Showing posts with label Sangha Story. Show all posts
Showing posts with label Sangha Story. Show all posts

Sunday, November 25, 2012

೧೦೫. ಅವಿನಾಭಾವ ಭಾವನೆ

ಅವಿನಾಭಾವ ಭಾವನೆ

   ಸ್ವಯಂಸೇವಕರಲ್ಲಿ ವಿಚಾರದ ಬಗ್ಗೆ ರಾಜಿ ಇಲ್ಲ. ಸಂಘದ ಒಬ್ಬ ಸ್ವಯಂಸೇವಕ ಶಾಖೆಯಲ್ಲೋ, ವರ್ಗದಲ್ಲೋ ಆಟವಾಡುತ್ತಿರುವಾಗ ಬಿದ್ದು ಕಾಲು ಮುರಿಯಿತು. ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಅವನನ್ನು ನೋಡಲು ಅನೇಕರು ಬಂದಿದ್ದರು. ಅವನ ತಾಯಿ ಅವನ ಪಕ್ಕದಲ್ಲೇ ನಿಂತಿದ್ದರು. ಅವರು ಅಳುತ್ತಾ ’ಏನೋ, ನೀನು ಸಂಘಕ್ಕೆ ಹೋಗಿದ್ದರಿಂದ ಹೀಗಾಯಿತು’ ಎಂದು ಸಂಘದ ಬಗ್ಗೆ ಸ್ವಲ್ಪ ಹಗುರವಾಗಿ ಹೇಳಿದರು. ಅದೂ ಮಗನ ಮೇಲಿನ ಪ್ರೀತಿಯಿಂದಾಗಿ. ಆ ೮-೧೦ನೇ ತರಗತಿಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿ, ಆ ಸಂದರ್ಭದಲ್ಲೂ ’ನೋಡಮ್ಮ, ನೀನು ನನಗೆ ಬೇಕಾದರೆ ಬೈಯ್ಯಿ. ಆದರೆ ಸಂಘಕ್ಕೆ ಮಾತ್ರ ಬೈಯ್ಯಬೇಡ’ ಎಂದ.

    ಇದು ೮-೧೦ನೇ ತರಗತಿಯ ಒಬ್ಬ ಹುಡುಗನಿಗೆ ಸಂಘದ ಬಗ್ಗೆ ಇರುವಂತಹ ಅವಿನಾಭಾವವಾದ ಭಾವನೆ.

Labels: Injury, Inseparable, Sangha Story, Swayamsevak, ಅವಿನಾಭಾವ ಭಾವನೆ, ಗಾಯ, ಬಾಲಕ, ಸಂಘಕ್ಕೇನೂ ಅನ್ನದಿರು, ಸಂಘದ ಕಥೆ

೧೦೪. ಸಿದ್ಧಾಂತದಲ್ಲಿ ನಂಬಿಕೆ

ಸಿದ್ಧಾಂತದಲ್ಲಿ ನಂಬಿಕೆ

   ಸ್ವಯಂಸೇವಕರು ಜಾತಿ ಇತ್ಯಾದಿಗಳಿಂದ ಪ್ರಭಾವಿತರಾಗುವುದಿಲ್ಲ ಎನ್ನುವುದಕ್ಕೆ ದೀನದಯಾಳರ ಉದಾಹರಣೆ. ಎಲ್ಲರೂ ಬಹಳ ಆಗ್ರಹ ಪಡಿಸಿದ್ದರಿಂದ ದೀನದಯಾಳರು ಚುನಾವಣೆಗೆ ನಿಂತರು. ಚುನಾವಣೆಯಲ್ಲಿ ಬೇರೆ ಎಲ್ಲರೂ ಜಾತಿ ಹೆಸರಿನಲ್ಲಿ ಪ್ರಚಾರ ಮಾಡಿದರು. ಕೆಲವರು ಒಂದು ರಾತ್ರಿ ಬೈಠಕ್‍ನಲ್ಲಿ ಕುಳಿತಾಗ ದೀನದಯಾಳರಲ್ಲಿ ಹೇಳಿದರು ’ನಾವು ನಿಮ್ಮ ಜಾತಿಯ ವಿಷಯವಾಗಿ ಹೇಳಿದರೆ ನಮಗೆ ಚುನಾವಣೆಯಲ್ಲಿ ಅನುಕೂಲವಾಗಬಹುದು’ ಎಂದು. ಆಗ ದೀನದಯಾಳರು ಜಾತಿಯ ವಿಷಯವನ್ನು ತಂದರೆ ತಾವು ಚುನಾವಣೆಯಿಂದ ಹೊರಬರುವುದಾಗಿ ಹೇಳಿದರು. ’ನಾನು ಸಂಘದ ಸ್ವಯಂಸೇವಕ. ಜಾತಿಯ ಹೆಸರಿನಲ್ಲಿ ಪ್ರಚಾರ ಮಾಡುವುದಾದರೆ, ನನಗೆ ಈ ಚುನಾವಣೆ ಬೇಡ’ ಎಂದರು.

    ನಂತರ ಚುನಾವಣೆಯಲ್ಲಿ ಅವರು ಸೋತರು. ಅದರಿಂದ ದೀನದಯಾಳರಿಗಾಗಲೀ, ಬೇರೆಯವರಿಗಾಗಲೀ ಎನೂ ಪ್ರಭಾವವಾಗಲಿಲ್ಲ. ಏಕೆಂದರೆ ’ನಾವು ಸಿದ್ಧಾಂತಕ್ಕಾಗಿ ನಿಂತಿರುವಂತಹವರು. ಸಿದ್ಧಾಂತದಲ್ಲಿ ಒಪ್ಪಂದ ಮಾಡಿಕೊಂಡು ಗೆಲ್ಲುವುದನ್ನು ನಾವು ಬಯಸಬೇಕಿಲ್ಲ’ ಎಂದು ಎಲ್ಲರೂ ತಿಳಿದಿದ್ದರು.

Labels: Deendayal Upadhyaya, Election, Loss, Principles, Sangha Story, ಚುನಾವಣೆ, ದೀನದಯಾಳ ಉಪಾಧ್ಯಾಯ, ಸಂಘದ ಕಥೆ, ಸಿದ್ಧಾಂತ, ಸೋಲು

೧೦೨. ಗುಣಗ್ರಾಹ್ಯತೆ

ಗುಣಗ್ರಾಹ್ಯತೆ

   ತಮಿಳುನಾಡಿನಲ್ಲಿ ಶಿವರಾಮ ಜೋಗಳೇಕರ್ ಎನ್ನುವ ಒಬ್ಬ ಪ್ರಚಾರಕರಿದ್ದರು. ಎಂ.ಎಸ್.ಸಿ.ಯಲ್ಲಿ ಚಿನ್ನದ ಪದಕ ತೆಗೆದುಕೊಂಡು ಪುಣೆಯಿಂದ ತಮಿಳುನಾಡಿಗೆ ಹೋದರು. ಮರಾಠಿಯವರಾದ ಅವರು ತಮಿಳುನಾಡಿಗೆ ಹೋಗಿ, ಜೀವನ ಪರ್ಯಂತ ಅಲ್ಲಿಯೇ ಪ್ರಚಾರಕರಾಗಿ ಇದ್ದು ಅಲ್ಲಿಯೇ ತೀರಿಕೊಂಡರು. ತಮಿಳು ಕಲಿತರು, ತಮಿಳರ ರೀತಿಯಲ್ಲಿ ವೇಷ ಧರಿಸಿದರು. ಅವರು ತಮಿಳರು ಅಲ್ಲ ಯಾರಿಗೂ ಅನ್ನಿಸಲೇ ಇಲ್ಲ. ಅಷ್ಟರ ಮಟ್ಟಿಗೆ ಅವರು ತಮಿಳರಾಗಿ ಹೋದರು. ಅವರು ಚೆನ್ನೈನಲ್ಲಿ ವಿಶೇಷವಾಗಿ ಎಷ್ಟು ಜನ ಸಜ್ಜನರಿದ್ದಾರೆ ಎಂದು ಹುಡುಕುತ್ತಾ ಹೋದರು. ಸಜ್ಜನರು ಬೇಕಾದಷ್ಟು ಜನ ಸಮಾಜದಲ್ಲಿದ್ದಾರೆ. ’ಕಚೇರಿಗಳಲ್ಲಿ ಲಂಚ ತೆಗೆದುಕೊಳ್ಳದೆ ಕೆಲಸ ಮಾಡುವವರು ಯಾರು? ಯಾರು ಬಂದಿರುವಂತಹವರಿಗೆ ಆತ್ಮೀಯತೆಯಿಂದ ಕರೆದು ಕೆಲಸ ಮಾಡಿಕೊಡುತ್ತಾರೆ? ಈ ರೀತಿಯಿರುವವರನ್ನು ಹುಡುಕಿದರು’

    ಪತ್ರಿಕೆಗಳಲ್ಲಿ ಸಂಪಾದಕರಿಗೆ ಪತ್ರ ಬರೆದು ಸಮಾಜದ ಬಗ್ಗೆ ಕಳಕಳಿಯನ್ನು ತೋರಿಸುವವರ ಮನೆಗೆ ಅವರನ್ನು ಹುಡುಕಿಕೊಂಡು ಹೋದರು. ಅವರ ಮನೆ ಬಾಗಿಲು ತಟ್ಟಿದರು. ’ನೀವು ಪತ್ರಿಕೆಯಲ್ಲಿ ಈ ಪತ್ರ ಬರೆದಿರುವಿರಲ್ಲಾ?’ ಎಂದು ಕೇಳಿದರು. ’ಹೌದು, ಬರೆದಿದ್ದೇನೆ’ ಎಂದು ಉತ್ತರ ಬರುತ್ತಿತ್ತು. ಶಿವರಾಮರು ಅವರಿಗೆ ಧನ್ಯವಾದವನ್ನು ಹೇಳುತ್ತಿದ್ದರು. ಪತ್ರ ಬರೆದವರು ಆಶ್ಚರ್ಯದಿಂದ ಏಕೆ ಧನ್ಯವಾದ ಹೇಳುತ್ತಿದ್ದೀರೆಂದು ಕೇಳುತ್ತಿದ್ದರು. ಇವರು ’ನಿಮಗೆ ಸಮಾಜದ ಬಗ್ಗೆ ಕಳಕಳಿ ಇದೆ. ಅದಕ್ಕಾಗಿ ಐದು ರೂಪಾಯಿ ಖರ್ಚು ಮಾಡಿ ಪತ್ರ ಬರೆದಿದ್ದೀರಲ್ಲ, ಅದಕ್ಕಾಗಿ ನಿಮಗೆ ಧನ್ಯವಾದಗಳನ್ನು ಹೇಳಲು ಬಂದೆ’ ಎಂದು ಉತ್ತರಿಸುತ್ತಿದ್ದರು. ಹೀಗೆ ಇನ್ನೊಬ್ಬರ ಗುಣವನ್ನು ಕಂಡುಹಿಡಿದು ಅವರನ್ನು ಜೋಡಿಸುವ ಕೆಲಸವನ್ನು ಶಿವರಾಮ ಜೋಗಳೇಕರ್ ಮಾಡಿದರು.

    ಒಬ್ಬ ಸ್ವಯಂಸೇವಕ ಮಾಡುವ ಕೆಲಸವೆಂದರೆ ಇದೇ. ಸಮಾಜದಲ್ಲಿ ಇರುವಂತಹವರ ಬಗ್ಗೆ ಹೊಟ್ಟೆಕಿಚ್ಚು ಪಡುವಂತಹುದಲ್ಲ - ’ಅಂತಹವರನ್ನು ಹೇಗಾದರೂ ಹಿಂದಕ್ಕೆ ತಳ್ಳಿ ನಾನು ಮುಂದಕ್ಕೆ ಹೋಗಬೇಕು’ ಎನ್ನುವುದಲ್ಲ. ಅಂತಹ ಸಜ್ಜನರನ್ನು ಶಾಖೆಗೆ ತರದೆಯೇ, ಶಿವರಾಮರು ಅಂತಹವರ ಒಂದು ವೇದಿಕೆ ಪ್ರಾರಂಭ ಮಾಡಿದರು. ನಂತರ ಎಲ್ಲರಿಗೂ ಗೊತ್ತಾಯಿತು, ಇದು ಸಂಘದ ಕೆಲಸ ಎಂದು. ಶಿವರಾಮರು ಮೊದಲನೇ ದಿನವೇ ತಾವು ಆರ್.ಎಸ್.ಎಸ್.ನವರು ಎಂದು ಹೇಳಲಿಲ್ಲ, ಅಥವಾ ಆರ್.ಎಸ್.ಎಸ್.ಗೆ ಬನ್ನಿ ಎಂದೂ ಹೇಳಲಿಲ್ಲ. ಹೀಗೆ ಗುಣಗ್ರಾಹ್ಯತೆ - ಇನ್ನೊಬ್ಬರಲ್ಲಿರುವಂತಹ ಸದ್ಗುಣವನ್ನು, ಒಳ್ಳೆಯ ನಡತೆಯನ್ನು ಗುರುತಿಸಿ ಅದನು ಮುಂದೆ ತರುವಂತಹುದು. ಸಮಾಜಕ್ಕೆ ಅಂತಹ ಗುಣವಿರುವವರು ಬೇಕು. ಸ್ವಯಂಸೇವಕ ಈ ರೀತಿ ಸಮಾಜದಲ್ಲಿರುವ ಸಜ್ಜನರನ್ನು ಗುರುತಿಸುವಂತಹವನು. 

