Showing posts with label ವಂದೇ ಮಾತರಂ. Show all posts
Showing posts with label ವಂದೇ ಮಾತರಂ. Show all posts

Friday, November 23, 2012

೮೬. ಸ್ವದೇಶಾಭಿಮಾನ

ಸ್ವದೇಶಾಭಿಮಾನ

   ಪಂಡಿತ ವಿಷ್ಣುದಿಗಂಬರ ಪಲುಸ್ಕರ್ ಓರ್ವ ಸುಪ್ರಸಿದ್ಧ ಸಂಗೀತ ವಿದ್ವಾಂಸರು. ಗಂಧರ್ವ ಮಹಾವಿಶ್ವವಿದ್ಯಾಲಯದ ಸ್ಥಾಪಕರು. ೧೯೧೬ರಿಂದಲೇ ಪ್ರತಿವರ್ಷ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದರು. ಅಧಿವೇಶನದ ಆರಂಭದಲ್ಲಿ ಮೊದಲು ರಾಷ್ಟ್ರಗೀತೆ ಹಾಡುವುದನ್ನು ರೂಪಿಸಿದ್ದರು.

    ೧೯೨೩ರ ಕಾಕಿನಾಡಾ ಅಧಿವೇಶನದ ಅಧ್ಯಕ್ಷರು ಮೌಲಾನಾ ಮಹಮದ್ ಅಲಿ. ಪಲುಸ್ಕರ್ ಪದ್ಧತಿಯಂತೆ ವಂದೇ ಮಾತರಂ ಹಾಡಲು ತೊಡಗಿದಾಗ ಅಲಿ ಅದಕ್ಕೆ ಅಡ್ಡಿ ಪಡಿಸುತ್ತಾ ಹಾಡು, ವಾದ್ಯಗಳು ತಮ್ಮ ಸಂಪ್ರದಾಯಕ್ಕ ವಿರುದ್ಧವೆಂದರು. ಗಾಂಧೀಜಿ ಸಹಿತ ಅಲ್ಲಿದ್ದ ನಾಯಕರೆಲ್ಲಾ ಸ್ತಂಭಿತರಾದರು. ಪಲುಸ್ಕರರಿಗೆ ತಡೆಯಲಾಗಲಿಲ್ಲ. "ಸಂಗೀತ ಬೇಡವೆನ್ನಲು ಇದು ಮಸೀದಿಯಲ್ಲ. ರಾಷ್ಟ್ರೀಯ ವೇದಿಕೆ" ಎಂದು ಹೇಳುತ್ತಾ ಅಧ್ಯಕ್ಷರಿಗೆ ಮರುಮಾತಿಗೆ ಅವಕಾಶ ನೀಡದೆ ವಂದೇ ಮಾತರಂ ಹಾಡಲು ತೊಡಗಿದರು. ಮಹಮದ್ ಅಲಿ ತಮ್ಮ ಪೀಠ ಬಿಟ್ಟು ಹೊರನಡೆದರು. ಪಲುಸ್ಕರರು ವಂದೇ ಮಾತರಂ ಪೂರ್ತಿ ಹಾಡಿದರು.

    ಅವರ ದೇಶಾಭಿಮಾನ ಮತ್ತು ತಾಯಿನಾಡಿನ ಕುರಿತು ಭಕ್ತಿ ದೇಶವಾಸಿಗಳ ಆದರಕ್ಕೆ ಕಾರಣವಾದವು. ಜನರು ಅವರನ್ನು ಮುಕ್ತಕಂಠದಿಂದ ಹೊಗಳಿದರು.

Labels: Boudhik Story, Mohammed Ali, Paluskar, Vande Mataram, ಕಾಂಗ್ರೆಸ್ ಅಧಿವೇಶನ, ಪಲುಸ್ಕರ್, ಬೋಧಕಥೆ, ಮಹಮದ್ ಅಲಿ, ವಂದೇ ಮಾತರಂ

