Showing posts with label Emergency. Show all posts
Showing posts with label Emergency. Show all posts

Saturday, November 24, 2012

೯೭. ತುರ್ತು ಪರಿಸ್ಥಿತಿಯಲ್ಲಿ ಸ್ವಯಂಸೇವಕರ ಕರ್ತವ್ಯ

ತುರ್ತು ಪರಿಸ್ಥಿತಿಯಲ್ಲಿ ಸ್ವಯಂಸೇವಕರ ಕರ್ತವ್ಯ

   ತುರ್ತು ಪರಿಸ್ಥಿತಿಯ ಸಮಯ. ಅನೇಕ ಪ್ರಚಾರಕರು, ಸ್ವಯಂಸೇವಕರು ಭೂಗತರಾಗಿದ್ದರು. ಒಬ್ಬ ಸ್ವಯಂಸೇವಕರು ಮಂಗಳೂರಿನವರು. ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿ. ಅವರು ಮೂರು ತಿಂಗಳಿನಿಂದ ಬ್ಯಾಂಕಿಗೆ ಹೋಗಿರಲಿಲ್ಲ. ಕಾರಣ? ಅವರನ್ನು ಹಿಡಿದು ಪ್ರಶ್ನೆಗಳನ್ನು ಕೇಳಬೇಕೆಂದು ಪೊಲೀಸರು ಹುಡುಕುತ್ತಿದ್ದರು. ಮೂರು ತಿಂಗಳ ನಂತರ ಬ್ಯಾಂಕಿನಿಂದ ನೋಟಿಸ್ ಬಂತು - ’ನೀವು ಇನ್ನೊಂದು ವಾರದಲ್ಲಿ ಕೆಲಸಕ್ಕೆ ಬರದಿದ್ದರೆ ನಿಮ್ಮನ್ನು ಕೆಲಸದಿಂದ ತೆಗೆದುಹಾಕುತ್ತೇವೆ’ ಎಂದು. ಆಗ ಅವರು ಪ್ರಚಾರಕರೊಡನೆ ಸಮಾಲೋಚಿಸಿದರು. ಪ್ರಚಾರಕರು ಸಲಹೆ ಕೊಟ್ಟರು - ಅವರು ಬ್ಯಾಂಕಿಗೆ ಹೋಗಬೇಕು, ಪೊಲೀಸರು ಅವರನ್ನು ಬಂಧಿಸುತ್ತಾರೆ, ಇವರು ಜೈಲಿಗೆ ಹೋಗುತ್ತಾರೆ, ಆದರೆ ಅವರ ಕೆಲಸವಾದರೂ ಉಳಿಯುತ್ತದೆ.

    ಸರಿ, ಅವರು ಕೆಲಸಕ್ಕೆ ಹೋದರು. ಮೊದಲನೇ ದಿನವೇ ಪೊಲೀಸರು ಬಂದು ಅವರನ್ನು ಬಂಧಿಸಿ ಕರೆದುಕೊಂಡು ಹೋದರು. ಬಂದರು ಪೊಲೀಸ್ ಸ್ಟೇಷನ್‍ಗೆ ಕರೆದುಕೊಂಡು ಹೋದರು. ಇನ್ನಿಲ್ಲದ ಚಿತ್ರ ಹಿಂಸೆ ಕೊಟ್ಟು ಅರ್ಧ ಜೀವ ಮಾಡಿದರು. ’ಲೋಕ ಸಂಘ ಸಮಿತಿಗೆ ಹಣ ಎಲ್ಲಿಂದ ಬರುತ್ತದೆ, ಆ ಪ್ರಚಾರಕರು ಎಲ್ಲಿ ಉಳಿದುಕೊಳ್ಳುತ್ತಾರೆ? ಈ ಪ್ರಚಾರಕರು ಎಲ್ಲಿರುತ್ತಾರೆ?’ ಈ ಪ್ರಶ್ನೆಗಳನ್ನು ಕೇಳಿದರು. ಈ ನಮ್ಮ ಸ್ವಯಂಸೇವಕರು ತಮಗೆ ಒಂದು ಲೋಟ ನೀರು ಕೊಟ್ಟರೆ ಎಲ್ಲವನ್ನೂ ಹೇಳುತ್ತೇನೆಂದರು. ಪೊಲೀಸರು ನೀರು ಕೊಟ್ಟರು. ಇವರು ಹತ್ತಿರದಲ್ಲಿದ್ದ ಕಿಟಕಿ ನೋಡಿದರು. ಇವರಿದ್ದುದು ಮೊದಲನೆ ಮಹಡಿಯ ಮೇಲೆ. ಪೊಲೀಸರು ನೋಡುತ್ತಿದ್ದಂತೆಯೇ ಕ್ಷಣಾರ್ಧದಲ್ಲೇ ಓಡಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಿಟಕಿ ಮೂಲಕ ಹಾರಿದರು. ಪುಣ್ಯಕ್ಕೆ ತಲೆಗೆ ಏಟು ಬೀಳದೆ ಕಾಲುಗಳ ಮೇಲಿ ಬಿದ್ದು ಪ್ರಾಣ ಉಳಿಯಿತು. ಆದರೆ ಕಾಲುಗಳೂ ಪುಡಿಪುಡಿಯಾದವು. ಇಂದಿಗೂ ಅವರಿಗೆ ಸರಿಯಾಗಿ ನಡೆಯಲಾಗುವುದಿಲ್ಲ.

