Showing posts with label ಡಾಕ್ಟರ್‌ಜಿ ಸೆರೆಮನೆಯಲ್ಲಿ. Show all posts
Showing posts with label ಡಾಕ್ಟರ್‌ಜಿ ಸೆರೆಮನೆಯಲ್ಲಿ. Show all posts

Saturday, November 10, 2012

೨೯. ವಿಚಾರ-ಮಂಥನ

ವಿಚಾರ-ಮಂಥನ

    ಸೆರೆಯಲ್ಲಿ ಇದ್ದಾಗಲೂ ಡಾಕ್ಟರ್‌ಜಿ ಸುಮ್ಮನೆ ಕಾಲಕಳೆಯುತ್ತಿರಲಿಲ್ಲ. ಬದಲಾಗಿ ದೇಶದ ವಿವಿಧ ಸಮಸ್ಯೆಗಳ ಕುರಿತು ಗಹನವಾದ ಚಿಂತನೆ ನಡೆಸಿದರು. ದೊಡ್ಡವರು ಚಿಕ್ಕವರೆನ್ನದೆ ಎಲ್ಲಾ ಕಾರ್ಯಕರ್ತರೊಡನೆ ವಿಚಾರ ವಿನಿಮಯ ನಡೆಸಿದರು. ರಾತ್ರಿ ಸೆರೆಮನೆ ಬಾಗಿಲು ಮುಚ್ಚಿದಾಗ ಹಲವರು ಸುಸ್ತಾಗಿ ಅಥವಾ ದುಃಖದಿಂದ ಮಲಗಿಬಿಡುತ್ತಿದ್ದರು. ಆದರೆ ಡಾಕ್ಟರ್‌ಜಿಯವರಿಗೆ ಹಾಸಿಗೆಯ ಮೇಲೆ ಮಲಗಿದಾಗಲೂ ನಿದ್ರೆ ಬರುತ್ತಿರಲಿಲ್ಲ. ಭಾರತವರ್ಷದ ಸಮಗ್ರ ಇತಿಹಾಸ ಕಣ್ಣ ಮುಂದೆ ತೆರೆತೆರೆಯಾಗಿ ಕಾಣುತ್ತಿತ್ತು. ನಿದ್ರೆ ಬರುವುದಾದರೂ ಹೇಗೆ? ದಿನವಿಡೀ ಯಾರ‍್ಯಾರು ಏನು ಹೇಳಿದರು? ಯಾರ ವಿಚಾರ ಏನು? ಯಾರ ಮಾತಿನಲ್ಲಿ ಸತ್ಯವಿದೆ? ದೇಶದ ಉದ್ಧಾರಕ್ಕಾಗಿ ಯಾವ ಮಾರ್ಗ ಅನುಸರಿಸಬೇಕು? ಈ ಪ್ರಶ್ನೆಗಳೇ ಅವರ ತಲೆ ತುಂಬಾ. ಕೆಲವೊಮ್ಮೆ ರಾತ್ರಿಯಿಡೀ ಹೀಗೆಯೇ ಕಳೆಯುತ್ತಿತ್ತು. ಅವರ ಮನಸ್ಸಿನಲ್ಲಿ ಸದಾ ಭಾವನೆಗಳದೇ ತುಮುಲ.

    "..... ನಮ್ಮ ನಾಡಿನ ಪರಿಸ್ಥಿತಿ ಅದೆಷ್ಟು ದಯನೀಯ? ಎತ್ತ ನೋಡಿದರತ್ತ ದುಃಖ, ದೈನ್ಯತೆ. ಹೀಗೇಕೆ? ನಮ್ಮ ದೇಶ ವಿಶಾಲವಾದುದು. ಜನರು ಜಾಣರು. ಶೂರರು. ಶ್ರೇಷ್ಠ ಧರ್ಮ. ಪ್ರಾಚೀನ ಗೌರವಶಾಲಿ ಇತಿಹಾಸ ನಮ್ಮದು. ಇಷ್ಟಾದರೂ ನಾವೇಕೆ ಗುಲಾಮರಾದೆವು? ಸಹಸ್ರಾರು ವರ್ಷಗಳ ಈ ದಾಸ್ಯವೇಕೆ? ಖೈಬರ್, ಬೋಲನ್ ಕಣಿವೆಗಳ ಮೂಲಕ ಆಕ್ರಮಣ ಮಾಡಿದ ಅಪಘಾನ್, ಪಠಾಣ, ಮೊಗಲರ ಸೇನೆಗಳು ಸಣ್ಣ ಸಣ್ಣವು. ಇಂಗ್ಲೀಷರಾದರೋ ವ್ಯಾಪಾರಕ್ಕಾಗಿ ನಮ್ಮ ದೇಶಕ್ಕೆ ಬಂದರು.....