Saturday, March 24, 2012

೮. ವಂದೇ ಮಾತರಂ

ವಂದೇ ಮಾತರಂ

    ದೇಶದ ತುಂಬ ತರತರದ ಅನ್ಯಾಯದ ಕಾನೂನುಗಳು. ಆಗ ಶಾಲೆಗಳಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳೂ ಸಹ ಇಂತಹ ಕಾನೂನುಗಳಿಂದ ಹೊರತುಪಟ್ಟವರಾಗಿರಲಿಲ್ಲ. ಲೋಕಮಾನ್ಯ ತಿಲಕರಂಥ ಮಹಾಪುರುಷರ ಭಾಷಣ ಕೇಳಲೂ ಸಹ ಅವರಿಗೆ ಅವಕಾಶವಿರಲಿಲ್ಲ. ದೇಶಭಕ್ತಿ ಪ್ರಸಾರ ಮಾಡುವ ಪತ್ರಿಕೆಗಳನ್ನೂ ಓದುವಂತಿರಲಿಲ್ಲ. ಇನ್ನು ಪೂರ್ತಿ ರಾಷ್ಟ್ರಗೀತೆ ಹಾಡುವುದಂತೂ ದೂರದ ಮಾತು. ’ವಂದೇ ಮಾತರಂ’ ಉಚ್ಛಾರ ಕೂಡ ಭಾರಿ ಅಪರಾಧವೆನಿಸಿತ್ತು. ಇದನ್ನೆಲ್ಲ ಮುರಿಯಹೊರಟರೆ ಬೆತ್ತದೇಟು ಅಲ್ಲದೇ ಇನ್ನೂ ಬೇರೆ ರೀತಿಯ ಶಿಕ್ಷೆಗಳೂ ಆಗುತ್ತಿದ್ದವು.

    ಆಗ ಕೇಶವನ ವಯಸ್ಸು ಕೇವಲ ೧೮ ವರ್ಷ. ಆತ ನಾಗಪುರದ ನೀಲ ಸಿಟಿ ಹೈಸ್ಕೂಲು ವಿದ್ಯಾರ್ಥಿ. ಆಂಗ್ಲ ಅಧಿಕಾರಿಗಳ ದಬ್ಬಾಳಿಕೆಯನ್ನು ಪ್ರತಿದಿನ ಕಾಣುತ್ತಿದ್ದ. ಅವನ ಹೃದಯದಲ್ಲಿ ಬಂಡಾಯದ ಬಿರುಗಾಳಿ ಏಳುತ್ತಿತ್ತು. ತನ್ನ ಗೆಳಯರೊಡನೆ ಕೂಡಿ ಯೋಜನೆಯೊಂದನ್ನು ತಯಾರಿಸಿದ. ಸದ್ದಿಲ್ಲದೇ ಎಲ್ಲ ತರಗತಿಗಳಿಗೂ ಈ ಸುದ್ದಿ ತಲುಪಿತು. "ಹೌದು, ಹಾಗೆಯೇ ಮಾಡಬೇಕು" ಎಂದು ಎಲ್ಲ ವಿದ್ಯಾರ್ಥಿಗಳೂ ನಿಶ್ಚಯಿಸಿದರು.

    ವಿದ್ಯಾಧಿಕಾರಿಗಳು ಶಾಲೆಯ ತಪಾಸಣೆಗೆ ಬರುವವರಿದ್ದರು. ಮೊದಲಿಗೇ ಕೇಶವನ ಕೊಠಡಿಗೆ ಬಂದರು. ಅವರು ಬಾಗಿಲಿನಲ್ಲಿ ಹೆಜ್ಜೆ ಇಡುತ್ತಿದ್ದಂತೆಯೆ ಎಲ್ಲ ವಿದ್ಯಾರ್ಥಿಗಳು ಎದ್ದು ನಿಂತು ಒಂದೇ ಸ್ವರದಲ್ಲಿ ಕೂಗಿದರು, "ವಂದೇ ಮಾತರಂ". ಅದನ್ನು ಅನುಸರಿಸಿ ಮತ್ತೊಂದು ಕೋಣೆಯಿಂದಲೂ ಪ್ರತಿಧ್ವನಿ ಬಂತು. "ವಂದೇ ಮಾತರಂ". ಹೀಗೆ ಎಲ್ಲ ಕೋಣೆಗಳೂ "ವಂದೇ ಮಾತರಂ" ರಣಗರ್ಜನೆಯಿಂದ ತುಂಬಿ ಹೋದವು.

