ ಜನ ನಿಜಕ್ಕೂ ಆ ವರ್ಷ ಸೀಮೋಲ್ಲಂಘನ ಮಾಡಿದ್ದರು.

೬. ಆಂಗ್ಲರ ಆಡಳಿತ ವೈಖರಿ

ಆಂಗ್ಲರ ಆಡಳಿತ ವೈಖರಿ

    ಒಡಕು ಹುಟ್ಟಿಸುವುದೇ ಆಂಗ್ಲರ ನೀತಿ. ಪರಸ್ಪರ ಜಗಳ ಹುಟ್ಟಿಸಿ ತಾವು ಲಾಭ ಪಡೆಯುವುದು ಅವರ ರೀತಿ. ಈ ಕೆಟ್ಟ ಗುರಿ ಇರಿಸಿಕೊಂಡೇ ೧೯೦೫ರಲ್ಲಿ ಅವರು ಬಂಗಾಲ ಪ್ರಾಂತವನ್ನು ಎರಡಾಗಿ ಒಡೆಯುವ ನಿಶ್ಚಯ ಮಾಡಿದರು. ಇದರ ವಿರುದ್ಧ ಬಂಗಾಲದ ನಾಯಕರು ಜನಸಾಧಾರಣರನ್ನು ಬಡಿದೆಬ್ಬಿಸಿದರು. ಜನರೆಲ್ಲ ರೊಚ್ಚಿಗೆದ್ದರು. ಸಭೆ, ಮೆರವಣಿಗೆಗಳು ನಡೆಯತೊಡಗಿದವು. ’ಬಂಗಾಲ ತುಂಡರಿಸಲು ಬಿಡೆವು’ ಎಂಬ ಘೋಷಣೆ ಮುಗಿಲು ಮುಟ್ಟಿತು. ಬಂಕಿಮಚಂದ್ರರ ವಂದೇ ಮಾತರಂ ಹಾಡು ರಾಷ್ಟ್ರಗೀತೆಯಾಯಿತು. ಆ ರಣಮಂತ್ರದ ಉಚ್ಛಾರ ಮಾತ್ರದಿಂದ ಎಲ್ಲೆಡೆ ನವಚೈತನ್ಯ ಸಂಚರಿಸತೊಡಗಿತು.

    ಈ ಆಂದೋಲನ ಕೇವಲ ಬಂಗಾಲದ್ದಾಗಿ ಉಳಿಯಲಿಲ್ಲ. ಭಾರತದ ಮೂಲೆ ಮೂಲೆಗಳಲ್ಲಿ ’ವಂದೇ ಮಾತರಂ’ ಪ್ರತಿಧ್ವನಿಸಿತು. ’ಬಂಗಾಲ ತುಂಡರಿಸಲು ಬಿಡೆವು. ಇದು ಕೇವಲ ಬಂಗಾಲದ ಪ್ರಶ್ನೆಯಲ್ಲ. ಇಡೀ ದೇಶದ್ದು. ’ವಂದೇ ಮಾತರಂ’, ’ಭಾರತ ಮಾತಾಕೀ ಜಯ್’ ಎಂದು ಜನರ ಧ್ವನಿ ಗುಡುಗತೊಡಗಿತು.

    ಘೋಷಣೆ ಕೇಳಿ ಆಂಗ್ಲ ಅಧಿಕಾರಿಗಳು ಹೌಹಾರಿದರು. ಆಂದೋಲನ ಬಗ್ಗು ಬಡಿಯಲು ದಮನ ಮಾರ್ಗ ಹಿಡಿದರು. "ಭಾರತ ಮಾತಾಕೀ ಜಯ್" - "ವಂದೇ ಮಾತರಂ" ಎಂದವರಿಗೆ ಕಠಿಣ ಶಿಕ್ಷೆ ಎಂಬ ಆದೇಶ ಹೊರಡಿಸಿದರು.

    ಆದರೆ ದೇಶಭಕ್ತಿಯ ಹೆದ್ದೆರೆಯನ್ನು ಅವರಿಂದ ತಡೆಯಲಾಗಲಿಲ್ಲ. ದೂರ ದೂರದ ಗ್ರಾಮಗಳನ್ನೂ ಅದು ತಲುಪಿತು. ಭಾವನಾಶೀಲ ಕೇಶವ ಇದರಿಂದ ಪ್ರಭಾವಿತನಾದ.