    ..... ನಮ್ಮ ನಾಡಿನ ಜನಸಂಖ್ಯೆಯೂ ಅಪಾರ. ನಮ್ಮಲ್ಲಿ ರಾಜರಿದ್ದರು. ಸೇನಾಪತಿಗಳಿದ್ದರು. ಅವರ ಬಳಿ ಸೈನ್ಯಗಳಿದ್ದವು. ಅವರು ಶೂರರಾಗಿದ್ದರು. ಶಸ್ತ್ರಗಳಿಗೇನೂ ಕೊರತೆಯಿರಲಿಲ್ಲ. ಆದರೂ ಏಕೆ ಸೋತರು? ಉತ್ತರದ ಆಕ್ರಮಣಕಾರರಿಂದಲೇ ಹೀಗಾಯಿತೇನು? ಆಂಗ್ಲರಿಂದಾಗಿಯೇ ನಮ್ಮದೆಲ್ಲವನ್ನೂ ನಾವು ಕಳೆದುಕೊಂಡೆವೇನು? ಇಲ್ಲ. ಖಂಡಿತ ಇಲ್ಲ. ನಮ್ಮ ದುರ್ಗತಿಗೆ ನಾವೇ ಕಾರಣರು. ನಾವೇ ಅದಕ್ಕೆ ಹೊಣೆ. ನಮ್ಮೊಳಗಿನ ಆಲಸ್ಯವೇ ನಮ್ಮನ್ನು ದಾಸ್ಯಕ್ಕೆ ತಳ್ಳಿತು. ನಮ್ಮ ನಡುವಿನ ಜಗಳವೇ ನಮ್ಮ ದಾಸ್ಯಕ್ಕೆ ಕಾರಣ. ನಮ್ಮನ್ನು ನಾವೇ ಚಿಕ್ಕಪುಟ್ಟ ಪಂಗಡಗಳಾಗಿ ಒಡೆದುಕೊಂಡೆವು. ನಮ್ಮ ದೇಶವನ್ನು ನಾವೇ ತುಂಡು ತುಂಡು ಮಾಡಿದೆವು. ಸಮಗ್ರ ದೇಶದ ವಿಚಾರವನ್ನೇ ನಾವು ಮಾಡಲಿಲ್ಲ. ಮನಸ್ಸು ಚಿಕ್ಕದಾಯಿತು. ಪಕ್ಕದ ಮನೆ ಉರಿಯುತ್ತಿದ್ದರೂ ನನಗೇನು ಎಂಬ ಭಾವ ಬೆಳೆಯಿತು. ಸಮೀಪದ ಹಳ್ಳಿಯನ್ನು ದರೋಡೆ ಮಾಡುತ್ತಿದ್ದರೂ ಮಾಡಲಿ ಬಿಡು ಎಂಬ ಸ್ಥಿತಿ. ನಮ್ಮದಾಯಿತು. ನನ್ನ ಮನೆ, ನನ್ನ ಜಮೀನು, ನನ್ನ ಹೆಂಡತಿ ಮಕ್ಕಳು, ನನ್ನ ರಾಜ್ಯ ಇವೇ ವಿಚಾರ ಎಲ್ಲರ ಮನದಲ್ಲಿ. ನನ್ನ ದೇಶ, ನನ್ನ ಧರ್ಮ, ನನ್ನ ಸಂಸ್ಕೃತಿ, ನನ್ನ ಸಮಾಜ ಈ ಚಿಂತೆಯೇ ಬಾರದಾಯಿತು. ಅದರ ಪರಿಣಾಮ..... ನಾವು ದಾಸ್ಯಕ್ಕೊಳಗಾದೆವು. ನನ್ನ ಹಾಗೂ ಈ ನಾಡಿನ ಸಂಬಂಧ ನನ್ನ ದೈನಂದಿನ ಕಾರ್ಯಗಳಲ್ಲಿ ಪ್ರಕಟವಾಗಬೇಕು. ನನ್ನದೆಲ್ಲವೂ ಈ ಸಮಾಜದ ಕೃಪೆಯಿಂದಲೇ ನಡೆಯುತ್ತಿದೆ. ನಾನದಕ್ಕೆ ಕೃತಜ್ಞನಾಗಿರಬೇಕು. ಸರಿಯಾದ ಪ್ರತ್ಯುಪಕಾರ ಮಾಡಬೇಕು..... ಈ ವಿಷಯವನ್ನೇ ನಾವು ಮರೆತೆವು. ಆದ್ದರಿಂದಲೇ ಪಾರತಂತ್ರ್ಯಕ್ಕೆ ಈಡಾದೆವು. ನಮ್ಮ ದೇಶದಲ್ಲಿ ಅನೇಕ ಪ್ರಾಂತಗಳಿವೆ. ಅನೇಕ ಭಾಷೆಗಳಿವೆ. ಅನೇಕ ಮತ, ಪಂಥಗಳಿವೆ. ಹಲವು ರೀತಿಯ ವೇಷ, ಆಹಾರ, ವಿಹಾರ. ಆದರೂ ಹೃದಯ ಒಂದೇ. ಎಲ್ಲರಲ್ಲಿಯೂ ಹರಿವ ರಕ್ತ ಒಂದೇ. ಈ ವಿಷಯ ಮರೆತೇಬಿಟ್ಟೆವು. ಹಾಗೆಂದೇ ನಾವು ದಾಸ್ಯಕ್ಕೆ ಒಳಗಾದೆವು.

