Showing posts with label Inspiration to Svayamsevaks. Show all posts
Showing posts with label Inspiration to Svayamsevaks. Show all posts

Saturday, November 17, 2012

೪೦. ನಮ್ಮ ಡಾಕ್ಟರ್‌ಜಿ

ನಮ್ಮ ಡಾಕ್ಟರ್‌ಜಿ

    ಡಾಕ್ಟರ್‌ಜಿಯವರದು ಸಂಘಕಾರ್ಯಕ್ಕಾಗಿ ನಿತ್ಯ ಪ್ರವಾಸ. ಕಾಲ್ನಡಿಗೆ, ಸೈಕಲ್, ಬಸ್ಸು, ರೈಲು ಹೀಗೆ ಹಲವು ವಿಧದಲ್ಲಿ ಸಾವಿರಾರು ಮೈಲುಗಳ ನಿರಂತರ ಪ್ರವಾಸ. ಹೊಸ ಹೊಸ ಗ್ರಾಮಗಳಿಗೆ ಹೋಗುವರು. ಯುವಕರನ್ನೆಲ್ಲ ಒಂದು ಕಡೆ ಸೇರಿಸುವರು. ಸಂಘದ ವಿಚಾರ ತಿಳಿಸಿ, ಪ್ರತಿಜ್ಞೆ ಕೊಟ್ಟು ಸ್ವಯಂಸೇವಕರನ್ನಾಗಿಸುವರು. ಪ್ರತ್ಯಕ್ಷ ಶಾಖೆಯ ಕೆಲಸದಲ್ಲಿ ಅವರನ್ನು ತೊಡಗಿಸುವರು. ಈ ರೀತಿ ಕಾರ್ಯಚಕ್ರ ಹಗಲೂರಾತ್ರಿ ಉರುಳುತ್ತಿತ್ತು.

    ಪಂಜಾಬಿಗೆ ಹೋದಾಗ ಅವರಿಗೆ ಅಲ್ಲಿ ಅದ್ದೂರಿಯ ಸ್ವಾಗತ. ’ಇಂದು ನಮ್ಮ ಶಾಖೆಗೆ ಡಾಕ್ಟರ್‌ಜಿ ಬಂದಿದ್ದಾರೆ. ನೀವೂ ಖಂಡಿತ ಶಾಖೆಗೆ ಬನ್ನಿ’ ಎಂದು ಒಬ್ಬರನ್ನೊಬ್ಬರು ಕರೆಯುತ್ತಿರುವುದು ಕಾಣುತ್ತಿತ್ತು. ಲಾಹೋರ್, ಅಮೃತಸರ, ಲೂಧಿಯಾನಗಳಲ್ಲಿ ಡಾಕ್ಟರ್‌ಜಿಯವರನ್ನು ನೋಡಲು ನೂರಾರು ಸ್ವಯಂಸೇವಕರು ಬಂದರು. ಡಾಕ್ಟರ್‌ಜಿ ಅವರೊಂದಿಗೆ ಮಾತನಾಡುತ್ತಾ, "ನೂರಾರು ಮೈಲು ದೂರದಿಂದ ನಿಮ್ಮನ್ನು ನೋಡಲು ಬಂದಿರುವೆ. ನೀವೂ ಸಹ ನನ್ನನ್ನು ನೋಡಲು ಉತ್ಸುಕತೆಯಿಂದಲೇ ಬಂದಿದ್ದೀರಿ. ಕಾರಣ ನಾವೆಲ್ಲ ದೂರ ದೂರ ಇದ್ದರೂ ಪ್ರತ್ಯಕ್ಷದಲ್ಲಿ ಸೋದರರೇ ಆಗಿದ್ದೇವೆ. ನಮ್ಮ ಮನಸ್ಸುಗಳು ಹತ್ತಿರವಿದೆ. ನಾವು ಒಂದೇ ತಾಯಿಯ ಮಕ್ಕಳು. ಇದನ್ನು ನೆನಪು ಮಾಡುವ ಕೆಲಸವನ್ನೇ ಸಂಘ ಮಾಡುತ್ತಿದೆ. ಇಡೀ ಸಮಾಜದಲ್ಲಿ ಸೋದರ ಭಾವವನ್ನು ರೂಪಿಸಲು ಸಂಘವು ಪ್ರಯತ್ನಿಸುತ್ತಿದೆ. ಸಂಘ ಕಾರ್ಯವೇನೋ ಸರಳವೇ. ಆದರೆ ಅದು ಪ್ರತ್ಯಕ್ಷ ವ್ಯವಹಾರದಲ್ಲಿ ಕಾಣುವುದು ಅಗತ್ಯವಿದೆ. ಈ ಮಹತ್ವಪೂರ್ಣ ಕಾರ್ಯವನ್ನು ಪೂರ್ತಿ ಗಮನವಹಿಸಿ ನಾವು ಮಾಡಬೇಕು" ಎಂದರು. ಆವರೆಗೆ ಪಂಜಾಬಿನ ಸ್ವಯಂಸೇವಕರು ದೊಡ್ಡ ದೊಡ್ಡ ಭಾಷಣಗಳನ್ನು ಬಿಗಿಯುವ ಭಾರೀ ಗರ್ಜಿಸುವ ತುಂಬ ರೋಷದಿಂದ ಎಗರಾಡುವ ಅನೇಕ ಮಂದಿಯನ್ನು ನೋಡಿದ್ದರು. ಆದರೆ ಶಾಂತ ರೀತಿಯಿಂದ ಕೆಲವೇ ತೂಕದ ಸರಳ ನೇರ ಶಬ್ದಗಳಲ್ಲಿ ಮಾತನಾಡುವ, ಕೇಳುಗರ ಹೃದಯಗಳಲ್ಲಿ ಅಚ್ಚಳಿಯದ ಪರಿಣಾಮ ಬೀರುವ ಭಾಷಣಕಾರರನ್ನು ಅವರು ನೋಡಿರುವುದು ಇದೇ ಮೊದಲ ಬಾರಿ. ಆ ಮಾತುಗಳು ಕೇವಲ ಶಬ್ದಗಳಷೇ ಆಗಿರಲಿಲ್ಲ. ಅವುಗಳಲ್ಲಿ ಡಾಕ್ಟರ್‌ಜಿಯವರ ನಡವಳಿಕೆಯ ಮೆರಗು ಸಹ ಇತ್ತು. ಇದರಿಂದಾಗಿ ಪಂಜಾಬದಲ್ಲಿ ಸಂಘ ಕಾರ್ಯ ಚೆನ್ನಾಗಿಯೇ ಬೆಳೆಯಿತು.

