Showing posts with label ಡಾಕ್ಟರ್‌ಜಿ ತರುಣ. Show all posts
Showing posts with label ಡಾಕ್ಟರ್‌ಜಿ ತರುಣ. Show all posts

Sunday, October 28, 2012

೨೪. ಸೋಲಿನ ವಿಷವೂ ಅನುಭವದ ಅಮೃತ

ಸೋಲಿನ ವಿಷವೂ ಅನುಭವದ ಅಮೃತ

   ೧೯೧೮ರಲ್ಲಿ ಜರ್ಮನಿಯು ಸೋತು ಮಹಾಯುದ್ಧ ನಿಂತಿತು. ಆಂಗ್ಲರು ಗೆದ್ದರು. ಈಗಂತೂ ಅವರ ಜಂಭ ಇನ್ನೂ ಹೆಚ್ಚಿತು. ಯುದ್ಧಕ್ಕೆ ಹೋದ ಸೈನ್ಯ ಹಿಂದಿರುಗಿತು. ಭಾರತೀಯರೊಂದಿಗೆ ಆಂಗ್ಲರ ಉದ್ಧಟತನ ಹೆಚ್ಚಿತು. ಕಾನೂನುಕ್ರಮ ಇನ್ನೂ ಕ್ರೂರವಾದವು. ಸ್ವಾತಂತ್ರ್ಯದ ಹೆಸರೆತ್ತಿದರೂ ಸಾಕು. ಸೆರೆಮನೆವಾಸ ಖಂಡಿತ. ಅಲ್ಲಿ ವಿವಿಧ ಚಿತ್ರ ಹಿಂಸೆ, ಅನೇಕ ಸಂಪಾದಕರು ಬಂಧಿತರಾದರು. ಅವರ ಪತ್ರಿಕೆಗಳೆಲ್ಲ ಮುಚ್ಚಲ್ಪಟ್ಟವು. ಕ್ರಾಂತಿಕಾರಿಗಳ ಅನೇಕ ನಾಯಕರು ಆಂಗ್ಲರು ಹೆಣೆದ ಬಲೆಯಲ್ಲಿ ಬಿದ್ದರು. ಗುಪ್ತ ಸಂಸ್ಥೆಗಳು ಸ್ತಬ್ಧವಾದವು. ಆಂಗ್ಲರ ವಿರುದ್ಧ ಸ್ವರ ಎತ್ತುವುದೇ ಕಠಿಣವಾದಾಗ ಇನ್ನು ಬಾಂಬ್ ಇತ್ಯಾದಿ ಎಲ್ಲಿ ಸಾಧ್ಯ? ಎಲ್ಲೆಡೆ ನಿರಾಶೆ, ಜನಸಾಮಾನ್ಯರಂತೂ ಹೆದರಿ ಕಂಗಾಲಾದರು. ವಿದ್ಯಾವಂತರೂ "ಆಂಗ್ಲರ ಆಡಳಿತ ನಮಗೊಂದು ವರವೇ. ಅವರಿಗೆ ದೇವರ ಬೆಂಬಲವಿದೆ. ನಾವೀಗ ಅವರ ವಿರುದ್ಧ ಹೋಗುವುದು ವ್ಯರ್ಥ" ಇತ್ಯಾದಿ ಎನ್ನತೊಡಗಿದರು.

   ಡಾಕ್ಟರ್‌ಜಿಯವರ ಗೆಳೆಯನೊಬ್ಬ "ಡಾಕ್ಟರ್‌ಜಿ ಎಂಥೆಂಥವರೆಲ್ಲಾ ಹತಾಶರಾಗಿದ್ದಾರೆ. ಅವರೆಲ್ಲ ದೇಶಕಾರ್ಯಕ್ಕೆ ತಿಲಾಂಜಲಿಯಿತ್ತಿದ್ದಾರೆ. ಆದರೆ ನೀವಿನ್ನೂ ಉತ್ಸಾಹದಿಂದಿರುವಿರಿ. ಸ್ವರಾಜ್ಯದ ಸುಂದರ ಸ್ವಪ್ನ ಕಾಣುತ್ತಿರುವಿರಿ. ಇದು ಹೇಗೆ ಸಾಧ್ಯ?" ಎಂದು ಕೇಳಿದ.