    "ನಮ್ಮ ರಾಷ್ಟ್ರವಿಡೀ ಓರ್ವನೇ ಸಮಾಜ ಪುರುಷನಂತೆ. ಆತನಿಗೆ ಕೋಟಿ ಕೋಟಿ ಕೈ, ಕಾಲು, ತಲೆಗಳು. ನಮ್ಮ ಈ ನಾಡು ಪರಮೇಶ್ವರನ ಪ್ರತಿರೂಪ. ನಾವಿದನ್ನೆಲ್ಲ ಮರೆತೇಬಿಟ್ಟೆವು. ಆದ್ದರಿಂದಲೇ ನಾವು ಇನ್ನೊಬ್ಬರ ಆಳ್ವಿಕೆಗೆ ಒಳಗಾದೆವು. ನಮ್ಮ ಆಚರಣೆಯಲ್ಲಿ ಪ್ರೀತಿ, ನೀತಿ, ಆದರ, ವಿಶ್ವಾಸ, ಸ್ನೇಹ, ಅನುಶಾಸನ ಇಲ್ಲವಾದವು. ಹಾಗೆಂದೇ ನಾವು ಬೇರೆಯವರ ಕಾಲಿಗೆ ಬೀಳಬೇಕಾಯಿತು. ನಾವು ತಾಯಿ ಭಾರತಿಯ ಮಕ್ಕಳು. ಅಣ್ಣ ತಮ್ಮಂದಿರು ಎಂಬುದನ್ನೇ ಮರೆತೆವು. ಬಡವ-ಬಲ್ಲಿದ, ಹಳ್ಳಿಗ-ಪಟ್ಟಣಿಗ, ವಿವಿಧ ಜಾತಿ, ಮತ, ಪಂಥ, ಪ್ರಾಂತ, ಹಲವು ಉದ್ಯೋಗ ಇಷ್ಟೆಲ್ಲ ಇದ್ದರೂ ನಾವೆಲ್ಲ ಒಂದೇ ಎಂಬ ಸತ್ಯ ಮರೆತೆವು. ಅದಕ್ಕಾಗಿ ನಮ್ಮ ನಾಡು ಈ ದುರ್ದೆಶೆಗೆ ಇಳಿಯಿತು.

