Showing posts with label ಯಜ್ಞ. Show all posts
Showing posts with label ಯಜ್ಞ. Show all posts

Friday, November 23, 2012

೮೭. ಶ್ರದ್ಧೆ ಮತ್ತು ನಂಬಿಕೆ

ಶ್ರದ್ಧೆ ಮತ್ತು ನಂಬಿಕೆ

   ಭೀಕರ ಬರಗಾಲದಿಂದ ಆ ಹಳ್ಳಿ ತತ್ತರಿಸಿತ್ತು. ಕಂಗಾಲಾದ ಹಳ್ಳಿಗರು ದಾರಿಗಾಣದೇ ಋಷಿಯೊಬ್ಬರ ಮೊರೆ ಹೋದರು. ಶ್ರದ್ಧೆ, ನಂಬಿಕೆಗಳಿಂದ ಒಂದು ಯಜ್ಞ ಮಾಡಿದರೆ ಮಳೆ ಬಂದು ಇಳೆ ತಣಿಯುವುದೆಂದು ಋಷಿಗಳು ಸಲಹೆ ನೀಡಿದರು. ಹಳ್ಳಿಗರು ಅದರ ತಯಾರಿ ನಡೆಸಿದರು.

    ಯಜ್ಞದ ದಿನ ಪೂರ್ಣಾಹುತಿಯ ಸಮಯ ಸನ್ನಿಹಿತವಾಯಿತು. ಹಳ್ಳಿಗರೆಲ್ಲ ಪೂಜಾ ಸಾಮಗ್ರಿ ಸಹಿತ ಬಂದಿದ್ದರು. ಪುಟ್ಟ ಹುಡುಗಿಯೊಬ್ಬಳು ಮಾತ್ರ ಕೊಡೆಯನ್ನು ತಂದಿದ್ದಳು. ’ಬರಗಾಲ, ಬಿರುಬಿಸಿಲು. ಆದರೂ ಕೊಡೆಯನ್ನು ಏಕೆ ತಂದಿರುವೆ?’ ಎಂದು ಆಕೆಯನ್ನು ಎಲ್ಲರೂ ಕೇಳುವವರೇ!

    "ಋಷಿಗಳ ಮಾತು ಎಂದೂ ಸುಳ್ಳಾಗದು. ಶ್ರದ್ಧೆ, ನಂಬಿಕೆಗಳಿಂದ ಯಜ್ಞ ಮಾಡುತ್ತೀವಲ್ಲ, ಹಾಗಾಗಿ ಮಳೆ ಖಂಡಿತಾ ಬಂದೇ ಬರುತ್ತದೆ. ಆಗ ಮನೆಗೆ ಹೋಗಲು ಕೊಡೆ ಬೇಕಲ್ಲ!" ಹುಡುಗಿಯ ಈ ದಿಟ್ಟ ನಂಬಿಕೆಯ ಮಾತು ಕೇಳಿ ಹಲವರು ಮುಗುಳ್ನಕ್ಕರು.

    ಗ್ರಾಮವಾಸಿಗಳೆಲ್ಲ ಒಬ್ಬೊಬ್ಬರಾಗಿ ಪೂರ್ಣಹುತಿ ನೀಡಿದರು. ಆದರೆ ಆ ಹುಡುಗಿ ಭಕ್ತಿಯಿಂದ ಪ್ರಾರ್ಥಿಸಿ ಆಹುತಿ ಅರ್ಪಿಸುತ್ತಿದ್ದಂತೆಯೇ ಜೋರಾಗಿ ಮಳೆ ಸುರಿಯತೊಡಗಿತು. ಹುಡುಗಿ ನಗುತ್ತಲೇ ಕೊಡೆ ಬಿಡಿಸಿ ಮನೆಯ ಕಡೆ ಹೊರಟಳು.

    "ಈ ಹುಡುಗಿಯ ಕಾರಣದಿಂದಲೇ ಮಳೆ ಬಂತು. ನಿಮ್ಮೆಲ್ಲರ ಪೂಜೆ ವ್ಯರ್ಥ. ಏಕೆಂದರೆ ಅದರ ಹಿಂದೆ ಶ್ರದ್ಧೆ ಮತ್ತು ನಂಬಿಕೆ ಇರಲಿಲ್ಲ". ಯಜ್ಞ್ದ ನೇತೃತ್ವ ವಹಿಸಿದ್ದ ಋಷಿಗಳ ಈ ಮಾತು ಕೇಳಿ ಎಲ್ಲರೂ ತಲೆತಗ್ಗಿಸಿದರು.

Labels: Belief, Boudhik Story, Faith, Girl, Rain, Yajna, ಕೊಡೆ, ನಂಬಿಕೆ, ಬರಗಾಲ, ಬೋಧಕಥೆ, ಮಳೆ, ಯಜ್ಞ, ಶ್ರದ್ಧೆ, ಹುಡುಗಿ