೫. ಕೋಟೆ ಗೆಲ್ಲುವ ಇಚ್ಛೆ

ಕೋಟೆ ಗೆಲ್ಲುವ ಇಚ್ಛೆ

    ಛತ್ರಪತಿ ಶಿವಾಜಿ ಮಹಾರಾಜರ ಕಥೆ ಕೇಳಿದಾಗಲೆಲ್ಲ ಕೇಶವ ಅವರ ಸೈನಿಕರಲ್ಲಿಯೇ ಒಬ್ಬನಾಗುತ್ತಿದ್ದ. ಕುದುರೆಯೇರಿ ವೇಗವಾಗಿ ಹೋಗುತ್ತಿದ್ದ. ಆಗಾಗ ಯಾವುದೋ ಗಡವನ್ನು ಆಕ್ರಮಿಸುತ್ತಿದ್ದ. ರಹಸ್ಯ ಮಾರ್ಗದಲ್ಲಿ ಹೋಗಿ ಕೋಟೆ ಗೆಲ್ಲುತ್ತಿದ್ದ. ಹೀಗೆಲ್ಲ ಮನದಲ್ಲೆ ಯೋಚಿಸುತ್ತಿದ್ದ ಅವನಿಗೆ ತಾನೂ ಪ್ರತ್ಯಕ್ಷ ಅಂಥದೇ ಪ್ರಯತ್ನ ಮಾಡಬೇಕೆನಿಸುತ್ತಿತ್ತು.

    ನಾಗಪುರದ ಮಧ್ಯದಲ್ಲಿ ಒಂದು ಚಿಕ್ಕ ಕೋಟೆ. ಅದೇ ’ಸೀತಾಬರ್ಡಿ.’ ಆಗ ಆ ಕೋಟೆಯ ಮೇಲೆ ಹಾರುತ್ತಿದ್ದುದು ಆಂಗ್ಲರ ಯೂನಿಯನ್ ಜಾಕ್. ಅದನ್ನು ನೋದಿ ಕೇಶವನಿಗೆ ತಡೆಯಲಾರದಷ್ಟು ನೋವು. ’ಈ ಧ್ವಜವನ್ನು ಹೇಗಾದರೂ ಮಾಡಿ ತೆಗೆದೆಸೆದು ಅಲ್ಲಿ ಭಗವಾ ಹಾರಾಡಿಸಬೇಕು. ಕೋಟೆ ಗೆಲ್ಲಬೇಕು’ ಎಂದು ತನ್ನ ಗೆಳೆಯರ ಬಳಿ ಹೇಳುತ್ತಿದ್ದ.

    ’ನಾವು ಕೋಟೆಯೊಳಗೆ ಹೋದರೆ ಅಲ್ಲಿರುವ ಆಂಗ್ಲರನು ಸೋಲಿಸಿ ಕೋಟೆ ಗೆಲ್ಲಬಹುದು’ ಒಬ್ಬನೆಂದ.

    ’ಆದರೆ ನಾವು ಅಲ್ಲಿ ಹೋಗುವುದಾದರೂ ಹೇಗೆ’ ಮತ್ತೊಬ್ಬನ ಪ್ರಶ್ನೆ.

    ಮೂರನೆಯವ ಉಪಾಯ ಸೂಚಿಸಿದ. ’ನಾವೇಕೆ ಸುರಂಗ ತೋಡಬಾರದು? ಒಳಗೊಳಗೇ ಹೋಗಿ ಕೋಟೆ ಸೇರಲು ದಾರಿಯಾಗುತ್ತದಲ್ಲ?’

    ’ನಡೆಯಿರಿ, ನಾವೀಗಲೇ ಕೆಲಸ ಆರಂಭಿಸೋಣ. ಒಳ್ಳೆಯ ಕೆಲಸಕ್ಕೆ ತಡವಾಗಬಾರದು.’

    ಈ ಹುಡುಗರು ಆಟವಾಡುತ್ತಿದ್ದುದು ವಝೆಮಾಸ್ತರ ಮನೆ ಸಮೀಪ. ಅದರ ಆವಾರ ವಿಶಾಲವಾಗಿತ್ತು. ಸುತ್ತ ಎತ್ತರದ ಗೋಡೆಗಳು. ಮನೆಯವರೆಲ್ಲ ಪಕ್ಕದೂರಿಗೆ ಹೋಗಿದ್ದರು. ಮಾಸ್ತರರು ಶಾಲೆಗೆ ಹೋದಾಗ ಬೇರಾರೂ ಅಲ್ಲಿರುತ್ತಿರಲಿಲ್ಲ.

    ಅದೇ ಜಾಗ ತಮ್ಮ ಕೆಲಸಕ್ಕೆ ಸರಿಯಾದುದೆಂದು ಈ ಹುಡುಗರು ಆರಿಸಿದರು. ತಂತಮ್ಮ ಮನೆಗಳಿಂದ ಅಗೆಯುವ ಸಲಕರಣೆ ತಂದರು. ಗುದ್ದಲಿ, ಪಿಕಾಸಿ, ಹಾರೆಗೋಲು ಇತ್ಯಾದಿ.