    ಸ್ಕೂಲ್ ಇನ್ಸ್‍ಪೆಕ್ಟರ್ ಕ್ರೋಧದಿಂದ ಕಿಡಿಕಿಡಿಯಾದ. ’ಈ ಕಾರಸ್ಥಾನದ ಮೂಲ ಯಾರು? ಹುಡುಕಿ’ ಎಂದು ಅಬ್ಬರಿಸಿದ. ಶಾಲೆಯ ಸಂಚಾಲಕರು ಗರಬಡಿದವರಂತೆ ನಿಂತುಬಿಟ್ಟರು. ಏನು ಮಾಡಬೇಕೆಂದು ಯಾರಿಗೂ ತಿಳಿಯದು. ಬಂದ ಅಧಿಕಾರಿ ಮುಖ್ಯೋಪಾಧ್ಯಾಯರಿಗೆ ’ಈ ಕಾರಸ್ಥಾನ ಮೂಲ ಯಾರು? ಹುಡುಕಿ. ಇದನ್ನೆಂದೂ ಸಹಿಸುವುದು ಸಾಧ್ಯವಿಲ್ಲ. ಅಪರಾಧಿಗೆ ಕಠಿಣ ಶಿಕ್ಷೆ ಕೊಡಬೇಕು’ ಇನ್ನೊಮ್ಮೆ ಆಜ್ಞಾಪಿಸಿದರು. ಅವರು ಸಹ‍ಅಧ್ಯಾಪಕರಿಗೆ ಅದೇ ಆಜ್ಞೆ ಮಾಡಿದರು.

    ಕಣ್ಣುಗಳಲ್ಲಿ ಕೆಂಡ ಕಾರುತ್ತಾ ಇನ್ಸ್‍ಪೆಕ್ಟರ್ ಹಿಂದಿರುಗಿದ. ಹೆಡ್ಮಾಸ್ಟರ್ ಬೆತ್ತ ತಿರುಗಿಸುತ್ತಾ ಕೋಣೆ ಕೋಣೆ ತಿರುಗಿದರು. ಎಲ್ಲ ಉಪಾಧ್ಯಾಯರೂ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಕೇಳತೊಡಗಿದರು. "ಸತ್ಯ ಹೇಳಿ, ಈ ಘಟನೆಯ ಹಿಂದೆ ಯಾರ ಕೈವಾಡವಿದೆ?"

    ಎಲ್ಲ ರೀತಿಯ ಪ್ರಯತ್ನವಾಯಿತು. ಹೆದರಿಸಿದರು, ಪುಸಲಾಯಿಸಿದರು, ಕೂಗಾಡಿದರು, ಹೊಡೆದರು, ಬಡಿದರು, ಯಾವ ಪ್ರಯತ್ನವೂ ಫಲ ಕೊಡಲಿಲ್ಲ. ಯಾರೂ ತಮ್ಮ ನಾಯಕನಾರೆಂದು ಬಾಯಿ ಬಿಡಲಿಲ್ಲ. ಅಧ್ಯಾಪಕರೆಲ್ಲ ಹತಾಶರಾದರು. ಮುಖ್ಯೋಪಾಧ್ಯಾಯರೂ ಗುಡುಕಿದರು. ’ಎಲ್ಲ ವಿದ್ಯಾರ್ಥಿಗಳನ್ನೂ ಶಾಲೆಯಿಂದ ಹೊರಹಾಕುತ್ತೇನೆ.’ ವಿದ್ಯಾರ್ಥಿಗಳೆಲ್ಲ "ವಂದೇ ಮಾತರಂ" ಎನ್ನುತ್ತಾ ಹೊರನಡೆದರು. ಹಲವು ದಿನಗಳವರೆಗೆ ವಿದ್ಯಾರ್ಥಿಗಳು ಶಾಲೆಗೆ ಬರಲೇ ಇಲ್ಲ.

    ಆದರೆ ವಿದ್ಯಾರ್ಥಿಗಳ ಆ ನಿರ್ಧಾರ ಬಹುಕಾಲ ಉಳಿಯಲಿಲ್ಲ. ದೇಶದ ಅಂದಿನ ಪರಿಸ್ಥಿತಿಯೇ ಹಾಗಿತ್ತು. ಮಕ್ಕಳ ತಂದೆ, ತಾಯಿ, ಪೋಷಕರ ಮೇಲೆ ಒತ್ತಡ ಬರತೊಡಗಿತು. ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮಾಡಲು ಅಧಿಕಾರಿಗಳು ತಮ್ಮೆಲ್ಲ ನಿಪುಣತೆ ಪ್ರಯೋಗಿಸಿದರು. ಸುಮಾರು ಒಂದೂವರೆ ತಿಂಗಳ ನಂತರ ವಿದ್ಯಾರ್ಥಿಗಳು ಪುನಃ ಶಾಲೆಗೆ ಬರತೊಡಗಿದರು. ಆದರೆ ಕೇಶವ ಮಾತ್ರ ಮತ್ತೆ ಆ ಶಾಲೆಗೆ ಹೆಜ್ಜೆಯಿಡಲಿಲ್ಲ.