    "ನಮ್ಮ ಈ ದೀನ ಸ್ಥಿತಿಯನ್ನು ದೂರಗೊಳಿಸಲು ಮೊದಲು ನಮ್ಮೊಳಗಿನ ದುರ್ಗುಣಗಳನ್ನೇ ದೂರ ಮಾಡಬೇಕು. ಈ ಕಾರ್ಯ ಭಾಷಣ ಲೇಖನ ಅಥವಾ ಚಳವಳಿಗಳಿಂದ ಆಗದು. ಇಂಗ್ಲೀಷರನ್ನು, ಮುಸಲ್ಮಾನರನ್ನು ದೂರುವುದರಿಂದಲೂ ಆಗದು. ವ್ಯಾಪಕ ಸಾಮಾಜಿಕ ಭಾವನೆಯನ್ನು ಪುನಃ ಎಬ್ಬಿಸಬೇಕಾಗಿದೆ. ಮತ್ತೆ ಈ ರಾಷ್ಟ್ರಜೀವನದಲ್ಲಿ ಅನುಶಾಸನವನ್ನು ನಿರ್ಮಿಸಬೇಕಾಗಿದೆ. ಬಂಧುತ್ವದ ಭಾವನೆಯನ್ನು ಬೆಳಸಬೇಕಾಗಿದೆ. ಈ ಕಾರ್ಯಕ್ಕೆ ಯುವಕರನ್ನು ಜೋಡಿಸಬೇಕು. ಅವರಿಗೆ ಈ ಕಾರ್ಯದ ಮಹತ್ವವನ್ನು ಮನಗಾಣಿಸಬೇಕು. ನಿಯಮಬದ್ಧರಾಗಿರುವ ಚಿಕ್ಕ ಪುಟ್ಟ ಕಾರ್ಯಗಳನ್ನೂ ದಕ್ಷತೆಯಿಂದ ಮಾಡುವಂತಹ ತ್ಯಾಗಿಗಲು, ಸೇವಾವ್ರತಿಗಳು, ದೇಶ ಧರ್ಮಕ್ಕಾಗಿ ತಮ್ಮ ಮನೆ ಮಠ ಬಿಟ್ಟು, ಸುಖ ತ್ಯಜಿಸಿ, ದೇಶ ಕಾರ್ಯವನ್ನೇ ಹಿರಿದೆಂದು ಭಾವಿಸುವ ಕಾರ್ಯಕರ್ತರು, ಅಂತಹವರ ತಂಡ ನಿರ್ಮಿಸಬೇಕು. ಈ ಎಲ್ಲಾ ಕೆಲಸ ಮಾಡಬೇಕಾದವರು ಯಾರು? ನಾನೇ ಮಾಡುವೆ. ನನ್ನಿಂದಲೇ ಇದು ಆರಂಭವಾಗಲಿ. ಮಾತೃಭೂಮಿಯ ಸ್ವಯಂಸೇವಕನಾಗುವೆ. ಒಂದು ದೀಪ ಇನ್ನೊಂದು ದೀಪವನ್ನು ಹೊತ್ತಿಸುವುದು. ಅಂತೆಯೇ ಒಬ್ಬರಿಂದ ಇನ್ನೂ ಅನೇಕರು ತಯಾರಾಗುವರು. ಗ್ರಾಮ-ಗ್ರಾಮ, ನಗರ-ನಗರ, ಹಳ್ಳಿ-ಪಟ್ಟಣ. ದೇಶದ ಮೂಲೆ ಮೂಲೆಗಳಲ್ಲಿ ರಾತ್ರಿ ಹಗಲು ಸ್ವದೇಶ ಹಿತ ಚಿಂತಿಸುವ ಸ್ವಯಂಸೇವಕರ ತಂಡವೇ ಎದ್ದು ನಿಲ್ಲಬೇಕು. ಆಗ ಈ ನಾಡಿನ ಸಮಸ್ಯೆಗಳೆಲ್ಲ ಪರಿಹಾರವಾಗಬಲ್ಲವು. ನಮ್ಮ ದೇಶ ಪುನಃ ಉಜ್ವಲ ಪ್ರಭೆಯಿಂದ ಮೇಲೆದ್ದು ನಿಲ್ಲುವುದು. ಆಗ ನಮ್ಮ ಈ ನಾಡು ಸುಖೀ, ಸಮೃದ್ಧ, ವೈಭವಶಾಲಿ ಆಗುವುದು. ದೃಢಪ್ರತಿಜ್ಞೆಯ ಸಹಸ್ರಾರು ದೇಶಭಕ್ತರ ತರುಣರ ತಂಡ ಎದ್ದು ನಿಂತಾಗ ಮಾತ್ರ ಇದು ಸಾಧ್ಯ. ಇದು ಆಗುವುದಾದರೂ ಹೇಗೆ? ನಾನು ಇದೇ ದಿಕ್ಕಿನಲ್ಲಿ ಪ್ರಯತ್ನ ಆರಂಭಿಸುವೆ....."