Labels: Sangha Story, Shivaram Jogalekar, ಗುಣಗ್ರಾಹ್ಯತೆ, ಶಿವರಾಮ ಜೋಗಳೇಕರ್, ಸಂಘದ ಕಥೆ, ಸಜ್ಜನರ ಜೋಡಣೆ

೧೦೧. ಸ್ವಯಂಸೇವಕನ ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸ

ಸ್ವಯಂಸೇವಕನ ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸ

   ಒಮ್ಮೆ ಜವಹರಲಾಲ ನೆಹರುರವರು ಪ್ರಧಾನಮಂತ್ರಿಯಾಗಿದ್ದಾಗ,  ಒಬ್ಬ ಸ್ವಯಂಸೇವಕ ಐ.ಎ.ಎಸ್. ಅಧಿಕಾರಿಯಾಗಲು ಪರೀಕ್ಷೆ ಬರೆದ. ಅದರಲ್ಲಿ ಪಾಸಾದ. ಆ ಪರೀಕ್ಷೆಯ ಕೊನೆಯಲ್ಲಿ ಸಂದರ್ಶನವಿರುತ್ತದೆ. ಆ ಸಂದರ್ಶನದಲ್ಲಿ ಅವನು ಅರ್.ಎಸ್.ಎಸ್ ಸ್ವಯಂಸೇವಕ ಎನ್ನುವುದು ಎಲ್ಲರಿಗೂ ಗೊತ್ತಾಯಿತು. ಆ ಸಮಯದಲ್ಲಿ ಅರ್.ಎಸ್.ಎಸ್.ನವರು ಗಾಂಧಿ ಹತ್ಯೆ ಮಾಡಿದವರು ಎನ್ನುವ ಆರೋಪವಿತ್ತು. ಆ ಕಾರಣದಿಂದ ಅವನ್ನು ಐ.ಎ.ಎಸ್.ಗೆ ಆಯ್ಕೆ ಮಾಡಲಿಲ್ಲ. ಈ ಸ್ವಯಂಸೇವಕನ ದೂರದ ಸಂಬಂಧಿಯೊಬ್ಬರು ಕಾಂಗ್ರೆಸ್‍ನಲ್ಲಿದ್ದರು. ಅವರು ಲೋಕಸಭೆಯ ಉಪಾಧ್ಯಕ್ಷರಾಗಿದ್ದರು. ಅವರಿಗೆ ಈ ವಿಷಯ ಗೊತ್ತಾಯಿತು. ಅವರು ಈ ಸ್ವಯಂಸೇವಕನನ್ನು ಕರೆದು ವಿಚಾರಿಸಿದರು. ಹೀಗಾಗಿರುವುದು ಸರಿಯಲ್ಲ ಎಂದು ಭಾವಿಸಿ ಅವರು ಅವನಿಗೆ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಲು ಸಲಹೆಕೊಟ್ಟರು.

    ಆ ಕಾಲದಲ್ಲಿ ಈಗಿನ ರೀತಿ ಅಷ್ಟು ಸೆಕ್ಯೂರಿಟಿಯ ಕಷ್ಟವಿರಲಿಲ್ಲ. ಎಷ್ಟಾದರೂ ಲೋಕಸಭಾ ಉಪಾಧ್ಯಕ್ಷರು ಹೇಳಿಕಳಿಸಿದ್ದ ವ್ಯಕ್ತಿ ಎನ್ನುವ ಕಾರಣಕ್ಕಾಗಿ ನೆಹರುರವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಈ ಸ್ವಯಂಸೇವಕ ನೆಹರುರವರನ್ನು ಹೋಗಿ ಭೇಟಿ ಮಾಡಿದ. ಅವನ ಸಂಬಂಧಿಯಾದ ಲೋಕಸಭಾ ಉಪಾಧ್ಯಕ್ಷರೂ ನೆಹರುರವರ ಜೊತೆಯಲ್ಲಿ ಕುಳಿತಿದ್ದರು. ಆಗ ನೆಹರುರವರು ಕೇಳಿದರು ’ಈಗ ನಾನು ನಿನ್ನನ್ನು ಐ.ಎ.ಎಸ್.ಗೆ ಆಯ್ಕೆ ಮಾಡದೇ ಇದ್ದರೆ ಏನಾಗುತ್ತದೆ?’ ಎಂದು ಕೇಳಿದರು. ಆಗ ಈ ಸ್ವಯಂಸೇವಕ ಹೇಳಿದ 'The Government of India will lose an honest officer(ಸರ್ಕಾರವು ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಕಳೆದುಕೊಳ್ಳುತ್ತದೆ)'. ಒಬ್ಬ ೨೨ ವರ್ಷದ ಯುವಕ ದೇಶದ ಪ್ರಧಾನಮಂತ್ರಿಯ ಎದುರು ಎಷ್ಟು ಧೈರ್ಯದಿಂದ ಹೇಳಿದ! ಅವನಿಗೆ ಎಂಥ ನಂಬಿಕೆ! ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸ, ಎರಡೂ ಅವನಲ್ಲಿತ್ತು. ನೆಹರುರವರು ಅವನ ಮಾತನ್ನು ಕೇಳಿ ಅವನನ್ನು ಐ.ಎ.ಎಸ್. ಅಧಿಕಾರಿಯಾಗಿ ನೇಮಿಸಿದರು ಮತ್ತು ಐ. ಮಹಾದೇವನ್ ಎನ್ನುವ ಈ ಸ್ವಯಂಸೇವಕರು ಐ.ಎ.ಎಸ್. ಅಧಿಕಾರಿಯಾಗಿ ಕೆಲಸ ಮಾಡಿದರು.

Labels: Confidence, Honesty, I.A.S, Nehru, Sangha Story, ಆತ್ಮವಿಶ್ವಾಸ, ಐ.ಎ.ಎಸ್, ನೆಹರು, ಪ್ರಾಮಾಣಿಕತೆ, ಸಂಘದ ಕಥೆ

೧೦೦. ಚುನಾವಣೆಯಲ್ಲಿ ಜನಸಂಘಕ್ಕೆ ಸೋಲು

ಚುನಾವಣೆಯಲ್ಲಿ ಜನಸಂಘಕ್ಕೆ ಸೋಲು

   ’ಶಂಕ‌ರ್ಸ್ ವೀಕ್ಲಿ’ ಎನ್ನುವ ಒಂದು ಇಂಗ್ಲೀಷ್ ಪತ್ರಿಕೆ ದೆಹಲಿಯಿಂದ ಹಿಂದೆ ಬರುತ್ತಿತ್ತು. ಲೇಖನಕ್ಕಿಂತ ಹೆಚ್ಚಾಗಿ ಮುಖ್ಯವಾಗಿ ವ್ಯಂಗ್ಯಚಿತ್ರಗಳದ್ದೇ ಪತ್ರಿಕೆ ಅದು. ಅದನ್ನು ಶಂಕರನ್ ನಾಯರ್ ಎನ್ನುವವರು ನಡೆಸುತ್ತಿದ್ದರು. ಆ ಪತ್ರಿಕೆ ಈಗಿಲ್ಲ. ೧೯೭೨ರ ಚುನಾವಣೆಯ ಸಂದರ್ಭ. ಜನಸಂಘವೂ ಆ ಚುನವಾಣೆಯಲ್ಲಿ ಭಾಗವಿಹಿಸಿತ್ತು. ಜನಸಂಘದ ಜನ ಸಂಘದ ಸ್ವಯಂಸೇವಕರೂ ಎನ್ನುವ ನಂಬಿಕೆ ಜನರಿಗೆ. ಆ ಕಾಲದಲ್ಲಿ ಆ ರೀತಿ ಇದ್ದದ್ದೂ ಹೌದು. ಅನೇಕ ಪಕ್ಷಗಳೂ ಇದ್ದವು. ಕಾಂಗ್ರೆಸ್ ಆ ಚುನಾವಣೆಯಲ್ಲಿ ಜಯಭೇರಿ ಬಾರಿಸಿತು. ಉಳಿದ ಪಕ್ಷಗಳೆಲ್ಲಾ ತತ್ತರಿಸಿ ಹೋಗಿದ್ದವು. ಬಹುಶಃ ಮಹಾಮೈತ್ರಿಯ ೧೯೭೨ರ ಚುನಾವಣೆ ಅಂತ ಕಾಣಿಸುತ್ತೆ.

    ಮರುವಾರದ ಶಂಕ‌ರ್ಸ್ ವೀಕ್ಲಿ ಪತ್ರಿಕೆಯಲ್ಲಿ ಒಂದು ವ್ಯಂಗ್ಯ ಚಿತ್ರ ಬಂದಿತು. ಅದೇನೆಂದರೆ, ಬೇರೆ ಬೇರೆ ಪಕ್ಷಗಳವರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಜನಸಂಘದವರು ಮಾತ್ರ ಗಣವೇಶ ಹಾಕಿಕೊಂಡು ಸಂಚಲನಕ್ಕೆ ಹೊರಟಿದ್ದಾರೆ. ಅವರಿಗೆ ಈಡೀ ದೇಶದಲ್ಲಿ ಎಲ್ಲ ಕಡೆಯೂ ಠೇವಣಿಯೇ ಹೋಗಿದೆ. ಆದರೂ ಅವರು ಏನೂ ತಿಳಿದುಕೊಳ್ಳಲಿಲ್ಲ. ಇದು ಆ ವ್ಯಂಗ್ಯಚಿತ್ರದಲ್ಲಿದ್ದದ್ದು. ಈ ವ್ಯಂಗ್ಯಚಿತ್ರ ಏನನ್ನು ಹೇಳುತ್ತದೆ. ಸೋಲು, ಗೆಲವುಗಳಿಂದ ಒಬ್ಬ ಸ್ವಯಂಸೇವಕ ನೆಲಕಚ್ಚೋದಿಲ್ಲ ಅಥವಾ ಮುಗಿಲಿಗೆ ಹಾರೋದಿಲ್ಲ. ಇದನ್ನು ಆ ವ್ಯಂಗ್ಯಚಿತ್ರ ಮಾರ್ಮಿಕವಾಗಿ ತೋರಿಸಿತು. ಸೋತಿರುವುದು ನಿಜ, ಆದರೆ ಸ್ವಯಂಸೇವಕರಿಗೆ ಇದರಿಂದ ಏನೂ ಅನ್ನಿಸಿಲ್ಲ. ಹೀಗೆ ಸಂಘದ ಸ್ವಯಂಸೇವಕರು ಯಶಸ್ಸು ಅಪಯಶಸ್ಸಿಗಾಗಿ ತಮ್ಮ ಮನಸ್ಸನ್ನು ಮುದುಡಿಕೊಳ್ಳುವುದಿಲ್ಲ.