೭. ಸೀಮೋಲ್ಲಂಘನ

ಸೀಮೋಲ್ಲಂಘನ

    ಅಕ್ಟೋಬರ್ ೧೯೦೭ರ ಒಂದು ಪ್ರಸಂಗ. ಲೋಕಮಾನ್ಯ ತಿಲಕರ ಸಿಂಹವಾಣಿ ಆಗ ಎಲ್ಲೆಡೆ ಮೊಳಗುತ್ತಿತ್ತು. ಸ್ವದೇಶ ಭಕ್ತಿಯದೇ ಗಾಳಿ ಬೀಸುತ್ತಿತ್ತು. ವಿಜಯದಶಮಿ ಹಬ್ಬಕ್ಕಾಗಿ ಕೇಶವ ರ್ವಿಜಯದಶಮಿ ಹಬ್ಬಕ್ಕಾಗಿ ಕೇಶವ ರಾಮಪಾಯಲಿಗೆ ಹೋಗಿದ್ದ. ಅವನ ಚಿಕ್ಕಪ್ಪ ಶ್ರೀ ಆಬಾಜಿ ಹೆಡಗೆವಾರ ವಾಸಿಸುತ್ತಿದ್ದ ಊರು ಅದು.

    ಹೋದಲ್ಲೆಲ್ಲ ತನ್ನ ಸಮವಯಸ್ಕರ ಮೇಲೆ ಪ್ರಭಾವ ಬೀರುವುದು ಕೇಶವನ ವಿಶೇಷತೆ. ಸ್ವಲ್ಪ ಸಮಯದಲ್ಲೇ ಅವರೆಲ್ಲ ಅವನ ಗೆಳೆಯರು ಅನುಯಾಯಿಗಳಾಗಿ ಬಿಡುತ್ತಿದ್ದರು. ರಾಮಪಾಯಲಿಯಲ್ಲಿಯೂ ಹೀಗೇ ಆಯಿತು. ಅಲ್ಲಿ ಅನೇಕ ಮಿತ್ರರು ಜೊತೆಗೂಡಿದರು. ಅವರೆಲ್ಲರೊಡನೆ ಮಾತುಕತೆ ನಡೆಸಿ ದಸರಾ ಉತ್ಸವದ ಯೋಜನೆ ತಯಾರಿಸಿದ.

    ಮಹಾರಾಷ್ಟ್ರದಲ್ಲಿ ದಸರಾ ಉತ್ಸವ ವಿಶೇಷ ಉತ್ಸಾಹದಿಂದ ಆಚರಿಸುತ್ತಾರೆ. ಅಂದು ಜನರೆಲ್ಲ ಹೊಸಬಟ್ಟೆ ತೊಟ್ಟು ಗ್ರಾಮದ ಗಡಿ ದಾಟಿ ಹೋಗಿ "ಸೀಮೋಲ್ಲಂಘನ" ಮಾಡುವರು. ಅಲ್ಲಿ ಶಮೀಪೂಜೆ ಆಗುತ್ತದೆ. ರಾವಣನ ವಿಗ್ರಹದ ದಹನ ನಡೆಯುತ್ತದೆ. ಶಮೀ ಮತ್ತು ವೃಕ್ಷರಾಜದ ಎಲೆಗಳನ್ನು ಅಂದು ’ಸೋನಾ’ (ಬಂಗಾರ) ಎನ್ನುವರು. ರಾವಣನನ್ನು ಕೊಂದು ಲಂಕೆಯಿಂದ ಬಂಗಾರವನ್ನು ಲೂಟಿ ಮಾಡಿ ತಂದಿರುವರೋ ಎಂಬಷ್ಟು ಉತ್ಸಾಹದಿಂದ ಜನರೆಲ್ಲ ಊರಿನಲ್ಲಿಲ ಮನೆಮನೆಗಳಿಗೆ ಹೋಗುವರು, ಹಿರಿಯರಿಗೆ ನಮಸ್ಕರಿಸಿ, ಆ ’ಬಂಗಾರ’ ನೀದಿ, ಮಿಠಾಯಿ ತಿಂದು ಹಬ್ಬ ಆಚರಿಸುವರು.