    ಬಾಲಕರ ಕೆಲಸ ಸದ್ದಿಲ್ಲದೇ ಸಾಗಿತು. ವಝೆ ಮಾಸ್ತರರ ಮನೆಯಂಗಳದಲ್ಲಿ ದೊಡ್ಡದೊಂದು ಹೊಂಡು ನಿರ್ಮಾಣವಾಯಿತು. ಸಂಜೆ ಮನೆಗೆ ಬಂದ ಮಾಸ್ತರರಿಗೆ ಈ ಹುಡುಗರ ಸಾಹಸ ನೋಡಿ ಭಾರೀ ಅಚ್ಚರಿ. ಆವರು ಒಬ್ಬಿಬ್ಬರನ್ನು ಪ್ರತ್ಯೇಕ ಕರೆದು ಇದೇನೆಂದು ವಿಚಾರಿಸಿದರು. ಆ ಹುಡುಗರು ಸರಳವಾಗಿ ತಮ್ಮ ಯೋಜನೆ ವಿವರಿಸಿದರು. ಆ ಚಿಕ್ಕ ಬಾಲಕರ ಮುಗ್ಧ ಕಲ್ಪನೆ ಕೇಳಿ ಅವರಿಗೆ ತಡೆಯಲಾರದಷ್ಟು ನಗು. ಜೊತೆಗೆ ಅವರ ಉಜ್ವಲ ಯೋಜನೆ ನೋಡಿ ಸಂತೋಷವೂ  ಸಹ. ಎಲ್ಲ ಹುಡುಗರನ್ನೂ ಕರೆದು ಹತ್ತಿರ ಕೂರಿಸಿ ಮೈದಡವಿದರು. ಸರಿಯಾಗಿ ತಿಳಿ ಹೇಳಿದರು. ಕೇಶವನೇ ಆ ತಂಡದ ನಾಯಕನೆಂದು ಅವರಿಗೆ ತಿಳಿಯಿತು. ವಿಶೇಷವಾಗಿ ಅವನನ್ನು ಸಮಾಧಾನಪಡಿಸಿದರು. ’ನೀನು ಮುಂದೆ ಒಳ್ಳೆಯ ದೇಶಸೇವೆ ಮಾಡುವೆ’ ಎಂದು ಹರಸಿದರು.

೪. ಆ ಮಿಠಾಯಿ ತಿನ್ನುವುದು ಪಾಪ

ಆ ಮಿಠಾಯಿ ತಿನ್ನುವುದು ಪಾಪ

    ಸಿಹಿ ಎಂದರೆ ಮಕ್ಕಳಿಗೆ ಬಲು ಇಷ್ಟ. ಅನೇಕ ಹುಡುಗರು ಮಿಠಾಯಿಗಾಗಿ ಅತ್ತು, ಹಠ ಹಿಡಿಯುವರು. ಆದರೆ ಅಂದು ತನಗೆ ಸಿಕ್ಕಿದ ಮಿಠಾಯಿಯನ್ನು ಕೇಶವ ಚರಂಡಿಗೆ ಎಸೆದುದೇ ಒಂದು ಆಶ್ಚರ್ಯ.

    ಆಗ ನಮ್ಮ ದೇಶವನ್ನು ಆಳುತಿದ್ದವರು ಆಂಗ್ಲರು. ವಿಕ್ಟೋರಿಯಾ ಅವರ ರಾಣಿ. ಆಕೆಯ ಆಡಳಿತದ ಅರವತ್ತನೆಯ ವರ್ಷ ಬಹಳ ವಿಜೃಂಬಣೆಯಿಂದ ಅವರು ಆಚರಿಸುತ್ತಿದ್ದರು. ಹಿಂದುಸ್ಥಾನದಲ್ಲಿಯೂ ಸಹ  ಬಹಳ ವೈಭವದಿಂದ ಈ ಉತ್ಸವ ನಡೆಸುತ್ತಿದ್ದರು. ಎಲ್ಲೆಡೆ ಸಭೆ, ಸಮಾರಂಭ, ಔತಣ ಕೂಟಗಳು, ಬೀದಿ ಬೀದಿಗಳಲ್ಲಿ ತಳಿರು ತೋರಣಗಳ ಸಿಂಗಾರ, ರಾಣಿಯ ಭಾವಚಿತ್ರದ ಮೆರವಣಿಗೆ, ಶಾಲೆಗಳಲ್ಲೂ ಹುಡುಗರಿಗೆ ಸಿಹಿ ಹಂಚಲಾಯಿತು. ಕೇಶವನ ಶಾಲೆಯಲ್ಲಿಯೂ ಮಿಠಾಯಿ ಹಂಚಿದರು. ಎಳೆಯ ಕೇಶವನಿಗೂ ಸಿಕ್ಕಿತು. ಅದನ್ನು ಮುಟ್ಟುತ್ತಿದ್ದಂತೆಯೇ ಅವನಿಗೆ ಚೇಳು ಕುಟುಕಿದ ಅನುಭವ. ಅವನ ಎಳೆ ಮಿದುಳಿನಲ್ಲಿ ಭಾವನೆಗಳ ತಾಕಲಾಟ.