    ಡಾಕ್ಟರ್‌ಜಿ ಬಂಗಾಲ ತಲಪಿದರು. ಅಲ್ಲಿ ಸಂಘಕಾರ್ಯ ಇನ್ನೂ ಹೊಸದು. ಆದರೆ ಅಲ್ಲಿಯೂ ಅದೇ ಆತ್ಮೀಯತೆ. ಡಾಕ್ಟರ್‌ಜಿ ಅಲ್ಲಿಯವರೊಡನೆ ಬಂಗಾಲಿಯಲ್ಲೇ ಮಾತನಾಡತೊಡಗಿದಾಗ ಅವರೆಲ್ಲರಿಗೂ ಆಶ್ಚರ್ಯ. ಕಲ್ಕತ್ತೆಯ ಅನೇಕ ಗಣ್ಯರನ್ನು ಡಾಕ್ಟರ್‌ಜಿ ಭೇಟಿ ಮಾಡಿದರು. ಸಂಘದ ನೇರ ಹಾಗೂ ಸರಳ ಕಾರ್ಯವಿಧಾನ ನೋಡಿದ ಅವರಲ್ಲನೇಕರು "ಇದೆಂಥಾ ದೇಶ ಕಾರ್ಯ? ಬಾಂಬು ಮಾಡುವುದಿಲ್ಲ. ಪಿಸ್ತೂಲು ಉಪಯೋಗಿಸುವುದಿಲ್ಲ. ಭಾಷಣ ಇಲ್ಲ. ಪತ್ರಿಕೆ ಇಲ್ಲ. ಆಂಗ್ಲರನ್ನು ಬೈಯ್ಯುವುದೂ ಇಲ್ಲ. ಇದೆಂತಹ ದೇಶಭಕ್ತಿಯ ಕಾರ್ಯ?" ಎಂದು ಕೇಳಿದರು.