    ಈ ರೀತಿ ಸಾವಿರಾರು ಜನರು ನಷ್ಟ ಕಷ್ಟ ಅನುಭವಿಸಿದರು. ಅನೇಕರ ತಂದೆ, ತಾಯಿಗಳು ತೀರಿಕೊಂಡರೂ ಅವರನ್ನು ಮನೆಗೆ ಬಿಡದೆ ಜೈಲಿನಲ್ಲೇ ಇಟ್ಟಿದ್ದರು. ಒಂದೂವರೆ ಲಕ್ಷ ಜನ ಸತ್ಯಾಗ್ರಹ ಮಾಡಿದರು. ತುರ್ತು ಪರಿಸ್ಥಿತಿ ಕಳೆಯಿತು. ಈವತ್ತಿನವರೆಗೆ ಯಾರೂ ತಾವು ಮಾಡಿದ ಈ ಹೋರಾಟಕ್ಕೆ ತಮಗೆ ಪರಿಹಾರ ಬೇಕೆಂದು ಕೇಳಲಿಲ್ಲ. ಹೊರಗಿನವರು ಅವರ ಕಾರ್ಯವನ್ನು ತ್ಯಾಗವೆಂದು ಭಾವಿಸುತ್ತಾರಾದರೂ ಸ್ವಯಂಸೇವಕರು ತಾವು ದೇಶಕ್ಕಾಗಿ ಹೋರಾಟ ಮಾಡಿದೆವು, ಅದು ತಮ್ಮ ಕರ್ತವ್ಯ, ತ್ಯಾಗವಲ್ಲ ಎಂದು ಭಾವಿಸಿದರು.

Labels: Duty, Emergency, Sacrifice, Sangha Story, ಕರ್ತವ್ಯ, ತುರ್ತು ಪರಿಸ್ಥಿತಿ, ತ್ಯಾಗ, ಸಂಘದ ಕಥೆ

೯೧. ಜಯಪ್ರಕಾಶ ನಾರಾಯಣರ ಕಣ್ಣಲ್ಲಿ ಸಂಘ

ಜಯಪ್ರಕಾಶ ನಾರಾಯಣರ ಕಣ್ಣಲ್ಲಿ ಸಂಘ

   ೧೯೭೫ನೇ ಇಸವಿಗೆ ಮುಂಚೆ ಜಯಪ್ರಕಾಶ್ ನಾರಾಯಣ ಹೇಗಿದ್ದರು? ೧೯೪೮ನೇ ಇಸವಿಯಲ್ಲಿ ಅವರು ಹೇಳಿದ್ದು ’ನನ್ನ ಜೀವನದ ಏಕಮಾತ್ರ ಧ್ಯೇಯವೆಂದರೆ ಆರ್.ಎಸ್.ಎಸ್.ನ ನಾಶ’ ಎಂದು. ಸುಮಾರು ೫ ಸಾವಿರ ಜನರನ್ನು ಕರೆದುಕೊಂಡು ದೆಹಲಿಯ ಆಗಿನ ಸಂಘಚಾಲಕಾರಿಗಿದ್ದ ಲಾಲಾ ಹಂಸರಾಜ ಗುಪ್ತರವರ ಮನೆಗೆ ಬೆಂಕಿ ಇಡಲು ಬಂದಿದ್ದರು. ಮುಂದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಡೆದ ಹೋರಾಟ ಅವರ ನೇತೃತ್ವದಲ್ಲೇ ಸಮಗ್ರ ಕ್ರಾಂತಿ ಅಥವಾ ಲೋಕಸಂಘ ಸಮಿತಿ ಹೆಸರಿನಲ್ಲಿ ನಡೆಯಿತು. ಅವರು ಜೈಲು ಸೇರಿದಾಗ ಅವರು ಹೇಳಿದ್ದು ’ಈಗ ಆರ್.ಎಸ್.ಎಸ್ ಬಿಟ್ಟರೆ ಇನ್ಯಾರೂ ಈ ದೇಶಕ್ಕೆ ಗತಿ ಇಲ್ಲ. ಈ ದೇಶವು ಈ ಸ್ಥಿತಿಯಿಂದ ಪಾರಾಗಬೇಕಾದರೆ ಅದು ಸಂಘದಿಂದ ಮಾತ್ರ ಸಾಧ್ಯ’ ಎಂದು! ತುರ್ತು ಪರಿಸ್ಥಿತಿಯ ನಂತರ ಅವರು ’ಆರ್.ಎಸ್.ಎಸ್ ಅನ್ನು ಯಾರಾದರೂ ಫ್ಯಾಸಿಸ್ಟ್ ಎಂದು ಕರೆದರೆ, ನನ್ನನ್ನೂ ಫ್ಯಾಸಿಸ್ಟ್ ಎಂದು ಕರೆಯಿರಿ’ ಎಂದರು.