    ’ಆಂಗ್ಲರು ನಮ್ಮ ದೇಶವದರಲ್ಲ. ಧರ್ಮದವರಲ್ಲ. ಎಷ್ಟೋ ದೂರದಿಂದ ಬಂದವರು. ನಮ್ಮ ಮೇಲೆ ಆಡಳಿತ ನಡೆಸುತ್ತಿದ್ದಾರೆ. ನಮ್ಮನ್ನವರು ಗುಲಾಮರನ್ನಾಗಿಸಿದ್ದಾರೆ. ನಮ್ಮ ಶತ್ರುಗಳವರು. ಅವರ ರಾಣಿ ರಾಜ್ಯವಾಳುತ್ತಾ ಅರವತ್ತು ವರ್ಷವಾದರೆ ನಾವೇಕೆ ಉತ್ಸವ ಮಾಡಬೇಕು? ಮಿಠಾಯಿ ಏಕೆ ತಿನ್ನಬೇಕು? ಛಿಃ ಛಿಃ ಈ ಮಿಠಾಯಿ ತಿನ್ನುವುದೆಂದರೆ ಅವರ ದಾಸ್ಯ ಒಪ್ಪಿಕೊಂಡಂತೆ. ಅವರ ಗುಲಾಮತನದಲ್ಲಿಯೇ ಸಂತೋಷ ಕಂಡಂತೆ. ಈ ಸಿಹಿ ತಿನ್ನುವುದು ಪಾಪ. ಹಾಗೆ ಮಾಡುವುದು ನಮ್ಮ ದೇಶಕ್ಕೆ ದ್ರೋಹ ಬಗೆದಂತೆ. ಇಲ್ಲ, ನಾನೆಂದೂ ಅದನ್ನು ತಿನ್ನುವುದಿಲ್ಲ’

    ಭಾವನೆಗಳೆದ್ದು ಕೇಶವ ಉದ್ವಿಗ್ನನಾದ. ಕೈಯಲ್ಲಿದ್ದ ಮಿಠಾಯಿಯನ್ನು ಚರಂಡಿಗೆಸೆದ. ಜೊತೆಯವರಿಗೂ ತನ್ನ ವಿಚಾರ ತಿಳಿಸಿದ. ಆದರೆ ಅವರಿಗೆ ಅವನ ಮಾತಿನ ಅರ್ಥ ತಿಳಿಯಲಿಲ್ಲ.

    ಕೇಶವ ಮನೆಗೆ ಬಂದ. ಮುಖ ಉಗ್ರವಾಗಿತ್ತು. ’ಯಾಕೋ ಕೇಶವಾ ಸಿಟ್ಟಾಗಿದ್ದೀಯಾ? ಶಾಲೆಯಲ್ಲಿ ಮಿಠಾಯಿ ಹಂಚಿದರೆಂದು ಕೇಳಿದೆ. ನಿನಗೆ ಸಿಗಲಿಲ್ಲವೇ?’ ದೊಡ್ಡಣ್ಣ ಕೇಳಿದರು.

    ’ಸಿಗದೇ ಏನು? ನಾನದನ್ನು ಚರಂಡಿಗೆಸೆದೆ’ ಕೇಶವನೆಂದ.

    ಪಕ್ಕದಲ್ಲಿದ್ದ ನೆಂಟನೊಬ್ಬ ಕೇಳಿದ ’ಇದೇನು ಮಾತು? ಮಿಠಾಯಿಯನ್ನು ಎಲ್ಲಾದರೂ ಚರಂಡಿಗೆಸೆಯುವರೇ?’

    ಕೇಶವ ಚುಟುಮ್ಮನೆ ಉತ್ತರಿಸಿದ ’ಇದು ಮಿಠಾಯಿಯಲ್ಲಿ ವಿಷದ ತುಂಡು. ನಮ್ಮನ್ನು ಗುಲಾಮರನ್ನಾಗಿಸಿದವರ ರಾಣಿಯ ಉತ್ಸವದಲ್ಲಿ ನಾವು ಪಾಲ್ಗೊಳ್ಳುವುದೇ? ಇಂಥದೇ ಮಿಠಾಯಿ ಕೊಟ್ಟು ಕೊಟ್ಟು ಆಂಗ್ಲರು ನಮ್ಮನ್ನು ಸದಾ ಗುಲಾಮರನ್ನಾಗಿಡಲು ಬಯಸುವರು.’

    ಕೇಶವನ ಆವೇಶ ನೋಡಿ ಉಳಿದವರು ತೆಪ್ಪಗಾದರು. ಒಬ್ಬ ಹೇಳಿಯೇ ಬಿಟ್ಟ ’ಈ ಹುಡುಗ ಎಲ್ಲರಂತಲ್ಲ. ಇವನ ರಕ್ತವೇ ಬೇರೆ.’