    ಸೆರೆಮನೆಯಲ್ಲಿ ಡಾಕ್ಟರ್‌ಜಿ ಒಂಟಿಯಾಗಿದ್ದಾಗಲೆಲ್ಲಾ, ಅವರ ಮನದಲ್ಲಿ ಇಂಥವೇ ಸಾವಿರಾರು ಯೋಚನಾ ತರಂಗಗಳು, ಭಾವನೆಗಳ ತುಮುಲ. ಅಂತಹ ವಿಚಾರ ಮಂಥನದಿಂದ ಹೊರಬಂದ ನವನೀತವೇ ರಾಷ್ಟ್ರೀಯ ಸ್ವಯಂಸೇವಕ ಸಂಘ.

೨೮. ಸೆರೆಮನೆಯಲ್ಲಿ

ಸೆರೆಮನೆಯಲ್ಲಿ

    ಸೆರೆಮನೆಯೊಳಗೆ ದೊಡ್ಡ ದೊಡ್ಡ ನಾಯಕರೂ ಹೆದರಿಹೋಗುವುದಿದೆ. ಹೊರಗಿರುವಾಗ ಸಹನಶೀಲತೆ ಹಾಗೂ ದೃಢತೆಯ ಕುರಿತು ಬಹು ದೊಡ್ಡ ಮಾತನಾಡುವ ಅವರು ಒಳಗೆ ಬಂದಾಗ ಒಮ್ಮೆಲೇ ಬಹು ಸೂಕ್ಷ್ಮರಾಗುವರು. ಕೆಲವರು ಬಹು ಭಾವನಾಜೀವಿಗಳಾಗುವರು. ಕೆಲವರು ಸಣ್ಣ ಪುಟ್ಟ ವಿಷಯಗಳಿಗೂ ಸಿಟ್ಟಾಗುವರು. ಕೆಲವರಿಗಂತೂ ನಿತ್ಯ ಮನೆಯದೇ ನೆನಪು. ಹೊರಗಡೆ ಪರೋಪಕಾರ, ತ್ಯಾಗ ಇತ್ಯಾದಿ ಉಪದೇಶ ಮಾಡುವವರು ಅಲ್ಲಿ ಸ್ವಾರ್ಥಿಗಳಾಗಿ ಬಿಡುವರು.

