Showing posts with label Nation first. Show all posts
Showing posts with label Nation first. Show all posts

Friday, November 23, 2012

೮೯. ರಾಷ್ಟ್ರಹಿತವೇ ಮಿಗಿಲು

ರಾಷ್ಟ್ರಹಿತವೇ ಮಿಗಿಲು

   ದೇವ ದಾನವರ ನಡುವೆ ಯಾವಾಗಲೂ ಯುದ್ಧವಾಗುತ್ತಲೇ ಇತ್ತು. ದೇವತೆಗಳಿಗೇ ಬಹುತೇಕ ಜಯವಾಗುತ್ತಿತ್ತು. ಆಗ ದಾನವಗುರು ಶುಕ್ರಾಚಾರ್ಯರು ತಪಸ್ಸು ಮಾಡು ಸಂಜೀವಿನಿ ವಿದ್ಯೆ ಸಂಪಾದಿಸಿದರು. ಇದರಿಂದ ಸತ್ತ ದಾನವರನ್ನು ಅವರು ಮತ್ತೆ ಬದುಕಿಸುತ್ತಿದ್ದರು.

    ಇದಕ್ಕೆ ಏನಾದರೂ ಪರಿಹಾರ ಹುಡುಕಿರೆಂದು ದೇವಗುರು ಬೃಹಸ್ಪತಿಯವರಲ್ಲಿ ದೇವತೆಗಳು ಬೇಡಿಕೊಂಡರು. ಸಂಜೀವಿನೀ ವಿದ್ಯೆ ಕಲಿತುಕೊಂಡು ಬರುವಂತೆ ದೇವಗುರುಗಳು ತೇಜಸ್ವೀ ಯುವಕ ಕಚನನ್ನು ಶುಕ್ರರ ಬಳಿ ಕಳುಹಿಸಿದರು.

    ಕಚ ಶುಕ್ರಾಚಾರ್ಯರ ಆಶ್ರಮ ತಲುಪಿದ. ಅವರ ಶಿಷ್ಯನಾದ. ವಿದ್ಯ ಕಲಿಯತೊಡಗಿದ. ಶುಕ್ರಾಚಾರ್ಯರ ಮಗಳು ದೇವಯಾನಿಯ ಮನಸ್ಸನ್ನೂ ಗೆದ್ದ.

    ಸಂಜೀವಿನೀ ವಿದ್ಯ ಸಂಪದಿಸಲೆಂದೇ ಕಚನು ಶುಕ್ರಾಚಾರ್ಯರ ಬಳಿ ಬಂದುದು ದಾನವರಿಗೆ ತಿಳಿಯಿತು. ಅವನನ್ನು ಮುಗಿಸಿಬಿಡಲು ಹಲವು ತಂತ್ರ ಹೆಣೆದರು. ಪ್ರತಿ ಬಾರಿ ಕಚನನ್ನು ದಾನವರು ಕೊಂದಾಗಲೂ ದೇವಯಾನಿ ಅವನ್ನು ಬದುಕಿಸಿಕೊಡಲು ತಂದೆಗೆ ದಂಬಾಲು ಬೀಳುತ್ತಿದ್ದಳು. ಶುಕ್ರಾಚಾರ್ಯರ ಸಂಜೀವಿನಿ ಮಂತ್ರದಿಂದ ಕಚ ಬದುಕಿ ಬರುತ್ತಿದ್ದ.

    ಈ ಬಾರಿ ದಾನವರು ಉಪಾಯದಿಂದ ಕಚನ್ನು ಕೊಂದು ಸುಟ್ಟುಬಿಟ್ಟರು. ಆ ಬೂದಿಯನ್ನು ಸೋಮರಸದಲ್ಲಿ ಸೇರಿಸಿ ಆಚಾರ್ಯ ಶುಕ್ರರಿಗೆ ಕುಡಿಸಿದರು. ಎಂದಿನಂತೆ ಕಚನ್ನು ಬದುಕಿಸಿಕೊಡಿರೆಂದು ದೇವಯಾನಿ ಬೇಡಿದಳು. ಕಚ ತನ್ನ ಹೊಟ್ಟೆಯಲ್ಲಿರುವುದನ್ನು ತಿಳಿದ ಆಚಾರ್ಯರು ಅವನಿಗೆ ಸಂಜೀವಿನಿಯನ್ನು ಉಪದೇಶಿಸಿ ಅದೇ ಮಂತ್ರದಿಂದ ಜೀವ ನೀಡಿದರು. ಕಚ ಶುಕ್ರಾಚಾರ್ಯರ ಹೊಟ್ಟೆ ಸೀಳಿ ಹೊರಬಂದ. ತಾನು ಪಡೆದಿದ್ದ ಸಂಜೀವಿನಿ ಮಂತ್ರಬಲದಿಂದ ಆಚಾರ್ಯರನ್ನೂ ಬದುಕಿಸಿದ.