   "ಸೋಲು ಗೆಲುವಿನ ಸೋಪಾನ’ ಎನ್ನುವುದು ಕೇವಲ ಬೊಗಳೆ ಮಾತೇನು? ಮಾತಿಗೆ ಅರ್ಥವೇ ಇಲ್ಲವೇ? ಗುರಿಗಿಂತ ಸಾಧನಗಳನ್ನು ಯಾರು ಹೆಚ್ಚು ಪ್ರೀತಿಸುವರೋ ಅವರು ಸೋಲುಂಡಾಗ ನಿರಾಶರಾಗುವರು. ಗುರಿಯಲಿ ಅಚಲ ನಿಷ್ಠೆ ಹೊಂದಿರುವವರು ಹಾಗಲ್ಲ. ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಾರೆ ಅವರು. ನದಿಯ ಪ್ರವಾಹ ಎದುರಿಗೆ ಬಂದ ಪರ್ವತವನ್ನು ಕಿತ್ತೆಸೆದು ಹೋಗುತ್ತದೆ. ಕೆಲವೊಮ್ಮೆ ಅದನ್ನು ಸುತ್ತಿ ಬಳಸಿಯೂ ಹೋಗುತ್ತದೆ. ಕೆಲವು ಬಾರಿ ಸ್ವಲ್ಪ ದೂರ ಮರಳಿನಲ್ಲಿ ಇಂಗಿ ನಂತರ ಅದೇ ಪ್ರವಾಹ ಮುಂದೆ ಹರಿಯಬೇಕಾಗುತ್ತದೆ. ನಾವು ಶಿವನ ಉಪಾಸಕರು. ಆತ ಎಂಥ ಘೋರ ವಿಷವನ್ನು ಕುಡಿದು ಅರಗಿಸಿಕೊಂಡ. ನಾವು ಸಣ್ಣ ಸೋಲನ್ನೂ ಅರಗಿಸಿಕೊಳ್ಳಲಾರೆವಾ?" ಎನ್ನುತ್ತಿದ್ದರು ಡಾಕ್ಟರ್‌ಜಿ.

   "ಬಂದಿರುವ ಸೋಲನ್ನು ನಾವು ಜೀರ್ಣಿಸಿಕೊಳ್ಳಲೇಬೇಕು" ಸೋಲಿನ ಕಾರಣ ಹುಡುಕೋಣ. ಹೊಸ ಪ್ರಯತ್ನದಲ್ಲಿ ಹಳೆಯ ತಪ್ಪಾಗದಂತೆ ಮಾಡೋಣ. ಹೀಗೆ ಯೋಚಿಸಿ ಹೆಜ್ಜೆಯಿಟ್ಟಾಗ ಗುರಿ ಸಾಧಿಸಬಲ್ಲ ಯಾವುದಾದರೂ ಹೊಸ ಮಾರ್ಗ ದೊರೆತೇ ದೊರೆಯುತ್ತದೆ. ಡಾಕ್ಟರ್‌ಜಿ ಯೋಚಿಸುತ್ತಿದ್ದ ರೀತಿ ಅದು.

೨೩. ಗುಪ್ತ ಯೋಜನೆ

ಗುಪ್ತ ಯೋಜನೆ

   ಯುರೋಪಿನಲ್ಲಿ ಮೊದಲ ಮಹಾಯುದ್ಧ ಭರದಿಂದ ನಡೆದಿತ್ತು. ಎಲ್ಲೆಡೆ ಆಂಗ್ಲರಿಗೆ ಸೋಲು. ಭಾರತದಲ್ಲಿ ಅವರದು ಇದ್ದುದೇ ಸ್ವಲ್ಪ ಸೈನ್ಯ. ಅನೇಕ ದೇಶಭಕ್ತ ಕ್ರಾಂತಿಕಾರಿಗಳು ಇದೇ ಸುವರ್ಣಾವಕಾಸ ಎಂದು ಯೋಚಿಸಿದರು. ಆಂಗ್ಲರ ಈ ದುಸ್ಥಿತಿಯಲ್ಲೆ ತಾವು ಲಾಭ ಪಡೆಯುವ ಹಂಚಿಕೆ ಅವರದು. ಭಾರತ ಸ್ವತಂತ್ರವಾಗಲು ದೇಶದ ಎಲ್ಲ ಕಡೆಗಳಲ್ಲಿ ಪ್ರಯತ್ನ ನಡೆಸಬೇಕೆಂದು ಯೋಚಿಸಿದರು. ಬಂಗಾಲದಲ್ಲಿ ಅದಕ್ಕಾಗಿ ನೀಲಿನಕಾಶೆ ಸಿದ್ಧವಾಯಿತು. ಬೇರೆ ಬೇರೆ ಪ್ರಾಂತಗಳ ಸೂತ್ರಧಾರರು ನಿಶ್ಚಿತರಾದರು. ಮಧ್ಯಪ್ರದೇಶ ಹಾಗೂ ವಿದರ್ಭಗಳ ಹೊಣೆ ಡಾಕ್ಟರ್‌ಜಿಯವರದಾಯಿತು.