    ಹಾಗೆಯೇ, ಆಚಾರ್ಯ ವಿನೋಬಾ ಭಾವೆಯವರು ’ನಾನೂ ಒಬ್ಬ ಸಂಘದ ಅನೌಪಚಾರಿಕ ಸ್ವಯಂಸೇವಕನೇ’ ಎಂದಿದ್ದರು. ಇನ್ನೊಬ್ಬ ಸರ್ವೋದಯದ ಕಾರ್ಯಕರ್ತರು ’ಆರ್.ಎಸ್.ಎಸ್ ಎಂದರೆ 'Ready for Selfless Service' ಎಂದು ಹೇಳಿದ್ದರು.

Labels: Emergency, Fascist, Jayaprakash Narayan, Sangha Story, ಜಯಪ್ರಕಾಶ ನಾರಾಯಣ, ತುರ್ತು ಪರಿಸ್ಥಿತಿ, ಫ್ಯಾಸಿಸ್ಟ್, ಸಂಘದ ಕಥೆ

Tuesday, November 20, 2012

೬೨. ಎಮೆರ್ಜೆನ್ಸಿಯಲ್ಲಿ ಜೈಲ್ ಭರೋ

ಎಮೆರ್ಜೆನ್ಸಿಯಲ್ಲಿ ಜೈಲ್ ಭರೋ

   ದೇಶದಲ್ಲಿ ಎಮೆರ್ಜೆನ್ಸಿ ಹಾಕಲಾಗಿದ್ದ ಸಮಯ. ದೇಶದಾದ್ಯಂತ ಸರಕಾರದ ಎಲ್ಲಾ ವಿರೋಧಿಗಳನ್ನು ಜೈಲಿಗೆ ಅಟ್ಟುಲಾಗುತ್ತಿತ್ತು. ಸರಕಾರದ ವಿರುದ್ಧ ಯಾರೇ ಏನು ಮಾತನಾಡಿದರೂ, ಕೆಲಸ ಮಾಡಿದರೂ, ಅಂಥಹವರಿಗೆ ಜೈಲುವಾಸ ನಿಶ್ಚಿತ ಎನ್ನುವ ಪರಿಸ್ಥಿತಿ ಇತ್ತು.

    ಆ ಸಂದರ್ಭದಲ್ಲಿ ಸರಕಾರದ ವಿರುದ್ಧ ಕೆಲಸ ಮಾಡುತ್ತಿದ್ದ ಎಲ್ಲ ಸಂಘಟನೆಗಳು ಸೇರಿ ಒಂದು ಸಭೆ ನಡೆಸಿದವು. ಅದರಲ್ಲಿ ಸಂಘದ ಸದಸ್ಯರು, ಕಮ್ಯೂನಿಸ್ಟ್ ಪಕ್ಷದ ಸದಸ್ಯರು ಹಾಗೂ ಇನ್ನಿತರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಬಹಳಷ್ಟು ವಿಚಾರಗಳನ್ನು ಚರ್ಚಿಸಿದ ನಂತರ ಯಾವುದೋ ಒಂದು ನಿರ್ಧಾರಿತ ದಿನ ಆಖಿಲ ಭಾರತ ಸ್ತರದಲ್ಲಿ ಎಲ್ಲ ಸಂಘಟನೆಯ ಸದಸ್ಯರು ’ಜೈಲ್ ಭರೋ’ ಆಂದೋಲನವನ್ನು ಹಮ್ಮಿಕೊಳ್ಳಬೇಕೆಂದು ನಿರ್ಧರಿಸಲಾಯಿತು.