    ಡಾಕ್ಟರ್‌ಜಿ ಈ ಮೊದಲು ಸೆರೆಮನೆಗೆ ಹೋದವರಲ್ಲ. ಸೆರೆಮನೆಗಳ ಕುರಿತು ಕೇಳಿ, ಹಾಗೂ ಓದಿ ಮಾತ್ರ ತಿಳಿದವರು ಅವರು. ಅಲ್ಲಿನ ಕಷ್ಟಮಯ ಜೀವನಕ್ಕೆ ಅವರ ಮನಸ್ಸು ಪೂರ್ತಿ ಸಿದ್ಧವಾಗಿತ್ತು. ಸ್ವಭಾವತಃ ಧೈರ್ಯಶಾಲಿ, ಶಾಂತ ಹಾಗೂ ವಿಚಾರಶೀಲರಾಗಿದ್ದ ಅವರು ಸೆರೆಮನೆಯ ಜೀವನದಲ್ಲಿ ಎಂದೂ ಹೆದರಲಿಲ್ಲ. ಸಿಟ್ಟಾಗಲೂ ಇಲ್ಲ. ಮನದ ಸ್ಥಿಮಿತ ಎಂದೂ ಕಳೆದುಕೊಳ್ಳದೆ ನಿತ್ಯಪ್ರಸನ್ನರಾಗಿರುತ್ತಿದ್ದರು ಅವರು.

    ತಮ್ಮ ಸಹ ಕಾರ್ಯಕರ್ತರಿಗೆ ಡಾಕ್ಟರ್‌ಜಿ ಎಲ್ಲಾ ರೀತಿಯ ಸಹಾಯ ಮಾಡುತ್ತಿದ್ದರು. ಓರ್ವರು ಕೋಪಿಷ್ಠರು. ಮತ್ತೊಬ್ಬರು ಸದಾ ನಿರಾಶಾವಾದಿ. ಅವರಿಗೆಲ್ಲಾ ಧೈರ್ಯ ಹೇಳಿ, ಡಾಕ್ಟರ್‌ಜಿ ಅಂತಹವರನ್ನೂ ರಮಿಸುತ್ತಿದ್ದರು. ಅಲ್ಲೊಬ್ಬ ಮುಸಲಮಾನ ಕಾರ್ಯಕರ್ತನಿದ್ದ. ಅವನೊಮ್ಮೆ ಹಿಂದುಗಳ ಗೋಪೂಜೆ ಕುರಿತು ಹೀನಾಯವಾಗಿ ಮಾತನಾಡಿದ. ಆಗ ಅಲ್ಲಿದ್ದ ಬಿಸಿರಕ್ತದ ಹಿಂದು ತರುಣನೊಬ್ಬ ಅವನ ಮೇಲೆ ಬಿದ್ದು ಹೊಡೆಯತೊಡಗಿದ. ಡಾಕ್ಟರ್‌ಜಿ ತಟ್ಟನೆ ಅವರ ನಡುವೆ ಪ್ರತ್ಯಕ್ಷರಾಗಿ ಅವರಿಬ್ಬರನ್ನೂ ಸಮಾಧಾನಗೊಳಿಸಿದರು.

    ಇಂಥ ಅನೇಕ ಘಟನೆಗಳು ಅಲ್ಲಿ ನಡೆಯುತ್ತಿದ್ದುದು ಸರ್ವೇಸಾಮಾನ್ಯ. ಡಾಕ್ಟರ್‌ಜಿ ಅವನ್ನೆಲ್ಲ ಅಲ್ಲಲ್ಲೆ ಸರಿಪಡಿಸುತ್ತಿದ್ದರು. ಎಲ್ಲ ರೀತಿಯ ಸ್ವಭಾವ, ವಯಸ್ಸಿನವರೂ ಅಲ್ಲಿದ್ದರು. ಕೆಲವರ ಬೆನ್ನು ಚಪ್ಪರಿಸಿ, ಇನ್ನು ಕೆಲವರ ಬಳಿ ಚರ್ಚಿಸಿ, ಹೀಗೆ ವಿವಿಧ ರೀತಿಯಲ್ಲಿ ಅವರನ್ನೆಲ್ಲಾ ನಿಭಾಯಿಸುತ್ತಿದ್ದವರು ಡಾಕ್ಟರ್‌ಜಿ ಅವರೇ. ಅವರ ಪ್ರಭಾವ ಎಲ್ಲರ ಮೇಲೂ ಇತ್ತು. ಬೇರೆಯವರೊಂದಿಗೆ ಉದ್ಧಟರಾಗಿದ್ದವರೂ ಸಹ ಡಾಕ್ಟರ್‌ಜಿಯವರೆದುರು ನಮ್ರರಾಗುತ್ತಿದ್ದರು. ಜೇಲು ಅಧಿಕಾರಿಗಳಿಗೂ ಅವರ ಬಗ್ಗೆ ತುಂಬ ಗೌರವ. ಡಾಕ್ಟರ್‌ಜಿಯವರ ಕಣ್ಣಿನ ಕಾಂತಿ, ಮಾತುಗಳಲ್ಲಿ ಉಕ್ಕಿ ಹರಿಯುತ್ತಿದ್ದ ಪ್ರೀತಿ ಹಾಗೂ ಅವರ ದಷ್ಟಪುಷ್ಟ ಆಕೃತಿ ಎಂಥವರನ್ನೂ ವಶಪಡಿಸಿಕೊಳ್ಳುವಂತಹದಾಗಿತ್ತು.