    ನಾಗಪುರದಲ್ಲಿ ವೈದ್ಯ ಭಾವುಜಿ ಕಾವರೆ ಡಾಕ್ಟರ್‌ಜಿಯವರ ಆಪ್ತ ಮಿತ್ರರು. ವಿಚಾರದಲ್ಲಿ ಇಬ್ಬರೂ ಒಂದೇ. ಸದಾ ಓಡಾಡುತ್ತಾ ಹಲವಾರು ಕಾರ್ಯಕರ್ತರನ್ನು ಜೋಡಿಸುತ್ತಿದ್ದರು. ಮದುವೆ, ಮುಂಜಿ, ಸಭೆ, ಸಮಾರಂಭಗಳು ಯಾವುದೇ ಇರಲಿ, ಅಲ್ಲಿ ಇವರಿಬ್ಬರೂ ಹಾಜರು. ಒಂದು ಕಡೆ ಶುಭ ಕಾರ್ಯಗಳ ವ್ಯವಸ್ಥಾಪಕರಿಗೆ ಉತ್ತಮ ಸಹಕಾರ. ಇನ್ನೊಂದು ಕಡೆ ತಮ್ಮ ಕಾರ್ಯಕ್ಕಾಗಿ ಹಲವಾರು ಗೆಳೆಯರ ಸಂಪಾದನೆ. ಎಲ್ಲರಿಗೂ ದೇಶಭಕ್ತಿಯ ಪ್ರೇರಣೆ ನೀಡುತ್ತಾ, ಆಂಗ್ಲರ ವಿರುದ್ಧ ಅವರಲ್ಲಿ ಅತೃಪ್ತಿ ಮೂಡಿಸುತ್ತಿದ್ದರು. ಇಂತಹ ಪ್ರಯತ್ನಗಳಿಂದಾಗಿ ಮಧ್ಯಪ್ರದೇಶ ಹಾಗೂ ವಿದರ್ಭಗಳಲ್ಲಿ ತರುಣರ ಉತ್ತಮ ಗುಪ್ತಸಂಘಟನೆಯೊಂದು ತಲೆಯೆತ್ತಿತು. ಸಾಕಷ್ಟು ಹಣವೂ ಸೇರಿತು. ಬಂದೂಕು ತಯಾರಿಸುವ ಚಿಕ್ಕ ಕಾರಖಾನೆಯೂ ಆರಂಭವಾಯಿತು. ದೂರದ ಕಾಡಿನಲ್ಲಿ ಗುಂಡು ಹಾರಿಸುವ ಅಭ್ಯಾಸವೂ ನಡೆಯತೊಡಗಿತು.

    ನಾಗಪುರಕ್ಕೆ ಸಮೀಪದ ಕಾಮಟಿಯಲ್ಲಿ ಆಂಗ್ಲರ ಸೈನಿಕನೆಲೆ ಇತ್ತು. ಅಲ್ಲಿಂದಲೇ ಕ್ರಾಂತಿಕಾರಿಗಳು ಶಸ್ತ್ರವನ್ನೂ ಸಂಪಾದಿಸಿದ್ದರು. ಅಲ್ಲಿನ ನೌಕರರಿಂದ ಹಲವು ಗುಪ್ತ ಮಾಹಿತಿಗಳನ್ನೂ ಪಡೆಯುತ್ತಿದ್ದರು. ಒಮ್ಮೆ ಶಸ್ತ್ರಾಸ್ತ್ರ ತುಂಬಿದ ರೈಲು ಬರುವ ಸಂಗತಿ ಕ್ರಾಂತಿಕಾರಿಗಳಿಗೆ ತಿಳಿಯಿತು. ತಕ್ಷಣವೇ ಒಂದು ಯೋಜನೆ ಸಿದ್ಧವಾಯಿತು. ನಾಗಪುರ ನಿಲ್ದಾಣದಲ್ಲಿ ಗಾಡಿ ನಿಲ್ಲಿಸಲಾಯಿತು. ಸೇನಾಧಿಕಾರಿ ಒಬ್ಬ ಅಲ್ಲಿಗೆ ಹೋದ. ರಕ್ಷಕರು ಸಲಾಂ ಮಾಡಿದರು. ಆತ ಆದೇಶ ನೀಡಿದ. ಅದರಂತೆ ಮದ್ದುಗುಂಡಿನ ಕೆಲವು ಪೆಟ್ಟಿಗೆಗಳನ್ನು ಇಳಿಸಿದರು. ಜೀಪಿನಲ್ಲಿ ಇರಿಸಿದರು. ತಕ್ಷಣವೇ ಜೀಪು ಹೊರಟಿತು. ರೈಲ್ವೆ ಅಧಿಕಾರಿಗಳ ಮನಸ್ಸಿನಲ್ಲಿ ಅನುಮಾನ ತಲೆಯಿತ್ತಿದಾಗ ಜೀಪು ಇರಲಿಲ್ಲ. ಸರಿ ಹುಡುಕಾಟ ಆರಂಭ. ಆ ಸೇನಾಧಿಕಾರಿ ಯಾರು? ಕೆಲವೇ ಪೆಟ್ಟಿಗೆಗಳನ್ನು ಇಳಿಸಿದ್ದೇಕೆ? ಅವೆಲ್ಲಿ ಹೋದವು? ಕೊನೆಗೂ ಉತ್ತರ ದೊರೆಯಲೇ ಇಲ್ಲ. ಪೋಲೀಸರು ವಿಫಲರಾದರು. ಪತ್ತೆ ಹತ್ತುವುದಾದರೂ ಹೇಗೆ? ಡಾಕ್ಟರ್‌ಜಿಯವರ ಯೋಜನೆ ಅಷ್ಟು ನಿಖರ. ಸಣ್ಣಪುಟ್ಟ ಸಂಗತಿಗಳನ್ನೂ ಮೊದಲೇ ಯೋಚಿಸಿ ಪರ್ಯಾಯ ಯೋಜನೆ ಮಾಡಿರುತ್ತಿದ್ದುದೇ ಅವರ ಕೌಶಲ್ಯ.