    ಸಂಜೀವಿನಿ ವಿದ್ಯೆ ಕಲಿತು ತನ್ನ ಕರ್ತವ್ಯ ಪೂರೈಸಿದ್ದ ಕಚ ಗುರುವಿಗೆ ವಂದಿಸಿ ದೇವಲೋಕಕ್ಕೆ ಹೊರಟು ನಿಂತ. ಆಗ ತನ್ನನ್ನು ಮದುವೆ ಆಗೆಂದು ದೇವಯಾನಿ ಕಚನಲ್ಲಿ ಹಟ ಹಿಡಿದಳು. ’ಗುರುಪುತ್ರಿಯಾದ ನೀನು ನನಗೆ ಸೋದರಿ ಸಮಾನ. ಆದ್ದರಿಂದ ಈ ವಿವಾಹ ಸಾಧ್ಯವಿಲ್ಲ’ ಎಂದುಬಿಟ್ಟ ಕಚ. ಸಿಟ್ಟಾದ ದೇವಯಾನಿ ’ಶುಕ್ರಾಚಾರ್ಯರಿಂದ ನೀನು ಕಲಿತ ಯಾವ ವಿದ್ಯೆಯೂ ನಿನ್ನ ಉಪಯೋಗಕ್ಕೆ ಬಾರದಿರಲಿ’ ಎಂದು ಶಾಪ ಕೊಟ್ಟಳು. ಅವಳ ಶಾಪವನ್ನು ಸಂತೋಷದಿಂದ ಸ್ವೀಕರಿಸಿ ’ನನಗೆ ಉಪಯೋಗಕ್ಕೆ ಬಾರದಿದ್ದರೇನಂತೆ, ನಾನು ಈ ವಿದ್ಯೆಯನ್ನು ಬೇರೆಯವರಿಗೆ ಕಲಿಸುತ್ತೇನೆ’ ಎಂದು ನುಡಿದು ಆತ ದೇವಲೋಕಕ್ಕೆ ನಡೆದುಬಿಟ್ಟ.

    ಕಚನಿಗೆ ಸಂತ ಸುಖಕ್ಕಿಂತ ದೇವಲೋಕದ ಹಿತವೇ ಮಿಗಿಲೆನಿಸಿತ್ತು. ಸಂಜೀವಿನಿ ವಿದ್ಯೆಯನ್ನು ಆತ ಇತರ ದೇವತೆಗಳಿಗೆ ಕಲಿಸಿದ. ಸಂಜೀವಿನಿ ವಿದ್ಯೆಯ ಬಲದಿಂದ ದೇವತೆಗಳು ದಾನವರ ಭಯದಿಂದ ಪಾರಾದರು.

Labels: Boudhik Story, Devayani, Kacha, Nation first, Shukracharya, ಕಚ, ದೇವಯಾನಿ, ಬೋಧ ಕಥೆ, ರಾಷ್ಟ್ರಹಿತ, ಶುಕ್ರಾಚಾರ್ಯ, ಸಂಜೀವಿನಿ

Monday, November 19, 2012

೫೮. ದೇವರಿಗಿಂತ ದೇಶ ಮೊದಲು

ದೇವರಿಗಿಂತ ದೇಶ ಮೊದಲು

    ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಶ್ವಕವಿ ರವೀಂದ್ರನಾಥ ಠಾಕೂರರು ಜಪಾನ್ ಪ್ರವಾಸದಲ್ಲಿದ್ದರು. ಒಮ್ಮೆ ಅಲ್ಲಿನ ಶಾಲೆಯೊಂದರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆಗ ಗುರುದೇವ ರವೀಂದ್ರರು "ನೀವು ಯಾವ ಮತವನ್ನು ಆಚರಿಸುತ್ತೀರಿ?" ಎಂದು ಕೇಳಿದರು.

