Sunday, October 28, 2012

೨೬. ನ್ಯಾಯಾಲಯದಲ್ಲಿ

ನ್ಯಾಯಾಲಯದಲ್ಲಿ

    ೧೯೨೧ರಲ್ಲಿ ದೇಶದಲ್ಲೆಲ್ಲ ಅಸಹಕಾರ ಆಂದೋಲನದ ಕಾವು. ಡಾಕ್ಟರ್ ಹೆಡಗೆವಾರರು ಈ ಹೋರಾಟಕ್ಕಾಗಿಯೇ ವಿದರ್ಭ ಪ್ರಾಂತದ ಗ್ರಾಮ ಗ್ರಾಮಗಳಿಗೆ ಹೋದರು. ಭಂಡಾರಾ, ಖಾಪಾ, ತಲೆಗಾಂವ್, ದೆವೋಲಿ, ಮೊದಲಾದೆಡೆ ಅವರ ಓಜಸ್ವಿ ಭಾಷಣಗಳಾದವು. ಆಂಗ್ಲರ ಕ್ರೂರ ದಬ್ಬಾಳಿಕೆಯ ಚಿತ್ರವನ್ನು ಎಳೆ‍ಎಳೆಯಾಗಿ ವಿವರಿಸಿ ಟೀಕಿಸುತ್ತಿದ್ದವರು ಅವರು. ಸಿಟ್ಟಿಗೆದ್ದ ಆಂಗ್ಲ ಅಧಿಕಾರಿಗಳು ಅವರಿಗೆ ವಿಧವಿಧದ ದಿಗ್ಬಂಧನ ವಿಧಿಸಿದರು. ಆದರೆ ಇದಾವುದಕ್ಕೂ ಜಗ್ಗದ ಡಾಕ್ಟರ್‌ಜಿ ತಮ್ಮ ಬಿರುಸಿನ ಪ್ರವಾಸ ಮಾಡುತ್ತಲೇ ಇದ್ದರು. ಅವರ ಬಿರುಗಾಳಿ ಪ್ರವಾಸದಿಂದಾಗಿ ಗ್ರಾಮ ಗ್ರಾಮದಲ್ಲೂ ಜನತೆಯ ಮನದಲ್ಲಿ ದೇಶಪ್ರೇಮದ ಕಿಡಿ ಹೊತ್ತಿ ಉರಿಯತೊಡಗಿತು.

    ಕೊನೆಗೊಮ್ಮೆ ಡಾಕ್ಟರ್‌ಜಿ ಅವರು ಬಂಧಿತರಾದರು. ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದು ಅಸಹಕಾರ ಆಂದೋಲನದ ನೀತಿಯಾಗಿತ್ತು. ವಕೀಲರನ್ನಿಡುವಂತಿರಲಿಲ್ಲ. ಆದರೆ ಡಾಕ್ಟರ್‌ಜಿ ಮಾತ್ರ ತಮ್ಮ ಪರ ಓರ್ವ ವಕೀಲರನ್ನಿಡಲು ನಿರ್ಧರಿಸಿದರು.

    ಡಾಕ್ಟರ್‌ಜಿ ಪರವಾಗಿ ವಾದ ಹೂಡಲು ಅನೇಕ ವಕೀಲರು ಮುಂದೆ ಬಂದರು. ಆಗ ಇದ್ದ ನ್ಯಾಯಾಧೀಶ ಸ್ಮೇಲಿ ತೀರ ಉದ್ಧಟ. ವಕೀಲರನ್ನು ಅವಮಾನಿಸುತ್ತಿದ್ದ. ಹೀಗಾಗಿ ಅವನಿರುವ ನ್ಯಾಯಾಲಯಕ್ಕೆ ವಕೀಲರು ಬಹಿಷ್ಕಾರ ಹಾಕಿದ್ದರು.