Labels: Election, Jana Sangha, Sangha Story, Shankar's Weekly, ಚುನಾವಣೆ, ಜನಸಂಘ, ಶಂಕ‌ರ್ಸ್ ವೀಕ್ಲಿ, ಸಂಘದ ಕಥೆ, ಸೋಲು

೯೯. ಪರಿಪೂರ್ಣ ಸ್ವಯಂಸೇವಕ

ಪರಿಪೂರ್ಣ ಸ್ವಯಂಸೇವಕ

   ಡಾಕ್ಟರ್‌ಜಿಯವರು ಗಾಂಧೀಜಿಯವರನ್ನು ಭೇಟಿ ಮಾಡಿದರು. ವರ್ಧಾ ಶಿಬಿರಕ್ಕೆ ಗಾಂಧೀಜಿಯವರು ಬಂದಿದ್ದರು. ಡಾಕ್ಟರ್‌ಜಿಯವರು ಶಿಬಿರಕ್ಕೆ ಬರುವ ಹಿಂದಿನ ದಿನವೇ ಗಾಂಧೀಜಿಯವರು ಶಿಬಿರವನ್ನು ನೋಡಿಕೊಂಡು ಬಂದಿದ್ದರು. ಸ್ಥಾಪಕ ಯಾರೆಂದು ಅವರಿಗೆ ಗೊತ್ತಾಯಿತು. ಡಾ|| ಹೆಡಗೆವಾರರ ಹೆಸರನ್ನು ಕೇಳಿದ್ದರು, ಮೊದಲೂ ಭೇಟಿ ಮಾಡಿದ್ದರು. ೧೯೨೦ರ ಕಾಂಗ್ರೆಸ್ ಅಧಿವೇಶನದಲ್ಲೇ ಡಾಕ್ಟರ್‌ಜಿಯವರನ್ನು ಗಾಂಧೀಜಿಯವರು ನೋಡಿದ್ದರು. ಡಾ|| ಹೆಡಗೆವಾರರೆನ್ನುವವರು ಸಂಘವನ್ನು ಸ್ಥಾಪನೆ ಮಾಡಿದ್ದಾರೆ, ಅವರನ್ನು ನಾನು ಭೇಟಿ ಮಾಡಬೇಕು ಎನ್ನುವ ಕಾರಣಕ್ಕಾಗಿ ಗಾಂಧೀಜಿಯವರು, ಡಾಕ್ಟರ್‌ಜಿಯವರು ಮರುದಿನ ಬಂದ ನಂತರ ಮತ್ತೆ ಶಿಬಿರಕ್ಕೆ ಹೋದರು. ಅವರ ಜೊತೆ ಇನ್ನೂ ಇಬ್ಬರಿದ್ದರು.

    ಮಾತುಕತೆಯಲ್ಲಿ ಗಾಂಧೀಜಿಯವರು ಡಾಕ್ಟರ್‌ಜಿಯವರನ್ನು ಕೇಳಿದರು ’ಈ ಸ್ವಯಂಸೇವಕ ಎನ್ನುವ ಕಲ್ಪನೆ ಏನು?’ ಎಂದು. ಆಗ ಡಾಕ್ಟರ್‌ಜಿಯವರು ಹೇಳಿದ ಒಂದು ವಾಕ್ಯ ಇದೆ. ’ದೇಶದ ಸರ್ವಾಂಗೀಣ ಉನ್ನತಿಗಾಗಿ ತನ್ನ ಸರ್ವಸ್ವವನ್ನೂ ಸಮರ್ಪಣೆಯನ್ನು ಮಾಡುವುದಕ್ಕೆ ಸಿದ್ಧನಾಗಿರುವಂತಹ ಕಾರ್ಯಕರ್ತನನ್ನು ನಾವು ಸ್ವಯಂಸೇವಕನೆಂದು ಕರೆಯುತ್ತೇವೆ’ ಎಂದು ಡಾಕ್ಟರ್‌ಜಿಯವರು ಹೇಳಿದರು.

Labels: Doctorji, Gandhiji, Perfect Swayamsevak, Sangha Story, ಗಾಂಧೀಜಿ, ಡಾಕ್ಟರ್‌ಜಿ, ಪರಿಪೂರ್ಣ ಸ್ವಯಂಸೇವಕ, ಸಂಘದ ಕಥೆ

೯೮. ಡಾಕ್ಟರ್‌ಜಿಯವರ ಚಾರಿತ್ರ್ಯ ಶುದ್ಧತೆ

ಡಾಕ್ಟರ್‌ಜಿಯವರ ಚಾರಿತ್ರ್ಯ ಶುದ್ಧತೆ

   ಡಾಕ್ಟರ್‌ಜಿಯವರು ನಾಗಪುರದಲ್ಲಿ ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯವಾಗಿದ್ದರು. ಆಗಿನ್ನೂ ಸಂಘ ಸ್ಥಾಪನೆಯಾಗಿರಲಿಲ್ಲ. ಸಂಘ ಸ್ಥಾಪನೆಯಾದ ನಂತರ ಡಾಕ್ಟರ್‌ಜಿಯವರು ರಾಜಕೀಯಕ್ಕೆ, ಚುನಾವಣೆ ಕ್ಷೇತ್ರಕ್ಕೆ ಹೋಗಲಿಲ್ಲ, ಸ್ವಾತಂತ್ರ್ಯ ಹೋರಾಟ ಬಿಟ್ಟು. ಡಾ|| ಮೂಂಜೆ ಎನ್ನುವವರು ಅವರ ಮಿತ್ರರು, ಆತ್ಮೀಯರು, ಹಿರಿಯರು. ಅವರು ಚುನಾವಣೆಗೆ ನಿಂತರು. ಡಾ|| ಮೂಂಜೆ ಅವರ ಪರವಾಗಿ ಪ್ರಚಾರ ಮಾಡಲು ಡಾಕ್ಟರ್‌ಜಿ ಹೋಗಿದ್ದರು. ಡಾ|| ಮೂಂಜೆಯವರ ವಿರುದ್ಧವಾಗಿ ಅಭ್ಯಂಕರ್ ಎನ್ನುವವರು ನಿಂತಿದ್ದರು. ಅಭ್ಯಂಕರರು ಒಬ್ಬ ವಕೀಲರು. ಅವರು ತಮ್ಮ ಭಾಷಣದಲ್ಲಿ ತಮ್ಮ ಎದುರಾಳಿಗಳ ಜನ್ಮ ಜಾಲಾಡುತ್ತಿದ್ದರು. ತಮ್ಮ ಎದುರಾಳಿಗಳ ಬಗ್ಗೆ ಹಾಗೆ, ಹೀಗೆ ಎಂದು ಹೀಗೆಳೆದು ಜನರನ್ನು ಮನರಂಜಿಸುತ್ತಾ ಭಾಷಣ ಮಾಡುವುದರಲ್ಲಿ ಅವರದು ಎತ್ತಿದ ಕೈ.

    ಅಂತಹ ಅಭ್ಯಂಕರರು ಡಾ|| ಮೂಂಜೆಯವರ ಬಗ್ಗೆ ಸಾಕಷ್ಟು ಹೇಳಿದರು. ಡಾ|| ಮೂಂಜೆಯವರ ಸಮರ್ಥನೆಗಾಗಿ ನಿಂತಿದ್ದ ಡಾಕ್ಟರ್‌ಜಿಯವರ ವಿಷಯ ಬಂದಿತು. ತಮ್ಮ ಭಾಷಣದ ವಾಗ್ದಾಳಿಯಲ್ಲಿ ಅವರು ’ಡಾ|| ಹೆಡಗೆವಾರ್..’ ಎಂದರು, ಅಷ್ಟೇ. ಅವರಿಗೆ ಮುಂದೆ ಮಾತು ಹೊರಡಲಿಲ್ಲ. ’ನಾನು ಅವರ ಬಗ್ಗೆ ಹೇಳೋದು ಏನಿದೆ? ಅವರ ಬಗ್ಗೆ ನಾನೇನೂ ಹೇಳಲಾರೆ’ ಎಂದು ಹೇಳಿ ಸುಮ್ಮನಾದರು. ಅಭ್ಯಂಕರರ ಮಾತಿನಲ್ಲಿ ಡಾಕ್ಟರ್‌ಜಿಯವರ ಬಗ್ಗೆ ಒಂದೇ ಒಂದು ನಕಾರಾತ್ಮ ಮಾತೂ ಹೊರಡಲಿಲ್ಲ. ಏಕೆಂದರೆ ಡಾಕ್ಟರ್‌ಜಿಯವರ ಚಾರಿತ್ರ್ಯ, ಅವರ ಸಾರ್ವಜನಿಕ ಜೀವನದ ಶುದ್ಧತೆ, ಅವರ ವ್ಯಕ್ತಿ ಜೀವನದ ಶುದ್ಧತೆ ಇವು ಕಣ್ಣಿಗೆ ಕಟ್ಟುವ ಹಾಗಿದ್ದವು.

Labels: Abhyankar, Doctorji, Dr. Munje, Election, Sangha Story, ಅಭ್ಯಂಕರ್, ಚಾರಿತ್ರ್ಯ, ಡಾ|| ಮೂಂಜೆ, ಡಾಕ್ಟರ್‌ಜಿ, ಸಂಘದ ಕಥೆ,

Saturday, November 24, 2012

೯೭. ತುರ್ತು ಪರಿಸ್ಥಿತಿಯಲ್ಲಿ ಸ್ವಯಂಸೇವಕರ ಕರ್ತವ್ಯ

ತುರ್ತು ಪರಿಸ್ಥಿತಿಯಲ್ಲಿ ಸ್ವಯಂಸೇವಕರ ಕರ್ತವ್ಯ

   ತುರ್ತು ಪರಿಸ್ಥಿತಿಯ ಸಮಯ. ಅನೇಕ ಪ್ರಚಾರಕರು, ಸ್ವಯಂಸೇವಕರು ಭೂಗತರಾಗಿದ್ದರು. ಒಬ್ಬ ಸ್ವಯಂಸೇವಕರು ಮಂಗಳೂರಿನವರು. ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿ. ಅವರು ಮೂರು ತಿಂಗಳಿನಿಂದ ಬ್ಯಾಂಕಿಗೆ ಹೋಗಿರಲಿಲ್ಲ. ಕಾರಣ? ಅವರನ್ನು ಹಿಡಿದು ಪ್ರಶ್ನೆಗಳನ್ನು ಕೇಳಬೇಕೆಂದು ಪೊಲೀಸರು ಹುಡುಕುತ್ತಿದ್ದರು. ಮೂರು ತಿಂಗಳ ನಂತರ ಬ್ಯಾಂಕಿನಿಂದ ನೋಟಿಸ್ ಬಂತು - ’ನೀವು ಇನ್ನೊಂದು ವಾರದಲ್ಲಿ ಕೆಲಸಕ್ಕೆ ಬರದಿದ್ದರೆ ನಿಮ್ಮನ್ನು ಕೆಲಸದಿಂದ ತೆಗೆದುಹಾಕುತ್ತೇವೆ’ ಎಂದು. ಆಗ ಅವರು ಪ್ರಚಾರಕರೊಡನೆ ಸಮಾಲೋಚಿಸಿದರು. ಪ್ರಚಾರಕರು ಸಲಹೆ ಕೊಟ್ಟರು - ಅವರು ಬ್ಯಾಂಕಿಗೆ ಹೋಗಬೇಕು, ಪೊಲೀಸರು ಅವರನ್ನು ಬಂಧಿಸುತ್ತಾರೆ, ಇವರು ಜೈಲಿಗೆ ಹೋಗುತ್ತಾರೆ, ಆದರೆ ಅವರ ಕೆಲಸವಾದರೂ ಉಳಿಯುತ್ತದೆ.