೩. ಚುರುಕು ಬುದ್ಧಿಯ ಬಾಲಕ

ಚುರುಕು ಬುದ್ಧಿಯ ಬಾಲಕ

    ಕೇಶವ ಬಹಳ ಬುದ್ಧಿವಂತ. ಅವನ ನೆನಪಿನ ಶಕ್ತಿ ಅಸಾಧಾರಣವಾದುದು. ರಾಮರಕ್ಷಾ ಸ್ತೋತ್ರ ಹಾಗೂ ಸಮರ್ಥ ರಾಮದಾಸರ ಮನೋಬೋಧದ ಶ್ಲೋಕಗಳನ್ನು ಬಹಳ ಬೇಗ ಕಲಿತ. ಅವನು ಗೀತೆಯ ಶ್ಲೋಕಗಳನ್ನು ತನ್ನ ಮಧುರ ಕಂಠದಿಂದ ಶುದ್ಧವಾಗಿ ಹೇಳುವುದನ್ನು ಕೇಳಿ ದೊಡ್ಡವರೂ ತಲೆದೂಗುತ್ತಿದ್ದರು. ತನ್ನ ಅಣ್ಣಂದಿರೊಡನೆ ಅವನು ರಾಮಾಯಣ, ಭಾರತ ಕೇಳಲು ಹೋಗುತ್ತಿದ್ದ. ಗಮನವಿಟ್ಟು ಕೇಳುತ್ತಿದ್ದ. ಪ್ರತಿ ಕಥೆಗಳ ನೀತಿ ಆಗಲೇ ಗ್ರಹಿಸುತ್ತಿದ್ದ. ಛತ್ರಪತಿ ಶಿವಾಜಿ ಮಹಾರಾಜರ ಕಥೆಗಳನ್ನು ಕೇಳುವುದರಲ್ಲಿ ಬಹಳ ಆಸಕ್ತಿ ಅವನಿಗೆ. ಅವನ್ನು ಕೇಳುತ್ತಾ ಕೇಳುತ್ತಾ ತನ್ಮಯನಾಗುತ್ತಿದ್ದ.

    ಒಮ್ಮೆ ಕೇಶವನ ನೆಂಟರೊಬ್ಬರು ಬಂದರು. ಅವರು ಕಥೆ ಹೇಳುವುದರಲ್ಲಿ ನಿಸ್ಸೀಮರು. ಶಿವಾಜಿಯ ಬಾಲ್ಯದ ಕಥೆಯನ್ನು ಹೇಳುತ್ತಿದ್ದರು. ಕೇಶವ ಕಥೆ ಕೇಳುತ್ತಾ ಅದರಲ್ಲಿಯೇ ಮೈಮರೆತ. ಕಥೆ ಮುಗಿಯಿತು. ಕೇಳುತ್ತಾ ಕುಳಿತಿದ್ದ ಉಳಿದ ಹುಡುಗರು ಅತ್ತಿತ್ತ ಹೊರಟರು. ಆದರೆ ಕೇಶವ ಮಾತ್ರ ಮೇಲೇಳಲಿಲ್ಲ. ಅವನು ಶಿವಾಜಿಯ ಕಾಲ ತಲುಪಿದ್ದ. ಕಥೆ ಅವನ ಕಣ್ಣ ಮುಂದೆ ಜೀವ ತಳೆದಿತ್ತು. ಶಿವಾಜಿಯ ತಂದೆ ಶಹಾಜಿ ಬಾಲಕ ಶಿವಬಾನನ್ನು ಬಿಜಾಪುರದ ದರಬಾರಿಗೆ ಕರೆದೊಯ್ದರು. ’ಮಗೂ, ಬಾದಷಹರಿಗೆ ನಮಸ್ಕರಿಸು’ ಎಂದು ಶಹಜಿ ಹೇಳಿದರು. ಶಿವಬಾ ಚುತುಮ್ಮನೆ ಉತ್ತರಿಸಿದ - ’ಇಲ್ಲ. ಎಂದೂ ಸಾಧ್ಯವಿಲ್ಲ. ಈತ ನಮ್ಮ ದೇಶ, ನಮ್ಮ ಧರ್ಮದವನಲ್ಲ. ಇವನಿಗೆ ನಾನೆಂದೂ ತಲೆಬಾಗಿಸೆನು.’

    ಇದೇ ವೇಳೆ ಯಾರೋ ಕೇಶವನನ್ನು ಕರೆದರು. ಅವನಿಂದ ಉತ್ತರಿಸಲು ಸಾಧ್ಯವಾಗಲಿಲ್ಲ. ಕೇಶವ ಇತಿಹಾಸ ಕಾಲದಿಂದ ವರ್ತಮಾನಕ್ಕೆ ಬಂದುದು ಅವರು ಹತ್ತಿರ ಬಂದು ಭುಜ ಅಲುಗಿಸಿದಾಗಲೇ. ಆ ಎಳೆಯ ವಯಸ್ಸಿನಲ್ಲಿಯೇ ಕೇಶವನ ಮನಸ್ಸಿನಲ್ಲಿ ದೇಶದ ಕುರಿತು ಭಾವನಾಂತರಗಳೇಳುತ್ತಿದ್ದವು.