    ಅದೇ ಸಮಯದಲ್ಲಿ ಕೆಲವರನ್ನು ಗೋವೆಗೂ ಕಳಿಸಲಾಗಿತ್ತು. ಯುರೋಪಿನಿಂದ ಕ್ರಾಂತಿಕಾರಿಗಳಿಗಾಗಿ ಅಲ್ಲಿ ಶಸ್ತ್ರಾಸ್ತ್ರ ಬರುವುದಿತ್ತು. ಅದಕ್ಕೂ ಡಾಕ್ಟರ್‌ಜಿಯವರ ಪಕ್ಕಾ ಯೋಜನೆ ಸಿದ್ಧವಾಗಿತ್ತು. ಆ ದಿನಗಳಲ್ಲಿ ಡಾಕ್ಟರ್‌ಜಿ ಆಗಾಗ ಡಾ|| ಮೂಂಜೆಯವರ ಸಲಹೆ ಪಡೆಯುತ್ತಿದ್ದರು. ಕೆಲವು ಮಹತ್ವದ ಸಂಗತಿಗಳಲ್ಲಿ ಅವರಲ್ಲಿ ಮತಭೇದ ಉಂಟಾದಾಗ ಡಾ|| ಮೂಂಜೆ ಅವರು ಡಾಕ್ಟರ್‌ಜಿ ಅವರನ್ನು ಲೋಕಮಾನ್ಯ ತಿಲಕರ ಬಳಿ ಒಂದು ಪತ್ರ ನೀಡಿ ಕಳಿಸಿದರು. ಲೋಕಮಾನ್ಯರು ಡಾಕ್ಟರ್‌ಜಿ ಅವರ ವಿಚಾರ ಸರಣಿ ಕೇಳಿ ತುಂಬ ಪ್ರಭಾವಿತರಾದರು. ಡಾಕ್ಟರ್‌ಜಿ ಅವರನ್ನು ಅವರು ಒತ್ತಾಯದಿಂದ ನಾಲ್ಕಾರು ದಿನ ತಮ್ಮೊಂದಿಗೆ ಉಳಿಸಿಕೊಂಡರು.

    ಪುಣೆಯ ಸುತ್ತಮುತ್ತಲ ಪ್ರದೇಶಗಳನ್ನೆಲ್ಲ ನೋಡಿದ ಡಾಕ್ಟರ್‌ಜಿ ಶಿವನೇರಿ ದುರ್ಗ ತಲುಪಿದರು. ಅದು ಶಿವಛತ್ರಪತಿಯ ಜನ್ಮಸ್ಥಾನ. ಆದರೆ ತುಂಬ ದುರ್ಲಕ್ಷ್ಯಕ್ಕೊಳಗಾಗಿತ್ತು. ಅದರ ಭಗ್ನಾವಶೇಷಗಳನ್ನು ನೋಡಿದ ಡಾಕ್ಟರ್‌ಜಿ ತುಂಬ ಖಿನ್ನರಾದರು. "ಮಹಾಪುರುಷನ ಜನ್ಮಭೂಮಿಗೆಂತಹ ದುರ್ದೆಶೆ? ಹಿಂದು ಸಮಾಜದ ದುಸ್ಥಿತಿಯೇ ಅದರ ಪೂಜ್ಯ ಸ್ಥಾನಗಳದ್ದೂ ಆಗಿದೆ" ಎಂಬ ವಿಚಾರ ಅವರ ಮನದಲ್ಲಿ ಸುಳಿಯಿತು.