    "ಬೌದ್ಧ ಮತ" ವಿದ್ಯಾರ್ಥಿಗಳ ಉತ್ತರ.

    "ಬೌದ್ಧ ಮತ ಸ್ಥಾಪಿಸಿದ ಭಗವಾನ್ ಬುದ್ಧ ಭಾರತದಲ್ಲಿ ಹುಟ್ಟಿದವರೆಂದು ನಿಮಗೆ ಗೊತ್ತಿರಬೇಕಲ್ಲವೇ?" ಗುರುದೇವರ ಪ್ರಶ್ನೆ.

    "ಹೌದು ನಮಗದು ಚೆನ್ನಾಗಿ ಗೊತ್ತು" ಬಾಲಕರೆಂದರು.

    "ಭಗವಾನ್ ಬುದ್ಧನ ನಾಯಕತ್ವದಲ್ಲಿ ಸೈನ್ಯವೊಂದು ನಿಮ್ಮ ದೇಶದ ಮೇಲೆ ಆಕ್ರಮಣಕ್ಕಾಗಿ ಬಂದಿದೆ ಎಂದು ಕಲ್ಪಿಸಿಕೊಳ್ಳಿ. ಆಗ ನೀವೇನು ಮಾಡುವಿರಿ?" ಗುರುದೇವರ ಪ್ರಶ್ನೆ ಸ್ವಲ್ಪ ಜಟಿಲವಾಗಿತ್ತು.

    "ನಾವು ಬುದ್ಧನನ್ನು ಎದುರಿಸುತ್ತೇವೆ. ನಮ್ಮ ದೇಶದಲ್ಲಿರುವ ಭಗವಾನ್ ಬುದ್ಧನ ಮೂರ್ತಿಗಳನ್ನೆಲ್ಲಾ ಕರಗಿಸಿ ಮದ್ದು ಗುಂಡುಗಳನ್ನು ತಯಾರಿಸುತ್ತೇವೆ. ಬುದ್ಧನನ್ನು ಮಾತ್ರವಲ್ಲ, ಆತನೊಡನೆ ಬಂದ ಸೈನವನ್ನೆಲ್ಲಾ ಸುಟ್ಟು ಬೂದಿ ಮಾಡುತ್ತೇವೆ" ಬಾಲ ವಿದ್ಯಾರ್ಥಿಯೊಬ್ಬ ರೋಷದಿಂದ ಗುಡುಗಿದ.

    ಬಾಲಕನ ಆ ಉತ್ತರದಲ್ಲಿ ಗುರುದೇವರು ಜಪಾನಿನ ಉಜ್ವಲ ಭವಿಷ್ಯವನ್ನು ಕಾಣುತ್ತಾ ಅವರ ದೇಶಭಕ್ತಿಯೆದುರು ನತಮಸ್ತಕರಾದರು.

Labels: Boudhik Story, Buddha, Gurudev, Japan, Nation first, Ravindranatha Tagore, ಗುರುದೇವ್, ಜಪಾನ್, ದೇಶಪ್ರೇಮ, ಬುದ್ಧ, ರವೀಂದ್ರನಾಥ ಠಾಕೂರ್

Thursday, April 5, 2012

೨೧. ಈ ಬದುಕು ತಾಯಿ ಭಾರತಿಗೆ ಮುಡಿಪು

ಈ ಬದುಕು ತಾಯಿ ಭಾರತಿಗೆ ಮುಡಿಪು

   ಬರ್ಮಾದಲ್ಲಿನ ಒಂದು ಆಸ್ಪತ್ರೆಯ ಸಂಚಾಲಕರೋರ್ವರು ತಮಗೊಬ್ಬ ವೈದ್ಯ ಬೇಕೆಂದು ಪ್ರಿನ್ಸಿಪಾಲರಿಗೆ ಪತ್ರ ಬರೆದಿದ್ದರು. ಅವರ ಗಮನ ತಟ್ಟನೆ ಕೇಶವರಾಯರತ್ತ ಹರಿಯಿತು. ತಮ್ಮ ಜವಾನನ ಮೂಲಕ ಹೇಳಿ ಕಳಿಸಿದರು. ವಿನಯ ತುಂಬಿದ ಕೇಶವರಾಯರು ಪ್ರಿನ್ಸಿಪಾಲರೆದುರು ಬಂದರು.