    ಸರಿ, ಅವರು ಕೆಲಸಕ್ಕೆ ಹೋದರು. ಮೊದಲನೇ ದಿನವೇ ಪೊಲೀಸರು ಬಂದು ಅವರನ್ನು ಬಂಧಿಸಿ ಕರೆದುಕೊಂಡು ಹೋದರು. ಬಂದರು ಪೊಲೀಸ್ ಸ್ಟೇಷನ್‍ಗೆ ಕರೆದುಕೊಂಡು ಹೋದರು. ಇನ್ನಿಲ್ಲದ ಚಿತ್ರ ಹಿಂಸೆ ಕೊಟ್ಟು ಅರ್ಧ ಜೀವ ಮಾಡಿದರು. ’ಲೋಕ ಸಂಘ ಸಮಿತಿಗೆ ಹಣ ಎಲ್ಲಿಂದ ಬರುತ್ತದೆ, ಆ ಪ್ರಚಾರಕರು ಎಲ್ಲಿ ಉಳಿದುಕೊಳ್ಳುತ್ತಾರೆ? ಈ ಪ್ರಚಾರಕರು ಎಲ್ಲಿರುತ್ತಾರೆ?’ ಈ ಪ್ರಶ್ನೆಗಳನ್ನು ಕೇಳಿದರು. ಈ ನಮ್ಮ ಸ್ವಯಂಸೇವಕರು ತಮಗೆ ಒಂದು ಲೋಟ ನೀರು ಕೊಟ್ಟರೆ ಎಲ್ಲವನ್ನೂ ಹೇಳುತ್ತೇನೆಂದರು. ಪೊಲೀಸರು ನೀರು ಕೊಟ್ಟರು. ಇವರು ಹತ್ತಿರದಲ್ಲಿದ್ದ ಕಿಟಕಿ ನೋಡಿದರು. ಇವರಿದ್ದುದು ಮೊದಲನೆ ಮಹಡಿಯ ಮೇಲೆ. ಪೊಲೀಸರು ನೋಡುತ್ತಿದ್ದಂತೆಯೇ ಕ್ಷಣಾರ್ಧದಲ್ಲೇ ಓಡಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಿಟಕಿ ಮೂಲಕ ಹಾರಿದರು. ಪುಣ್ಯಕ್ಕೆ ತಲೆಗೆ ಏಟು ಬೀಳದೆ ಕಾಲುಗಳ ಮೇಲಿ ಬಿದ್ದು ಪ್ರಾಣ ಉಳಿಯಿತು. ಆದರೆ ಕಾಲುಗಳೂ ಪುಡಿಪುಡಿಯಾದವು. ಇಂದಿಗೂ ಅವರಿಗೆ ಸರಿಯಾಗಿ ನಡೆಯಲಾಗುವುದಿಲ್ಲ.

    ಈ ರೀತಿ ಸಾವಿರಾರು ಜನರು ನಷ್ಟ ಕಷ್ಟ ಅನುಭವಿಸಿದರು. ಅನೇಕರ ತಂದೆ, ತಾಯಿಗಳು ತೀರಿಕೊಂಡರೂ ಅವರನ್ನು ಮನೆಗೆ ಬಿಡದೆ ಜೈಲಿನಲ್ಲೇ ಇಟ್ಟಿದ್ದರು. ಒಂದೂವರೆ ಲಕ್ಷ ಜನ ಸತ್ಯಾಗ್ರಹ ಮಾಡಿದರು. ತುರ್ತು ಪರಿಸ್ಥಿತಿ ಕಳೆಯಿತು. ಈವತ್ತಿನವರೆಗೆ ಯಾರೂ ತಾವು ಮಾಡಿದ ಈ ಹೋರಾಟಕ್ಕೆ ತಮಗೆ ಪರಿಹಾರ ಬೇಕೆಂದು ಕೇಳಲಿಲ್ಲ. ಹೊರಗಿನವರು ಅವರ ಕಾರ್ಯವನ್ನು ತ್ಯಾಗವೆಂದು ಭಾವಿಸುತ್ತಾರಾದರೂ ಸ್ವಯಂಸೇವಕರು ತಾವು ದೇಶಕ್ಕಾಗಿ ಹೋರಾಟ ಮಾಡಿದೆವು, ಅದು ತಮ್ಮ ಕರ್ತವ್ಯ, ತ್ಯಾಗವಲ್ಲ ಎಂದು ಭಾವಿಸಿದರು.

Labels: Duty, Emergency, Sacrifice, Sangha Story, ಕರ್ತವ್ಯ, ತುರ್ತು ಪರಿಸ್ಥಿತಿ, ತ್ಯಾಗ, ಸಂಘದ ಕಥೆ

೯೫. ಸಕಾರಾತ್ಮಕ ಚಿಂತನೆ

ಸಕಾರಾತ್ಮಕ ಚಿಂತನೆ

   ೨೦೧೨ರಲ್ಲಿ ಹುಬ್ಬಳ್ಳಿಯಲ್ಲಿ ಹಿಂದೂ ಶಕ್ತಿ ಸಂಗಮ ನಡೆಯಿತು. ಅದಾದ ೧೫ ದಿನಗಳ ನಂತರ ಹುಬ್ಬಳ್ಳಿಯಿಂದ ಆ ಕಾರ್ಯಕ್ರಮಕ್ಕೆ ಹೋದವರ ಒಂದು ಬೈಠಕ್ ನಡೆಯಿತು. ವಿಶ್ವ ಹಿಂದೂ ಪರಿಷತ್ತಿನ ಅಲ್ಲಿನ ಪ್ರಾಂತ ಕಾರ್ಯದರ್ಶಿಗಳು ಒಂದು ಅನುಭವವನ್ನು ಹೇಳಿದರು. ರಾಯಚೂರು ಜಿಲ್ಲೆಯಲ್ಲಿ ಕರಡಿಗುಡ್ಡ ಎನ್ನುವ ಒಂದು ಹಳ್ಳಿಯಿದೆ. ಅಲ್ಲಿಯ ೩೨ ಹರಿಜನ ಕುಟುಂಬದವರು ತಾವು ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗುತ್ತೇವೆ ಎಂದು ಹೇಳಿದ್ದರು. ಯಾವುದೋ ಒಂದು ನಿಶ್ಚಿತ ದಿನ ಮತಾಂತರದ ಕಾರ್ಯಕ್ರಮವಿತ್ತು. ಚರ್ಚಿನವರು ಬಹಳ ಉತ್ಸುಕತೆಯಿಂದ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದರು.

    ಸುದ್ದಿ ತಿಳಿದ ತಕ್ಷಣ ವಿಶ್ವ ಹಿಂದೂ ಪರಿಷತ್ತಿನವರು ಹೋಗಿ ಮಾತನಾಡಿದರು. ಆದರೆ ಹರಿಜನರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ’ಇಲ್ಲಿನ ದೇವಸ್ಥಾನದವರು ನಮ್ಮನ್ನು ಒಳಗೆ ಬಿಡುವುದಿಲ್ಲ. ಹಾಗಾಗಿ ನಾವೇಕೆ ನಿಮ್ಮ ಧರ್ಮದಲ್ಲಿರಬೇಕು?’ ಎಂದು ಪ್ರಶ್ನಿಸಿದರು. ಆಗ ಪರಿಷತ್ತಿನವರು ದೇವಸ್ಥಾನದ ಸಮಿತಿಯವರ ಬಳಿ ಮಾತನಾಡಿದರು. ಆದರೆ ಸಮಿತಿಯವರು ಹರಿಜನರನ್ನು ದೇವಸ್ಥಾನದಲ್ಲಿ ಬಿಡಲು ಒಪ್ಪಲಿಲ್ಲ. ೩-೪ ಬಾರಿ ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಅವರ ಮನಸನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ.

    ಆಷ್ಟರಲ್ಲಿ ಹುಬ್ಬಳ್ಳಿಯ ಶಕ್ತಿ ಸಂಘಮ ಕಾರ್ಯಕ್ರಮ ಪ್ರಾರಂಭವಾಗಿತ್ತು. ಆ ದೇವಸ್ಥಾನದ ಸಮಿತಿಯ ೩ ಮೂರು ಜನರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಶಿಬಿರದಲ್ಲಿ ಇತರ ೨೯,೭೩೯ ಜನರ ಜೊತೆ ೩ ದಿನವಿದ್ದರು. ಕಾರ್ಯಕ್ರಮದ ನಂತರ ಜನವರಿ ೨೯ರಂದು ರಾತ್ರಿ ಮೂರು ಗಂಟೆಗೆ ಊರು ತಲುಪಿದರು. ಮರುದಿನ ಬೆಳಿಗ್ಗೆ ೭ ಗಂಟೆಗೆ ಆ ಹರಿಜನ ಕೇರಿಗೆ ಹೋಗಿ ಅಲ್ಲಿನ ಜನರನ್ನು ಮಾತನಾಡಿಸಿ ಎಲ್ಲರನ್ನು ದೇವಸ್ಥಾನಕ್ಕೆ ಆಹ್ವಾನಿಸಿದರು. ಮತಾಂತರವಾಗದಂತೆ ಮನವೊಲಿಸಿದರು. ಮೊದಲು ಒಪ್ಪಿರದಿದ್ದ ಆ ದೇವಸ್ಥಾನದ ಸಮಿತಿಯವರು ಸಂಘದ ಶಿಬಿರಕ್ಕೆ ಬಂದ ನಂತರ ಬದಲಾಗಿದ್ದರು. ತಮ್ಮೂರಿನವರು ಮತಾಂತರವಾಗಬಾರದು. ದಲಿತರು ನಮ್ಮೊಡನೆಯೇ ಇರಬೇಕು ಎನ್ನುವ ಮನಸ್ಸು ಮಾಡಿದ್ದರು.

Labels: Conversion, Hubballi, Sangha Story, Transformation, ಚಿಂತನೆ, ಬದಲಾವಣೆ, ಮತಾಂತರ, ವಾತಾವರಣ, ಸಂಘದ ಕಥೆ, ಹುಬ್ಬಳ್ಳಿ

೯೪. ಜಾತಿ

ಜಾತಿ

    ವ್ಯಕ್ತಿಯನ್ನು ಜೋಡಿಸಬೇಕಾದರೆ ಏನೇನು ಕಷ್ಟಗಳನ್ನು ಅನುಭವಿಸಬೇಕಾಗುವುದು ಎನ್ನುವುದಕ್ಕೆ ಒಂದು ಉದಾಹರಣೆ. ಪ್ರಚಾರಕರಾಗಿದ್ದ ನ. ಕೃಷ್ಣಪ್ಪನವರು ಕಪ್ಪಗಿದ್ದರು. ಅವರ ಜೊತೆಯಲ್ಲಿ ರಮಾನಾಥ ರೈ ಎನ್ನುವ ಇನ್ನೊಬ್ಬ ಪ್ರಚಾರಕರು. ಅವರು ಬೆಳ್ಳಗಿದ್ದರು. ಎಲ್ಲರಿಗೂ ರಮಾನಾಥರು ಬ್ರಾಹ್ಮಣ ಎನ್ನುವ ಕಲ್ಪನೆ, ಕೃಷ್ಣಪ್ಪನವರು ಬ್ರಾಹ್ಮಣರಲ್ಲ ಎನ್ನುವ ಅನಿಸಿಕೆ. ಕೃಷ್ಣಪ್ಪನವರಿಗೆ ಯಾವಾಗಲೂ ಮನೆಯ ಹೊರಗಡೆ ಊಟ. ರಮಾನಾಥ ರೈ ಅವರಿಗೆ ಮನೆ ಒಳಗಡೆ ಊಟ. ಎಂದೂ ರಮಾನಾಥ ರೈಗಳು ತಾವು ಬ್ರಾಹ್ಮಣ ಅಲ್ಲ ಎಂದು ಹೇಳಿಕೊಳ್ಳಲಿಲ್ಲ ಅಥವಾ ಕೃಷ್ಣಪ್ಪನವರು ತಾವು ಬ್ರಾಹ್ಮಣ ಎಂದು ಹೇಳಿಕೊಳ್ಳಲಿಲ್ಲ.

Labels: Caste, Na. Krishnappa, Ramanatha Rai, Sangha Story, ಊಟ, ಜಾತಿ, ನ. ಕೃಷ್ಣಪ್ಪ, ರಮಾನಾಥ ರೈ, ಸಂಘದ ಕಥೆ

೯೩. ಖಾರದ ಊಟ

ಖಾರದ ಊಟ

   ಹಿಂದೆ ಸರಕಾರ್ಯವಾಹರಾಗಿದ್ದಂತಹ ಹೂ.ವೆ. ಶೇಷಾದ್ರಿಯವರು ತೀರಿಕೊಂಡ ನಂತರ ಅವರ ಬಗ್ಗೆ ಒಂದು ಸಣ್ಣ ಪುಸ್ತಕ ಬಿಡುಗಡೆಯಾಯಿತು. ಅದರಲ್ಲಿ ಅವರ ಬಗ್ಗೆ ನ. ಕೃಷ್ಣಪ್ಪನವರು ಬರೆದಿದ್ದಾರೆ.

    ಆಗ ೫೦ರ ದಶಕ. ಆಗ ಪ್ರಾಂತ ಪ್ರಚಾರಕರಾಗಿದ್ದ ಶೇಷಾದ್ರಿಯವರಿಗೆ ಅಲ್ಸರ್ ಖಾಯಿಲೆ ಇತ್ತು. ಆಗ ಮನೆಗಳಲ್ಲಿ ಉಳಿದುಕೊಳ್ಳುವ ಅವಕಾಶವು ಕಡಿಮೆ. ಒಂದು ಮನೆಯಲ್ಲಿ ಊಟದ ವ್ಯವಸ್ಥೆಯಾಗಿತ್ತು. ಊಟಕ್ಕೆ ವಿಪರೀತ ಖಾರ ಹಾಕಿದ್ದರು. ಆದರೂ ಶೇಷಾದ್ರಿಯವರು ಆ ಊಟವನ್ನೇ ತಿಂದರು.