೨. ವಂಶ

ವಂಶ

     ಕುಂದಕುರ್ತಿ ಗ್ರಾಮ ಆಂಧ್ರಪ್ರದೇಶದ ಬೋಧನ ತಾಲ್ಲೂಕಿನಲ್ಲಿದೆ. ಅದು ನಿಜಾಮಾಬಾದ್ ಜಿಲ್ಲೆಗೆ ಸೇರಿದೆ. ಗೋದಾವರಿ, ಹರಿದ್ರಾ ಹಾಗೂ ಮಂಜೀರಾ ಈ ಮೂರು ನದಿಗಳ ಸಂಗಮಸ್ಥಾನ ಅದು. ಹೆಡಗೆವಾರರ ಪೂರ್ವಿಕರು ವಾಸವಾಗಿದ್ದದ್ದು ಇಲ್ಲಿಯೇ. ಈ ವಂಶ ಅಧ್ಯಯನ ಹಾಗೂ ಪಾಂಡಿತ್ಯಕ್ಕೆ ಹೆಸರುವಾಸಿ. ೧೮೦೦ರ ನಂತರ ಈ ವಂಶದ ಒಂದು ಕವಲು ನಾಗಪುರಕ್ಕೆ ಬಂತು. ಇದರಲ್ಲಿಯೇ ಕೇಶವ ಹುಟ್ಟಿದ್ದು.

     ಕೇಶವನ ತಂದೆ ಬಲಿರಾಮ್‍ಪಂತ್. ತಾಯಿ ರೇವತಿಬಾಯಿ. ಇಬ್ಬರು ಸೋದರರು, ಮೂವರು ಸೋದರಿಯರು. ಅವನಿಗೆ ದೊಡ್ಡಣ್ಣ ಮಹಾದೇವ, ಮಧ್ಯದವ ಸೀತಾರಾಮ, ಕೇಶವ ಎಲ್ಲರಿಗಿಂತ ಚಿಕ್ಕವ.

     ಪಂಡಿತ ಬಲಿರಾಮಪಂತರು ವಿದ್ವಾಂಸರು, ಅಗ್ನಿಹೋತ್ರಿಗಳು ವೇದಾಧ್ಯಯನ, ಅಧ್ಯಾಪನ ಮಾಡುತ್ತಿದ್ದರು. ಪೌರೋಹಿತ್ಯದಿಂದ ಅವರ ಕುಟುಂಬ ಬದುಕುತ್ತಿತ್ತು.

     ಹಿರಿಯ ಮಗ ಮಹಾದೇವಶಾಸ್ತ್ರಿ. ವಿದ್ವತ್ತು ಹಾಗೂ ಭುಜಬಲ ಎರಡರಲ್ಲೂ ಪ್ರಸಿದ್ಧರು. ಪ್ರತಿದಿನ ಅವರು ಗರಡಿ ಮನೆಗೆ ಹೋಗುತ್ತಿದ್ದರು. ಸಾವಿರ ಸಾವಿರ ದಂಡ, ಬೈಠಕ್ ಹೊಡೆಯುತ್ತಿದ್ದರು. ಮಲ್ಲಯುದ್ಧ (ಕುಸ್ತಿ) ಪ್ರವೀಣರು. ಮಲ್ಲಖಂಬದಲ್ಲಿ ಅವರಿಗೆ ಬಲು ಪ್ರೀತಿ. ತಮ್ಮ ಮೊಹಲ್ಲೆಯ ಹುಡುಗರನ್ನು ಗರಡಿ ಮನೆಗೆ ಒತ್ತಾಯದಿಂದಲೂ ಕರೆದೊಯ್ಯುತ್ತಿದ್ದರು. ಕುಸ್ತಿ, ಮಲ್ಲಖಂಬ ಕಲಿಸುತ್ತಿದ್ದರು.

     ಸ್ವಭಾವದಲ್ಲಿ ಅವರು ತುಂಬ ಉಗ್ರ. ಒಮ್ಮೆ ತಮ್ಮ ಮನೆಯ ಬಿಸಿಲು ಮಚ್ಚಿನಲ್ಲಿ ನಿಂತಿದ್ದರು. ಕೆಳಗೆ ರಸ್ತೆಯಲ್ಲಿ ಕೆಲವರು ಗೂಂಡಾಗಳಿದ್ದರು. ದಾರಿಯಲ್ಲಿ ಹೋಗುವ ಹೆಂಗಸೊಬ್ಬಳನ್ನು ಒಬ್ಬ ಚುಡಾಯಿಸಿದ. ಇದನ್ನು ಕಂಡ ಮಹಾದೇವಶಾಸ್ತ್ರಿಗಳು ಕೆರಳಿ ಕೆಂಡವಾದರು. ಅಲ್ಲಿಂದಲೇ ಕೂಗಿ ಕೆಳಗೆ ಜಿಗಿದರು. ಒಬ್ಬರೇ ಗೂಂಡಾಗಳೊಡನೆ ಹೋರಾಡಿದರು. ಅವರ ಪೆಟ್ಟಿನ ರುಚಿ ನೋಡಿದ ಗೂಂಡಾಗಳು ಕಾಲಿಗೆ ಬುದ್ಧಿ ಹೇಳಿದರು. ಮುಂದೆ ಆ ಮೊಹಲ್ಲೆಯಲ್ಲಿಯೇ ಅಂತಹ ಕೆಲಸಕ್ಕೆ ಯಾರೂ ಕೈಯಿಕ್ಕಲಿಲ್ಲ - ಇದು ಅವರ ಉಗ್ರ ಸ್ವಭಾವಕ್ಕ್ಕೆ ಒಂದು ಉದಾಹರಣೆ ಮಾತ್ರ. ನಗರದ ಆ ಭಾಗದಲ್ಲಿ ಅವರ ಹೆಸರಿಗೆ ಅಂತಹ ಪ್ರಭಾವ.