    "ಬೇರೆ ಬೇರೆ ಕೆಲಸ ಮಾಡುತ್ತಿದ್ದರೂ ಉತ್ತಮ ದರ್ಜೆಯಲ್ಲಿ ಪಾಸಾಗಿದ್ದೀರಿ. ಅಭಿನಂದನೆಗಳು" ಪ್ರಿನ್ಸಿಪಾಲರೆಂದರು.

    "ನಿಮ್ಮಂತಹರ ಕೈಗಳಲ್ಲಿ ಶಿಕ್ಷಣದಿಂದಾಗಿ ನನ್ನಂತಹ ಸಾಮಾನ್ಯನೂ ಯಶಪಡೆಯುವಂತಾಯಿತು. ನಾನು ನಿಮಗೆ ಕೃತಜ್ಞ" ಕೇಶವರಾಯರು ಉತ್ತರಿಸಿದರು.

    "ನೋಡಿ, ಹೆಡಗೆವಾರರೇ, ನಿಮಗೊಂದು ಸುವರ್ಣ ಅವಕಾಶವಿದೆ. ಬರ್ಮಾದ ಆಸ್ಪತ್ರೆಯೊಂದಕ್ಕೆ ಉತ್ಸಾಹಿ ವೈದ್ಯರೊಬ್ಬರ ಅಗತ್ಯವಿದೆ. ಅವರು ನನ್ನನ್ನು ಕೇಳಿದ್ದಾರೆ. ಉತ್ತಮ ಅನುಕೂಲತೆ. ವೇತನ ಎಲ್ಲವೂ ಇದೆ. ನಾನು ನಿಮ್ಮ ಹೆಸರು ಅವರಿಗೆ ಸೂಚಿಸುವೆ" ಪ್ರಿನ್ಸಿಪಾಲರೆಂದರು.

    "ಕ್ಷಮಿಸಿ, ನಾನಲ್ಲಿ ಹೋಗಲಾರೆ" ಕೇಶವರಾಯರ ಧ್ವನಿ ಅಷ್ಟೇ ಸ್ಪಷ್ಟ. ಮಾತಿ ಕೇಳಿ ಪ್ರಿನ್ಸಿಪಾಲರು ಚಕಿತರಾದರು. ಒಂದು ರೀತಿಯ ಸಿಟ್ಟೂ ಬಂದಿತ್ತು. "ಇದೇನು ಹೇಳುತ್ತಿರುವಿರಿ? ಅವರಸರವಸರವಾಗಿ ನಿರ್ಣಯಿಸಬೇಡಿ. ಯೋಚಿಸಿ ಉತ್ತರಿಸಿ. ಇಂಥ ಅವಕಾಶ ಕೈಬಿಡಬೇಡಿ. ನೀವು ಯುವಕರು. ನೀವೆಲ್ಲಿ ಹೋದರೂ ಜಯಿಸಿ ಬರಬಲ್ಲಿರೆಂಬ ವಿಶ್ವಾಸ ನನಗಿದೆ. ಸ್ವಂತ ಔಷಧಾಲಯ ನಡೆಸಲು ನಿಮ್ಮ ಬಳಿ ಹಣವೂ ಇಲ್ಲ ಎಂದು ಗೊತ್ತು. ಇಂಥ ನೌಕರಿ ಇನ್ನೆಲ್ಲೂ ಸಿಗದು" ಎಂದರು.