    ನಂತರ ಅವರಿಗೆ ಭೇದಿ ಶುರುವಾಯಿತು. ಇವರಿಬ್ಬರೂ ಉಳಿದುಕೊಂಡಿದ್ದು ಮಹಡಿಯ ಮೇಲೆ. ಪ್ರತಿ ಇಪ್ಪತ್ತು ನಿಮಿಷಕ್ಕೊಮ್ಮೆ ಕೆಳಗಿಳಿದು ಬರಬೇಕು. ೨-೩ ಮೂರು ಬಾರಿ ಭೇದಿಯಾದ ಮೇಲೆ ಶೇಷಾದ್ರಿಯವರು ಕೃಷ್ಣಪ್ಪನವರ ಬಳಿ ’ಈ ಮನೆಯವರಿಗೆ ತೊಂದರೆ ಕೊಡುವುದು ಬೇಡ. ಊರ ಹೊರಗಿರುವ ಕೆರೆಯ ಪಕ್ಕದಲ್ಲೇ ಮಲಗೋಣ’ ಎಂದು ಹೇಳಿ, ಮನೆಯವರಿಗೆ ಗೊತ್ತಾಗದ ಹಾಗೆ ಹೊರಗೆ ಬಂದರು. ಬೆಳಿಗ್ಗೆ ಹೊತ್ತಿಗೆ ೧೫-೨೦ ಬಾರಿ ಭೇದಿಯಾಗಿದೆ. ಕೆರೆಯಲ್ಲೇ ಸ್ನಾನ ಮಾಡಿ ಮನೆಗೆ ಬಂದರು. ಮನೆಯವರಿಗೆ ಯಾವ ವಿಷಯವನ್ನೂ ಹೇಳಲಿಲ್ಲ. ಎಲ್ಲಾ ವ್ಯವಸ್ಥೆಗಳನ್ನೂ ಹೊಗಳಿ ಹೊರಟರು. ಅಂಥಾ ತೀವ್ರವಾದ ಅನಾರೋಗ್ಯವಿದ್ದಾಗಲೂ, ಖಾರದ ಊಟ ಮಾಡಿ ಆರೋಗ್ಯ ಹಾಳಾದರೂ ಯಾವುದೇ ಮಾತಾಡದೆ ಸಹಿಸಿಕೊಂಡರು.

Labels: H.S. Sheshadri, Loose Motion, Na. Krishnappa, Sangha Story, Ulcer, ಅಲ್ಸರ್, ನ. ಕೃಷ್ಣಪ್ಪ, ಭೇದಿ, ಸಂಘದ ಕಥೆ, ಹೂ.ವೆ. ಶೇಷಾದ್ರಿ

೯೨. ಸಂಘ ಮತ್ತು ಕಮ್ಯೂನಿಸಂ

ಸಂಘ ಮತ್ತು ಕಮ್ಯೂನಿಸಂ

   ಎಪ್ಪತ್ತರ ದಶಕದಲ್ಲಿ ಸಂಘದ ಮೂರನೆಯ ಸರಸಂಘಚಾಲರಾಗಿದ್ದ ಬಾಳಾಸಾಹೇಬ ದೇವರಸ್‍ರವರು ’ಆರ್.ಎಸ್.ಎಸ್ ಕೆಟ್ಟದ್ದು, ಅದು ಹೇಳುವ ಹಿಂದುತ್ವ ಕೆಟ್ಟದ್ದು ಎಂದು ತುಂಬಾ ಜನ ಹೇಳುತ್ತಾರೆ. ಆದರೆ ಆರ್.ಎಸ್.ಎಸ್. ಸ್ವಯಂಸೇವಕರು ತುಂಬಾ ಒಳ್ಳೆಯವರು ಎಂದು ಎಲ್ಲರೂ ಹೇಳುತ್ತಾರೆ. ಹಾಗೆಯೇ ಕಮ್ಯೂನಿಸಂ ಒಳ್ಳೆಯದು ಆದರೆ ಕಮ್ಯೂನಿಸ್ಟರು ಕೆಟ್ಟವರು ಎನ್ನುವ ಅಭಿಪ್ರಾಯವೂ ಅದೇ ರೀತಿ ಜನರಲ್ಲಿದೆ. ಕಮ್ಯೂನಿಸಂ ಎಂದರೆ ಇಡೀ ಜಗತ್ತನೇ ಒಂದು ಮಾಡಲು ಹೊರಟಿದೆ, ಆದರೆ ಈ ಹಿಂದುತ್ವವೆಂದರೆ ಸಂಕುಚಿತ ಎನ್ನುವ ಅಭಿಪ್ರಾಯವೂ ಇದೆ. ಯಾವಾಗ ಅದೇ ಜನ ನಮ್ಮ ಸ್ವಯಂಸೇವಕರನ್ನು ಒಪ್ಪಿಕೊಳ್ಳುತ್ತಾರೋ ಆಗ ನಮ್ಮ ಕಾರ್ಯಪದ್ಧತಿಯನ್ನೂ ಮತ್ತು ನಮ್ಮ ಕಾರ್ಯವು ಸರಿಯಿದೇ ಎನ್ನುವುದನ್ನೂ ಒಪ್ಪಿಕೊಳ್ಳಬೇಕು’.

    ’ಸ್ವಯಂಸೇವಕನು ಚೆನ್ನಾಗಿದ್ದಾನೆ ಎಂದರೆ ಅದನ್ನು ತಯಾರು ಮಾಡುವ ಶಾಖೆಯೂ ಚೆನ್ನಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಮತ್ತು ಶಾಖೆಯನ್ನು ಶುರು ಮಾಡಿದ ಸಂಘದ ವಿಚಾರವೂ ಸರಿಯಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಹಾಗೆಯೇ ಕಮ್ಯೂನಿಸ್ಟರು ಕೆಟ್ಟವರಾದ್ದರಿಂದ, ಕಮ್ಯೂನಿಸಂ ಕೂಡ ಕೆಟ್ಟದೆಂದು ಅವರು ತಿಳಿಯಬೇಕು. ಮತ್ತು ಕಮ್ಯೂನಿಸ್ಟ್ ಸಿದ್ಧಾಂತವೂ ಸರಿಯಿಲ್ಲವೆಂದು ಒಪ್ಪಿಕೊಳ್ಳಬೇಕು. ವಿಚಾರ ಮತ್ತು ಕಾರ್ಯಪದ್ಧತಿಗಳಿಂದ ತಯಾರಾಗುವವನೇ ಕಾರ್ಯಕರ್ತ. ಸಂಘದ ಕಾರ್ಯಕರ್ತನನ್ನು ಮೆಚ್ಚಿಕೊಂಡಿದ್ದರಿಂದ ಸಂಘದ ಕಾರ್ಯಪದ್ಧತಿಯೂ ಸರಿಯಿದೆ, ಸಂಘದ ವಿಚಾರವೂ ಸರಿಯಿದೆ ಎನ್ನುವುದು ಸಾಬೀತಾಗುತ್ತದೆ’ ಎಂದು ಹೇಳುತ್ತಿದ್ದರು.

Labels: Balasaheb Devaras, Communism, Sangha Story, ಕಮ್ಯೂನಿಸಂ, ಬಾಳಾಸಾಹೇಬ ದೇವರಸ್, ಸಂಘದ ಕಥೆ

೯೧. ಜಯಪ್ರಕಾಶ ನಾರಾಯಣರ ಕಣ್ಣಲ್ಲಿ ಸಂಘ

ಜಯಪ್ರಕಾಶ ನಾರಾಯಣರ ಕಣ್ಣಲ್ಲಿ ಸಂಘ

   ೧೯೭೫ನೇ ಇಸವಿಗೆ ಮುಂಚೆ ಜಯಪ್ರಕಾಶ್ ನಾರಾಯಣ ಹೇಗಿದ್ದರು? ೧೯೪೮ನೇ ಇಸವಿಯಲ್ಲಿ ಅವರು ಹೇಳಿದ್ದು ’ನನ್ನ ಜೀವನದ ಏಕಮಾತ್ರ ಧ್ಯೇಯವೆಂದರೆ ಆರ್.ಎಸ್.ಎಸ್.ನ ನಾಶ’ ಎಂದು. ಸುಮಾರು ೫ ಸಾವಿರ ಜನರನ್ನು ಕರೆದುಕೊಂಡು ದೆಹಲಿಯ ಆಗಿನ ಸಂಘಚಾಲಕಾರಿಗಿದ್ದ ಲಾಲಾ ಹಂಸರಾಜ ಗುಪ್ತರವರ ಮನೆಗೆ ಬೆಂಕಿ ಇಡಲು ಬಂದಿದ್ದರು. ಮುಂದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಡೆದ ಹೋರಾಟ ಅವರ ನೇತೃತ್ವದಲ್ಲೇ ಸಮಗ್ರ ಕ್ರಾಂತಿ ಅಥವಾ ಲೋಕಸಂಘ ಸಮಿತಿ ಹೆಸರಿನಲ್ಲಿ ನಡೆಯಿತು. ಅವರು ಜೈಲು ಸೇರಿದಾಗ ಅವರು ಹೇಳಿದ್ದು ’ಈಗ ಆರ್.ಎಸ್.ಎಸ್ ಬಿಟ್ಟರೆ ಇನ್ಯಾರೂ ಈ ದೇಶಕ್ಕೆ ಗತಿ ಇಲ್ಲ. ಈ ದೇಶವು ಈ ಸ್ಥಿತಿಯಿಂದ ಪಾರಾಗಬೇಕಾದರೆ ಅದು ಸಂಘದಿಂದ ಮಾತ್ರ ಸಾಧ್ಯ’ ಎಂದು! ತುರ್ತು ಪರಿಸ್ಥಿತಿಯ ನಂತರ ಅವರು ’ಆರ್.ಎಸ್.ಎಸ್ ಅನ್ನು ಯಾರಾದರೂ ಫ್ಯಾಸಿಸ್ಟ್ ಎಂದು ಕರೆದರೆ, ನನ್ನನ್ನೂ ಫ್ಯಾಸಿಸ್ಟ್ ಎಂದು ಕರೆಯಿರಿ’ ಎಂದರು.

    ಹಾಗೆಯೇ, ಆಚಾರ್ಯ ವಿನೋಬಾ ಭಾವೆಯವರು ’ನಾನೂ ಒಬ್ಬ ಸಂಘದ ಅನೌಪಚಾರಿಕ ಸ್ವಯಂಸೇವಕನೇ’ ಎಂದಿದ್ದರು. ಇನ್ನೊಬ್ಬ ಸರ್ವೋದಯದ ಕಾರ್ಯಕರ್ತರು ’ಆರ್.ಎಸ್.ಎಸ್ ಎಂದರೆ 'Ready for Selfless Service' ಎಂದು ಹೇಳಿದ್ದರು.

Labels: Emergency, Fascist, Jayaprakash Narayan, Sangha Story, ಜಯಪ್ರಕಾಶ ನಾರಾಯಣ, ತುರ್ತು ಪರಿಸ್ಥಿತಿ, ಫ್ಯಾಸಿಸ್ಟ್, ಸಂಘದ ಕಥೆ

೯೦. ಸಂಘಕ್ಕೆ ಹೆಸರು

ಸಂಘಕ್ಕೆ ಹೆಸರು

   ಪ್ರಾರಂಭವಾದಾಗ ಸಂಘಕ್ಕೆ ಹೆಸರೂ ಇರಲಿಲ್ಲ. ಆದರೆ ಸಂಘಕ್ಕೆ ಹೆಸರು ಇಡಬೇಕು ಎನ್ನುವುದು ಮತ್ತು ಯಾವ ಹೆಸರು ಇಡಬೇಕು ಎನ್ನುವ ಕಲ್ಪನೆ ಡಾಕ್ಟರ್‌ಜಿಯವರಿಗಿತ್ತು. ಸಂಘದ ಎಲ್ಲ ನಿರ್ಣಯಗಳ ಒಂದು ಪುಸ್ತಕವಿದೆ. ಅದರಲ್ಲಿ ೧೯೨೭ರಿಂದ ತೆಗೆದುಕೊಂಡ ಎಲ್ಲ ನಿರ್ಣಯಗಳ ವಿವರಗಳಿವೆ. ಮೊಟ್ಟಮೊದಲ ನಿರ್ಣಯವನ್ನು ಮರಾಠಿಯಲ್ಲಿ ಬರೆಯಲಾಗಿದೆ. ಪಾಂಡೆ ಎನ್ನುವ ಒಬ್ಬ ಕಾರ್ಯದರ್ಶಿಗಳು ಅದನ್ನು ಬರೆದಿದ್ದಾರೆ.