     ಕೇಶವನನ್ನು ಕಂಡರ ಮಹಾದೇವಶಾಸ್ತ್ರಿಗಳಿಗೆ ಬಹಳ ಪ್ರೀತಿ. ಅವನನ್ನು ತಮ್ಮೊದಿಗೆ ಪ್ರತಿದಿನ ಗರಡಿ ಮನೆಗೆ ಕರೆದೊಯ್ಯುತ್ತಿದ್ದರು. ದಂಡ, ಬೈಠಕ್, ಕುಸ್ತಿ ಮೊದಲಾದುದನ್ನು ಕಲಿಸುತ್ತಿದ್ದರು.

     ತಂದೆ ತಾಯಿಗಳ ಆಶ್ರಯ ಕೇಶವನ ಭಾಗ್ಯದಲ್ಲಿ ಬಹಳ ಕಾಲ ಇರಲಿಲ್ಲ. ೧೯೦೨ರಲ್ಲಿ ನಾಗಪುರದಲ್ಲಿ ಪ್ಲೇಗ್ ಹಬ್ಬಿತು. ಕಷ್ಟದಲ್ಲಿದ್ದವರಿಗೆ ಸಹಾಯ ನೀಡುವುದು ಪಂಡಿತ ಬಲಿರಾಮ ಪಂತರಿಗೆ ಹುಟ್ಟಿನಿಂದ ಅಂಟಿದ ಸ್ವಭಾವ. ಕೊನೆಗೊಮ್ಮೆ ಅವರೇ ಆ ಮಾರಿಗೆ ತುತ್ತಾದರು. ಪತ್ನಿ ರೇವತಿಬಾಯಿ ಸಹ ಬದುಕಿ ಉಳಿಯಲಿಲ್ಲ. ಒಂದೇ ದಿನದಲ್ಲಿ ಆ ದಂಪತಿಗಳನ್ನು ಪ್ಲೇಗ್ ಆಹುತಿ ಪಡೆಯಿತು. ಆಗ ಕೇಶವನ ವಯಸ್ಸು ಕೇವಲ ಹನ್ನೆರಡು ವರ್ಷ.

೧. ಮಂಗಲ ದಿನ

ಮಂಗಲ ದಿನ

     ಅಂದು ಯುಗಾದಿ, ವಿರೋಧಿ ಸಂವತ್ಸರ. ಇಸವಿ ೧೮೮೯ರ ಎಪ್ರಿಲ್ ಮೊದಲ ದಿನ. ಎಲ್ಲೆಡೆ ಉತ್ಸಾಹದಿಂದ ಹೊಸ ವರ್ಷದ ಸ್ವಾಗತ.

     ಮುಂಜಾನೆಯ ಸೂರ್ಯ ಅದೇ ತಾನೇ ಮೂಡುತ್ತಿದ್ದ. ಪ್ರತಿಯೊಂದು ಮನೆಯ ಅಂಗಳದಲ್ಲೂ ರಂಗವಲ್ಲಿಯ ಸಿಂಗಾರ. ಬಾಗಿಲುಗಳಲ್ಲಿ ಮಾವಿನ ಚಿಗುರೆಲೆಗಳ ಹಸಿರು ತೋರಣ. ಮಾವು, ಬೇವಿನೆಲೆ ತರಲು ತೋರಣ ಕಟ್ಟಲು, ಹೂವು ತರಲು ಮಕ್ಕಳೆಲ್ಲರೂ ಓಡಾಡುತ್ತಿದ್ದರು. ದೊಡ್ಡವರೊಂದಿಗೆ ತಾವೂ ಸಡಗರದಿಂದ ಕೆಲಸ ಮಾಡುತ್ತಿದ್ದರು.

     ಮಹಾರಾಷ್ಟ್ರದಲ್ಲಿ "ಯುಗಾದಿ"ಯನ್ನು "ಗುಡಿಪಡವಾ" ಎನ್ನವರು. ಗುಡಿ ಎಂದರೆ ಧ್ವಜ. ಅಂದು ಮನೆ ಮನೆಯಲ್ಲಿ ಎತ್ತರದ ಪತಾಕೆ ಹಾರಿಸುವರು. ಪೂಜೆ ಮಾಡುವರು.

