Showing posts with label Faith. Show all posts
Showing posts with label Faith. Show all posts

Friday, November 23, 2012

೮೭. ಶ್ರದ್ಧೆ ಮತ್ತು ನಂಬಿಕೆ

ಶ್ರದ್ಧೆ ಮತ್ತು ನಂಬಿಕೆ

   ಭೀಕರ ಬರಗಾಲದಿಂದ ಆ ಹಳ್ಳಿ ತತ್ತರಿಸಿತ್ತು. ಕಂಗಾಲಾದ ಹಳ್ಳಿಗರು ದಾರಿಗಾಣದೇ ಋಷಿಯೊಬ್ಬರ ಮೊರೆ ಹೋದರು. ಶ್ರದ್ಧೆ, ನಂಬಿಕೆಗಳಿಂದ ಒಂದು ಯಜ್ಞ ಮಾಡಿದರೆ ಮಳೆ ಬಂದು ಇಳೆ ತಣಿಯುವುದೆಂದು ಋಷಿಗಳು ಸಲಹೆ ನೀಡಿದರು. ಹಳ್ಳಿಗರು ಅದರ ತಯಾರಿ ನಡೆಸಿದರು.

    ಯಜ್ಞದ ದಿನ ಪೂರ್ಣಾಹುತಿಯ ಸಮಯ ಸನ್ನಿಹಿತವಾಯಿತು. ಹಳ್ಳಿಗರೆಲ್ಲ ಪೂಜಾ ಸಾಮಗ್ರಿ ಸಹಿತ ಬಂದಿದ್ದರು. ಪುಟ್ಟ ಹುಡುಗಿಯೊಬ್ಬಳು ಮಾತ್ರ ಕೊಡೆಯನ್ನು ತಂದಿದ್ದಳು. ’ಬರಗಾಲ, ಬಿರುಬಿಸಿಲು. ಆದರೂ ಕೊಡೆಯನ್ನು ಏಕೆ ತಂದಿರುವೆ?’ ಎಂದು ಆಕೆಯನ್ನು ಎಲ್ಲರೂ ಕೇಳುವವರೇ!

    "ಋಷಿಗಳ ಮಾತು ಎಂದೂ ಸುಳ್ಳಾಗದು. ಶ್ರದ್ಧೆ, ನಂಬಿಕೆಗಳಿಂದ ಯಜ್ಞ ಮಾಡುತ್ತೀವಲ್ಲ, ಹಾಗಾಗಿ ಮಳೆ ಖಂಡಿತಾ ಬಂದೇ ಬರುತ್ತದೆ. ಆಗ ಮನೆಗೆ ಹೋಗಲು ಕೊಡೆ ಬೇಕಲ್ಲ!" ಹುಡುಗಿಯ ಈ ದಿಟ್ಟ ನಂಬಿಕೆಯ ಮಾತು ಕೇಳಿ ಹಲವರು ಮುಗುಳ್ನಕ್ಕರು.

    ಗ್ರಾಮವಾಸಿಗಳೆಲ್ಲ ಒಬ್ಬೊಬ್ಬರಾಗಿ ಪೂರ್ಣಹುತಿ ನೀಡಿದರು. ಆದರೆ ಆ ಹುಡುಗಿ ಭಕ್ತಿಯಿಂದ ಪ್ರಾರ್ಥಿಸಿ ಆಹುತಿ ಅರ್ಪಿಸುತ್ತಿದ್ದಂತೆಯೇ ಜೋರಾಗಿ ಮಳೆ ಸುರಿಯತೊಡಗಿತು. ಹುಡುಗಿ ನಗುತ್ತಲೇ ಕೊಡೆ ಬಿಡಿಸಿ ಮನೆಯ ಕಡೆ ಹೊರಟಳು.

    "ಈ ಹುಡುಗಿಯ ಕಾರಣದಿಂದಲೇ ಮಳೆ ಬಂತು. ನಿಮ್ಮೆಲ್ಲರ ಪೂಜೆ ವ್ಯರ್ಥ. ಏಕೆಂದರೆ ಅದರ ಹಿಂದೆ ಶ್ರದ್ಧೆ ಮತ್ತು ನಂಬಿಕೆ ಇರಲಿಲ್ಲ". ಯಜ್ಞ್ದ ನೇತೃತ್ವ ವಹಿಸಿದ್ದ ಋಷಿಗಳ ಈ ಮಾತು ಕೇಳಿ ಎಲ್ಲರೂ ತಲೆತಗ್ಗಿಸಿದರು.

Labels: Belief, Boudhik Story, Faith, Girl, Rain, Yajna, ಕೊಡೆ, ನಂಬಿಕೆ, ಬರಗಾಲ, ಬೋಧಕಥೆ, ಮಳೆ, ಯಜ್ಞ, ಶ್ರದ್ಧೆ, ಹುಡುಗಿ

Tuesday, November 20, 2012

೬೫. ಶ್ರದ್ಧೆ

ಶ್ರದ್ಧೆ

   ಸಮರ್ಥ ರಾಮದಾಸರ ಅನೇಕ ಶಿಷ್ಯರಲ್ಲಿ ಕಲ್ಯಾಣ ಎನ್ನುವವನೂ ಒಬ್ಬ. ಅವನೊಬ್ಬ ಶತ ಮೂರ್ಖ ಎಂಬ ಪ್ರತೀತಿಯಿತ್ತು. ಅವನ ಮೂರ್ಖತನ ಉಳಿದ ಎಲ್ಲಾ ಶಿಷ್ಯರಿಗೂ ತಮಾಷೆಯ ವಿಷಯವಾಗಿತ್ತು. ಯಾವುದೇ ಸಂದರ್ಭ ಸಿಕ್ಕರೂ ಕಲ್ಯಾಣನ ಮೂರ್ಖತನವನ್ನು ಎತ್ತಿ ಹಾಸ್ಯ ಮಾಡುವುದು ಆ ಶಿಷ್ಯರ ಸ್ವಭಾವವಾಗಿತ್ತು. ಆದರೆ ಕಲ್ಯಾಣನಿಗೆ ಸಮರ್ಥ ರಾಮದಾಸರ ಬಗ್ಗೆ ಅಪಾರವಾದ ಶ್ರದ್ಧೆ ಇತ್ತು.