    ಸಂಘದ ಹೆಸರು ಏನಿರಬೇಕೆಂದು ಒಂದು ಬೈಠಕ್‍ನಲ್ಲಿ ಚರ್ಚೆಯಾಯಿತು. ಅದರಲ್ಲಿ ೨೭ ಜನ ಸ್ವಯಂಸೇವಕರು ಭಾಗವಹಿಸಿದ್ದರು. ಆ ಸಭೆಯಲ್ಲಿ ಮೂರು ಹೆಸರುಗಳನ್ನು ಸೂಚಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘ, ಚರೀ ಪಡಕಾ ಸಂಘ ಮತ್ತು ಇನ್ನೊಂದು ಹೆಸರು. ಮತದಾನ ಹಾಕಲಾಯಿತು. ಬಂದವರಲ್ಲಿ ಇಬ್ಬರು ಮತದಾನದಲ್ಲಿ ಭಾಗವಹಿಸದೆ ಹೊರಗುಳಿದರು. ಉಳಿದ ೨೫ ಜನ ಮೂರೂ ಹೆಸರುಗಳನ್ನು ಮುಂದಿಟ್ಟುಕೊಂಡು ಮತ ಹಾಕಿದರು.

    ಅದರಲ್ಲಿ ೧೮ ಮತಗಳು ರಾಷ್ಟ್ರೀಯ ಸ್ವಯಂಸೇವಕ ಸಂಘ ಹೆಸರಿನ ಪರವಾಗಿ ಬಂದದ್ದರಿಂದ ಸಂಘದ ಹೆಸರನ್ನು ಅದೇ ರೀತಿಯೇ ತೀರ್ಮಾನಿಸಿದರೆಂದು ಬರೆದು ಪಾಂಡೆಯವರು ಸಹಿ ಹಾಕಿದ್ದಾರೆ. ಡಾಕ್ಟರ್‌ಜಿಯವರು ಅದೇ ಹೆಸರಿಡಬೇಕೆಂದು ಅಂದುಕೊಂಡಿದ್ದರು. ಅದನ್ನು ಅವರೇ ಹೇಳಿದ್ದರೆ ಎಲ್ಲರೂ ಒಪ್ಪಿಕೊಳ್ಳುತ್ತಿದ್ದರು. ಆದರೆ ಡಾಕ್ಟರ್‌ಜಿಯವರಿಗೆ ಎನಿಸಿತು ’ಇಲ್ಲಿ ಯಾರಿಗೂ ಇದು ತನ್ನ ಅಭಿಪ್ರಾಯ ನಡೆಯುತ್ತದೆ ಎಂದು ಎನಿಸಬಾರದು. ನಾವು ಎನ್ನುವ ಭಾವ ಬೆಳೆಯಬೇಕು. ಎಲ್ಲರಿಗೂ ತಮ್ಮ ಆಭಿಪ್ರಾಯ ವ್ಯಕ್ತಪಡಿಸುವ ಅವಕಾಶ ಇರಬೇಕು. ಅದನ್ನು ಅವರು ಪ್ರತಿಪಾದನೆಯನ್ನೂ ಮಾಡಬೇಕು. ಆದರೆ ಕೊನೆಯಲ್ಲಿ ಏನು ನಿರ್ಣಯವಾಗುತ್ತದೆಯೋ ಅದನ್ನು ಎಲ್ಲರೂ ಪಾಲಿಸಬೇಕು. ಅನುಶಾಸನವೂ ಇರಬೇಕು, ಅಭಿಪ್ರಾಯ ಸ್ವಾತಂತ್ರ್ಯವೂ ಇರಬೇಕು’.

Labels: Doctorji, Freedom of Expression, Sangha Story, ಅಭಿಪ್ರಾಯ ಸ್ವಾತಂತ್ರ್ಯ, ಡಾಕ್ಟರ್‌ಜಿ, ಸಂಘಕ್ಕೆ ಹೆಸರು, ಸಂಘದ ಕಥೆ

Friday, November 23, 2012

೮೮. ಅವಮಾನವೂ ನೈವೇದ್ಯವೇ

ಅವಮಾನವೂ ನೈವೇದ್ಯವೇ

   ಹತ್ತಿರದ ಒಂದು ಊರಿನಲ್ಲಿ ಒಬ್ಬ ಪ್ರಸಿದ್ಧ ವಕೀಲರಿದ್ದರು. ಡಾ|| ಮೂಂಜೆಯವರಿಗೆ ಅವರ ಪರಿಚಯವಿತ್ತು. ’ನಾನು ಅವರಿಗೆ ಫೋನ್ ಮಾಡಿರುತ್ತೇನೆ. ನಿನ್ನ ಬಳಿಯಲ್ಲಿ ಒಂದು ಚೀಟಿಯನ್ನೂ ಕೊಡುತ್ತೇನೆ. ಅವರ ಮನೆಯಲ್ಲೇ ಉಳಿದುಕೋ. ಅಲ್ಲಿ ಒಂದು ಶಾಖೆ ಶುರು ಮಾಡಬಹುದು’ ಎಂದು ಹೇಳಿ ಡಾಕ್ಟರ್‌ಜಿಯವರನ್ನು ಕಳಿಸಿದರು. ಡಾಕ್ಟರ್‌ಜಿಯವರು ರೈಲಿನಲ್ಲಿ ಅಲ್ಲಿಗೆ ಹೋದರು. ತಾವು ಆ ರೈಲಿನಲ್ಲಿ ಬರುವುದಾಗಿ ಮೊದಲೇ ತಿಳಿಸಿದ್ದರು. ಆದರೆ ಅವರನ್ನು ಕರೆದುಕೊಂಡು ಬರಲು ಯಾರು ರೈಲು ನಿಲ್ದಾಣಕ್ಕೆ ಬಂದಿರಲಿಲ್ಲ. ಡಾಕ್ಟರ್‌ಜಿಯವರು ನಡೆದೇ ಆ ವಕೀಲರ ಮನೆಗೆ ಹೋದರು.

    ಆ ವಕೀಲರದು ತುಂಬಾ ದೊಡ್ಡ ಮನೆ. ೮-೧೦ ಮೆಟ್ಟಿಲು ಹತ್ತಿ ಮನೆಯ ಒಳಗೆ ಹೋಗಬೇಕು. ವಿಶಾಲವಾದ ಅರಮನೆಯಂತಹ ಮನೆ. ಹೊರಗೆ ವಿಶಾಲವಾದ ಹೂತೋಟ. ಹತ್ತಾರು ಜನ ಆ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊರ ಗೇಟು ಮುಚ್ಚಿದೆ. ಒಬ್ಬ ಕಾವಲು ಕಾಯುತ್ತಿದ್ದಾನೆ. ಡಾಕ್ಟರ್‌ಜಿಯವರು ಒಂದು ಚೀಟಿಯಲ್ಲಿ ತಮ್ಮ ಪರಿಚಯವನ್ನು ಬರೆದು ಒಳಗೆ ಕಳುಹಿಸಿಕೊಟ್ಟರು. ಒಳಗೆ ಬರಲು ಸೂಚನೆ ಬಂದಿತು.

    ಒಳಗೆ ಬಂದಾಗ ಅ ವಕೀಲರು ಕಾಲ ಮೇಲೆ ಕಾಲು ಹಾಕಿಕೊಂಡು ತನ್ನ ಶ್ರೀಮಂತಿಕೆಯ ಅಹಂಕಾರವನ್ನು ತೋರಿಸುತ್ತಾ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತಿದ್ದರು. ಡಾಕ್ಟರ್‌ಜಿಯವರನ್ನು ನೋಡಿ ಕುಳಿತುಕೊಳ್ಳಲೂ ಹೇಳದೆ ಒದುತ್ತಲೇ ಇದ್ದರು. ಡಾಕ್ಟರ್‌ಜಿಯವರು ವೈದ್ಯರಾಗಿದ್ದವರು. ಸ್ವಾಭಿಮಾನಿಗಳಾಗಿದ್ದವರು. ಕುಳಿತುಕೊಳ್ಳಲು ಹೇಳದಿದ್ದರಿಂದ ನಿಂತೇ ಇದ್ದರು. ಸುಮಾರು ೮-೧೦ ನಿಮಿಷ ಆ ವಕೀಲರು ಡಾಕ್ಟರ್‌ಜಿಯವರ ಕಡೆ ನೋಡಲಿಲ್ಲ, ಮಾತನಾಡಿಸಲೂ ಇಲ್ಲ. ಒಮ್ಮೆ ಕಿರುನೋಟದಲ್ಲಿ ಡಾಕ್ಟರ್‌ಜಿಯವರ ಕಡೆ ನೋಡುವುದು, ಮತ್ತೆ ಓದುವ ಹಾಗೆ ಮಾಡುವುದು. ಹೀಗೆಯೇ ನಡೆದಿತ್ತು.

    ಡಾಕ್ಟರ್‌ಜಿಯವರಿಗೆ ಗೊತ್ತಾಯಿತು. ತಾವು ಬಂದಿರುವುದೂ ಗೊತ್ತಿದ್ದೂ, ನಿಂತಿರುವುದು ಅರಿವಿದ್ದೂ, ತಾನು ತುಂಬಾ ವ್ಯವಧಾನವಿಲ್ಲದವನು ಎಂದು ತೋರಿಸಲು ವಕೀಲರು ನಾಟಕವಾಡುತ್ತಿದ್ದಾರೆ ಎಂದು. ಆದರೆ ಡಾಕ್ಟರ್‌ಜಿಯವರಿಗೆ ಆ ವ್ಯಕ್ತಿಯನ್ನು ಗೆಲ್ಲಬೇಕಾಗಿತ್ತು. ಎಷ್ಟೇ ಆಗಲಿ ಸಂಘಟನ ಕುಶಲರು. ವಕೀಲರು ಓದುತ್ತಿದ್ದ ಪುಸ್ತಕವನ್ನು ನೋಡಿದರು. ಅದು ಹೋಮಿಯೋಪತಿ ಬಗೆಗಿನ ಪುಸ್ತಕವಾಗಿತ್ತು. ಡಾಕ್ಟರ್‌ಜಿಯವರು ಅಲೋಪತಿ ವೈದ್ಯರಾದರೂ, ಹೋಮಿಯೋಪತಿಯ ಬಗ್ಗೆ ತಿಳಿದಿದ್ದರು. ನಿಂತಲ್ಲೇ ಡಾಕ್ಟರ್‌ಜಿಯವರು ಹೋಮಿಯೋಪತಿಯ ಬಗ್ಗೆ ಮಾತನಾಡಲು ಶುರು ಮಾಡಿದರು.

    ’ಎಂಥ ಅದ್ಭುತ ವೈದ್ಯ ಪದ್ಧತಿ ಅದು! ನೋಡುವುದಕ್ಕೆ ಒಂದು ಸಣ್ಣ ಸಕ್ಕರೆ ಗುಳಿಗೆ ರೀತಿಯಲ್ಲಿ ಇರುತ್ತದೆ. ಎಂಥೆಂತಹ ಖಾಯಿಲೆಗಳನ್ನು ವಾಸಿ ಮಾಡಬಲ್ಲದು ಅದು!’ ಎಂದು ಹೇಳಿದರು. ಅದನ್ನು ಕೇಳಿ ವಕೀಲರು ಓದುವುದನ್ನು ನಿಲ್ಲಿಸಿ ಪುಸ್ತಕವನ್ನು ಮುಚ್ಚಿಟ್ಟು ಡಾಕ್ಟರ್‌ಜಿಯವರು ಹೇಳುತ್ತಿದ್ದನ್ನು ಕೇಳಲು ಶುರು ಮಾಡಿದರು. ಒಂದಾದ ನಂತರ ಸಂಭಾಷಣೆ ಪ್ರಾರಂಭವಾಯಿತು. ವಕೀಲರು ಇದ್ದಕ್ಕಿದ್ದಂತೆ ಗಮನಿಸಿದಂತೆ ’ಅರೆ, ನಿಂತೇ ಇದ್ದೀರಲ್ಲಾ. ಕುಳಿತುಕೊಳ್ಳಿ’ ಎಂದರು. ಕೆಲಸದವನನ್ನು ಕರೆದು ’ಅವರು ಬಂದು ಇಷ್ಟು ಹೊತ್ತಾಗಿದೆ. ಚಹ ಕೊಡಲು ಗೊತ್ತಾಗುವುದಿಲ್ಲವೇ? ಹೋಗು, ಚಹ ತಾ’ ಎಂದು ಕಳಿಸಿದರು.