     ಮಕ್ಕಳು ಇದಕ್ಕೆ ಬೇಕಾದ ಸಾಮಗ್ರಿ ಜೋಡಿಸತೊಡಗಿದ್ದರು, ಉತ್ಸಾಹದಿಂದ. "ನಮ್ಮ ಮನೆ ಪತಾಕೆ ಎತ್ತರವಾಗಿರಬೇಕು, ಚೆನ್ನಾಗಿರಬೇಕು" ಎಂದು ಪರಸ್ಪರರಲ್ಲಿ ಸ್ಪರ್ಧೆ. ಬಣ್ಣದ ಪತಾಕೆ ಮೇಲೇರುವಾಗ, ಪಟಪಟನೆ ಹಾರಾಡುವಾಗ ಮಕ್ಕಳೆಲ್ಲ ಚಪ್ಪಾಳೆ ತಟ್ಟಿ ಕೇಕೆ ಹಾಕಿ ಕುಣಿಯುವರು. ಎಲ್ಲರೂ ಅಂದು ಹೊಸ ಬಟ್ಟೆ ತೊಡುವರು. ಹಬ್ಬದಡಿಗೆ ಉಣ್ಣುವರು. ಎಲ್ಲೆಡೆ ಆನಂದ ಉತ್ಸಾಹಗಳ ಅಲೆ ತಾನೇ ತಾನಾಗಿ ಇರುವ ದಿನ ಅದು.

     ಅಂದು ನಾಗಪುರದ ಪಂಡಿತ ಬಲಿರಾಮಪಂತ ಹೆಡಗೆವಾರರ ಮನೆಯಲ್ಲಿ ಈ ಆನಂದ ಇನ್ನೂ ಹೆಚ್ಚು. ಆ ದಿನ ಮಂಗಲೋತ್ಸವ. ಪೌರಾಣಿಕ ಹಾಗೂ ಐತಿಹಾಸಿಕವಾಗಿಯೂ ಬಹು ಮಹತ್ವಪೂರ್ಣ ವಿಜಯದ ದಿನ ಎನಿಸಿದ ಅಂದು ಅವರ ಮನೆಯಲೊಬ್ಬ ಹುಡುಗ ಹುಟ್ಟಿದ. ಈ ಶುಭಯೋಗ ಎಲ್ಲರಿಗೂ ಆನಂದ ತಂದಿತ್ತು.

     ’ಎಷ್ಟು ಒಳ್ಳೆಯ ಮುಹೂರ್ತದಲ್ಲಿ ಈ ಹುಡುಗ ಹುಟ್ಟಿದ್ದಾನೆ. ಮುಂದೆ ನಿಜವಾಗಿಯೂ ಯಾವುದೋ ಪರಾಕ್ರಮ ಸಾಧಿಸುವನು’ ಒಬ್ಬ ಹೇಳುತ್ತಿದ್ದ.

     ’ಯುಗಾದಿ ವಿಜಯದ ಹಬ್ಬ. ಶತ ಶತಮಾನಗಳ ಮೊದಲು ಪರಾಕ್ರಮಿ ಶಾಲಿವಾಹನ ಆಕ್ರಮಕ ಶಕರನ್ನು ಹೊಡೆದೋಡಿಸಿದ ದಿನ ಇದು. ಅದರ ನೆನಪಿಗಾಗಿ ನಾವಿಂದೂ ಪತಾಕೆ ಹಾರಿಸುತ್ತೇವೆ. ಅವನ ಹತ್ತಿರ ಸಂಪತ್ತು, ಸೈನ್ಯ ಯಾವುದೂ ಇರಲಿಲ್ಲ. ಆದರೂ ಈ ನಾಡಿನ ದುರ್ದೆಸೆ ಕಂಡು ದುಃಖಿತನಾಗಿದ್ದ - ಶಿವಶಕ್ತಿಯಿಂದ ಪ್ರೇರಿತನಾಗಿದ್ದ. ಮಣ್ಣಿನ ಕುದುರೆ ಸವಾರರ ಗೊಂಬೆ ಮಾಡಿ ಪ್ರಾಣ ತುಂಬಿದ. ಆ ಸೈನ್ಯದಿಂದಲೇ ಪರಕೀಯರನ್ನು ಓಡಿಸಿದ. ದಾಸ್ಯ ತೊಲಗಿಸಿದ. ಈ ಹುಡುಗನೂ ಅಂಥದೇ ಒಂದಲ್ಲೊಂದು ಅಸಾಧಾರಾಣ ಕೆಲಸ ಮಾಡಿ ತೋರಿಸುತ್ತಾನೆ ಎಂದು ನನಗನಿಸುತ್ತದೆ’ ಮತ್ತೊಬ್ಬನ ಅಂಬೋಣ.

     ಇನ್ನೊಬ್ಬ ಹೇಳುತ್ತಿದ್ದ - ’ಈತ ಹೆಡಗೆವಾರರ ಕುಲದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಏರಿಸುವನು. ದೇಶದ ತುಂಬ ತಮ್ಮ ವಂಶದ ಹೆಸರು ಹಬ್ಬಿಸುವನು.

    ಹುಡುಗ ಹುಟ್ಟುತ್ತಿದ್ದಂತೆಯೇ ಹರಿದ ಭಾವನೆಗಳ ಪ್ರವಾಹ ಇದು. ಹನ್ನೆರಡನೆಯ ದಿನ ನಾಮಕರಣ ಮಹೋತ್ಸವ. ಕೇಶವ ಎಂದು ಹೆಸರಿಟ್ಟರು.