    ಡಾಕ್ಟರ್‌ಜಿ ಅವರಿಗೆ ಸಂಘದ ವಿಶೇಷತೆಯನ್ನು ವಿವರಿಸಿದರು. "ಬಂಧುಗಳೇ, ಸ್ವರಾಜ್ಯ ಪಡೆಯುವುದೇನೋ ಸುಲಭ. ಆದರೆ ಅದನ್ನು ಉಳಿಸಿಕೊಂಡು ಸ್ವರಾಜ್ಯವನ್ನು ರೂಪಿಸುವುದು ಹೆಚ್ಚಿನ ಮಹತ್ವವುಳ್ಳದ್ದು. ಈ ಪ್ರಪಂಚದಲ್ಲಿ ಯೋಗ್ಯತೆ ಗಳಿಸಿದಲ್ಲಿ ಉನ್ನತ ಸ್ಥಾನ ತನ್ನಿಂತನೇ ಬರುತ್ತದೆ. ನಿಸರ್ಗದ ನಿಯಮ ಅದು. ನಮ್ಮಲ್ಲಿ ದುರ್ಗುಣಗಳು ನುಸುಳಿ ನಾವು ಅಯೋಗ್ಯರಾದೆವು. ಅದಕ್ಕಾಗಿ ಬೇರೆಯವರ ದಾಸರಾದೆವು. ನಮ್ಮ ದುರ್ಗುಣಗಳನ್ನೆಲ್ಲ ಬಿಟ್ಟು ನಾವು ಸದ್ಗುಣಿಗಳಾದರೆ ನಮ್ಮೆಲ್ಲ ಸಮಸ್ಯೆಗಳೂ ಕೊನೆಗೊಳ್ಳುವುವು. ಸ್ವರಾಜ್ಯ ಸಹ ಸಿಕ್ಕುವುದು, ನಮ್ಮ ಗತವೈಭವವು ತಾನಾಗಿ ಮರಳುವುದು. ನಾವು ಎಲ್ಲಾ ದೃಷ್ಟಿಯಿಂದಲೂ ಯೋಗ್ಯರಾಗಬೇಕೆಂದು ಸಂಘವು ಶಿಕ್ಷಣ ನೀಡುತ್ತಿದೆ. ಇದಕ್ಕಾಗಿಯೇ ಸಂಘದ ಶಾಖೆಗಳು. ಇಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯುತ್ತಿವೆ. ಸಂಘದ ಧ್ಯೇಯವೇ ಇದು. ಆದ್ದರಿಂದ ಬೇರೆ ಎಲ್ಲ ಕೆಲಸಗಳನ್ನು ಗೌಣವೆಂದು ಭಾವಿಸಿ ಸಂಘ ಕಾರ್ಯಕ್ಕೆ ನಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡಬೇಕಾಗಿದೆ".

    ಡಾಕ್ಟರ್‌ಜಿ ಒಮ್ಮೆ ಪೂನಾಕ್ಕೆ ಹೋಗಿದ್ದರು. ಅಲ್ಲಿ ಸಂಘಚಾಲಕರೊಡನೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಅವರ ಮುಂದೆ ಇಬ್ಬರು ಬಾಲಕರು ಬರುತ್ತಿದ್ದರು. ಡಾಕ್ಟರ್‌ಜಿಯವರನ್ನು ನೋಡಿ ಆ ಹುಡುಗರು ಮುಗುಳ್ನಕ್ಕರು. ಡಾಕ್ಟರ್‌ಜಿ ಸಹ ಮುಗುಳ್ನಕ್ಕರು. ಆಗ ಸಂಘಚಾಲಕರು ’ಇವರ್ಯಾರು? ನಿಮಗೆ ಇವರು ಹೇಗೆ ಗುರುತು?’ ಎಂದು ಕೇಳಿದರು. "ಇವರು ನಮ್ಮ ಸ್ವಯಂಸೇವಕರು" ಡಾಕ್ಟರ್‌ಜಿ ಉತ್ತರಿಸಿದರು.

    ಸಂಘಚಾಲಕರು ಪುನಃ ಕೇಳಿದರು - "ಇವರೇನೂ ಗಣವೇಶ ಹಾಕಿಲ್ಲ. ಬೇರಾವುದೇ ಬಾಹ್ಯಚಿಹ್ನೆ ಇವರಲ್ಲಿ ಕಾಣಿಸದು. ಆದರೂ ಹೇಗೆ ತಿಳಿಯಿತು?"