    ಕೆಲಸದವನು ಚಹ ತರಲು, ಡಾಕ್ಟರ್‌ಜಿಯವರು ಮನಸ್ಸಿನಲ್ಲೇ ನಿಶ್ಚಯ ಮಾಡಿದರು ’ಇವರಿಗೆ ಅಹಂಕಾರ ಇದೆ. ಆದರೆ ಅವರಿಗೆ ಪ್ರಭಾವವೂ ಇದೆ. ಅದನ್ನು ಉಪಯೋಗಿಸಿಕೊಳ್ಳಬೇಕು. ಇವರನ್ನು ಬಿಡಬಾರದು’ ಎಂದು. ಡಾಕ್ಟರ್‌ಜಿ ಆ ಮನೆಯಲ್ಲಿ ತಮ್ಮ ಸಾಮಾನನ್ನು ಇಟ್ಟು ಹೊರಗೆ ಸಂಪರ್ಕಕ್ಕೆ ಹೋಗುತ್ತಿದ್ದರು. ರಾತ್ರಿ ಬಂದು ಉಳಿದುಕೊಳ್ಳುತ್ತಿದ್ದರು. ಅಲ್ಲಿ ಒಮ್ಮೆಯೂ ಊಟ, ತಿಂಡಿ ಮಾಡುತ್ತಿರಲಿಲ್ಲ.

    ೭-೮ ದಿನಗಳ ನಂತರ ಆ ವಕೀಲರ ಹತ್ತಿರ ಬಂದು ’ಇಲ್ಲಿ ಸಂಘದ ಶಾಖೆ ಪ್ರಾರಂಭ ಮಾಡಬೇಕಾಗಿದೆ. ಅದಕ್ಕಾಗಿ ನಿಮ್ಮ ಮನೆಯಲ್ಲಿ ಒಂದು ಬೈಠಕ್ ಕರೆಯಲು ಯೋಚಿಸಿದ್ದೇನೆ’ ಎಂದರು. ಅದಕ್ಕೆ ವಕೀಲರು ’ಇದೊಂದು ಸುಡುಗಾಡು ಊರು. ಇಲ್ಲಿ ನಾಲ್ಕು ಜನ ಎಂದೂ ಸೇರುವುದಿಲ್ಲ. ಸಂಘಟನೆಯೆಂದರೆ ಯಾರು ಬರುವುದಿಲ್ಲ’ ಎಂದರು. ಆಗ ಡಾಕ್ಟರ್‌ಜಿ ’ಇಲ್ಲಿ ನಿಮಗೆ ಒಳ್ಳೆ ಹೆಸರಿದೆ. ನಿಮ್ಮ ಹೆಸರು ಹೇಳಿದರೆ ಸಾಕಷ್ಟು ಜನ ಬರುತ್ತಾರೆ’ ಎಂದು ಹೊಗಳಿ ಒಪ್ಪಿಸಿದರು.

    ಸುಮಾರು ಒಂದು ನೂರುಕ್ಕೂ ಹೆಚ್ಚು ಜನ ಆ ಬೈಠಕ್‍ಗೆ ಬಂದರು. ಡಾಕ್ಟರ್‌ಜಿ ಎಲ್ಲರಿಗೂ ಸಂಘದ ಬಗ್ಗೆ, ಶಾಖೆಯ ಬಗ್ಗೆ ಹೇಳಿ ಆ ವಕೀಲರನ್ನೇ ಸಂಘಚಾಲಕರೆಂದು ಘೋಷಣೆ ಮಾಡಿದರು. ಓಡಾಡಿದ್ದು, ನೂರಾರು ಜನರನ್ನು ಪರಿಶ್ರಮ ವಹಿಸಿ ಸೇರಿಸಿದ್ದು ಡಾಕ್ಟರ್‌ಜಿಯವರಾದರೂ ವಕೀಲರ ಮನೆಯಲ್ಲಿ ಒಮ್ಮೆ ಊಟವನ್ನು ಮಾಡದಿದ್ದರೂ ಅವರನ್ನೇ ಸಂಘಚಾಲಕರನ್ನಾಗಿ ಘೋಷಣೆ ಮಾಡಿದ್ದರು.

Labels: Doctorji, Insult, Lawyer, Sangha Story, Sanghachalak, ಅವಮಾನ, ಡಾಕ್ಟರ್‌ಜಿ, ವಕೀಲ, ಸಂಘಚಾಲಕ, ಸಂಘದ ಕಥೆ

Thursday, November 22, 2012

೮೩. ಕಾಫೀ ಚೀಟಿ

ಕಾಫೀ ಚೀಟಿ

   ಅದೊಂದು ಸಂಘ ಶಿಕ್ಷಾವರ್ಗ. ಅನೇಕ ತರುಣರು, ಪ್ರೌಢರೂ ಶಿಕ್ಷಾರ್ಥಿಯಾಗಿ ಬಂದಿದ್ದರು. ಪ್ರತಿಯೊಬ್ಬ ಶಿಕ್ಷಾರ್ಥಿಗೂ ಬೆಳಿಗ್ಗೆ ಮತ್ತು ಸಂಜೆಯ ಪಾನೀಯ ಪಡೆಯಲು ಚೀಟಿ ಕೊಡಲಾಗಿತ್ತು.

    ಒಬ್ಬ ಹಿರಿಯ ಶಿಕ್ಷಾರ್ಥಿ ತಮ್ಮ ಕಾಫೀ ಚೀಟಿಯನ್ನು ಮರೆತು ಬಂದಿದ್ದರು. ಕಾಫೀ ಕೊಡುತ್ತಿದ್ದ ಹುಡುಗನ ಪರಿಚಯ ಅವರಿಗಿತ್ತು. ಅವರ ಮಗನ ಸಹಪಾಟಿಯಾದ್ದ. ಹಾಗಾಗಿ ಚೀಟಿಯಿಲ್ಲದೆಯೇ ಕಾಫೀ ಪಡೆಯಬಹುದು ಎಂದು ಸಾಲಿನಲ್ಲಿ ನಿಂತಿದ್ದರು.

    ಏಳೆಂಟು ಜನರ ಅವರ ಮುಂದೆ ಸಾಲಿನಲ್ಲಿ ನಿಂತಿದ್ದ ಇನ್ನೊಬ್ಬ ಹುಡುಗ ಚೀಟಿಯನ್ನು ಮರೆತು ಬಂದಿದ್ದ. ಆದರೂ ಅವನು ಕಾಫಿಯನ್ನು ಕೇಳಲು, ಕಾಫೀ ಕೊಡುತ್ತಿದ್ದ ಹುಡುಗ ನಿರಾಕರಿಸಿ ಕಳುಹಿಸಿದ. ಇದನ್ನು ಗಮನಿಸುತ್ತಿದ್ದ ಹಿರಿಯರಿಗೆ ನಾಚಿಕೆಯಾಯಿತು. ತಾವು ಅವನಲ್ಲಿ ಚೀಟಿ ಇಲ್ಲದೆಯೇ ಕಾಫೀ ಕೇಳಿದರೆ ಅವನಿಗೆ ಮುಜುಗರವಾಗಬಹುದು. ಸ್ನೇಹಿತನ ತಂದೆ ಎಂಬ ಪರಿಚಯದ ದಾಕ್ಷಿಣ್ಯ ಅವನ ಕರ್ತ್ಯವ್ಯ ನಿರ್ವಹಣೆಗೆ ಅಡ್ಡ ಬರಬಹುದು ಎಂದು ಅರಿತು ಮೆಲ್ಲಗೆ ಸಾಲಿನಿಂದ ಜಾಗ ಬಿಟ್ಟು ನಡೆದರು.

Labels: Coffee Coupon, Duty, Obligation, Sangha Shikshavarga, Sangha Story, ಕರ್ತವ್ಯ, ಕಾಫೀ ಚೀಟಿ, ಸಂಘ ಶಿಕ್ಷಾವರ್ಗ, ಸಂಘದ ಕಥೆ

೮೧. ಅನುಶಾಸನದ ಪ್ರಭಾವ

ಅನುಶಾಸನದ ಪ್ರಭಾವ

   ಮಂಗಳೂರಿನಲ್ಲಿ ಒಂದು ಮಹಾಸಾಂಘಿಕ್ ಕಾರ್ಯಕ್ರಮ. ಸುಮಾರು ೪೦,೦೦೦ ಗಣವೇಷಧಾರಿ ಸ್ವಯಂಸೇವಕರು. ಸುಮಾರು ೪೦ ಸಾವಿರ ಇತರ ಜನರು. ಮತ್ತೂ ೨೦ ಸಾವಿರ ಮಾತೆಯರು.

    ಕಾರ್ಯಕ್ರಮದ ನಂತರ ’ಉತ್ಥಿಷ್ಠ’ ಆಜ್ಞೆ ಕೊಟ್ಟಾಗ ಎಲ್ಲರೂ ಎದ್ದು ನಿಂತರು. ’ವಿಕಿರ’ ಕೊಟ್ಟಾಗ ಎಲ್ಲರೂ ಬಲಕ್ಕೆ ತಿರುಗಿದರು. ನಂತರ ’ವಾಮವೃತ’ ಆಜ್ಞೆ ಬಂತು; ಎಲ್ಲರೂ ಎಡಕ್ಕೆ ತಿರುಗಿದರು.

    ಕಾರ್ಯಕ್ರಮ ನೋಡಲು ಬಂದ ಎಲ್ಲರಿಗೂ ಒಂದು ಪತ್ರಿಕೆಯನ್ನು ತರಲು ಹೇಳಲಾಗಿತ್ತು, ನೆಲದ ಮೇಲೆ ಹಾಸಿ ಕುಳಿತುಕೊಳ್ಳಲು. ನಂತರ ಸೂಚನೆ ಕೊಡಲಾಯಿತು. ತಮ್ಮ ತಮ್ಮ ಪತ್ರಿಕೆಯನ್ನು ತೆಗೆದುಕೊಂಡು ಹೋಗಲು.

    ಎಲ್ಲರೂ ಹೋದ ನಂತರ ಆ ಮೈದಾನದಲ್ಲಿ ಒಂದು ಪತ್ರಿಕೆಯೂ ಕಾಣಸಿಗಲಿಲ್ಲ. ಸ್ವಯಂಸೇವಕರನ್ನು ನೋಡಿದ ಇತರ ಜನರಿಗೂ ಅದೇ ಅನುಶಾಸನ ಪರಿಣಾಮ ಬೀರಿತ್ತು.
   
Labels: Discipline, Mangalore, Sangha Story, ಅನುಶಾಸನ, ಪತ್ರಿಕೆ, ಮಂಗಳೂರು, ಸಂಘದ ಕಥೆ

೮೦. ಭಗವೆಗೆ ಒಂದು ಇಂಚೂ ಕೊಡುವುದಿಲ್ಲ

ಭಗವೆಗೆ ಒಂದು ಇಂಚೂ ಕೊಡುವುದಿಲ್ಲ

   ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ ನೆಹರೂ ಒಮ್ಮೆ ವಿಶ್ರಾಂತಿಗೆಂದು ಕಾಶ್ಮೀರಕ್ಕೆ ಹೋಗಿದ್ದರು. ಡಿಸೆಂಬರ್ ತಿಂಗಳಿನ ಒಂದು ಬೆಳಿಗ್ಗೆ. ಹೊರಗೆ ಓಡಾಡುತ್ತಿದ್ದಾಗ ಒಂದು ಭಗವಾಧ್ವಜ ಕಾಣಿಸಿತು.

    ಅದನ್ನು ನೋಡಿ ಹತ್ತಿರ ಹೋಗಿ ವಿಚಾರಿಸಿದಾಗ ಅಲ್ಲಿ ಸಂಘದ ಶಾಖೆ ನಡೆಯುತ್ತಿದೆ ಎಂದು ತಿಳಿಯಿತು.