    ಒಮ್ಮೆ ಬಾವಿಯ ಮೇಲೆ ಬೆಳೆದಿದ್ದ ಮರದ ಟೊಂಗೆಯನ್ನು ಕಡಿಯಲು ಇತರ ಶಿಷ್ಯರು ಕಲ್ಯಾಣನನ್ನು ಕಳಿಸುತ್ತಾರೆ. ಕಲ್ಯಾಣ ಮರದ ಟೊಂಗೆಯ ತುದಿಯ ಭಾಗದ ಕಡೆ ಕುಳಿತು ಟೊಂಗೆಯನ್ನು ಕಡಿಯಲು ತೊಡಗುತ್ತಾನೆ. ಕೊನೆಗೆ ಟೊಂಗೆಯ ತುಂಡು ಕಡಿದು, ಕಲ್ಯಾಣ ಬಾವಿಯಲ್ಲಿ ಬೀಳುತ್ತಾನೆ. ಉಳಿದ ಶಿಷ್ಯರು ಅವನ ಪಾಡನ್ನು ನೋಡಿ ಹೊಟ್ಟೆ ತುಂಬಾ ನಗುತ್ತಾರೆ. ರಾಮದಾಸರಿಗೆ ಈ ವಿಷಯ ತಿಳಿಯುತ್ತದೆ.

    ಒಮ್ಮೆ ಸಮರ್ಥ ರಾಮದಾಸರಿಗೆ ಗುಣವಾಗದ ಒಂದು ರೋಗ ತಗಲುತ್ತದೆ. ಅವರ ಕಾಲು ಬಾತುಕೊಂಡು ಕೀವು ಬರಲು ಪ್ರಾರಂಭವಾಗುತ್ತದೆ. ಅವರು ತಮ್ಮ ಶಿಷ್ಯರನ್ನು ಕರೆದು "ನನಗೆ ಒಂದು ಮೂಲಿಕೆ ದೊರೆತಿದೆ. ಅದನ್ನು ಗಾಯಕ್ಕೆ ಹಾಕಿದರೆ ಸಂಪೂರ್ಣ ಗುಣವಾಗುತ್ತದೆ. ಆದರೆ ಅದಕ್ಕೆ ಮುಂಚೆ ಗಾಯದಿಂದ ಕೀವನ್ನು ಸಂಪೂರ್ಣ ತೆರೆಯಬೇಕು. ಸ್ವಲ್ಪ ಕೀವು ಇದ್ದರೂ ಗುಣವಾಗದು. ನಿಮ್ಮಲ್ಲಿ ಯಾರಾದರೂ ನಿಮ್ಮ ಬಾಯಿಯಿಂದ ಕೀವು ತೆಗೆದರೆ ನಾನು ಮೂಲಿಕ ಹಚ್ಚಬಹುದು" ಎನ್ನುತ್ತಾರೆ.

    ಎಲ್ಲ ಶಿಷ್ಯರು ಕಾಲಿನ ಗಾಯದ ಕೀವು ತೆಗೆಯುವುದನ್ನು ನೆನೆಸಿಕೊಂಡು ಅಸಹ್ಯ ಪಟ್ಟುಕೊಂಡು ಮುಂದೆ ಬರದೆ ಹಿಂಜರಿಯುತ್ತಾರೆ. ಆದರೆ ರಾಮದಾಸರ ಮೂರ್ಖ ಶಿಷ್ಯನಾದ ಕಲ್ಯಾಣ ಒಂದಿನಿತೂ ಯೋಚಿಸದೆ ರಾಮದಾಸರ ಕಾಲನ್ನು ಬಾಯಿಯಿಂದ ಹೀರಲು ಪ್ರಾರಂಭಿಸುತ್ತಾನೆ. ಆಶ್ಚರ್ಯಕರವಾಗಿ ಆ ಕೀವು ಮಾವಿನ ಹಣ್ಣಿನ ರೂಪವಾಗಿ ಪರಿವರ್ತಿತವಾಗುತ್ತದೆ. ಸಮರ್ಥ ರಾಮದಾಸರು ಶಿಷ್ಯನ ಗುಣಗಾನ ಮಾಡುತ್ತಾರೆ.

    ಮುಂದೆ ರಾಮದಾಸರ ಅದೇ ಮೂರ್ಖ ಶಿಷ್ಯ ಬೆಳೆದು ದೊಡ್ಡ ತತ್ವಜ್ಞಾನಿಯಾಗುತ್ತಾನೆ. ಇಂದಿಗೂ ಸಜ್ಜನಗಡದಲ್ಲಿ ಸಮರ್ಥ ರಾಮದಾಸರ ಸಮಾಧಿಯ ಪಕ್ಕದಲ್ಲೇ ಕಲ್ಯಾಣನ ಸಮಾಧಿಯೂ ಕಾಣಸಿಗುತ್ತದೆ.

Labels: Boudhik Story, Faith, Kalyana, Samartha Ramadasa, ಕಲ್ಯಾಣ, ಕೀವು, ಬೋಧಕಥೆ, ಶ್ರದ್ಧೆ, ಸಮರ್ಥ ರಾಮದಾಸ