    "ಮನಸ್ಸಿನ ಗುರುತು ಎಲ್ಲಕ್ಕಿಂತ ದೊಡ್ಡದು. ಮನಸ್ಸನ್ನು ಸಂಸ್ಕರಿಸುವುದು, ಅವುಗಳನ್ನು ಒಂದುಗೂಡಿಸುವುದು ಇದೇ ಸಂಘದ ಕೆಲಸ. ಮನಸ್ಸಿನಿಂದಲೇ ಮನುಷ್ಯ ಒಳ್ಳೆಯನಾಗುವನು" ಎಂದು ಡಾಕ್ಟರ್‌ಜಿ ಉತ್ತರಿಸಿದರು.

    ಪ್ರತಿಯೊಂದು ಶಾಖೆಯ ಎಲ್ಲಾ ಸ್ವಯಂಸೇವಕರಿಗೂ ಡಾಕ್ಟರ್‌ಜಿಯವರು ತಮ್ಮವರೇ ಎನಿಸುತ್ತಿತ್ತು. ಡಾಕ್ಟರ್‌ಜಿ ಅವರು ಸಹ ಸ್ವಯಂಸೇವಕರನ್ನು ನೋಡುತ್ತಿದ್ದುದು ಅದೇ ರೀತಿ.

೩೯. ಪ್ರೇರಕ ಶಕ್ತಿ

ಪ್ರೇರಕ ಶಕ್ತಿ

    ಯಾರ ಮಾತನ್ನೂ ಕೇಳದ ಹುಡುಗರಿಗೆ ಡಾಕ್ಟರ್‌ಜಿಯವರ ಮಾತೆಂದರೆ ಮೀರಲಾಗದ ಆಣತಿಯಂತೆ. ಆಲಸಿಗಳು ಅವರ ಮಾತಿನಿಂದ ಕ್ರಿಯಾಶೀಲರಾಗುತ್ತಿದ್ದರು. ಸೋಮಾರಿಗಳು ಚುರುಕುಗೊಳ್ಳುತ್ತಿದ್ದರು. ನಾಜೂಕು ಆರೋಗ್ಯದವರು ದೃಢಕಾಯರಾಗುತ್ತಿದ್ದರು. ನೂರಾರು ಯುವಕರಿಗೆ ತಾವು ದೇಶದ ಸಲುವಾಗಿ ಮಾಡಲೇಬೇಕೆಂಬುದು ಮನದಲ್ಲಿ ಬಲಗೊಂಡಿತು. ಹಿಂದು ಸಂಘಟನೆ ಒಂದು ಮಹತ್ವದ ಕಾರ್ಯ. ಅದಕ್ಕಾಗಿ ವೈಯಕ್ತಿಕ ಸುಖ ತ್ಯಜಿಸಲೇಬೇಕು ಎಂಬ ಸಂಕಲ್ಪ ಬೇರೂರಿತು.

    ಶ್ರೀಮಂತ ಕುಲದ ಓರ್ವ ತರುಣ ಕಾನೂನು ಪದವಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದ. ತಂದೆ ತುಂಬಾ ಸಂತಸಗೊಂಡಿದ್ದರು. ಆಗಲೇ ಮಗನಿಗಾಗಿ ಒಂದು ಒಳ್ಳೆಯ ನೌಕರಿ ಹಾಗೂ ವರದಕ್ಷಿಣೆ ತರುವ ಹುಡುಗಿಯನ್ನೂ ನೋಡಿಟ್ಟಿದ್ದರು. ಒಂದು ದಿನ ತಮ್ಮ ಮಗನೊಡನೆ "ನಡೆ, ದೊಡ್ಡ ಅಧಿಕಾರಿಯೊಬ್ಬರನ್ನು ನೋಡಬೇಕಾಗಿದೆ" ಎಂದರು.

    "ಯಾಕಾಗಿ?" ಮಗನ ಪ್ರಶ್ನೆ. "ನಾನವರ ಹತ್ತಿರ ಮಾತನಾಡಿದ್ದೇನೆ. ತಮ್ಮ ವಿಭಾಗದಲ್ಲಿ ಒಂದು ಉತ್ತಮ ಕೆಲಸ ಕೊಡುವಂತೆ" ತಂದೆ ಉತ್ತರಿಸಿದರು.

    "ನನಗಾವುದೇ ನೌಕರಿ ಬೇಕಿಲ್ಲ" ಮಗ ತನ್ನ ನಿರ್ಧಾರ ತಿಳಿಸಿದ.

    "ವಕೀಲಿ ಮಾಡುವುದೇ ಆದರೂ ಅವರೊಡನೆ ಸಂಪರ್ಕ ಇರಿಸಿಕೊಳ್ಳುವುದು ಉಚಿತ" - ತಂದೆ ಸಲಹೆ ನೀಡಿದರು.