    ಆಗ ಕೆಂಡಮಂಡಲವಾದ ನೆಹರು ಕೋಪದಿಂದ "ಈ ಧ್ವಜಕ್ಕೆ ನಾನು ಒಂದು ಇಂಚೂ ಜಾಗ ಕೊಡುವುದಿಲ್ಲ. ಹಾಗೆ ಮಾಡಲು ನಾನು ಎಲ್ಲ ಶಕ್ತಿಯನ್ನೂ ಹಾಕುತ್ತೇನೆ. ಅದೂ ಸಾಲದಿದ್ದರೆ ಪ್ರಪಂಚದ ಶಕ್ತಿಯನ್ನು ತಂದು ಅದನ್ನು ನಾಶ ಮಾಡುತ್ತೇನೆ" ಎಂದು ಕೂಗಾಡಿದರು.

    ಆದೇ ನೆಹರು ಮುಂದೆ ೧೯೬೨ರ ಚೀನಾ ಯುದ್ಧದ ಸಮಯದಲ್ಲಿ ಸಂಘದ ನೆರವನ್ನು ಪಡೆಯಬೇಕಾದ ಪರಿಸ್ಥಿತಿ ಬಂದಿತು. ಸ್ವಯಂಸೇವಕರು ಆ ಯುದ್ಧದಲ್ಲಿ ಮಾಡಿದ ದೇಶಸೇವೆಯನ್ನು ಗುರುತಿಸಿ ನೆಹರೂ ೧೯೬೩ ಜನವರಿ ೨೩ರ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಸಂಘದ ಸ್ವಯಂಸೇವಕರನ್ನು ಆಹ್ವಾನಿಸಿದರು.

Labels: Kashmir, Nehru, No Place for Bhagva, Sangha Story, ಒಂದು ಇಂಚೂ ಕೊಡುವುದಿಲ್ಲ, ಕಾಶ್ಮೀರ, ನೆಹರು, ಭಗವಧ್ವಜ, ಸಂಘದ ಕಥೆ

೭೬. ಗುರೂಜಿ ಹೇಗೆ ಊಟ ಮಾಡುತ್ತಾರೆ?

ಗುರೂಜಿ ಹೇಗೆ ಊಟ ಮಾಡುತ್ತಾರೆ?

    ಶ್ರೀ ಗುರೂಜಿ ಒಮ್ಮೆ ಕೇರಳದ ಪ್ರವಾಸದಲ್ಲಿದ್ದರು. ಒಂದು ಊರಿನಿಂದ ಇನ್ನೊಂದು ಊರಿಗೆ ರೈಲಿನಲ್ಲಿ ಹೊರಟಿದ್ದರು. ಮಧ್ಯ ಮಾರ್ಗದಲ್ಲಿ ಒಂದು ಊರಿನಲ್ಲಿ ಅವರಿಗೆ ಭೋಜನವನ್ನು ತಲುಪಿಸುವ ಏರ್ಪಾಡಾಗಿತ್ತು.

    ಅವರಿಗೆ ಭೋಜನವನ್ನು ತಲುಪಿಸಲು ಅಲ್ಲಿನ ಒಬ್ಬ ಸ್ವಯಂಸೇವಕರನ್ನು ನೇಮಿಸಲಾಗಿತ್ತು. ಅವರು ತಮ್ಮ ಮಗಳ ಸಮೇತ ರೈಲು ನಿಲ್ದಾಣಕ್ಕೆ ಬಂದಿದ್ದರು. ರೈಲು ಬಂತು. ಊಟದ ಡಬ್ಬವನ್ನು ಕೊಟ್ಟು ಆ ಸ್ವಯಂಸೇವಕರು ಶ್ರೀ ಗುರೂಜಿಯವರೊಡನೆ ಮಾತನಾಡುತ್ತಿದ್ದರು. ಜೊತೆಯಲ್ಲಿ ಬಂದಿದ್ದ ಅವರ ಮಗಳು ತಂದೆಯ ಬಟ್ಟೆಯನ್ನು ಜಗ್ಗುತ್ತಾ ಏನೋ ಕೇಳುತ್ತಿದ್ದಳು. ಆ ಸ್ವಯಂಸೇವಕರು ಅವಳನ್ನು ಸಮಾಧನಪಡಿಸುತ್ತಲೇ ಮಾತು ಮುಂದುವರೆಸಿದ್ದರು.

    ಹುಡುಗಿಯು ಏನೋ ಕೇಳುತ್ತಿದ್ದುದನ್ನು ಗಮನಿಸಿದ ಶ್ರೀ ಗುರೂಜಿಯವರು ಆ ಸ್ವಯಂಸೇವಕರನ್ನು ವಿಚಾರಿಸಿದರು. ಮುಜುಗರಪಡುತ್ತಲೇ ಅವರು ಹೇಳಿದರು "ಹುಡುಗಿ ಕೇಳುತ್ತಿದ್ದಾಳೆ, ’ಗುರೂಜಿಯವರ ಮುಖದ ತುಂಬಾ ಕೂದಲೇ ಇದೆಯಲ್ಲಾ, ಅವರು ಊಟ ಹೇಗೆ ತಿನ್ನುತ್ತಾರೆ?’".

    ಆ ಮಾತನ್ನು ಕೇಳುತ್ತಲೇ ಶ್ರೀ ಗುರೂಜಿಯವರು ಹೊಟ್ಟೆ ತುಂಬಾ ನಕ್ಕು ಆನಂದಪಟ್ಟರು.

    ಅನೇಕ ವರ್ಷಗಳು ಕಳೆದವು. ಶ್ರೀ ಗುರೂಜಿಯವರು ಕೇರಳದ ಸಂಘಚಾಲಕರ ಮಗಳ ಮದುವೆ ಕಾರ್ಯಕ್ರಮಕ್ಕಾಗಿ ಬಂದಿದ್ದರು. ಮದುವೆ ಕಾರ್ಯಕ್ರಮದ ನಂತರ ಎಲ್ಲರೂ ಊಟಕ್ಕೆ ಕುಳಿತರು. ತಮ್ಮ ಎಲೆಯ ಬಳಿ ಬಡಿಸಲು ಬಂದ ಸಂಘಚಾಲಕರ ಸೊಸೆಯನ್ನು ನೋಡಿ ಶ್ರೀ ಗುರೂಜಿ ನಗುತ್ತಾ ಕೇಳಿದರು "ಈಗ ಗೊತ್ತಾಯಿತೇ ನಾನು ಹೇಗೆ ಊಟ ಮಾಡುತ್ತೇನೆ ಎಂದು?"

    ಶ್ರೀ ಗುರೂಜಿ ಏಕೆ ಆ ರೀತಿ ಹೇಳಿದರೆಂದು ಜೊತೆಯಲ್ಲಿ ಊಟಕ್ಕೆ ಕುಳಿತಿದ್ದ ಎಲ್ಲರಿಗೂ ಆಶ್ಚರ್ಯವಾಯಿತು.

    ಆಗ ಶ್ರೀ ಗುರೂಜಿ ಎಲ್ಲರಿಗೂ ಹಿಂದೆ ನಡೆದ ರೈಲಿನ ಘಟನೆ ಹೇಳಿ, ತಮಗೆ ಅಡಿಗೆ ಬಡಿಸುತ್ತಿದ್ದ ಸಂಘಚಾಲಕರ ಸೊಸೆಯೇ ಆ ಹುಡುಗಿ ಎಂದು ಹೇಳಿದರು. ಆಷ್ಟು ವರ್ಷ ನಂತರವೂ ಆ ಹುಡುಗಿಯನ್ನು ಗುರುತಿಸಬಲ್ಲರಾದ ಶ್ರೀ ಗುರೂಜಿಯವರ ನೆನಪಿನ ಶಕ್ತಿಯು ಎಲ್ಲರನ್ನು ವಿಸ್ಮಯಗೊಳಿಸಿತ್ತು.

Labels: Sangha Story, Sri Guruji, Sri Guruji's Memory, ಊಟ ಹೇಗೆ ಮಾಡುತ್ತಾರೆ, ಕೇರಳ, ನೆನಪಿನ ಶಕ್ತಿ, ಶ್ರೀ ಗುರೂಜಿ, ಸಂಘದ ಕಥೆ,

೭೫. ಕೊನೆಯ ಹಿಂದುವನ್ನೂ ರಕ್ಷಿಸಿ

ಕೊನೆಯ ಹಿಂದುವನ್ನೂ ರಕ್ಷಿಸಿ

   ೧೯೪೭ರ ದೇಶ ವಿಭಜನೆ ಸಂಘದ ಸ್ವಯಂಸೇವಕರಿಗೆ ಮತ್ತು ಇತರ ದೇಶ ಪ್ರೇಮಿಗಳಿಗೆ ಅತ್ಯಂತ ದುಃಖದ ವಿಷಯ.

    ವಿಭಜನೆಯ ಸ್ವಲ್ಪ ಸಮಯದ ಮುಂಚೆ ಒಂದು ಸಂಘ ಶಿಕ್ಷಾ ವರ್ಗ ಈಗಿನ ಪಾಕಿಸ್ಥಾನದ ಭಾಗದಲ್ಲಿ ನಡೆಯುತ್ತಿತ್ತು. ಸುಮಾರು ೨೦೦ ಸ್ವಯಂಸೇವಕರು ಭಾಗವಹಿಸಿದ್ದರು. ಮುಂದಿನ ಸಂಘರ್ಷದ ಸಮಯದಲ್ಲಿ ನಡೆಯಬಹುದಾದ ಘಟನೆಗಳ ಬಗ್ಗೆ ಮೊದಲೇ ಕಲ್ಪನೆಯಿದ್ದ ಶ್ರೀ ಗುರೂಜಿ ಎಲ್ಲ ಶಿಕ್ಷಾರ್ಥಿಗಳನ್ನು ಕುರಿತು "ಈ ಕಡೆಯಿಂದ ಲಕ್ಷಾಂತರ ಜನ ವಲಸೆ ಹೋಗಲಿದ್ದಾರೆ. ಅವರ ಮೇಲೆ ನಾನಾ ರೀತಿಯ ಅತ್ಯಾಚಾರಗಳು ನಡೆಯುವ ಸಂಭವವಿದೆ. ಪ್ರತಿಯೊಬ್ಬ ಹಿಂದುವನ್ನು ರಕ್ಷಿಸುವುದು ನಿಮ್ಮ ಜವಾಬ್ದಾರಿ. ಕಟ್ಟಕಡೆಯ ಹಿಂದು ಸುರಕ್ಷಿತವಾಗಿ ಭಾರತವನ್ನು ತಲುಪದ ತನಕ ನೀವು ಇಲ್ಲಿಂದ ಹೊರಡಬಾರದು" ಎಂದು ನುಡಿದರು.

    ಮುಂದಿನ ದಿನಗಳಲ್ಲಿ ಶ್ರೀ ಗುರೂಜಿಯವರು ನುಡಿದಿದ್ದ ರೀತಿಯಲ್ಲೇ, ವಲಸೆ ಹೊರಟಿದ್ದ ಲಕ್ಷಾಂತರ ಹಿಂದುಗಳನ್ನು ಕೊಲ್ಲಲಾಯಿತು. ಹಿಂದು ಮಹಿಳೆಯರನ್ನು, ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚಾರಗೊಳಿಸಿ ಮತಾಂತರಗೊಳಿಸಲಾಯಿತು. ಆದರೆ ಆ ಶಿಕ್ಷಾವರ್ಗದಲ್ಲಿದ್ದ ಎಲ್ಲ ೨೦೦ ಸ್ವಯಂಸೇವಸೇವಕರೂ ಅಂತಹ ಹಿಂದುಗಳ ರಕ್ಷಣೆಗೆ ನಿಂತರು. ಸಾವಿರಾರು ಹಿಂದುಗಳನ್ನು ಕಾಪಾಡಿ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿದರು.

    ಆದರೆ ಆ ೨೦೦ ಸ್ವಯಂಸೇವಕರ ಬಲಿಯಾಯಿತು.

Labels: Partition, Sacrifice, Sangha Story, Sri Guruji, ದೇಶ ವಿಭಜನೆ, ಪ್ರಾಣಾರ್ಪಣೆ, ಶ್ರೀ ಗುರೂಜಿ, ಸಂಘದ ಕಥೆ, ಸ್ವಾತಂತ್ರ್ಯ