    ಎಲ್ಲರೂ ತಮ್ಮ ತಮ್ಮ ಸಂಘಟನೆಯ ಎಷ್ಟು ಸಂಖ್ಯೆಯ ಸದಸ್ಯರು ಇದರಲ್ಲಿ ಭಾಗವಹಿಸಬಹುದು ಎಂದು ಕೇಳಲಾಯಿತು. ಕಮ್ಯೂನಿಸ್ಟ್ ಪಕ್ಷದ ಪ್ರತಿನಿಧಿಯಾಗಿ ಬಂದಿದ್ದ ಎ.ಕೆ. ಗೋಪಾಲನ್‍ರವರು ತಮ್ಮ ಪಕ್ಷದ ೨೦ ಸಾವಿರ ಸದಸ್ಯರು ಅಂದು ಜೈಲ್ ಭರೋ ಅಭಿಯಾನದಲ್ಲಿ ಭಾಗವಹಿಸುವರು ಎಂದು ಹೇಳಿದರು.

    ಸಂಘದ ಪ್ರತಿನಿಧಿಯಾಗಿದ್ದ ಮಾಧವರಾವ್ ಮೂಳೆಯವರ ಸರದಿ ಬಂದಾಗ ಅವರು ಸಂಘದ ೧ ಲಕ್ಷ ಸ್ವಯಂಸೇವಕರು ಬಂಧನಕ್ಕೊಳಗಾಗುವರು ಎಂದು ಹೇಳಿದರು.

    ಆಗ ಕಮ್ಯೂನಿಸ್ಟ್ ಸಹಿತ ಅನೇಕ ಇತರ ಪ್ರತಿನಿಧಿಗಳ ಮುಖದಲ್ಲಿ ಹಾಸ್ಯ ಭಾವನೆ ತೇಲಾಡಿತು. ಸಂಘವು ಆ ಸಮಯದಲ್ಲಿ ನಿರ್ಬಂಧನಕ್ಕೊಳಪಟ್ಟಿತ್ತು. ಸಂಘದ ಯಾವುದೇ ಕಾರ್ಯ ನಡೆಸುವಹಾಗಿರಲಿಲ್ಲ. ಅಷ್ಟೇ ಏಕೆ, ತಾವು ಸಂಘದ ಸ್ವಯಂಸೇವಕರು ಎಂದು ಹೇಳಿಕೊಂಡವರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಲಾಗುತ್ತಿತ್ತು. ಸಂಘದ ಸ್ವಯಂಸೇವಕರು ಒಬ್ಬರೊನ್ನೊಬ್ಬರು ಭೇಟಿ ಮಾಡಲೂ ಸಾಧ್ಯವಿರಲಿಲ್ಲ. ಇಂಥ ಸಂದರ್ಭದಲ್ಲಿ ಒಂದು ಲಕ್ಷ ಸ್ವಯಂಸೇವಕರು ಬಂಧನಕ್ಕೊಳಗಾಗುವ ಯೋಚನೆಯೇ ಅನೇಕರಿಗೆ ಹಾಸ್ಯಾಸ್ಪದವೆನಿಸಿತ್ತು.

    ನಂತರದ ದಿನಗಳಲ್ಲಿ ಅಂದುಕೊಂಡ ಹಾಗೆಯೇ ಜೈಲ್ ಭರೋ ಚಳುವಳಿ ನಡೆಯಿತು. ಲೆಕ್ಕ ತೆಗೆದುಕೊಂಡಾಗ, ಸಂಘದ ೧.೨೫ ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ಜೈಲಿಗೆ ಹೋಗಿದ್ದರು. ಆದರೆ ಕಮ್ಯೂನಿಸ್ಟರ ೨೦೦೦ ದಷ್ಟು ಮಂದಿ ಮಾತ್ರ ಜೈಲು ಪಾಡಾಗಿದ್ದರು. ಎ.ಕೆ. ಗೋಪಾಲನ್‍ರವರು "ನಾನು ನನ್ನ ಪಡೆಗೆ ಕೇವಲ ಸ್ವಾರ್ಥ ಹೇಳಿಕೊಟ್ಟಿದ್ದೆ. ತ್ಯಾಗ ಹೇಳಿಕೊಡಲಿಲ್ಲ" ಉದ್ಗರಿಸಿದರು !

Labels: Communist, Emergency, Jail Bharo, Sangha Story, ಎ.ಕೆ.ಗೋಪಾಲನ್, ಎಮೆರ್ಜೆನ್ಸಿ, ಕಮ್ಯೂನಿಸ್ಟ್, ಜೈಲ್ ಭರೋ, ಸಂಘದ ಕಥೆ