    ಆದ್ದರಿಂದ ಡಾಕ್ಟರ್‌ಜಿ ಸ್ವತಃ ವಾದಿಸಲು ಮುಂದಾದರು. ಅವರ ಮೇಲೆ ರಾಜದ್ರೋಹದ ಆಪಾದನೆ ಹೊರಿಸಲಾಗಿತ್ತು. ಸರಕಾರಿ ಪರ ಸಾಕ್ಷಿಗಳ ವಿಚಾರಣೆ ನಡೆದಾಗ ಡಾಕ್ಟರ್‌ಜಿ ಅವರನ್ನೆಲ್ಲ ಪಾಟೀ ಸವಾಲಿಗೆಳೆದು ಅವರ ಹೇಳಿಕೆಗಳೆಲ್ಲ ಸುಳ್ಳು ಎಂದು ಸಿದ್ಧಪಡಿಸಿದರು. ಕೊನೆಯಲ್ಲಿ ತಮ್ಮ ವಾದಸರಣಿ ಮುಂದಿಡುತ್ತಾ "ಈಗ ನ್ಯಾಯಾಲಯದ ಮುಂದಿರುವ ನನ್ನ ಭಾಷಣದ ವರದಿ ಸಂಪೂರ್ಣವಾಗಿ ವಿಕೃತ. ನನ್ನೆಲ್ಲ ಭಾಷಣಗಳ ವಿಚಾರ ನೇರವಾಗಿಯೇ ಇದೆ. ನಮ್ಮ ದೇಶ ದಾಸ್ಯದಲ್ಲಿದೆ. ಅದನ್ನು ಬಿಡುಗಡೆಗೊಳಿಸುವುದು ನಮ್ಮ ಧ್ಯೇಯ. ಭಾರತದ ಪ್ರತಿಯೋರ್ವ ನಾಗರಿಕನ ಕರ್ತವ್ಯ ಅದು. ಅದಕ್ಕಾಗಿ ಆದ ಸದಾ ಪ್ರಯತ್ನಿಸುತ್ತಿರಬೇಕು. ಈಗಿರುವ ನಮ್ಮ ಆಡಳಿತದಾರರು ದುಷ್ಟರು. ಮೋಸಗಾರರು. ನಮ್ಮ ವಿಚಾರ ಅವರು ಅರ್ಥ ಮಾಡಿಕೊಳ್ಳಲಾರರು. ಆಂಗ್ಲರ ಈ ನ್ಯಾಯಾಲಯ ನಮಗೇನು ನ್ಯಾಯ ನೀಡಿತು? ಇದು ನ್ಯಾಯ ಪದ್ಧತಿಯ ಆಭಾಸ ಮಾತ್ರ. ಇಂದಿರುವ ಆಂಗ್ಲರ ಅಧಿಕಾರಶಾಹಿ ನ್ಯಾಯಯುತವಲ್ಲ; ಅದು ಪಾಶವೀ ಬಲದ ಮೇಲಿದೆ. ಒಂದು ದೇಶದಲ್ಲಿ ಅಲ್ಲಿನ ದೇಶವಾಸಿಗಳು ನಡೆಸುವ ಅಧಿಕಾರವೇ ನಿಜವಾದ ಆಡಳಿತ. ಬೇರೆಯವರ ಆಳ್ವಿಕೆ ಕೇವಲ ಕುಟಿಲತನ. ಮೋಸ, ವಂಚನೆಯದು ಮಾತ್ರ. ನಾನ ನನ್ನ ಭಾಷಣಗಳ ಮೂಲಕ ನನ್ನ ದೇಶವಾಸಿಗಳ ಮನದಲ್ಲಿ ದೇಶಭಕ್ತಿ ಬಡಿದೆಬ್ಬಿಸುವ ಪ್ರಯತ್ನ ಮಾಡಿದ್ದೇನೆ. ಆತ್ಮಾಭಿಮಾನ ಜಾಗೃತಗೊಳಿಸಿದ್ದೇನೆ. ಇದನ್ನು ವಿರೋಧಿಸುತ್ತಿರುವ ಆಡಳಿತಗಾರರಿಗೆ ಈಗ ಇನ್ನು ತಮ್ಮ ಕಾಲ ಇಲ್ಲಿ ಮುಗಿದು ಹೋಗಿದೆ. ಬಹು ಬೇಗನೆ ತಾವು ಗಂಟು ಮೂಟೆ ಕಟ್ಟಬೇಕಾಗಿದೆ ಎಂದು ತಿಳಿಯಬೇಕಾದ ಕಾಲ ಬಂದಿದೆ. ನನ್ನೆಲ್ಲ ಭಾಷಣಗಳಲ್ಲೂ ನಾನು ದೇಶಭಕ್ತಿ ಜಾಗೃತಿ ಮಾಡಿರುವೆ. ಅದು ನನ್ನ ಕರ್ತವ್ಯ ಎಂದೇ ನನ್ನ ದೃಢವಾದ ನಂಬಿಕೆ" ಎಂದು ಪುಟ್ಟ ಭಾಷಣವನ್ನೇ ಮಾಡಿದರು.

    ಡಾಕ್ಟರ್‌ಜಿಯವರ ಮಾತು ಕೇಳಿ ನ್ಯಾಯಾಧೀಶ ಸ್ಮೇಲಿ "ನಿಮ್ಮ ಭಾಷಣಕ್ಕಿಂತ ಅದರ ಸಮರ್ಥನೆಯೇ ಹೆಚ್ಚು ಉಗ್ರವಾಗಿದೆ. ನಿಮ್ಮ ಉಗ್ರವಾದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಪ್ರಮಾಣ ಬೇಕಿಲ್ಲ" ಎಂದು ತೀರ್ಪಿತ್ತ.

    ಒಂದು ವರ್ಷದ ಕಠಿಣ ಶಿಕ್ಷೆ ಡಾಕ್ಟರ್‌ಜಿ ಅವರಿಗೆ ವಿಧಿಸಲ್ಪಟ್ಟಿತು.

No comments:

Post a Comment