Showing posts with label Learnings from defeats. Show all posts
Showing posts with label Learnings from defeats. Show all posts

Sunday, October 28, 2012

೨೪. ಸೋಲಿನ ವಿಷವೂ ಅನುಭವದ ಅಮೃತ

ಸೋಲಿನ ವಿಷವೂ ಅನುಭವದ ಅಮೃತ

   ೧೯೧೮ರಲ್ಲಿ ಜರ್ಮನಿಯು ಸೋತು ಮಹಾಯುದ್ಧ ನಿಂತಿತು. ಆಂಗ್ಲರು ಗೆದ್ದರು. ಈಗಂತೂ ಅವರ ಜಂಭ ಇನ್ನೂ ಹೆಚ್ಚಿತು. ಯುದ್ಧಕ್ಕೆ ಹೋದ ಸೈನ್ಯ ಹಿಂದಿರುಗಿತು. ಭಾರತೀಯರೊಂದಿಗೆ ಆಂಗ್ಲರ ಉದ್ಧಟತನ ಹೆಚ್ಚಿತು. ಕಾನೂನುಕ್ರಮ ಇನ್ನೂ ಕ್ರೂರವಾದವು. ಸ್ವಾತಂತ್ರ್ಯದ ಹೆಸರೆತ್ತಿದರೂ ಸಾಕು. ಸೆರೆಮನೆವಾಸ ಖಂಡಿತ. ಅಲ್ಲಿ ವಿವಿಧ ಚಿತ್ರ ಹಿಂಸೆ, ಅನೇಕ ಸಂಪಾದಕರು ಬಂಧಿತರಾದರು. ಅವರ ಪತ್ರಿಕೆಗಳೆಲ್ಲ ಮುಚ್ಚಲ್ಪಟ್ಟವು. ಕ್ರಾಂತಿಕಾರಿಗಳ ಅನೇಕ ನಾಯಕರು ಆಂಗ್ಲರು ಹೆಣೆದ ಬಲೆಯಲ್ಲಿ ಬಿದ್ದರು. ಗುಪ್ತ ಸಂಸ್ಥೆಗಳು ಸ್ತಬ್ಧವಾದವು. ಆಂಗ್ಲರ ವಿರುದ್ಧ ಸ್ವರ ಎತ್ತುವುದೇ ಕಠಿಣವಾದಾಗ ಇನ್ನು ಬಾಂಬ್ ಇತ್ಯಾದಿ ಎಲ್ಲಿ ಸಾಧ್ಯ? ಎಲ್ಲೆಡೆ ನಿರಾಶೆ, ಜನಸಾಮಾನ್ಯರಂತೂ ಹೆದರಿ ಕಂಗಾಲಾದರು. ವಿದ್ಯಾವಂತರೂ "ಆಂಗ್ಲರ ಆಡಳಿತ ನಮಗೊಂದು ವರವೇ. ಅವರಿಗೆ ದೇವರ ಬೆಂಬಲವಿದೆ. ನಾವೀಗ ಅವರ ವಿರುದ್ಧ ಹೋಗುವುದು ವ್ಯರ್ಥ" ಇತ್ಯಾದಿ ಎನ್ನತೊಡಗಿದರು.

   ಡಾಕ್ಟರ್‌ಜಿಯವರ ಗೆಳೆಯನೊಬ್ಬ "ಡಾಕ್ಟರ್‌ಜಿ ಎಂಥೆಂಥವರೆಲ್ಲಾ ಹತಾಶರಾಗಿದ್ದಾರೆ. ಅವರೆಲ್ಲ ದೇಶಕಾರ್ಯಕ್ಕೆ ತಿಲಾಂಜಲಿಯಿತ್ತಿದ್ದಾರೆ. ಆದರೆ ನೀವಿನ್ನೂ ಉತ್ಸಾಹದಿಂದಿರುವಿರಿ. ಸ್ವರಾಜ್ಯದ ಸುಂದರ ಸ್ವಪ್ನ ಕಾಣುತ್ತಿರುವಿರಿ. ಇದು ಹೇಗೆ ಸಾಧ್ಯ?" ಎಂದು ಕೇಳಿದ.

   "ಸೋಲು ಗೆಲುವಿನ ಸೋಪಾನ’ ಎನ್ನುವುದು ಕೇವಲ ಬೊಗಳೆ ಮಾತೇನು? ಮಾತಿಗೆ ಅರ್ಥವೇ ಇಲ್ಲವೇ? ಗುರಿಗಿಂತ ಸಾಧನಗಳನ್ನು ಯಾರು ಹೆಚ್ಚು ಪ್ರೀತಿಸುವರೋ ಅವರು ಸೋಲುಂಡಾಗ ನಿರಾಶರಾಗುವರು. ಗುರಿಯಲಿ ಅಚಲ ನಿಷ್ಠೆ ಹೊಂದಿರುವವರು ಹಾಗಲ್ಲ. ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಾರೆ ಅವರು. ನದಿಯ ಪ್ರವಾಹ ಎದುರಿಗೆ ಬಂದ ಪರ್ವತವನ್ನು ಕಿತ್ತೆಸೆದು ಹೋಗುತ್ತದೆ. ಕೆಲವೊಮ್ಮೆ ಅದನ್ನು ಸುತ್ತಿ ಬಳಸಿಯೂ ಹೋಗುತ್ತದೆ. ಕೆಲವು ಬಾರಿ ಸ್ವಲ್ಪ ದೂರ ಮರಳಿನಲ್ಲಿ ಇಂಗಿ ನಂತರ ಅದೇ ಪ್ರವಾಹ ಮುಂದೆ ಹರಿಯಬೇಕಾಗುತ್ತದೆ. ನಾವು ಶಿವನ ಉಪಾಸಕರು. ಆತ ಎಂಥ ಘೋರ ವಿಷವನ್ನು ಕುಡಿದು ಅರಗಿಸಿಕೊಂಡ. ನಾವು ಸಣ್ಣ ಸೋಲನ್ನೂ ಅರಗಿಸಿಕೊಳ್ಳಲಾರೆವಾ?" ಎನ್ನುತ್ತಿದ್ದರು ಡಾಕ್ಟರ್‌ಜಿ.

   "ಬಂದಿರುವ ಸೋಲನ್ನು ನಾವು ಜೀರ್ಣಿಸಿಕೊಳ್ಳಲೇಬೇಕು" ಸೋಲಿನ ಕಾರಣ ಹುಡುಕೋಣ. ಹೊಸ ಪ್ರಯತ್ನದಲ್ಲಿ ಹಳೆಯ ತಪ್ಪಾಗದಂತೆ ಮಾಡೋಣ. ಹೀಗೆ ಯೋಚಿಸಿ ಹೆಜ್ಜೆಯಿಟ್ಟಾಗ ಗುರಿ ಸಾಧಿಸಬಲ್ಲ ಯಾವುದಾದರೂ ಹೊಸ ಮಾರ್ಗ ದೊರೆತೇ ದೊರೆಯುತ್ತದೆ. ಡಾಕ್ಟರ್‌ಜಿ ಯೋಚಿಸುತ್ತಿದ್ದ ರೀತಿ ಅದು.