ಸದಾ ಪ್ರಸನ್ನರಾಗಿರುತ್ತದವರು ಅವರು. ಕಥೆ, ಕವನ, ಚುಟುಕಗಳಿಗಂತೂ ಅವರು ಅಕ್ಷಯ ಭಂಡಾರ. ಮಾತಿನ ಶೈಲಿಯೂ ತುಂಬ ಆಕರ್ಷಕ. ಅವರೆಲ್ಲಿ ಕುಳಿತರೂ ಆ ವಾತಾವರಣವೆಲ್ಲ ಉತ್ಸಾಹಮಯ.

    ಸೆರೆಯಿಂದ ಹೊರ ಬರುವಾಗ ಕೆಲವರು ಕೃಶರಾಗಿದ್ದರು. ಇನ್ನು ಕೆಲವರು ರೋಗಗ್ರಸ್ತರಾಗಿದ್ದರು. ಆದರೆ ೧೯೨೨ ಜುಲೈ ೧೨ರಂದು ಡಾಕ್ಟರ್‌ಜಿ ಬಿಡುಗಡೆಯಾಗಿ ಹೊರ ಬಂದಾಗ ಅವರ ಹಳೆಯ ಬಟ್ಟೆಗಳೆಲ್ಲ ಅವರಿಗೆ ಬಿಗಿಯಾಗಿದ್ದವು.

    "ಡಾಕ್ಟರ್‌ಜಿ, ನೀವು ದಪ್ಪವಾಗಿದ್ದೀರಲ್ಲ..... ಈಗ ನಿಮ್ಮ ತೂಪ ಎಷ್ಟಿದೆ?" ಓರ್ವನೆಂದ.

    ಅವರ ತೂಕ ಮೊದಲಿಗಿಂತ ೨೫ ಪೌಂಡು ಹೆಚ್ಚಿತ್ತು.

    "ಆಶ್ಚರ್ಯ, ಇದು ಹೇಗೆ ಸಾಧ್ಯ?" ಮತ್ತೊಬ್ಬ ಕುತೂಹಲದಿಂದ ಪ್ರಶ್ನಿಸಿದ.

    ಡಾಕ್ಟರ್‌ಜಿಯವರ ಉತ್ತರ ಸಿದ್ಧ. "ನನ್ನ ಹೊಟ್ಟೆಗೆ ಎಲ್ಲವನ್ನು ಭಸ್ಮ ಮಾಡುವ ಶಕ್ತಿ ಇದೆ. ಜೀರ್ಣಶಕ್ತಿ ಕಡಿಮೆ ಇದ್ದವರು ಮಾತ್ರ ತೆಳ್ಳಗಾದರು. ನಾನಾದರೋ ದಪ್ಪನಾದೆ.

    ತಮ್ಮ ಸೆರೆಮನೆಯ ಅನುಭವಗಳನ್ನು ಮಿತ್ರರಿಗೆ ಬಹು ರೋಚಕವಾಗಿ ವರ್ಣಿಸುತ್ತಿದ್ದರು ಡಾಕ್ಟರ್‌ಜಿ.