    ಕೇಶವರಾಯರು ನಿಧಾನವಾಗಿ ಆದರೆ ದೃಢವಾಗಿ "ನೀವು ನನಗೆ ಪೂಜ್ಯರು. ನಿಮ್ಮ ಮಾತುಗಳೆಲ್ಲವೂ ನನಗೆ ಒಪ್ಪಿಗೆ. ನನಗೆ ವಿದೇಶಕ್ಕೆ ಹೋಗಲು ಭಯವಿಲ್ಲ. ವೇತನ ಹೆಚ್ಚೂ - ಕಡಿಮೆ ಈ ಕುರಿತೂ ನನಗೆ ಚಿಂತೆ ಇಲ್ಲ. ಆದರೆ ನಾನು ಪ್ರತಿಜ್ಞೆ ಮಾಡಿರುವೆ. ನಾನು ನನ್ನನ್ನು ಈ ದೇಶದ ಸೇವೆಗೆ ಸಮರ್ಪಿಸಿಕೊಂಡಿರುವೆ. ಈ ದೇಹದ ಕಣಕಣವೂ ಅದರ ಸೇವೆಗೆ ಮುಡಿಪು. ನಾನೆಂದೂ ನೌಕರಿ ಮಾಡೆನು. ಸ್ವಂತ ಔಷಧಾಲಯವೂ ಇಲ್ಲ. ಸುತ್ತ ಇರುವ ಅತಿ ಅವಶ್ಯ ಕೆಲಸಗಲನ್ನು ಯೋಚಿಸಿದಲ್ಲಿ ನನಗೆ ಬಿಡುವೇ ಸಾಲದೆನಿಸುತ್ತದೆ" ಎನ್ನುತ್ತ ತಮ್ಮ ಮನದಿಂಗಿತ ತಿಳಿಸಿದರು.

    ಪ್ರಿನ್ಸಿಪಾಲರಿಗೆ ಆಶ್ಚರ್ಯ. ಇವನೆಂತಹ ವಿಚಿತ್ರ ತರುಣ ! ಹಣ ಸಂಪಾದಿಸಲು ಸಮಯವೇ ಸಿಕ್ಕದು ಎನ್ನುವನಲ್ಲಾ. ಕೇಶವರಾಯರ ವಾದ ಅವರ ಬುದ್ಧಿಗೆ ನಿಲುಕಲಿಲ್ಲ.

    ಪುನಃ ಪ್ರಶ್ನಿಸಿದರು - "ಹೊಟ್ಟೆಯ ಪಾಡೇನು ? ಹೆಂಡತಿ ಮಕ್ಕಳ ಗತಿಯೇನು?" ಕೇಶವರಾಯರ ಉತ್ತರ ಸಿದ್ಧವಾಗಿತ್ತು - "ನಾನು ಅವಿವಾಹಿತ. ಮದುವೆಯ ವಿಚಾರವೂ ಇಲ್ಲ. ನನ್ನ ಕುರಿತು.... ನನಗೆ ಭಗವಂತನ ಮೇಲೆ ಭರವಸೆ ಇದೆ."

    ಮತ್ತೆ ಪ್ರಾಚಾರ್ಯರೆಂದರು "ನೀವಿನ್ನೂ ಯುವಕರು. ಪ್ರಪಂಚವನ್ನು ಕಂಡಿಲ್ಲ. ಈ ವಯಸ್ಸಿನಲ್ಲಿ ಎಲ್ಲರೂ ಭಾವನಾಶೀಲರಾಗುವರು. ಆಕಾಶದಲ್ಲಿಯೇ ಹಾರತೊಡಗುವರು ಆದರೆ ಕಷ್ಟ ಬಂದಾಗ ಯಾರೂ ಜೊತೆಗಿರಲಾರರು. ಆಗ ನಾನೇಕೆ ಮನೆ ಮಾಡಿಲ್ಲ. ಸಂಸಾರ ಮಾಡಿಲ್ಲ? ಎಂದೆಲ್ಲಾ ಯೋಚನೆ ಬರುತ್ತದೆ. ಆ ಕಷ್ಟದಲ್ಲಿ ಯಾರೂ ಸಹಾಯ ಮಾಡಲಾರರು. ನಿಮ್ಮ ಜೀವನಕ್ಕಂತಹ ದುರ್ಗತಿ ಬಾರದಿರಲಿ ಎಂದೇ ನನ್ನಿಚ್ಛೆ.""

    "ನಿಮ್ಮ ಹೃದಯದಲ್ಲಿ ದೇಶಭಕ್ತಿ ಇದೆ. ನನಗಂತೂ ಅದನ್ನು ಕಂಡು ತುಂಬಾ ಅಭಿಮಾನ. ಆದರೆ ಮನೆ, ಸಂಸಾರದೊಂದಿಗೇ ದೇಶಭಕ್ತಿ ಮಾಡಲಾಗದೇ? ವೈದ್ಯಕೀಯ ವೃತ್ತಿಯಂತೂ ಜನಸೇವೆಯದೇ. ಹಾಗಿರುವಾಗ ಮನೆ ಮಠ ಬಿಡುವ ಅವಶ್ಯಕತೆಯಾದರೂ ಏನು?" - ಅವರ ಹಿತ ನುಡಿ-ಅನುಭವ, ಆತ್ಮೀಯತೆಗಳ ರಸಪಾಕವಾಗಿತ್ತು.