    ರಾಮಪಾಯಲಿಯಲ್ಲೂ ಸೀಮೋಲ್ಲಂಘನಕ್ಕಾಗಿ ಜನರೆಲ್ಲ ದಸರೆಯ ದಿನ ಹೊರಟರು. ಕೇಶವ ಹಾಗೂ ಅವನ ಮಿತ್ರರೂ ಮೆರವಣಿಗೆಯಲ್ಲಿದ್ದರು. ಪದ್ದತಿಯಂತೆ ಶಮೀ ಪೂಜೆಯಾಯಿತು. ಜನರೆಲ್ಲ ರಾವಣನ ಪ್ರತಿಮೆಯತ್ತ ಹೊರಟರು. ಕೇಶವನ ಕಂಚಿನ ಕಂಠದಿಂದ "ವಂದೇ ಮಾತರಂ" ಮೊಳಗಿತು. ತಕ್ಷಣವೇ ಅವನ ಮಿತ್ರರ ನೂರಾರು ಕಂಠಗಳೂ "ವಂದೇ ಮಾತರಂ"ಗೆ ದನಿಗೂಡಿಸಿದವು. ಒಮ್ಮಿಂದೊಮ್ಮೆಗೆ ಅಲ್ಲಿನ ವಾತಾವರಣವೇ ಬದಲಾಯಿತು. ಎಲ್ಲರೂ ತಮ್ಮ ಅಂತಃಕರಣದಲ್ಲಿ ಒಂದು ಹೊಸ ಹುಮ್ಮಸ್ಸಿನ ಅನುಭವ ಪಡೆದರು. ಮುಂದೆ ಇದ್ದ ಚಿಕ್ಕ ದಿನ್ನೆಯ ಮೇಲೆ ಏರಿ ನಿಂತ ಕೇಶವ ಆವೇಶದಿಂದ ಮಾತನಾಡತೊಡಗಿದ.

    ’ನಾವಿಂದು ಅನೇಕ ರೀತಿಯ ಗಡಿಗಳೊಳಗೆ ಬಂಧಿಸಲ್ಪಟ್ಟಿದ್ದೇವೆ. ಅವನ್ನೆಲ್ಲ ದಾಟಿ ಹೋಗುವುದು ನಮ್ಮ ಕರ್ತವ್ಯವಾಗಿದೆ. ಪಾರತಂತ್ರ್ಯ, ಹೇಡಿತನ, ಅಜ್ಞಾನ ಹಾಗೂ ಸ್ವಾರ್ಥ ಇತ್ಯಾದಿ ನಮ್ಮನ್ನು ಮುತ್ತಿವೆ. ನಾವದನ್ನು ತೊಡೆಯಬೇಕಾಗಿದೆ. ರಾವಣ ಅನ್ಯಾಯ, ದಬ್ಬಾಳಿಕೆ, ಕ್ರೂರ ಸಾಮ್ರಾಜ್ಯವಾದ ಹಾಗೂ ಕುಟಿಲ ರಾಜಕಾರಣಿಗಳ ಪ್ರತಿನಿಧಿ. ಅವನನ್ನು ನಾವಿಂದು ಸುಡಬೇಕಾಗಿದೆ. ಇದು ಪವಿತ್ರವಾದ ದೇಶಕಾರ್ಯ, ದೇವ ಕಾರ್ಯ. ಎಲ್ಲರು ಒಂದಾಗಿ ಹೇಳಿ "ವಂದೇ ಮಾತರಂ" "ಭಾರತ ಮಾತಾಕೀ ಜಯ್."
    ಜನರೆಲ್ಲ ಆವೇಶಭರಿತರಾದರು. ಕೇಶವ ಮತ್ತು ಅವನ ಅನುಯಾಯಿಗಳು ರಾವಣನನ್ನು ತುಂಡರಿಸಿ ಬೆಂಕಿ ಹಚ್ಚಿದರು. ಬೆಂಕಿ ಧಗಧಗಿಸಿತು.

    ಪ್ರಭು ಶ್ರೀರಾಮಚಂದ್ರ ಹಾಗೂ ಭಾರತಮಾತೆಯ ಜಯ ಜಯಕಾರ ಮಾಡುತ್ತ ಜನರೆಲ್ಲ ಮನೆಗೆ ತೆರಳಿದರು.

    ಆ ವರ್ಷ ರಾಮಪಾಲಿಯ ಜನರಿಗೆ ಸಿಕ್ಕಿದ್ದು ಕೇವಲ ಮರೆದೆಲೆಗಳ ಬಂಗಾರವಲ್ಲ. ಬದಲಾಗಿ ಹೊಸ ವಿಚಾರಗಳ ಬಂಗಾರ. ಅಲ್ಲಿಯ ಜನ ನಿಜಕ್ಕೂ ಆ ವರ್ಷ ಸೀಮೋಲ್ಲಂಘನ ಮಾಡಿದ್ದರು.