    "ನಾನು ವಕೀಲಿ ಸಹ ಮಾಡುವವನಲ್ಲ" - ಮಗ ನಿರ್ಧಾರದ ಧ್ವನಿಯಲ್ಲಿ ನುಡಿದ. ತಂದೆ ಬಿರುಸಿನಿಂದ ಕೇಳಿದರು - "ಹೆಣ್ಣಿನ ತಂದೆ ನಿನ್ನ ಕೆಲಸದ ಬಗ್ಗೆ ಕೇಳುತ್ತಾರೆ. ನಾನೇನು ಹೇಳಲಿ?"

    "ನೀವು ಯಾರೊಡನೆ ಭೇಟಿ ಮಾಡಿದರೂ ನನಗೆ ಚಿಂತೆಯೇನಿಲ್ಲ. ಆದರೆ ನಾನು ಮಾತ್ರ ಜೀವನಪರ್ಯಂತ ಸಂಘ ಕಾರ್ಯ ಮಾಡುವವನು ಎಂಬುದು ನಿಮಗೆ ತಿಳಿದಿರಲಿ. ನಾನು ನೌಕರಿ, ವಕೀಲಿ ಏನೂ ಮಾಡಲಾರೆ. ವಿವಾಹವೂ ಬೇಡ. ನಿಮ್ಮ ನಾಲ್ಕು ಮಕ್ಕಳಲ್ಲಿ ಒಬ್ಬನನ್ನು ದೇಶಕ್ಕಾಗಿ ಕೊಟ್ಟಿರುವುದಾಗಿ ತಿಳಿಯಿರಿ. ಡಾಕ್ಟರ್‌ಜಿ ಕಳಿಸಿದಲ್ಲಿಗೆ ಹೋಗಿ ನಾನು ಅಲ್ಲಿ ಸಂಘ ಕಾರ್ಯ ಮಾಡುವೆನು" - ಮಗ ತನ್ನ ಖಚಿತ ನಿರ್ಧಾರ ತಿಲಿಸಿದ.

    ತಂದೆ ಕೋಪದಿಂದ ಕಿಡಿಕಿಡಿಯಾದರು. ತಾಯಿ ಅತ್ತರು. ಅಷ್ಟಾದರೂ ಮಗ ತನ್ನ ನಿರ್ಧಾರ ಬದಲಿಸಲಿಲ್ಲ.

    ಅನೇಕ ಮನೆಗಳಲ್ಲಿ ಇಂಥವೇ ಪ್ರಸಂಗಗಳು. ಉನ್ನತ ಶಿಕ್ಷಣ ಪಡೆದ, ಪದವೀಧರರು, ಒಳ್ಳೆಯ ಕುಟುಂಬದ ಶೀಲವಂತರಾದ ತರುಣರು ತಮ್ಮ ಮನೆ ಮಠಗಳನ್ನು ತೊರೆದು ಸಂಘ ಕಾರ್ಯಕ್ಕಾಗಿ ಡಾಕ್ಟರ್‌ಜಿ ಕಳಿಸಿದಲ್ಲಿಗೆ ಹೋಗತೊಡಗಿದರು. ನೂರಾರು, ಸಾವಿರಾರು ಮೈಲು ದೂರದ ಅಪರಿಚಿತ ಸ್ಥಳಗಳಿಗೆ ಹೋಗಿ ಅಲ್ಲಿ ಸಂಘಶಾಖೆ ಆರಂಭಿಸಿದರು.

    ಹಲವು ಬಾರಿ ಕೋಪೋದ್ರಿಕ್ತರಾದ ತಂದೆ ತಾಯಿಗಳು ಡಾಕ್ಟರ್‌ಜಿಯವರ ಬಳಿ ಹೋಗಿ ಅವರನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದುದು ಉಂಟು. ಡಾಕ್ಟರ್‌ಜಿ ಶಾಂತವಾಗಿಯೇ ಅವರ ಮಾತುಗಳನ್ನೆಲ್ಲ ಕೇಳಿ ಕೊನೆಯಲ್ಲಿ ಅವರಿಗೆ ಸಂಘ ಕಾರ್ಯದ ಮಹತ್ವವನ್ನು ತಿಳಿಯಪಡಿಸುತ್ತಿದ್ದರು. ಅವರೆಂದಿಗೂ ಯಾರನ್ನೂ ಅಪಮಾನ ಮಾಡಿದವರಲ್ಲ.