    "ಮಾನ್ಯರೇ, ನಮ್ಮ ದೇಶದ ಇಂದಿನ ಸ್ಥಿತಿ ತುಂಬ ದಯನೀಯ. ಅದನ್ನು ಸರಿಪಡಿಸಲು ತರುಣರು ತಮ್ಮದೆಲ್ಲವನ್ನೂ ಸಮರ್ಪಿಸಿದರೂ ಅದು ಸಾಲದೆನಿಸಬಹುದು. ಉನ್ನತ ವಿದ್ಯಾವಂತರದು ಇದರಲ್ಲಿ ಅಗ್ರಪಾತ್ರವಿರಬೇಕು. ಗ್ರಾಮ ನಗರಗಳ ಮೂಲೆ ಮೂಲೆಗಳಲ್ಲಿ ಇಂದು ನಾನಾ ವಿಧ ಕಾರ್ಯಗಳು ಅಸಂಖ್ಯ ಕಾರ್ಯಕರ್ತರನ್ನೆದುರು ನೋಡುತ್ತಿವೆ. ತ್ಯಾಗಿ ಮನೋಭಾವದ, ಬಾಂಧವ್ಯದ ಭಾವದಿಂದ ಕೂಡಿದ ಸೇವಾವ್ರತಿ ತರುಣ ಕಾರ್ಯಕರ್ತರಿಂದು ಬೇಕೆಂದು ತಾಯಿ ಭಾರತಿ ಕೂಗಿ ಕರೆಯುತ್ತಿದ್ದಾಳೆ. ತಾಯಿಯ ಈ ಕರೆ ಕೇಳಿಯೇ ನಾನು ನನ್ನ ಜೀವನಪಥ ನಿರ್ಧಾರ ಮಾಡಿರುವೆ." ಕೇಶವರಾಯರು ಗಂಭೀರವಾಗಿ ನುಡಿದರು.

    ಈ ಮಾತುಗಳನ್ನು ಕೇಳುತ್ತಾ, ಪ್ರಿನ್ಸಿಪಾಲರು ತನ್ಮಯರಾದರು. ಅವರ ಹೃದಯ ತುಂಬಿ ಬಂತು. ಭಾವಪೂರಿತರಾಗಿ, "ಡಾಕ್ಟರ್ ಹೆಡಗೆವಾರ್, ನಿಮ್ಮದು ತುಂಬ ಉತ್ತಮ ನಿರ್ಧಾರ. ಅಸಾಮಾನ್ಯರು ನೀವು. ನಿಮ್ಮ ಗುಣಗಳ ಉಪಯೋಗ ಈ ದೇಶಕ್ಕೆ ಸದಾ ಆಗುತ್ತಿರಲಿ. ನಿಮ್ಮ ಉನ್ನತಿಯಾಗಲಿ. ನಿಮ್ಮೆಲ್ಲ ಕನಸುಗಳು ನನಸಾಗಲಿ ಇದೇ ನನ್ನ ಶುಭಾಕಾಂಕ್ಷೆ" ಎಂದರು.

    "ನಿಮ್ಮ ಆಶೀರ್ವಾದದಿಂದ ನನಗೆ ಸದಾ ಶಕ್ತಿ ದೊರೆಯುತ್ತಿರಲಿ. ಧ್ಯೇಯ ಪಥದಲ್ಲೆ ಮುನ್ನಡೆಯುತ್ತಿರುವೆ. ಧನ್ಯವಾದಗಳು." ಕೇಶವರಾಯರೆಂದರು.

    ಪ್ರಾಚಾರ್ಯರಿಗೆ ನಮಸ್ಕರಿಸಿ ಡಾ|| ಹೆಡಗೆವಾರ್ ಹೊರಬಂದರು.

    ಕೆಲವು ದಿನಗಳ ನಂತರ ಅವರು ನಾಗಪುರಕ್ಕೆ ವಾಪಸ್ಸಾದರು.